ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕ್ರಿಕೆಟ್ ಆಟಗಾರರಿಗೆ ಉದ್ಯೋಗಾವಕಾಶ ನೀಡಿ ಪ್ರೋತ್ಸಾಹಿಸಿದ್ದು `ಸ್ಟೇಟ್ ಬ್ಯಾಂಕ್ ಆಫ್ ಮೈಸೂರು~ (ಎಸ್ಬಿಎಂ) ಹಿರಿಮೆ. ಲೀಗ್ ಮಟ್ಟದಿಂದ ಹಿಡಿದು ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟಿಗರು ನೆಮ್ಮದಿಯಿಂದ ಆಟವಾಡುವಂಥ ವಾತಾವರಣ ಕಲ್ಪಿಸುವ ಮೂಲಕ `ಎಸ್ಬಿಎಂ~ ಕ್ರೀಡಾ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಿದೆ.
ವಿ.ಸುಬ್ರಹ್ಮಣ್ಯ, ಪಿ.ಆರ್.ಅಶೋಕ್ ಆನಂದ್ ಹಾಗೂ ಎಸ್.ಅರವಿಂದ್ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದ ಪ್ರತಿಭಾವಂತರು. ಆಟಗಾರರು ಕ್ರಿಕೆಟ್ ಅಂಗಳದಲ್ಲಿ ಬೆಳೆದು ನಿಲ್ಲುವುದಕ್ಕೆ ಅಗತ್ಯವಿದ್ದ ಆರ್ಥಿಕ ಶಕ್ತಿ ನೀಡಿದ್ದರಿಂದ ಆಟಗಾರರ ಖ್ಯಾತಿಯ ಜತೆಗೇ ಬ್ಯಾಂಕ್ ಕೀರ್ತಿ ಪತಾಕೆಯೂ ಮುಗಿಲೆತ್ತರದಲ್ಲಿ ಹಾರಿತು. ಬೆಳೆಯುವ ಹಂತದಲ್ಲಿದ್ದ ಕ್ರಿಕೆಟಿಗರು ಕೂಡ ಈ ಬ್ಯಾಂಕ್ ಮೂಲಕ ತಮ್ಮ ಜೀವನದ ಹಾದಿಯನ್ನು ಸುಗಮಗೊಳಿಸಿಕೊಂ
ಕರ್ನಾಟಕ ರಾಜ್ಯದ ತಂಡವು ರಣಜಿ ಚಾಂಪಿಯನ್ ಪಟ್ಟ ಪಡೆಯುವಲ್ಲಿ ಈ ಬ್ಯಾಂಕ್ ಆಟಗಾರರು ನೀಡಿದ ಕೊಡುಗೆ ದೊಡ್ಡದು. ವಿ.ಎಸ್.ತಿಲಕ್ ನಾಯ್ಡು, ಬಿ. ಅಖಿಲ್ ಹಾಗೂ ಆನಂದ್ ಕಟ್ಟಿ ಅವರಂಥವರು ನಮ್ಮ ನಾಡಿನ ಕ್ರಿಕೆಟ್ ಪಡೆಯು ರಣಜಿ ಟ್ರೋಫಿ ಗೆಲ್ಲಲು ಕಾರಣರಾದ ಕ್ರಿಕೆಟಿಗರು. ತಿಲಕ್ ನಾಯ್ಡು ಅವರಂತೂ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ಮನ್ ಆಗಿದ್ದುಕೊಂಡು ಅನೇಕ ಮಹತ್ವದ ಇನಿಂಗ್ಸ್ ಆಡಿದ್ದಾರೆ. ಆನಂದ್ ಕಟ್ಟಿ ತಮ್ಮ ವಿಶಿಷ್ಟವಾದ ಸ್ಪಿನ್ ಮೋಡಿಯಿಂದ ಎದುರಾಳಿ ತಂಡಗಳ ಬ್ಯಾಟ್ಸ್ಮನ್ಗಳಿಗೆ ನಡುಕ ಹುಟ್ಟುವಂತೆ ಮಾಡಿದ್ದರು.
