ನವದೆಹಲಿ: ಕಾರ್ಖಾನೆಗಳು ಬೆಳೆಗಾರರಿಂದ ಖರೀದಿಸುವ ಕಬ್ಬಿಗೆ ಪ್ರತಿ ಕ್ವಿಂಟಲ್ಗೆ ನೀಡುವ ಕನಿಷ್ಠ ಬೆಲೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಕೇಂದ್ರ ಸಚಿವ ಸಂಪುಟ ಸಮಿತಿಯು (ಸಿಸಿಇಎ) ನಿರ್ಧರಿಸಿದೆ.
ಕಬ್ಬಿನ ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆಯನ್ನು 2019–20ರ ಅಕ್ಟೋಬರ್ – ಸೆಪ್ಟೆಂಬರ್ ಮಾರುಕಟ್ಟೆ ವರ್ಷಕ್ಕೆ ಪ್ರತಿ ಕ್ವಿಂಟಲ್ಗೆ ₹ 275ರಂತೆ ಉಳಿಸಿಕೊಳ್ಳಲಾಗಿದೆ.
ಕಾಪು ದಾಸ್ತಾನು: ಪ್ರಸಕ್ತ ಸಾಲಿನಲ್ಲಿ 40 ಲಕ್ಷ ಟನ್ಗಳಷ್ಟು ಸಕ್ಕರೆಯ ಕಾಪು ದಾಸ್ತಾನು ಮಾಡಬೇಕೆಂಬ ಆಹಾರ ಸಚಿವಾಲಯದ ಪ್ರಸ್ತಾವವನ್ನು ಸಮಿತಿಯುಅನುಮೋದಿಸಿದೆ.
ಸಕ್ಕರೆ ಉತ್ಪಾದನೆ ಹೆಚ್ಚಳಗೊಳ್ಳಲಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಕಬ್ಬು ಬೆಳೆಗಾರರಿಗೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ ₹ 15 ಸಾವಿರ ಕೋಟಿ ಪಾವತಿಗೆ ನೆರವಾಗಲೂ ಸಮಿತಿ ನಿರ್ಧರಿಸಿದೆ.