ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೊಸ ಅವಕಾಶಗಳಿಗಾಗಿ ಹುಡುಕಾಟ’

ಇನ್ಫೊಸಿಸ್‌ ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ಎಂ.ಡಿ. ರಂಗನಾಥ್
Last Updated 18 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘18 ವರ್ಷಗಳವರೆಗೆ ಸೇವೆ ಸಲ್ಲಿಸಲು ಅವಕಾಶ ನೀಡಿದ ಸಂಸ್ಥೆಗೆ ಕೃತಜ್ಞನಾಗಿದ್ದೇನೆ. ಹೊಸ ಕ್ಷೇತ್ರಗಳಲ್ಲಿ ವೃತ್ತಿಪರ ಅವಕಾಶಗಳ ಹುಡುಕಾಟ ಆರಂಭಿಸಲು ಹೊರನಡೆಯುತ್ತಿದ್ದೇನೆ’ ಎಂದು ಇನ್ಫೊಸಿಸ್‌ ಸಿಎಫ್‌ಒಎಂ.ಡಿ. ರಂಗನಾಥ್‌ ಹೇಳಿದ್ದಾರೆ.

‘ನಾನು ಸಿಎಫ್‌ಒ ಆಗಿ ಅಧಿಕಾರದಲ್ಲಿ ಇದ್ದ ಮೂರು ವರ್ಷಗಳಲ್ಲಿ ಸಂಸ್ಥೆಯು ಅತ್ಯಂತ ಕಷ್ಟದ ಸಂದರ್ಭದಲ್ಲಿತ್ತು. ಆಗ ಉತ್ತಮ ಹಣಕಾಸು ಸಾಧನೆ ನೀಡಲು ಸಾಧ್ಯವಾಯಿತು. ಹಣಕಾಸು ವರದಿಗಳಲ್ಲಿ ಗರಿಷ್ಠ ಗುಣಮಟ್ಟ ಕಾಯ್ದುಕೊಳ್ಳಲಾಗಿದೆ. ವಿಶ್ವದರ್ಜೆಯ ಹಣಕಾಸು ತಂಡವನ್ನೂ ರಚಿಸಲಾಯಿತು. ಮಾತ್ರವಲ್ಲ, ಸಂಸ್ಥೆಯ ಸ್ಪರ್ಧಾತ್ಮಕ ಸ್ಥಾನವನ್ನು ಇನ್ನಷ್ಟು ಬಲಪಡಿಸುವ ಮೂಲಕ ಷೇರುದಾರರ ಸಂಪತ್ತು ವೃದ್ಧಿಸುವಂತೆ ಮಾಡಲಾಗಿದೆ. ಇವೆಲ್ಲವೂ ನನಗೆ ಹೆಮ್ಮೆಯ ವಿಷಯವಾಗಿವೆ’ ಎಂದು ರಂಗನಾಥ್‌ ಅವರು ರಾಜೀನಾಮೆ ನೀಡುವ ಸಂದರ್ಭದಲ್ಲಿ ಹೇಳಿದ್ದಾರೆ.

‘ನನಗೆ ಸಹಕಾರ ನೀಡಿದ ಆಡಳಿತ ಮಂಡಳಿ, ಹಣಕಾಸು ತಂಡದಲ್ಲಿನ ಸಹೋದ್ಯೋಗಿಗಳಿಗೆ ಹಾಗೂ ನನ್ನ ಅಧಿಕಾರಾವಧಿಯಲ್ಲಿ ಸಂಪೂರ್ಣವಾಗಿ ಬೆಂಬಲ ನೀಡಿದ ಷೇರುದಾರರಿಗೂಧನ್ಯವಾದ ಹೇಳಲು ಬಯಸುತ್ತೇನೆ. ಸಂಸ್ಥೆಯ ವ್ಯವಸ್ಥಾಪಕ ತಂಡಕ್ಕೆ ನಾನು ಶುಭಕೋರುತ್ತಾ ಸಂಸ್ಥೆಯಾಚೆಗೆ ನನಗಿರುವ ಅವಕಾಶಗಳನ್ನು ಹುಡುಕಿಕೊಂಡು ಹೊರಟ್ಟಿದ್ದೇನೆ’ ಎಂದಿದ್ದಾರೆ.

