ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಸ್ತಿತ್ವಕ್ಕೆ

Last Updated 2 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಗ್ರಾಮೀಣ ಬ್ಯಾಂಕುಗಳ ಮಹಾವಿಲೀನ ಪ್ರಕ್ರಿಯೆ ನಡೆಯುತ್ತಿದ್ದು, ರಾಜ್ಯ ಮಟ್ಟದ ಗ್ರಾಮೀಣ ಬ್ಯಾಂಕುಗಳನ್ನು ಹುಟ್ಟುಹಾಕುವುದರ ಮೂಲಕ ಈವರೆವಿಗೂ ಕೇವಲ ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿದ್ದ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಕಾರ್ಯಕ್ಷೇತ್ರವನ್ನು ರಾಜ್ಯ ಮಟ್ಟಕ್ಕೆ ವಿಸ್ತರಿಸಲಾಗುತ್ತಿದೆ. ರಾಜ್ಯದಲ್ಲಿ ಏಪ್ರಿಲ್‌ 1ರಿಂದ ‘ಕರ್ನಾಟಕ ಗ್ರಾಮೀಣ ಬ್ಯಾಂಕು’ ಅಸ್ತಿತ್ವಕ್ಕೆ ಬಂದಿದೆ. ಎರಡು ಪ್ರಮುಖ ಗ್ರಾಮೀಣ ಬ್ಯಾಂಕುಗಳಾದ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕು ಮತ್ತು ಕಾವೇರಿ ಗ್ರಾಮೀಣ ಬ್ಯಾಂಕುಗಳನ್ನು ಒಂದುಗೂಡಿಸಿ ನೂತನವಾಗಿ ರಚಿಸಲಾದ ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ಸೇರ್ಪಡೆ ಮಾಡಲಾಗಿದೆ. ಬಳ್ಳಾರಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಪ್ರಾಯೋಜಕ ಬ್ಯಾಂಕಿನ ಹೊಣೆಯನ್ನು ಕೆನರಾ ಬ್ಯಾಂಕಿಗೆ ವಹಿಸಲಾಗಿದೆ.

ಸದ್ಯಕ್ಕೆ ಪ್ರತಿ ರಾಜ್ಯದಲ್ಲಿಯೂ, ಅಯಾ ರಾಜ್ಯದ ಪ್ರಾದೇಶಿಕ ವ್ಯಾಪ್ತಿ ಅವಲಂಬಿಸಿ, ಎರಡರಿಂದ ಮೂರು ಗ್ರಾಮೀಣ ಬ್ಯಾಂಕುಗಳಿವೆ. ಇಡೀ ರಾಜ್ಯಕ್ಕೆ ಒಂದೇ ಗ್ರಾಮೀಣ ಬ್ಯಾಂಕ್ ಸಾಕು ಎಂಬುದು ಕೇಂದ್ರ ಸರ್ಕಾರದ ಆಲೋಚನೆಯಾಗಿದೆ. ಅದರಂತೆ 1ನೇ ಏಪ್ರಿಲ್ 2019ರಂದು ದೇಶದ ಹಲವೆಡೆ ರಾಜ್ಯಮಟ್ಟದ ಹೊಸ ಗ್ರಾಮೀಣ ಬ್ಯಾಂಕುಗಳು ಜನ್ಮತಾಳಿದ್ದು, ಈಗ ಕಾರ್ಯನಿರ್ವಹಿಸುತ್ತಿರುವ ಹಲವು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಆಯಾ ರಾಜ್ಯಮಟ್ಟದ ಗ್ರಾಮೀಣ ಬ್ಯಾಂಕಿನಲ್ಲಿ ಸೇರ್ಪಡೆಯಾಗಿವೆ. ಕೆಲವು ರಾಜ್ಯಗಳಲ್ಲಿ ವಿಲೀನ ಪ್ರಕ್ರಿಯೆ ಇನ್ನೂ ಪ್ರಾರಂಭವಾಗಬೇಕಾಗಿದೆ.

