ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ನ ಹಳಸಿತ್ತು, ನಾಯಿ ಹಸಿದಿತ್ತು

ಅತೃಪ್ತರನ್ನು ಬರಸೆಳೆದು ತೃಪ್ತಿಗೊಳಿಸಿದರೆ, ಬಿಜೆಪಿಗೆ ಅದು ದೇವರು ಕೊಟ್ಟ ಬುದ್ಧಿ!
Last Updated 15 ಜುಲೈ 2019, 20:18 IST
ಅಕ್ಷರ ಗಾತ್ರ

ಕರ್ನಾಟಕದ ಹಳೆಯ ರಾಜಕೀಯ ನಾಟಕದ ಹೊಸ ಅಂಕದ ಬಗ್ಗೆ ಬರೆಯಹೊರಟಾಗ ಬೇಡಬೇಡವೆಂದರೂ ಈ ಲೇಖನಕ್ಕೆ ಶೀರ್ಷಿಕೆಯಾಗಿ ನೀಡಿದ ಗಾದೆಮಾತು ನೆನಪಿಗೆ ಬಂತು. ಹಾಗೆಂದು ಗಾದೆಯಲ್ಲಿ ಬರುವ ‘ನಾಯಿ’, ‘ಹಳಸಿದ ಅನ್ನ’ ಇತ್ಯಾದಿ ಪ್ರತಿಮೆಗಳಿಗೆ, ಈ ಲೇಖನದಲ್ಲಿ ಪ್ರಸ್ತಾಪವಾಗಲಿರುವ ರಾಜಕೀಯ ನಾಟಕದ ಸೂತ್ರಧಾರಿಗಳಿಗೆ ಮತ್ತು ಪಾತ್ರಧಾರಿಗಳಿಗೆ ಯಾವುದೇ ರೀತಿಯ ಸಂಬಂಧ ಕಲ್ಪಿಸುವುದು ಈ ಲೇಖನದ ಉದ್ದೇಶವಲ್ಲ. ಒಂದು ವೇಳೆ ಓದುಗರು ಹಾಗೊಂದು ಸಂಬಂಧವನ್ನು ಕಲ್ಪಿಸಿಕೊಂಡು ಈ ಲೇಖನವನ್ನು ಅರ್ಥ ಮಾಡಿಕೊಂಡರೆ ಅದಕ್ಕೆ ಈ ಲೇಖಕ ಯಾವುದೇ ರೀತಿಯಲ್ಲಿ ಜವಾಬ್ದಾರನಲ್ಲ. ಹಾಗಂತ, ಸಂಪೂರ್ಣ ದೇಶನಿಷ್ಠೆ, ರಾಜನಿಷ್ಠೆ, ರಾಜ್ಯನಿಷ್ಠೆ ಮತ್ತು ಧರ್ಮನಿಷ್ಠೆ ಇತ್ಯಾದಿಗಳೊಂದಿಗೆ ನಿವೇದಿಸಿಕೊಳ್ಳುವುದರೊಂದಿಗೆ ಲೇಖನ ಮುಂದುವರಿಯುತ್ತದೆ.

ಕರ್ನಾಟಕದ ರಾಜಕೀಯದಲ್ಲಿ ನಡೆಯುತ್ತಿರು ವುದರಲ್ಲಿ ಆಶ್ಚರ್ಯ ಎನ್ನುವಂತಹುದು ಏನೂ ಕಾಣುತ್ತಿಲ್ಲ. ಇದನ್ನೆಲ್ಲಾ ಕಂಡು ಕೆಲವರು ಆಶ್ಚರ್ಯ ಪಡುತ್ತಿದ್ದಾರೆ ಎನ್ನುವುದು ಆಶ್ಚರ್ಯದ ವಿಚಾರ. ಸೋತು ಸೊರಗಿ ನಿಂತಿರುವ ರಾಜಕೀಯ ಪಕ್ಷದಿಂದ, ಆಮಿಷಕ್ಕೆ ಬಲಿಯಾಗಿ ಶಾಸಕರು, ಸಂಸದರು, ನಾಯಕರು ಬೇರೆ ಬೇರೆ ಸಬೂಬು ನೀಡಿ ಪ್ರಬಲ ಪಕ್ಷಕ್ಕೆ ಜಿಗಿಯುವುದು ಹಿಂದೆಯೂ ಜರುಗಿತ್ತು, ಮುಂದೆಯೂ ನಡೆಯುತ್ತದೆ. ಹಿಂದೆ ಇವೆಲ್ಲಾ ಸಲೀಸಾಗಿ ನಡೆಯುತ್ತಿದ್ದವು, ಪಕ್ಷಾಂತರ ನಿಷೇಧ ಬಂದ ನಂತರ ಅದರ ತೊಡಕನ್ನು ಸಂಭಾಳಿಸಿಕೊಂಡು ಬೇಲಿ ಹಾರಬೇಕಾದ ಕಾರಣ ಇತ್ತೀಚಿನ ಪ್ರಕರಣಗಳು ಹೆಚ್ಚು ನಾಟಕೀಯವಾಗಿ, ಹೆಚ್ಚು ರಂಗುರಂಗಾಗಿ ಗಮನ ಸೆಳೆಯುತ್ತವೆ ಅಷ್ಟೇ.

