‘ಕೊರೊನಾ ಸೋಂಕಿನ ಭೀತಿಯ ನಡುವೆಯೂ ಮುಂಚೂಣಿಯಲ್ಲಿ ಹೋರಾಡುತ್ತಿರುವ ಜಿಲ್ಲೆಯ ಆಶಾ ಕಾರ್ಯಕರ್ತೆಯರನ್ನು ಗೌರವಿಸುವ ನಿಟ್ಟಿನಲ್ಲಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಬೆಮುಲ್) ವತಿಯಿಂದ ₹ 25 ಲಕ್ಷ ಪ್ರೋತ್ಸಾಹಧನ ನೀಡಲು ಈಚೆಗೆ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ’ ಎಂದು ವ್ಯವಸ್ಥಾಪಕ ನಿರ್ದೇಶಕ ಉಬೇದುಲ್ಲಾ ಖಾನ್ ತಿಳಿಸಿದರು.
‘ಪ್ರೋತ್ಸಾಹಧನದ ಚೆಕ್ ವಿತರಣೆಯ ಮೊದಲ ಕಾರ್ಯಕ್ರಮ ಜೂನ್ 13ರಂದು ಬೆಳಿಗ್ಗೆ 10ಕ್ಕೆ ರಾಯಬಾಗದ ಸ್ಟೇಷನ್ ಹಿಲ್ ಸಭಾಂಗಣದಲ್ಲಿ ನಡೆಯಲಿದೆ. ಅಧಿಕೃತ ಉದ್ಘಾಟನೆಯನ್ನು ಜೂನ್ 14ರಂದು ಗೋಕಾಕದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ನೆರವೇರಿಸಲಿದ್ದಾರೆ’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ಸಹಕಾರ ಇಲಾಖೆಯ ನಿರ್ದೇಶನದ ಪ್ರಕಾರ, ಆಶಾ ಕಾರ್ಯಕರ್ತೆಯರಿಗೆ ತಲಾ ₹3ಸಾವಿರ ನೀಡಲಾಗುವುದು’ ಎಂದರು.
‘ಹಾಲಿಗೆ ಬೇಡಿಕೆ ಕುಸಿದಿರುವುದರಿಂದಾಗಿ ರೈತರಿಂದ ಖರೀದಿ ದರವನ್ನು ₹ 2 ಇಳಿಕೆ (ಲೀಟರ್ಗೆ) ಮಾಡಲಾಗಿದೆ. ಆಕಳು ಹಾಲಿಗೆ ಸಂಘಕ್ಕೆ ₹ 24 ಹಾಗೂ ರೈತರಿಗೆ ₹ 22, ಎಮ್ಮೆ ಹಾಲಿಗೆ ಸಂಘಕ್ಕೆ ₹ 34 ಹಾಗೂ ರೈತರಿಗೆ ₹ 32 ಕೊಡಲಾಗುವುದು’ ಎಂದು ತಿಳಿಸಿದರು.