ಬೆಳಗಾವಿ: ಛತ್ರಪತಿ ಶಿವಾಜಿ ಮಹಾರಾಜ್ರ ಜನ್ಮದಿನದ ಅಂಗವಾಗಿ ಅಭಿಮಾನಿಗಳು ನಗರದಲ್ಲಿ ಶನಿವಾರ ಭಕ್ತಿ ಸಡಗರದಿಂದ ಮೆರವಣಿಗೆ ನಡೆಸಿದರು.
ನರಗುಂದಕರ ಭಾವೆ ವೃತ್ತದಲ್ಲಿ ಉಪಮೇಯರ್ ಮಧುಶ್ರೀ ಪೂಜಾರಿ ಅವರು ಶಿವಾಜಿ ಮಹಾರಾಜ್ರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ಮಧ್ಯವರ್ತಿ ಸಾರ್ವಜನಿಕ ಶಿವಾಜಿ ಜಯಂತಿ ಮಹಾಮಂಡಳ ಅಧ್ಯಕ್ಷ ದೀಪಕ ದಳವಿ ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಮೆರವಣಿಗೆ ಆರಂಭದ ಪೂಜೆ ನೆರವೇರಿಸಿದರು.
ಮಹಾನಗರ ಪಾಲಿಕೆ ಸದಸ್ಯರು, ಮುಖಂಡರಾದ ಮಾಲೋಜಿರಾವ್ ಅಷ್ಟೇಕರ, ಕಿರಣ ಜಾಧವ, ಪ್ರಕಾಶ ಮರಗಾಳೆ, ಪ್ರಕಾಶ ಕಲಘಟಗಿ ಮುಂತಾದವರು ನೇತೃತ್ವ ವಹಿಸಿದ್ದರು.
ಸಾಂಪ್ರದಾಯಕ ಉಡುಪು ಧರಿಸಿದ ಪುರುಷರು, ಮಹಿಳೆಯರು, ಯುವ ಜನತೆ, ಮಕ್ಕಳು ಸೇರಿದಂತೆ ಸಾವಿರಾರು ಜನರು ಭಾಗವಹಿಸಿ, ವಾದ್ಯ, ನೃತ್ಯ, ಹಾಡು ಹಾಗೂ ಘೋಷಣೆಗಳ ಮೂಲಕ ಮೆರವಣಿಗೆ ಉದ್ದಕ್ಕೂ ಗಮನ ಸೆಳೆದರು.
ಬಾಲ ಶಿವಾಜಿ ಮಹಾರಾಜ್ರ ಉಡುಪು ಧರಿಸಿದ ಮಕ್ಕಳು, ಕಲಾ ತಂಡಗಳು, ವಾದ್ಯ, ಲೇಜಿಮ್ ಕುಣಿತದೊಂದಿಗೆ ಜೈ ಶಿವಾಜಿ ಜೈ ಭವಾನಿ ಎಂಬ ಮುಗಿಲು ಮುಟ್ಟಿದ ಘೋಷಣೆಯೊಂದಿಗೆ ನಗರದಲ್ಲಿ ಸಂಚರಿಸಿದರು.
ಪಟಾಕಿ ಸಿಡಿಸಿ, ಅಲಂಕಾರದ ದೀಪಗಳನ್ನು ಬೆಳಗಿದ್ದರಿಂದ ನಗರದಲ್ಲಿ ಹಬ್ಬದ ವಾತಾವರಣ ಕಂಡುಬಂದಿತು. ನರಗುಂದಕರ ಭಾವೆ ವೃತ್ತದಿಂದ ಮಾರುತಿ ಗಲ್ಲಿ, ಹುತಾತ್ಮಾ ವೃತ್ತ, ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಧರ್ಮವೀರ ಸಂಭಾಜಿ ವೃತ್ತ, ರಾಮಲಿಂಗ ಖಿಂಡಗಲ್ಲಿ, ಟಿಳಕ ಚೌಕ್ ಮೂಲಕ ರೇಲ್ವೆ ಮೇಲ್ಸೇತುವೆ ಮೇಲಿಂದ ಕಪಿಲೇಶ್ವರ ಮಂದಿರದ ವರೆಗೆ ಮೆರವಣಿಗೆ ನಡೆಯಿತು.
ಛತ್ರಪತಿ ಶಿವಾಜಿ ಮಹಾರಾಜ್ರ ರೂಪಕಗಳು, ನಗರದಲ್ಲಿ ಹಾಕಿರುವ ಕಟೌಟ್ಗಳು ಮೆರವಣಿಗೆ ಉದ್ದಕ್ಕೂ ಗಮನ ಸೆಳೆದವು. ಶಿವಾಜಿ ಮಹಾರಾಜ್ರ ಜೀವನ, ಸಾಧನೆ, ಕೊಡುಗೆಗಳು, ಸಂದೇಶಗಳು, ಸ್ಮಾರಕಗಳ ಪ್ರತಿರೂಪಗಳು ಇತಿಹಾಸ ನೆನಪಿಸಿದವು. ಮಕ್ಕಳು ತಮ್ಮ ಕೈಯಲ್ಲಿ ಕತ್ತಿ, ಗುರಾಣಿ, ಲಾಠಿ ಹಿಡಿದು, ಬೀದಿಯಲ್ಲಿ ಯುದ್ದದ ಅಣಕು ಪ್ರದರ್ಶನ ಮಾಡಿದರು.
ಮಹಿಳೆಯರೂ ಕೂಡ ತಲೆಗೆ ಪೇಟಾ ಸುತ್ತಿ, ಡೋಲಕ, ಝಾಂಜ್ ಪಥಕ ಬಾರಿಸಿ, ಸಂಭ್ರಮಿಸಿದರು. ಕೋಲಾಟ, ಲೇಜಿಮ್ ಕುಣಿತ, ಲಾಠಿ ಬೀಸುವ ಕಲೆ ಪ್ರದರ್ಶನ ಮಾಡಿದರು.
ಮೆರವಣಿಗೆ ಶಾಂತಿ ಕಾಪಾಡಲು ಪೊಲೀಸರು ಭದ್ರತೆ ಒದಗಿಸಿದ್ದರು. ಮೆರವಣಿಗೆಗೆ ಹೊರಟವರಿಗೆ ನೀರು, ಕಣ್ಣಿನ ರಸ, ಕುರುಕಲು ವಸ್ತುಗಳನ್ನು ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.