ಬೆಂಗಳೂರು: ರಾಜ್ಯ ಸರ್ಕಾರದ ಮನವಿಗೆ ಕೇಂದ್ರ ಸರ್ಕಾರವು ಸ್ಪಂದಿಸಿದ್ದು, ಪ್ರಸಕ್ತ ಋತುವಿನಡಿ ರಾಜ್ಯದಲ್ಲಿ ಒಟ್ಟು 69,250 ಟನ್ ಉಂಡೆ ಕೊಬ್ಬರಿ ಖರೀದಿಗೆ ಅನುಮತಿ ನೀಡಿದೆ.
ಕೇಂದ್ರವು ಬೆಂಬಲ ಬೆಲೆ ಯೋಜನೆಯಡಿ ರಾಜ್ಯದಲ್ಲಿ ಉತ್ಪಾದನೆಯಾಗುವ ಶೇ 25ರಷ್ಟು ಕೊಬ್ಬರಿಯನ್ನು ಮಾತ್ರ ಖರೀದಿಸಲಿದೆ.
ಈ ಮೊದಲು 62,500 ಟನ್ ಖರೀದಿಸಲು ಅನುಮತಿ ನೀಡಿತ್ತು. ಆದರೆ, ಮುಕ್ತ ಮಾರುಕಟ್ಟೆಯಲ್ಲಿ ಕೊಬ್ಬರಿ ಧಾರಣೆಯು ಕುಸಿದಿದೆ. ರೈತರ ಬಳಿ ದಾಸ್ತಾನು ಇರುವ ಕೊಬ್ಬರಿ ಪೈಕಿ ಅರ್ಧದಷ್ಟನ್ನು ಖರೀದಿಸಬೇಕು. ಕೇರಳ, ತಮಿಳುನಾಡಿಗೆ ನಿಗದಿಪಡಿಸಿರುವ ಮಾನದಂಡವನ್ನೇ ಕರ್ನಾಟಕಕ್ಕೂ ಅನ್ವಯಿಸಬಾರದು ಎಂದು ರಾಜ್ಯ ಸರ್ಕಾರ ಕೋರಿತ್ತು. ಈ ಮನವಿಯನ್ನು ಕೇಂದ್ರವು ಪುರಸ್ಕರಿಸಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧಿಕಾರಿಗಳು ತಿಳಿಸಿದ್ದಾರೆ.
ಬೆಳೆಗಾರರ ಹೆಸರಲ್ಲಿ ವರ್ತಕರು ನೋಂದಣಿ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದರಿಂದ ರಾಜ್ಯ ಸರ್ಕಾರವು ಹಳೆಯ ನೋಂದಣಿಯನ್ನು ರದ್ದುಪಡಿಸಿದ್ದು, ಹೊಸ ನೋಂದಣಿಗೆ 45 ದಿನಗಳ ಕಾಲಾವಕಾಶ ನೀಡಿದೆ.
ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಹಾಮಂಡಳ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದಿಂದ ರೈತರ ಹೆಸರು ನೋಂದಣಿ ಸೋಮವಾರದಿಂದ ಆರಂಭವಾಗಿದ್ದು, ಒಟ್ಟು 76 ಕೇಂದ್ರಗಳನ್ನು ತೆರೆಯಲಾಗಿದೆ.
‘ಬೆಳಿಗ್ಗೆ ಕೆಲವು ಕೇಂದ್ರಗಳಲ್ಲಿ ಸರ್ವರ್ ಸಮಸ್ಯೆ ತಲೆದೋರಿತ್ತು. ಅದನ್ನು ಸರಿಪಡಿಸಲಾಗಿದೆ. ಇಂಟರ್ನೆಟ್ ಸಮಸ್ಯೆ ಇರುವ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆಗೆ ವಿಳಂಬವಾಗುತ್ತಿದೆ’ ಎಂದು ಮಹಾಮಂಡಳದ ಅಧಿಕಾರಿಗಳು ಹೇಳಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ನಾಲ್ಕು ನೋಂದಣಿ ಕೇಂದ್ರ ತೆರೆಯಲಾಗಿದೆ. ರೈತರು ಸರದಿ ಸಾಲಿನಲ್ಲಿ ನಿಂತು ನೋಂದಣಿ ಮಾಡಿಸುತ್ತಿದ್ದ ದೃಶ್ಯ ಕಂಡುಬಂದಿತು.