ರಂಗನಾಥ್‌ಅವರ ರಾಜೀನಾಮೆಯನ್ನು ಸ್ವೀಕರಿಸಿರುವುದಾಗಿ ಸಂಸ್ಥೆಯ ನಿರ್ದೇಶಕರ ಮಂಡಳಿ ಶನಿವಾರ ತಿಳಿಸಿದೆ.2018ರ ನವೆಂಬರ್‌ 16ರವರೆಗೂ ಅವರು ಅಧಿಕಾರದಲ್ಲಿ ಇರಲಿದ್ದಾರೆ. ಹೊಸ ಸಿಎಫ್‌ಒ ಗಾಗಿಆಡಳಿತ ಮಂಡಳಿ ತಕ್ಷಣದಿಂದಲೇ ಹುಡುಕಾಟ ಆರಂಭಿಸಿದೆ ಎಂದು ಹೇಳಿದೆ.

‘ಸಂಸ್ಥೆಯ ಆರ್ಥಿಕ ಸ್ಥಿತಿಗೆ ಹೊಸ ದಿಕ್ಕನ್ನು ನೀಡುವಲ್ಲಿ ನಾನು ಮತ್ತು ರಂಗ (ರಂಗನಾಥ್‌) ಕೆಲವು ತ್ರೈಮಾಸಿಕಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದೇವೆ. ಸಂಸ್ಥೆಯ ವಹಿವಾಟನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಂಡು ಸ್ಥಿರವಾದ ಆರ್ಥಿಕ ಫಲಿತಾಂಶ ನೀಡುವ ಅವರ ಸಾಮರ್ಥ್ಯ ಮೆಚ್ಚುವಂತಹದ್ದಾಗಿದೆ. ಸಿಎಫ್‌ಒ ಆಗಿ ಪ್ರಮುಖ ಪಾತ್ರ ವಹಿಸಿರುವುದಷ್ಟೇ ಅಲ್ಲದೆ, ಸಂಸ್ಥೆಗೆ ಉತ್ತಮನಾಯಕತ್ವವನ್ನೂ ನೀಡಿದ್ದಾರೆ’ ಎಂದು ಸಿಇಒ ಸಲೀಲ್‌ ಪಾರೇಖ್‌ ಹೇಳಿದ್ದಾರೆ.

2015ರಲ್ಲಿ ರಾಜೀವ್‌ ಬನ್ಸಲ್‌ ಅವರು ರಾಜೀನಾಮೆ ನೀಡಿದ ಬಳಿಕ ರಂಗನಾಥನ್‌ ಅವರು ಸಿಎಫ್‌ಒ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಸಲಹೆ, ಹಣಕಾಸು, ಕಾರ್ಯತಂತ್ರ, ಗಂಡಾಂತರ ನಿರ್ವಹಣೆ ಹಾಗೂ ವಿಲೀನ ಮತ್ತು ಸ್ವಾಧೀನಕ್ಕೆ ಸಂಬಂಧಿಸಿದಂತೆ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಚ್ಚರಿಯ ನಡೆ: ರಂಗನಾಥ್‌ ರಾಜೀನಾಮೆ ಅಚ್ಚರಿ ಮೂಡಿಸಿದೆ. ದೇಶದ ಎರಡನೇ ಅತಿದೊಡ್ಡ ಐ.ಟಿ ಸಂಸ್ಥೆಯಲ್ಲಿನ ಸ್ಥಿರತೆಯ ಬಗ್ಗೆ ಮಾರುಕಟ್ಟೆ ವಿಶ್ಲೇಷಕರು ಅನುಮಾನಗಳು ವ್ಯಕ್ತಪಡಿಸಿದ್ದಾರೆ. ‘ಸುದೀರ್ಘ ಅವಧಿಯಿಂದ ಸಂಸ್ಥೆಯಲ್ಲಿದ್ದ ಉನ್ನತಾಧಿಕಾರಿಯೊಬ್ಬರು ಸಂಸ್ಥೆ ತೊರೆಯುತ್ತಿರುವುದು ಹಲವು ವದಂತಿಗಳಿಗೆ ದಾರಿಮಾಡಿಕೊಡಲಿದೆ’ ಎಂದು ಇನ್‌ಗವರ್ನ್‌ ರಿಸರ್ಚ್‌ ಸರ್ವೀಸಸ್‌ನ ಸ್ಥಾಪಕ ಶ್ರೀರಾಮ್‌ ಸುಬ್ರಮಣಿಯನ್‌ ಹೇಳಿದ್ದಾರೆ. ಮಾಜಿ ಸಿಎಫ್‌ಒ ರಾಜೀವ್‌ ಬನ್ಸಲ್‌ ಪ್ರಕರಣವು ಸಂಸ್ಥೆಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ರಂಗನಾಥ್‌ ರಾಜೀನಾಮೆ ಹೂಡಿಕೆದಾರರಲ್ಲಿ ಅನುಮಾನ ಮೂಡದಂತೆ ಸಂಸ್ಥೆ ನೋಡಿಕೊಳ್ಳಬೇಕಾಗಿದೆ’ ಎಂದಿದ್ದಾರೆ.

