ಮುಂಬೈ: ಸತತ ಎರಡನೆ ದಿನವೂ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಕುಸಿತ ದಾಖಲಿಸಿದೆ.
ಬಜೆಟ್ನಲ್ಲಿ ಪ್ರಸ್ತಾವಿಸಿದ್ದ ತೆರಿಗೆಗಳಿಂದ ವಿನಾಯ್ತಿ ಸಿಗಲಿದೆ ಎನ್ನುವ ವಿದೇಶಿ ಹೂಡಿಕೆದಾರರ (ಎಫ್ಪಿಐ) ನಿರೀಕ್ಷೆ ಹುಸಿಯಾಗಿದೆ. ಹೀಗಾಗಿ ಶುಕ್ರವಾರದ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕವು 560 ಅಂಶ ಕುಸಿತಗೊಂಡು 38,337 ಅಂಶಗಳಿಗೆ ಇಳಿಯಿತು. ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ 177 ಅಂಶ ಇಳಿಕೆಯಾಗಿ 11,419 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು.
ಗುರುವಾರ ಲೋಕಸಭೆಯಲ್ಲಿ ಹಣಕಾಸು ಮಸೂದೆ ಮೇಲಿನ ಚರ್ಚೆಗೆ ಉತ್ತರ ನೀಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಅತಿ ಶ್ರೀಮಂತರ ಮೇಲಿನ ತೆರಿಗೆ ಹೆಚ್ಚಳವು ವಿದೇಶಿ ಹೂಡಿಕೆದಾರರನ್ನು (ಎಫ್ಪಿಐ) ಭಯಭೀತರನ್ನಾಗಿಸಿದೆ ಎನ್ನುವ ವಾದವನ್ನು ತಳ್ಳಿ ಹಾಕಿದ್ದರು. ತೆರಿಗೆಗಳಿಗೆ ಸಂಬಂಧಿಸಿದಂತೆ ಸರ್ಕಾರವು ಬಜೆಟ್ ಪ್ರಸ್ತಾವಗಳಿಗೆ ಅಂಟಿಕೊಂಡಿರುವುದು ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.
ಮಾರಾಟ ಒತ್ತಡ: ವಾಹನ ಮತ್ತು ಬ್ಯಾಂಕಿಂಗ್ ಷೇರುಗಳ ನೇತೃತ್ವದಲ್ಲಿ ಇತರ ಸಂಸ್ಥೆಗಳ ಷೇರುಗಳಲ್ಲಿ ಮಾರಾಟ ಒತ್ತಡ ಕಂಡುಬಂದಿತು.
ಎಂಆ್ಯಂಡ್ಎಂ, ಬಜಾಜ್ ಫೈನಾನ್ಸ್, ಟಾಟಾ ಮೋಟರ್ಸ್, ಹೀರೊ ಮೋಟೊ ಕಾರ್ಪ್, ಯೆಸ್ಬ್ಯಾಂಕ್, ಬಜಾಜ್ ಆಟೊ, ಕೋಟಕ್ ಬ್ಯಾಂಕ್, ಎಸ್ಬಿಐ ಮತ್ತು ಐಸಿಐಸಿಐ ಬ್ಯಾಂಕ್ ಷೇರುಗಳು ನಷ್ಟಕ್ಕೆ ಗುರಿಯಾದವು.