1985ರಲ್ಲಿ ದೇಶದಾದ್ಯಂತ 196 ಗ್ರಾಮೀಣ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿದ್ದವು. ಕಳೆದ ಹತ್ತು ವರ್ಷಗಳಲ್ಲಿ ನಡೆದ ಎರಡು ಹಂತದ ವಿಲೀನ ಪ್ರಕ್ರಿಯೆಯಿಂದಾಗಿ ಇವುಗಳ ಸಂಖ್ಯೆ ಈಗ 56ಕ್ಕೆ ಇಳಿದಿತ್ತು. ಮೂರನೇ ಹಂತದ ವಿಲೀನ ಪ್ರಕ್ರಿಯೆಯಲ್ಲಿ ಈ ಸಂಖ್ಯೆಯನ್ನು 38ಕ್ಕೆ ಮಿತಿಗೊಳಿಸಬೇಕೆಂಬುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ.

ಏಪ್ರಿಲ್ 1ರಿಂದ ಕರ್ನಾಟಕ ಗ್ರಾಮೀಣ ಬ್ಯಾಂಕು ಮಾತ್ರವಲ್ಲದೆ ತಮಿಳುನಾಡು ಗ್ರಾಮೀಣ ಬ್ಯಾಂಕು, ಜಾರ್ಖಂಡ್ ರಾಜ್ಯ ಗ್ರಾಮೀಣ ಬ್ಯಾಂಕು ಮತ್ತಿತರ ರಾಜ್ಯ ಮಟ್ಟದ ಕೆಲವು ಗ್ರಾಮೀಣ ಬ್ಯಾಂಕುಗಳು ಅಸ್ತಿತ್ವಕ್ಕೆ ಬಂದಿವೆ. ಈ ಮಹಾವಿಲೀನದಿಂದಾಗಿ ಗ್ರಾಮೀಣ ಬ್ಯಾಂಕುಗಳ ದಕ್ಷತೆ, ಕಾರ್ಯವಿಧಾನ, ವಹಿವಾಟು ಮತ್ತು ಗ್ರಾಮೀಣ ಆರ್ಥಿಕತೆಯಲ್ಲಿ ಬಹಳಷ್ಟು ಸುಧಾರಣೆಯಾಗಲಿದೆ. ಹಣಕಾಸು ಸೇರ್ಪಡೆ ಕಾರ್ಯಕ್ರಮದಲ್ಲಿ ಗ್ರಾಮೀಣ ಬ್ಯಾಂಕುಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳಬಹುದಾಗಿದೆ.

ಇತಿಹಾಸದ ಪುಟಕ್ಕೆ: ರಾಜ್ಯದಲ್ಲಿ ಈವರೆಗೂ ಮೂರು ಗ್ರಾಮೀಣ ಬ್ಯಾಂಕುಗಳು ಕಾರ್ಯನಿರ್ವಹಿಸುತ್ತಿದ್ದವು. ಕಾವೇರಿ ಗ್ರಾಮೀಣ ಬ್ಯಾಂಕು, ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕು ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು. ಇವುಗಳ ಪ್ರಾಯೋಜಕ ಬ್ಯಾಂಕುಗಳ ಜವಾಬ್ದಾರಿಯನ್ನು ಕ್ರಮವಾಗಿ ಭಾರತೀಯ ಸ್ಟೇಟ್ ಬ್ಯಾಂಕ್‌, ಕೆನರಾ ಬ್ಯಾಂಕ್‌ ಮತ್ತು ಸಿಂಡಿಕೇಟ್ ಬ್ಯಾಂಕ್‌ಗಳಿಗೆ ವಹಿಸಲಾಗಿತ್ತು.

ಹಲವು ದಶಕಗಳಿಂದ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಕಾವೇರಿ ಗ್ರಾಮೀಣ ಬ್ಯಾಂಕು ಮತ್ತು ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕುಗಳು ಮಾರ್ಚ್‌ ತಿಂಗಳ ಅಂತ್ಯಕ್ಕೆ ತಮ್ಮ ಕೊನೆಯ ದಿನದ ವಹಿವಾಟನ್ನು ಮುಗಿಸಿ, ಹೊಸದಾಗಿ ರಚಿತವಾದ ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ಸೇರ್ಪಡೆಗೊಂಡಿವೆ. ಎರಡೂ ಬ್ಯಾಂಕುಗಳ ಪ್ರಾದೇಶಿಕ ವ್ಯಾಪ್ತಿ ಬೇರೆ ಬೇರೆ ಆಗಿರುವುದರಿಂದ ಈಗಿರುವ ಯಾವುದೇ ಶಾಖೆಯನ್ನು ಮುಚ್ಚುವ ಪ್ರಸಂಗ ಬರುವುದಿಲ್ಲ.

ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಅಧಿಕೃತ ಬಂಡವಾಳ ₹ 2,000 ಕೋಟಿಗಳಾಗಿದೆ. ಈ ಪೈಕಿ ಕಾವೇರಿ ಗ್ರಾಮೀಣ ಬ್ಯಾಂಕು ಮತ್ತು ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ಗಳ ಒಟ್ಟು ವಂತಿಗೆಯಾದ ₹ 117.64 ಕೋಟಿ ಬಂಡವಾಳವನ್ನು ಕರ್ನಾಟಕ ಗ್ರಾಮೀಣ ಬ್ಯಾಂಕಿಗೆ ವರ್ಗಾಯಿಸಲಾಗುವುದು. ಇದರಲ್ಲಿ ಕೇಂದ್ರ ಸರ್ಕಾರ, ಕರ್ನಾಟಕ ಸರ್ಕಾರ ಮತ್ತು ಪ್ರಾಯೋಜಕ ಬ್ಯಾಂಕ್ ಆದ ಕೆನರಾ ಬ್ಯಾಂಕಿನ ಪಾಲು ಕ್ರಮವಾಗಿ ₹ 58.82 ಕೋಟಿ, ₹ 17.65 ಕೋಟಿ ₹ 41.17 ಕೋಟಿ ಇರಲಿದೆ.

ಈ ಎರಡೂ ಗ್ರಾಮೀಣ ಬ್ಯಾಂಕುಗಳ ಒಂದೂವರೆ ಕೋಟಿಗೂ ಹೆಚ್ಚು ಸಂಖ್ಯೆಯ ಗ್ರಾಹಕರು ಈಗ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಗ್ರಾಹಕರಾಗಿದ್ದಾರೆ. ಅವರ ಠೇವಣಿ ಹಾಗೂ ಸಾಲ ಖಾತೆಗಳು, ಬ್ಯಾಂಕಿಗೆ ಬರೆದುಕೊಟ್ಟಿರುವ ಕರಾರು ಪತ್ರಗಳು, ಅಡಮಾನ ಪತ್ರಗಳು ಮುಂತಾದ ದಸ್ತಾವೇಜುಗಳು ನಿಯಮಬದ್ಧವಾಗಿ ಹೊಸ ಬ್ಯಾಂಕಿನ ಹೆಸರಿಗೆ ವರ್ಗಾವಣೆಗೊಳ್ಳಲಿವೆ.

ಹಿನ್ನೆಲೆ: ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಸ್ಥಾಪನೆಯ ಉದ್ದೇಶ ತಿಳಿಯಲು ನಾವು ಐವತ್ತು ವರ್ಷ ಹಿಂದಕ್ಕೆ ಹೋಗಬೇಕು. 1969ರ ಜುಲೈ 19ರಂದು ನಡೆದ 14 ಖಾಸಗಿ ಬ್ಯಾಂಕುಗಳ ರಾಷ್ಟ್ರೀಕರಣದ ತರುವಾಯ ದೇಶಿ ಬ್ಯಾಂಕಿಂಗ್ ವ್ಯವಸ್ಥೆ ಮಹತ್ತರ ತಿರುವು ಪಡೆದಿತ್ತು. ಅಲ್ಲಿಂದೀಚೆಗೆ ದೇಶದ ಎಲ್ಲ ಪ್ರದೇಶಗಳಿಗೂ ಮತ್ತು ಎಲ್ಲ ಸ್ತರದ ಜನತೆಗೂ ಬ್ಯಾಂಕಿಂಗ್ ಸೌಲಭ್ಯ ಕಲ್ಪಿಸಬೇಕೆನ್ನುವ ನಿಟ್ಟಿನಲ್ಲಿ ಹಲವಾರು ಸುಧಾರಣೆಗಳಾಗಿವೆ. ಆ ಪೈಕಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಸ್ಥಾಪನೆಯೂ ಒಂದು.

