ಬ್ರುಸೆಲ್ಸ್: ಯೆಮನ್ನ ಹುಥಿ ಬಂಡುಕೋರರ ದಾಳಿಯಿಂದಾಗಿ ಸುಯೇಜ್ ಕಾಲುವೆ ಮೂಲಕ ನಡೆಯುತ್ತಿದ್ದ ಸರಕು ಸಾಗಣೆಯು ಶೇ 45ರಷ್ಟು ಕುಸಿದಿದೆ ಎಂದು ವಿಶ್ವಸಂಸ್ಥೆಯ ವಿಶ್ವ ವಾಣಿಜ್ಯ ಮತ್ತು ಅಭಿವೃದ್ಧಿ ಸಮ್ಮೇಳನ (ಯುಎನ್ಸಿಟಿಎಡಿ) ಹೇಳಿದೆ.
ಕೆಂಪು ಸಮುದ್ರದಲ್ಲಿ ವಾಣಿಜ್ಯ ಹಡಗುಗಳ ಮೇಲೆ ಕಳೆದ ಎರಡು ತಿಂಗಳಿನಿಂದಲೂ ಹುಥಿ ಬಂಡುಕೋರರಿಂದ ದಾಳಿ ಮುಂದುವರಿದಿದೆ. ಹಾಗಾಗಿ, ಹಡಗು ಮಾರ್ಗ ಬದಲಾಗಿದೆ.
ಈ ಬೆಳವಣಿಗೆಯು ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಹಣದುಬ್ಬರದ ಏರಿಕೆ ಮತ್ತು ಆಹಾರ ಭದ್ರತೆ ಸಮಸ್ಯೆ ಸೃಷ್ಟಿಗೂ ಕಾರಣವಾಗಬಹುದು. ಅಲ್ಲದೇ, ಹಸಿರುಮನೆ ಅನಿಲಗಳ ಹೊರಸೂಸುವಿಕೆ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ.
ಡಿಸೆಂಬರ್ನಲ್ಲಿಯೇ ಸುಯೇಜ್ ಕಾಲುವೆ ಮೂಲಕ ಸರಕು ಸಾಗಣೆ ಹಡಗುಗಳ ಸಂಚಾರ ಶೇ 39ರಷ್ಟು ಕುಸಿದಿತ್ತು. ಈಗ ಮತ್ತಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ.
ಜಾಗತಿಕಮಟ್ಟದಲ್ಲಿ ಸುಯೇಜ್ ಕಾಲುವೆ ಮೂಲಕ ಶೇ 12ರಿಂದ 15ರಷ್ಟು ವ್ಯಾಪಾರ ನಡೆಯುತ್ತದೆ. ಶೇ 25ರಿಂದ 30ರಷ್ಟು ಕಂಟೈನರ್ ಸಾಗಣೆ ನಡೆಯುತ್ತದೆ. ಆದರೆ, ಡಿಸೆಂಬರ್ನಿಂದ ಜನವರಿ 19ರವರೆಗೆ ಕಂಟೈನರ್ ಸಾಗಣೆ ಶೇ 82ರಷ್ಟು ಕುಸಿದಿದೆ. ದ್ರವೀಕೃತ ನೈಸರ್ಗಿಕ ಅನಿಲ ಸಾಗಣೆಯೂ ಕಡಿಮೆಯಾಗಿದೆ ಎಂದು ತಿಳಿಸಿದೆ.