ನವದೆಹಲಿ: ಲಾಕ್ಡೌನ್ ಪರಿಣಾಮದಿಂದ ಶೇ 38ರಷ್ಟು ನವೋದ್ಯಮಗಳು ನಗದು ಸಮಸ್ಯೆ ಎದುರಿಸುತ್ತಿದ್ದರೆ ಶೇ 4ರಷ್ಟು ಬಾಗಿಲು ಮುಚ್ಚಿವೆ ಎಂದು ವರದಿಯೊಂದು ತಿಳಿಸಿದೆ.
ಲಾಕ್ಡೌನ್ ಅವಧಿಯಲ್ಲಿ ನವೋದ್ಯಮಗಳ ಸ್ಥಿತಿಗತಿಯ ಬಗ್ಗೆಲೋಕಲ್ ಸರ್ಕಲ್ಸ್ ಸಮೀಕ್ಷೆ ನಡೆಸಿದ್ದು, 8,400ಕ್ಕೂ ಅಧಿಕ ನವೋದ್ಯಮಗಳು, ಎಸ್ಎಂಇ ಮತ್ತು ಉದ್ಯಮಿಗಳಿಂದ 28 ಸಾವಿರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ.
ಕಳೆದೆರಡು ತಿಂಗಳಿನಲ್ಲಿ ಶೇ 80–90ರಷ್ಟು ವರಮಾನ ನಷ್ಟವಾಗಿದ್ದು, ನೆಲೆ ಕಂಡುಕೊಳ್ಳುವುದೇ ಕಷ್ಟವಾಗುತ್ತಿದೆ ಎಂದು ಹಲವು ಉದ್ದಿಮೆಗಳು ಹೇಳಿವೆ. ಏಪ್ರಿಲ್ನಿಂದ ಜೂನ್ ಅವಧಿಗೆ ಹೋಲಿಸಿದರೆ ಹಣವಿಲ್ಲದೇ ಇರುವ ನವೋದ್ಯಮಗಳ ಪ್ರಮಾಣ ಶೇ 27 ರಿಂದ ಶೇ 42ಕ್ಕೆ ಏರಿಕೆಯಾಗಿದ್ದು, ಪರಿಸ್ಥಿತಿಯ ಗಂಭೀರತೆ ತೋರಿಸುತ್ತಿದೆ.
ವಹಿವಾಟು ಮುಂದುವರಿಸಲು ಕಂಪನಿಗಳು ವೆಚ್ಚ ಕಡಿತಕ್ಕೆ ಮುಂದಾಗಿವೆ. ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲಾಗುತ್ತಿದೆ. ಆತ್ಮನಿರ್ಭರ ಭಾರತ ಯೋಜನೆಯಿಂದ ನವೋದ್ಯಮಗಳಿಗೆ ಪ್ರಯೋಜನ ಆಗುವುದಿಲ್ಲ. ಏಕೆಂದರೆ ಇವು ವೆಂಚರ್ ಕ್ಯಾಪಿಟಲ್ನಿಂದ ವಹಿವಾಟು ಆರಂಭಿಸುತ್ತವೆ. ಹೀಗಾಗಿ ಯೋಜನೆಗೆ ಅರ್ಹರಾಗುವುದಿಲ್ಲ ಎಂದು ತಿಳಿಸಿದೆ.
ಸಮೀಕ್ಷೆಯ ವಿವರ
ಹಣವೇ ಇಲ್ಲ ಎಂದಿರುವ ನವೋದ್ಯಮಗಳು - ಶೇ38
1–3 ತಿಂಗಳಿಗೆ ಸಾಲುವಷ್ಟು ನಗದು ಇದೆ ಎಂದಿರುವವರು - ಶೇ 30
3–6 ತಿಂಗಳಿಗೆ ಸಾಲುವಷ್ಟು ನಗದು ಇದೆ ಎಂದಿರುವವರು - ಶೇ 16
ಬಾಗಿಲು ಮುಚ್ಚಿರುವ ನವೋದ್ಯಮಗಳು - ಶೇ 4
ಆರು ತಿಂಗಳಿನಲ್ಲಿ ಚೇತರಿಸಿಕೊಳ್ಳುವ ವಿಶ್ವಾಸ ಹೊಂದಿರುವವರು - ಶೇ 35
ವಹಿವಾಟು ಮುಚ್ಚುವ ಹಂತಕ್ಕೆ ತಲುಪಿದೆ ಎಂದಿರುವವರು - ಶೇ 14