ಕೆಲವೊಂದು ಗ್ರಾಮೀಣ ಬ್ಯಾಂಕುಗಳು ಸ್ವಯಂಶಿಸ್ತನ್ನು ರೂಢಿಸಿಕೊಂಡ ಕಾರಣ ಮತ್ತು ಆಯಾ ಪ್ರದೇಶಗಳ ನೈಸರ್ಗಿಕ ಹಾಗೂ ಸಮೃದ್ಧ ಹಣಕಾಸು ಚಟುವಟಿಕೆಗಳಿಂದಾಗಿ ಸದೃಢವಾಗಿ ಬೆಳೆದಿದ್ದರೂ, ವ್ಯವಹಾರ ವಹಿವಾಟು ಹೆಚ್ಚಿಸಿಕೊಳ್ಳಲು ತನ್ನ ಕಾರ್ಯವ್ಯಾಪ್ತಿಯ ಜಿಲ್ಲೆಗಳಿಂದಾಚೆಗೆ ಶಾಖಾ ಜಾಲ ವಿಸ್ತರಿಸುವ ಅವಕಾಶದಿಂದ ವಂಚಿತವಾಗಿದ್ದವು. ತಾನು ಬಂಡವಾಳ ತೊಡಗಿಸಿದ ಗ್ರಾಮೀಣ ಬ್ಯಾಂಕುಗಳ ಪುನರ್‌ರಚನೆ ಮತ್ತು ವಿಲೀನ ಕಾರ್ಯ ಅನಿವಾರ್ಯವೆಂಬುದು ಕೇಂದ್ರ ಸರ್ಕಾರಕ್ಕೆ ಮನದಟ್ಟಾಯಿತು.

ಗ್ರಾಮೀಣ ಬ್ಯಾಂಕುಗಳ ಆಡಳಿತಾತ್ಮಕ ವೆಚ್ಚ ಕಡಿಮೆಗೊಳಿಸುವುದು, ಆಧುನಿಕ ತಂತ್ರಜ್ಞಾನವನ್ನು ಗರಿಷ್ಠ ಮಟ್ಟದಲ್ಲಿ ಅಳವಡಿಸುವುದು, ಬಂಡವಾಳ ಹಾಗೂ ಸಂಪನ್ಮೂಲಗಳನ್ನು ಹೆಚ್ಚಿಸುವುದು ಮತ್ತು ಬ್ಯಾಂಕುಗಳ ಪ್ರದೇಶ ವ್ಯಾಪ್ತಿಯನ್ನು ವಿಸ್ತರಿಸುವುದರ ಮೂಲಕ ಗ್ರಾಮೀಣ ಅವುಗಳಿಗೆ ಹೊಸ ಕಾಯಕಲ್ಪ ನೀಡುವ ದೃಷ್ಟಿಯಿಂದ ಹತ್ತು ವರ್ಷಗಳ ಹಿಂದೆಯೇ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ವಿಲೀನ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಇದರಿಂದಾಗಿ ಪ್ರಾರಂಭದಲ್ಲಿ ಒಂದು ಅಥವಾ ಎರಡು ಜಿಲ್ಲೆಗೊಂದರಂತೆ ಸ್ಥಾಪಿತವಾಗಿದ್ದ ಗ್ರಾಮೀಣ ಬ್ಯಾಂಕುಗಳು, ಪ್ರತಿ ರಾಜ್ಯಕ್ಕೆ ಎರಡು ಮೂರು ಗ್ರಾಮೀಣ ಬ್ಯಾಂಕುಗಳಾಗಿ ಪರಿವರ್ತನೆ ಹೊಂದಿದುವು.