ಕಡೂರು ಎಪಿಎಂಸಿ ಆವರಣದಲ್ಲಿ ಎರಡು ಕಡೆ, ಬೀರೂರಿನಲ್ಲಿ ಒಂದು ಮತ್ತು ಪಂಚನಹಳ್ಳಿಯಲ್ಲಿ ಒಂದು ಕೇಂದ್ರ ಆರಂಭವಾಗಿದೆ. ಕೇಂದ್ರದಲ್ಲಿ ಒಂದು ಕಂಪ್ಯೂಟರ್ ಮತ್ತು ಒಂದು ಬೆರಳಚ್ಚು ಯಂತ್ರ ಅಳವಡಿಸಲಾಗಿದೆ. ಒಬ್ಬರೇ ಸಿಬ್ಬಂದಿ ಎಲ್ಲಾ ರೈತರ ಹೆಸರನ್ನು ನೋಂದಣಿ ಮಾಡಬೇಕಿದೆ. ಹಾಗಾಗಿ, ನೋಂದಣಿ ಮಂದಗತಿಯಲ್ಲಿ ನಡೆಯಿತು. ಸಂಜೆ ತನಕ ರೈತರು ನೋಂದಣಿ ಮಾಡಿಸಿದರು.
ಬೆಳಿಗ್ಗೆ 11ಗಂಟೆಯಲ್ಲಿ ಸರ್ವರ್ ಸಮಸ್ಯೆ ಕಾಡಿತು. ನೋಂದಣಿ ಸ್ಥಗಿತಗೊಂಡಿದ್ದರಿಂದ ರೈತರು ಅಸಮಾಧಾನ ವ್ಯಕ್ತಪಡಿಸಿದರು. ಕೆಲವೇ ಹೊತ್ತಿನಲ್ಲಿ ಸರ್ವರ್ ಸರಿಯಾಯಿತು. ಬಳಿಕ ನೋಂದಣಿ ಸರಾಗವಾಗಿ ನಡೆಯಿತು. ಸಾಲಿನಲ್ಲಿ ನಿಲ್ಲುವ ರೈತರಿಗೆ ಅನುಕೂಲ ಆಗುವಂತೆ ಶಾಮಿಯಾನ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.
ಮಂಡ್ಯ ಜಿಲ್ಲೆಯ ಕಿಕ್ಕೇರಿ ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ತೆರೆದಿದ್ದ ನೋಂದಣಿ ಕೇಂದ್ರದಲ್ಲಿ ರೈತರು ತಳ್ಳಾಟ ನಡೆಸಿದರು.
ತಡರಾತ್ರಿಯಿಂದಲೇ ಕೇಂದ್ರದ ಮುಂದೆ ರೈತರು ನೆರೆದಿದ್ದರು. ಬೆಳಿಗ್ಗೆ ವೇಳೆಗೆ ರೈತರ ಸಂಖ್ಯೆ ಹೆಚ್ಚಾಯಿತು. ಮಧ್ಯಾಹ್ನದ ವೇಳೆಗೆ ಸರದಿ ಬಿಟ್ಟು ಹಲವರು ನೂಕಾಟ ನಡೆಸಿ ನೋಂದಣಿಗೆ ಮುಂದಾದರು. ಇದರಿಂದ ಕೆಲಕಾಲ ಗದ್ದಲ ಉಂಟಾಯಿತು. ರೈತ ಮುಖಂಡರ ಮನವಿಗೂ ಕಿವಿಗೊಡಲಿಲ್ಲ. ಕೊನೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.