ಹಿಂದಿನ ದಿನ ಸಂಸತ್ತಿನಲ್ಲಿ ತನ್ನ ಪಕ್ಷವನ್ನು ಸಮರ್ಥಿಸುತ್ತಾ ಅದ್ಭುತ ಭಾಷಣ ಮಾಡಿ, ಮರುದಿನ ವಿಶ್ವಾಸಮತದ ವಿರುದ್ಧ ಮತ ಚಲಾಯಿಸಿದ ಚಂಚಲ ಚಾಲಾಕಿಗಳೆಲ್ಲಾ ಈ ದೇಶದಲ್ಲಿ ಆಗಿಹೋಗಿದ್ದಾರೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಕಾಂಗ್ರೆಸ್ ವಿಭಜನೆಯಾದ ನಂತರ ದೇವರಾಜ ಅರಸು ಅವರ ನೇತೃತ್ವದಲ್ಲಿ ಇಂದಿರಾ ಕಾಂಗ್ರೆಸ್ ವಿಜೃಂಭಿಸಿದ ಕಾಲದಲ್ಲಿ ಮೂಲ ಕಾಂಗ್ರೆಸ್ಸಿಗರು ಅರಸು ಕಾಂಗ್ರೆಸ್ಸಿಗೆ ಹಾರಿದ್ದು, ಆ ನಂತರ ಅರಸು ಅವರು ಇಂದಿರಾ ಗಾಂಧಿಯವರ ಜತೆ ವೈಮನಸ್ಯ ಹೊಂದಿದಾಗ ಅರಸು ಕರೆತಂದು ಅಧಿಕಾರ ನೀಡಿದವರೆಲ್ಲಾ ಅವರಿಗೆ ಕೈಕೊಟ್ಟು ಮತ್ತೆ ಇಂದಿರಾ ಕಾಂಗ್ರೆಸ್ಸಿಗೆ ಜಿಗಿದದ್ದು ಇಂತಹುದೇ ವಿದ್ಯಮಾನಗಳು.

