ನವದೆಹಲಿ: ದೇಶದಲ್ಲಿ ಈರುಳ್ಳಿ ದರ ನಿಯಂತ್ರಣಕ್ಕೆ ತರುವ ಸಲುವಾಗಿ ಕೇಂದ್ರ ಸರ್ಕಾರ 1 ಲಕ್ಷ ಟನ್ ಆಮದು ಮಾಡಿಕೊಳ್ಳಲು ನಿರ್ಧರಿಸಿದೆ.
ಶನಿವಾರ ನಡೆದ ಕಾರ್ಯದರ್ಶಿಗಳ ಮಟ್ಟದ ಸಮಿತಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ.ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರು ಟ್ವಿಟರ್ನಲ್ಲಿ ಮಾಹಿತಿ ನೀಡಿದ್ದಾರೆ.
ದೆಹಲಿಯಲ್ಲಿ ಚಿಲ್ಲರೆ ಮಾಟ ದರ ಕೆ.ಜಿಗೆ ₹ 100ರ ಸಮೀಪಕ್ಕೆ ತಲುಪಿದೆ. ಬೇರೆ ಪ್ರದೇಶಗಳಲ್ಲಿ ಕೆ.ಜಿಗೆ 60 ರಿಂದ ₹ 80ರಂತೆ ಮಾರಾಟವಾಗುತ್ತಿದೆ. ಹೀಗಾಗಿ ಪೂರೈಕೆ ಹೆಚ್ಚಿಸುವ ಮೂಲಕ ದರ ಏರಿಕೆ ನಿಯಂತ್ರಣಕ್ಕೆ ತರಲು ಮುಂದಾಗಿದೆ.
ಸರ್ಕಾರಿ ಸ್ವಾಮ್ಯದ ಎಂಎಂಟಿಸಿ ಸಂಸ್ಥೆಯು ಆಮದು ಮಾಡಿಕೊಳ್ಳಲಿದ್ದು, ನಾಫೆಡ್ ಸಂಸ್ಥೆಯು ನವೆಂಬರ್ 15 ರಿಂದ ಡಿಸೆಂಬರ್ 15ರ ಅವಧಿಯಲ್ಲಿ ಪೂರೈಕೆ ಮಾಡಲಿದೆ.
ಮೊದಲ ಹಂತದಲ್ಲಿ 2 ಸಾವಿರ ಟನ್ ಈರುಳ್ಳಿ ಶೀಘ್ರವೇ ಭಾರತದ ಬಂದರುಗಳಿಗೆ ಬರಲಿದೆ. ಎರಡನೇ ಹಂತದ ಸರಕು ಡಿಸೆಂಬರ್ ಅಂತ್ಯದಲ್ಲಿ ಪೂರೈಕೆಯಾಗಲಿದೆ ಎಂದು ಎಂಎಂಟಿಸಿ ತಿಳಿಸಿದೆ.
ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಉಂಟಾಗಿದ್ದ ಪ್ರವಾಹ ಪರಿಸ್ಥಿತಿಯಿಂದಾಗಿ ಈರುಳ್ಳಿ ಪೂರೈಕೆಯಲ್ಲಿ ಅಡಚಣೆ ಉಂಟಾಗಿದ್ದು, ಬೆಲೆ ಹೆಚ್ಚಾಗುತ್ತಿದೆ.