ಈಗ ನಡೆಯುತ್ತಿರುವ ವಿಲೀನ ಪ್ರಕ್ರಿಯೆಯ ಮೂರನೇ ಹಂತದಲ್ಲಿ ಒಂದೇ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವು ಗ್ರಾಮೀಣ ಬ್ಯಾಂಕುಗಳನ್ನು ಹೊಸದಾಗಿ ಸ್ಥಾಪಿಸಲ್ಪಡುವ ರಾಜ್ಯ ಮಟ್ಟದ ಗ್ರಾಮೀಣ ಬ್ಯಾಂಕಿನಲ್ಲಿ ಸೇರ್ಪಡೆಗೊಳಿಸಿ ಒಟ್ಟಾರೆ ಗ್ರಾಮೀಣ ಬ್ಯಾಂಕುಗಳ ಸಂಖ್ಯೆಯನ್ನು 56ರಿಂದ 38ಕ್ಕೆ ಇಳಿಸುವ ಉದ್ದೇಶವಿದೆ. ಬ್ಯಾಂಕಿಂಗ್ ವ್ಯವಸ್ಥೆಗೆ ಕಾಯಕಲ್ಪ ನೀಡುವ ದಿಸೆಯಲ್ಲಿ ಕೈಗೊಳ್ಳುತ್ತಿರುವ ಇಂತಹ ಹಲವಾರು ಉಪಕ್ರಮಗಳು ದೇಶದ ಆರ್ಥಿಕತೆಯ ಮೆಲೆ ದೀರ್ಘ ಪರಿಣಾಮ ಬೀರುವ ಸಾಧ್ಯತೆಯಿದೆ.

ರಾಜ್ಯದ ಚಿತ್ರಣ
ರಾಜ್ಯದಲ್ಲಿ ಮೊಟ್ಟ ಮೊದಲಿಗೆ ಕೆನರಾ ಬ್ಯಾಂಕು ಪ್ರಾಯೋಜಿಸಿದ ‘ತುಂಗಭದ್ರಾ ಗ್ರಾಮೀಣ ಬ್ಯಾಂಕು’ 25ನೇ ಜನವರಿ 1976ರಂದು ಬಳ್ಳಾರಿಯಲ್ಲಿ ಅಸ್ತಿತ್ವಕ್ಕೆ ಬಂದಿತು. ನಂತರ 1976ರಿಂದ 1985ರವರೆಗಿನ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 13 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಸ್ಥಾಪನೆಗೊಂಡಿದ್ದವು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು ಪಸರಿಸಿದ ಮೊದಲ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆಯೂ ರಾಜ್ಯಕ್ಕೆ ಲಭಿಸಿತ್ತು. ರಾಜ್ಯದಲ್ಲಿ ಆರಂಭಗೊಂಡಿದ್ದ ಗ್ರಾಮೀಣ ಬ್ಯಾಂಕ್‌ಗಳ ಹೆಸರುಗಳು– ತುಂಗಭದ್ರಾ ಗ್ರಾಮೀಣ ಬ್ಯಾಂಕು, ಕೃಷ್ಣ , ಚಿತ್ರದುರ್ಗ , ಕೋಲಾರ, ಸಹ್ಯಾದ್ರಿ, ಕಾವೇರಿ, ಕಲ್ಪತರು, ಚಿಕ್ಕಮಗಳೂರು-ಕೊಡಗು, ವಿಶ್ವೇಶ್ವರಯ್ಯ, ಮಲಪ್ರಭಾ, ಬಿಜಾಪುರ, ನೇತ್ರಾವತಿ ಮತ್ತು ವರದಾ ಗ್ರಾಮೀಣ ಬ್ಯಾಂಕ್‌.

ಬಂಡವಾಳ ವಿವರ
* ₹117.64 ಕೋಟಿ -ಎರಡೂ ಬ್ಯಾಂಕ್‌ಗಳಿಂದ ಬಂಡವಾಳ ವರ್ಗಾವಣೆ
* ₹58.82 ಕೋಟಿ -ಕೇಂದ್ರ ಸರ್ಕಾರದ ಪಾಲು
* ₹41.17 ಕೋಟಿ - ಕೆನರಾ ಬ್ಯಾಂಕ್‌ನ ಪಾಲು
* ₹17.65 ಕೋಟಿ - ರಾಜ್ಯ ಸರ್ಕಾರದ ಪಾಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT