ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ನ ಕೇಂದ್ರೀಯ ಮಂಡಳಿಯು ಹೊಸ ಗವರ್ನರ್ ಶಕ್ತಿಕಾಂತ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಭೆ ಸೇರಲಿದೆ.
ಕೇಂದ್ರೀಯ ಬ್ಯಾಂಕ್ನ ನೀತಿ ನಿರ್ಧಾರಗಳಲ್ಲಿ ಈ ನಿರ್ದೇಶಕ ಮಂಡಳಿಗೆ ಹೆಚ್ಚು ಅಧಿಕಾರ ಇರಬೇಕು ಎಂದು ಅನೇಕ ನಿರ್ದೇಶಕರು ಸಭೆಯಲ್ಲಿ ಹಕ್ಕೊತ್ತಾಯ ಮಂಡಿಸುವ ಸಾಧ್ಯತೆ ಇದೆ. ತಾವು ಆರ್ಬಿಐನ ಸ್ವಾಯತ್ತತೆ ರಕ್ಷಿಸಲು ಬದ್ಧರಾಗಿರುವುದಾಗಿ ಶಕ್ತಿಕಾಂತ್ ದಾಸ್ ಭರವಸೆ ನೀಡಿರುವ ಬೆನ್ನಲ್ಲೇ ಈ ಸಭೆ ನಡೆಯುತ್ತಿದೆ.
ಇದಕ್ಕೂ ಮೊದಲು, ನ. 19ರಂದು ನಡೆದಿದ್ದ ಸಭೆಯಲ್ಲಿ ತೆಗೆದುಕೊಂಡಿದ್ದ ಕೆಲ ನಿರ್ಧಾರಗಳಿಗೆ ಸಂಬಂಧಿಸಿದಂತೆ ಸಭೆಯು ಪರಾಮರ್ಶೆ ನಡೆಸಲಿದೆ. ನೋಟು ರದ್ದತಿ ಮತ್ತು ಜಿಎಸ್ಟಿ ಜಾರಿಯಿಂದ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್ಎಂಇ) ಎದುರಿಸುತ್ತಿರುವ ಸಮಸ್ಯೆಗಳೂ ಚರ್ಚೆಗೆ ಬರಲಿವೆ.
ಆರ್ಬಿಐ ಕೈಗೊಳ್ಳುವ ನಿರ್ಧಾರಗಳಲ್ಲಿ ಕೇಂದ್ರೀಯ ಮಂಡಳಿಯು ನಿರ್ವಹಿಸುವ ಪಾತ್ರದ ಕುರಿತ ಚರ್ಚೆಯು ಪ್ರಮುಖವಾಗಿ ಪ್ರಸ್ತಾಪವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಹೆಚ್ಚು ಅಧಿಕಾರಕ್ಕೆ ಬೇಡಿಕೆ: ಸದ್ಯಕ್ಕೆ ಕೇಂದ್ರೀಯ ಮಂಡಳಿಯ ಪಾತ್ರವು ಸಲಹೆ ನೀಡುವುದಕ್ಕೆ ಸೀಮಿತಗೊಂಡಿದೆ. ನೀತಿ ನಿರ್ಧಾರ ಕೈಗೊಳ್ಳುವ ವಿಷಯದಲ್ಲಿ ಮಂಡಳಿಗೆ ಹೆಚ್ಚು ಅಧಿಕಾರ ಇರಬೇಕು ಎನ್ನುವ ಬೇಡಿಕೆ ದೊಡ್ಡದಾಗಿ ಕೇಳಿಬರುತ್ತಿದೆ.