ಮಧ್ಯಮ ವೇಗಿಯಾಗಿ ಹಾಗೂ ಬ್ಯಾಟ್ಸ್ಮನ್ ಆಗಿ ಅಖಿಲ್ ಅವರಂತೂ ಅಂಗಳದಲ್ಲಿ ಮಿಂಚು ಹರಿಸಿದ ಪಂದ್ಯಗಳು ಅನೇಕ. ಅಖಿಲ್ ಕ್ರೀಸ್ಗೆ ಬಂದರೆ ನಾಲ್ಕು ದಿನಗಳ ರಣಜಿ ಕ್ರಿಕೆಟ್ ಪಂದ್ಯಗಳಲ್ಲಿ ಏಕದಿನ ಕ್ರಿಕೆಟ್ನ ರೋಮಾಂಚನ ಸಿಗುತ್ತಿತ್ತು ಎನ್ನುವುದನ್ನು ಮರೆಯುವಂತಿಲ್ಲ. ಅವರು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆಂಡನ್ನು ಸಿಕ್ಸರ್ಗೆ ಎತ್ತಿದ ಕ್ಷಣಗಳು ಅನೇಕ. ಆದ್ದರಿಂದಲೇ ಅಖಿಲ್ ಆಟವು ಕ್ರಿಕೆಟ್ ಪ್ರೇಮಿಗಳಿಗೆ ಅತ್ಯಂತ ಪ್ರಿಯವೆನಿಸಿತ್ತು.
ವಿ.ಎಸ್.ವಿಜಯ್ ಕುಮಾರ್, ಎಂ.ಎಸ್.ರಾಜಪ್ಪ, ಕೃಷ್ಣಪ್ರಸಾದ್, ಕೆ.ಎನ್.ರಮೇಶ್, ಕೆ.ಎಲ್.ಅಶ್ವತ್ ಹಾಗೂ ನಾಸೀರುದ್ದೀನ್ ಅವರೂ `ಎಸ್ಬಿಎಂ~ ತಂಡದ ಪರವಾಗಿ ಆಡಿದವರು. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನಡೆಸುವ ಡಿವಿಷನ್ ಲೀಗ್ಗಳಲ್ಲಿ ಎಸ್ಬಿಎಂ ಅನೇಕ ಬಾರಿ ದರ್ಬಾರ್ ನಡೆಸಿದೆ. ಎಸ್ಬಿಎಂ ವಿರುದ್ಧ ಆಡುವುದೆಂದರೆ ಸೋಲು ಕಟ್ಟಿಟ್ಟ ಬುತ್ತಿ ಎನ್ನುವ ಭಾವನೆ ಅನೇಕ ತಂಡಗಳಲ್ಲಿ ಈಗಲೂ ಇದೆ.
ಇದಕ್ಕೆ ಕಾರಣ ಈ ಬ್ಯಾಂಕ್ ಹೊಂದಿರುವ ಪ್ರಭಾವಿ ಬ್ಯಾಟ್ಸ್ಮನ್ಗಳು ಹಾಗೂ ಬೌಲರ್ಗಳು.ಕ್ರೀಡಾಪಟುಗಳಾಗಿ ಅವಕಾಶ ಪಡೆದವರಿಗೆ ಮಾತ್ರವಲ್ಲ ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ತಮ್ಮ ಇತರ ಸಿಬ್ಬಂದಿಗೂ ಎಸ್ಬಿಎಂ ಪ್ರೋತ್ಸಾಹ ನೀಡುತ್ತಾ ಬಂದಿದೆ. ಪ್ರತಿಭೆಯನ್ನು ಗುರುತಿಸಿ ಅವಕಾಶಗಳನ್ನು ಕೊಟ್ಟ ಹಿರಿಮೆ ಈ ಬ್ಯಾಂಕ್ಗೆ ಇದೆ. ಆದ್ದರಿಂದಲೇ ರಾಜ್ಯದ ಕ್ರಿಕೆಟ್ ಇತಿಹಾಸದಲ್ಲಿ ಎಸ್ಬಿಎಂ ಹೆಸರು ಮಹತ್ವದ್ದಾಗಿ ಕಾಣಿಸುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.