ಮುಂಬೈ: ಆರ್ಥಿಕತೆಯಲ್ಲಿ ಹಣಕಾಸು ಸ್ಥಿರತೆ ಕಾಯ್ದುಕೊಳ್ಳುವ ಉದ್ದೇಶಕ್ಕೆ ಮುಕ್ತ ಮಾರುಕಟ್ಟೆ ಕಾರ್ಯಾಚರಣೆ ಮೂಲಕ ₹ 10 ಸಾವಿರ ಕೋಟಿ ಒದಗಿಸಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ.
ಕೊರೊನಾ ವೈರಸ್ ಹಾವಳಿಯಿಂದ ದೇಶದಲ್ಲಿ ಉದ್ಭವಿಸಿರುವ ಆರ್ಥಿಕ ಸಂಕಷ್ಟಕ್ಕೆ ನೆರವಾಗಲು ಶುಕ್ರವಾರ ಈ ನಗದು ಭರ್ತಿ ಪ್ರಕ್ರಿಯೆ ನಡೆಯಲಿದೆ. ಮಾರುಕಟ್ಟೆಯ ಎಲ್ಲ ವಲಯಗಳು ನಗದು ಲಭ್ಯತೆಯೊಂದಿಗೆ ಸ್ಥಿರವಾಗಿ ಸಾಮಾನ್ಯ ರೀತಿಯಲ್ಲಿ ಕಾರ್ಯನಿರ್ವಹಿಸುವ ಅಗತ್ಯ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶುಕ್ರವಾರ ಸರ್ಕಾರದ ಸಾಲ ಪತ್ರಗಳನ್ನು ₹ 10 ಸಾವಿರ ಕೋಟಿಗಳಿಗೆ ಖರೀದಿಸಲು ಆರ್ಬಿಐ ಉದ್ದೇಶಿಸಿದೆ.
’ಆರ್ಥಿಕ ಸಂಕಷ್ಟ ಪರಿಸ್ಥಿತಿ ಎದುರಿಸಲು ಕೇಂದ್ರೀಯ ಬ್ಯಾಂಕ್ ಸನ್ನದ್ಧ ಸ್ಥಿತಿಯಲ್ಲಿದ್ದು, ಅಗತ್ಯ ಬಿದ್ದರೆ ತನ್ನ ಬಳಿ ಲಭ್ಯ ಇರುವ ಅಗತ್ಹ ಕ್ರಮಗಳನ್ನು ಕೈಗೊಳ್ಳಲಿದೆ‘ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಸೋಮವಾರ ಹೇಳಿದ್ದರು.