ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಅವರ ಅಧಿಕಾರ ಅವಧಿಯನ್ನು ಕೇಂದ್ರ ಸರ್ಕಾರವು ಮೂರು ವರ್ಷಗಳಿಗೆ ವಿಸ್ತರಿಸಿದೆ. ಅವರು 2024ರ ಡಿಸೆಂಬರ್ವರೆಗೂ ಆರ್ಬಿಐ ಗವರ್ನರ್ ಆಗಿ ಮುಂದುವರಿಯಲಿದ್ದಾರೆ.
ಊರ್ಜಿತ್ ಪಟೇಲ್ ಅವರ ರಾಜೀನಾಮೆ ನಂತರ, ದಾಸ್ ಅವರನ್ನು ಆರ್ಬಿಐನ 25ನೆಯ ಗವರ್ನರ್ ಆಗಿ 2018ರ ಡಿಸೆಂಬರ್ 11ರಂದು ಮೂರು ವರ್ಷಗಳ ಅವಧಿಗೆನೇಮಕ ಮಾಡಲಾಗಿತ್ತು. ದಾಸ್ ಅವರ ಅಧಿಕಾರ ಅವಧಿಯನ್ನು ವಿಸ್ತರಿಸುವ ತೀರ್ಮಾನವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟದ ನೇಮಕಾತಿ ಸಮಿತಿಯು ಕೈಗೊಂಡಿದೆ.
ಡಿಸೆಂಬರ್ 10ರಿಂದ ಅನ್ವಯವಾಗುವಂತೆ ಮುಂದಿನ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ದಾಸ್ ಅವರನ್ನು ಮರುನೇಮಕ ಮಾಡಲು ಸಮಿತಿಯು ಒಪ್ಪಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವು 2014ರಲ್ಲಿ ಅಧಿಕಾರಕ್ಕೆ ಬಂದ ನಂತರದಲ್ಲಿ ಎರಡನೆಯ ಅವಧಿಗೆ ಗವರ್ನರ್ ಆಗಿ ನೇಮಕಗೊಂಡಿರುವ ಮೊದಲ ವ್ಯಕ್ತಿ ದಾಸ್. ಕೋವಿಡ್–19 ಬಿಕ್ಕಟ್ಟಿನ ಸಂದರ್ಭದಲ್ಲಿ ಅರ್ಥ ವ್ಯವಸ್ಥೆಯನ್ನು ಮುನ್ನಡೆಸುವಲ್ಲಿ ದಾಸ್ ಅವರು ಪ್ರಮುಖ ಪಾತ್ರ ನಿಭಾಯಿಸಿದ್ದಾರೆ.