ತುಂಬಲಾರದ ನಷ್ಟ: ಮೂರ್ತಿ
‘ಸಂಕಟ್ಟದ ಪರಿಸ್ಥಿತಿಯಲ್ಲಿ ರಂಗನಾಥ್‌ ಅವರು ರಾಜೀನಾಮೆ ನೀಡಿರುವುದು ಸಂಸ್ಥೆಗೆ ತುಂಬಲಾರದ ನಷ್ಟ’ ಎಂದು ಇನ್ಫೊಸಿಸ್‌ ಸಹ ಸ್ಥಾಪಕ ಎನ್‌.ಆರ್‌. ನಾರಾಯಣಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

‘ಭಾರತದಲ್ಲಿನ ಒಬ್ಬ ಅತ್ಯುತ್ತಮ ಸಿಎಫ್ಒ ಮತ್ತು ವಿರಳ ವ್ಯಕ್ತಿ ರಂಗನಾಥ್‌ ಎಂದು ಮೂರ್ತಿ ಬಣ್ಣಿಸಿದ್ದಾರೆ.

‘ಷೇರುದಾರರು, ಗ್ರಾಹಕರು, ವಿತರಕರ ತಂಡ, ಉದ್ಯೋಗಿಗಳು... ಹೀಗೆ ಸಂಸ್ಥೆಯಲ್ಲಿ ಇರುವ ಪ್ರತಿಯೊಬ್ಬರ ಮಹತ್ವವನ್ನೂ ಅರಿತಿದ್ದರು.ಉತ್ತಮ ಸಮಾಜ ನಿರ್ಮಾಣಕ್ಕೆ ಅನುಸರಿಸಬೇಕಾದ ನೈತಿಕ ಜವಾಬ್ದಾರಿಗಳ ಅರಿವೂ ಅವರಿಗಿತ್ತು’ ಎಂದು ಹೇಳಿದ್ದಾರೆ.

‘ಐದು ವರ್ಷಗಳಲ್ಲಿ ಸಮರ್ಪಕ ರೀತಿಯಲ್ಲಿ ವೆಚ್ಚ ನಿರ್ವಹಣೆ ಮಾಡುವ ಮೂಲಕ ಸಂಸ್ಥೆಯ ಬಗ್ಗೆಹೂಡಿಕೆದಾರರಲ್ಲಿ ಇರುವ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.ಸವಾಲಿನ ಸಂದರ್ಭದಲ್ಲಿ ಕಠಿಣ ನಿರ್ಧಾರ ಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಅವರಿಗಿದೆ. ಹಣಕಾಸು ವಿಷಯದಲ್ಲಿನ ತಜ್ಞತೆ, ಎಂದಿಗೂ ಕುಗ್ಗದ ವಿನಯವಂತಿಕೆ, ಯೋಜನೆಗಳನ್ನು ದೋಷರಹಿತವಾಗಿ ಜಾರಿಗೊಳಿಸುವ ಜಾಣತನ ಅವರನ್ನು ಒಬ್ಬಅನುಕರಣೀಯ ನಾಯಕನಾಗಿ ರೂಪಿಸಿದೆ’ ಎಂದು ಗುಣಗಾನ ಮಾಡಿದ್ದಾರೆ.

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT