ಮುಂಬೈ: ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಕೇಂದ್ರ ಸರ್ಕಾರ ಪರಿಶೀಲನೆ ನಡೆಸುತ್ತಿದ್ದು, ಹಣದುಬ್ಬರ ನಿಯಂತ್ರಣ ವಿಚಾರದಲ್ಲಿ ಎಚ್ಚರ ತಪ್ಪುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಹಣದುಬ್ಬರಕ್ಕೆ ಸಂಬಂಧಿಸಿದ ಎಲ್ಲಾ ಅಂಶಗಳನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈಗಾಗಲೇ ಹಣದುಬ್ಬರವು ಇಳಿಮುಖವಾಗಿದೆ ಎಂದು ಹೇಳಿದ್ದಾರೆ.
ಗ್ರಾಹಕ ದರ ಸೂಚ್ಯಂಕ (ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರವು ಏಪ್ರಿಲ್ನಲ್ಲಿ ಶೇ 4.7ರಷ್ಟು ಆಗಿದ್ದು, 18 ತಿಂಗಳ ಕನಿಷ್ಠ ಮಟ್ಟಕ್ಕೆ ತಲುಪಿದೆ. ಗ್ರಾಹಕ ದರ ಸೂಚ್ಯಂಕದಲ್ಲಿ ಸುಮಾರು ಅರ್ಧದಷ್ಟು ಪಾಲು ಹೊಂದಿರುವ ಆಹಾರ ವಸ್ತುಗಳ ದರ ಇಳಿಕೆ ಆಗಿರುವುದರಿಂದ ಏಪ್ರಿಲ್ನಲ್ಲಿ ಹಣದುಬ್ಬರ ಇಳಿಕೆ ಆಗುವಂತಾಗಿದೆ.
ಹಣದುಬ್ಬರವು ಶೇ 4ರ ಮಟ್ಟಕ್ಕೆ ಬರಲಿದೆ ಎನ್ನುವುದು ಆರ್ಥಿಕ ತಜ್ಞರ ನಿರೀಕ್ಷೆ ಆಗಿದೆ. ಹಣದುಬ್ಬರವನ್ನು ಗರಿಷ್ಠ ಶೇ 6ರ ಒಳಗೆ ನಿಯಂತ್ರಿಸುವಂತೆ ಸರ್ಕಾರವು ಆರ್ಬಿಐಗೆ ಸೂಚನೆ ನೀಡಿದೆ. ಆದರೆ, 2022ರಲ್ಲಿ ಚಿಲ್ಲರೆ ಹಣದುಬ್ಬರದ ಪ್ರಮಾಣವು ಬಹುತೇಕ ಶೇ 6ಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಇತ್ತು.