ನವದೆಹಲಿ: ಸಾಲ ಖಾತರಿ ಯೋಜನೆಯಡಿ ಕಿರು, ಸಣ್ಣ ಮತ್ತು ಮಧ್ಯಮ ಪ್ರಮಾಣದ (ಎಂಎಸ್ಎಂಇ) 42 ಲಕ್ಷಕ್ಕೂ ಅಧಿಕ ಉದ್ದಿಮೆಗಳಿಗೆ ₹ 1.63 ಲಕ್ಷ ಕೋಟಿ ಸಾಲ ಮಂಜೂರು ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.
ಸೆಪ್ಟೆಂಬರ್ 10ರವರೆಗೆ 25 ಲಕ್ಷ ಎಂಎಸ್ಎಂಇಗಳಿಗೆ ₹ 1.18 ಲಕ್ಷ ಕೋಟಿ ಸಾಲ ವಿತರಣೆ ಮಾಡಲಾಗಿದೆ. ‘ಕೋವಿಡ್–19’ನಿಂದ ಸಂಕಷ್ಟಕ್ಕೆ ಸಿಲುಕಿರುವ ಉದ್ಯಮಗಳಿಗೆ ನೆರವಾಗುವ ಉದ್ದೇಶದಿಂದ ಶೇಕಡ 100ರಷ್ಟು ಸಾಲ ಖಾತರಿ ಯೋಜನೆಯಡಿ ಬ್ಯಾಂಕ್ಗಳು ಈ ನೆರವು ನೀಡುತ್ತಿವೆ.
ಆತ್ಮನಿರ್ಭರ ಭಾರತ ಅಭಿಯಾನ ಪ್ಯಾಕೇಜ್ನಲ್ಲಿ ₹ 20.97 ಲಕ್ಷ ಕೋಟಿ ಮೊತ್ತದ ಆರ್ಥಿಕ ಕೊಡುಗೆಯನ್ನು ಸರ್ಕಾರ ಘೋಷಿಸಿದೆ. ಇದರ ಭಾಗವಾಗಿ ಬ್ಯಾಂಕ್ಗಳು ಸಾಲ ವಿತರಣೆ ಮಾಡಲು ಆರಂಭಿಸಿವೆ.
ತೆರಿಗೆ ಮರುಪಾವತಿ: ಏಪ್ರಿಲ್ 1 ರಿಂದ ಸೆಪ್ಟೆಂಬರ್ 8ರ ನಡುವಿನ ಅವಧಿಯಲ್ಲಿ 27.55 ಲಕ್ಷಕ್ಕೂ ಅಧಿಕ ತೆರಿಗೆದಾರರಿಗೆ ₹ 1.01 ಲಕ್ಷ ಕೋಟಿ ತೆರಿಗೆ ಮರುಪಾವತಿ ಮಡಲಾಗಿದೆ ಎಂದು ಸಚಿವಾಲಯ ಹೇಳಿದೆ.