ಆಗ ಕಾಂಗ್ರೆಸ್‌ ಪಡೆದುಕೊಳ್ಳುವ ಸ್ಥಾನದಲ್ಲಿತ್ತು, ಈಗ ಕಾಂಗ್ರೆಸ್ ಕಳೆದುಕೊಳ್ಳುತ್ತಿರುವ ಸ್ಥಾನದಲ್ಲಿದೆ. ಕಾಂಗ್ರೆಸ್ ಈಗ ಒಂದು ಪಕ್ಷವಾಗಿ ಉಳಿದಿಲ್ಲ. ಸ್ವಂತ ಬಲದಿಂದ ಆಯ್ಕೆಯಾದ ಒಂದಷ್ಟು ಮಂದಿ ಸ್ಥಳೀಯ ಆಧುನಿಕ ಪಾಳೇಗಾರರ ಸಮೂಹವಾಗಿಬಿಟ್ಟಿದೆ. ಅದಕ್ಕೆ ಶಾಸಕರ ಮೇಲೆ ಹಿಡಿತವಿಲ್ಲ. ಇದ್ದ ಹಿಡಿತವೂ ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ನಂತರ ಕಳೆದುಹೋಗಿದೆ. ನಿಂತ ನೆಲ ಕುಸಿಯುತ್ತಿರುವ ಆ ಪಕ್ಷದಲ್ಲಿ ಬಹುತೇಕ ಶಾಸಕರಿಗೆ ಇದ್ದೂ ಏನೂ ಆಗಬೇಕಿಲ್ಲ. ತಾನು ಪ್ರಬಲವಾಗಿದ್ದ ಕಾಲದಲ್ಲಿ ಇತರ ಪಕ್ಷದ ಮಂದಿಯನ್ನು ಸೆಳೆಯುವಲ್ಲಿ ಕಾಂಗ್ರೆಸ್ ಯಾವ ಚಮಕೃತಿ, ಕುರ್ನಿಸಾತ್ ವಿದ್ಯೆಯನ್ನು ಪ್ರಯೋಗಿಸಿತ್ತೋ ಅದಕ್ಕಿಂತ ನೂರ್ಮಡಿ ಕೆಟ್ಟದಾಗಿ ಬಿಜೆಪಿಯು ದೇಶಿ ಸಂಸ್ಕೃತಿಯಿಂದ ಪ್ರೇರಣೆ ಪಡೆದ ತನ್ನ ಕುಟಿಲ ವಿದ್ಯೆಯನ್ನು ಈಗ ಕಾಂಗ್ರೆಸ್ ಮೇಲೆ ಪ್ರಯೋಗಿಸುತ್ತಿರಬಹುದು. ವ್ಯತ್ಯಾಸ ಅಷ್ಟೇ ಇರುವುದು.

ಆದುದರಿಂದ ಕರ್ನಾಟಕದ ಕಾಂಗ್ರೆಸ್ಸಿನ ಮತ್ತು ಜೆಡಿಎಸ್‌ನ ಒಂದಷ್ಟು ಅತೃಪ್ತ ಆತ್ಮಗಳು ಒಂದಾಗಿ ರಾಜೀನಾಮೆ ನೀಡಿ ಸರ್ಕಾರ ಉರುಳಿಸಲು ಮುಂದಾಗಿರುವ ವಿದ್ಯಮಾನಗಳ ಜಿಜ್ಞಾಸೆಯಲ್ಲಿ ಬಳಕೆಯಾಗಿರುವ ಪ್ರಜಾತಂತ್ರದ ಕಗ್ಗೊಲೆ, ರಾಜಕೀಯ ಮೌಲ್ಯಗಳ ಕುಸಿತ ಇತ್ಯಾದಿ ಪದಗಳು ಸಂಪೂರ್ಣ ಅಪ್ರಸ್ತುತ. ಜೀವಂತವಿರುವುದನ್ನು ಕೊಲೆ ಮಾಡಬಹುದು. ಸತ್ತುಹೋಗಿರುವುದನ್ನು ಮತ್ತೆ ಕೊಲೆ ಮಾಡಲಾಗುತ್ತದೆಯೇ? ಭಾರತದ ಪ್ರಜಾತಂತ್ರ ಕೊಲೆಯಾಗಿ ಎಷ್ಟೋ ಕಾಲವಾಗಿದೆ. ಇಲ್ಲದೇ ಹೋಗಿದ್ದರೆ ಹೀಗೆ ಏನನ್ನಾದರೂ ಮಾರಲು ನಾಚದ, ಕೊಳ್ಳಲು ಹೇಸದ ಮಂದಿಯೆಲ್ಲ ಜನಪ್ರತಿನಿಧಿಗಳೇ ಆಗುತ್ತಿರಲಿಲ್ಲ.

ಈ ದೇಶದಲ್ಲಿ ರಾಜಕೀಯ ಎನ್ನುವುದು ಪ್ರಜಾತಂತ್ರದ ಹೆಣದೊಂದಿಗೆ ಸಂಸಾರ ಹೂಡುವ ಅಘೋರಿ ಸಂಪ್ರದಾಯದಂತೆ. ಪ್ರಜಾತಂತ್ರದ ಹಬ್ಬ ಎಂದು ಮಾಧ್ಯಮಗಳು ಬಣ್ಣಿಸುವ ಚುನಾವಣೆಗಳು, ವಾಸ್ತವದಲ್ಲಿ ಸತ್ತು ಹೋಗಿರುವ ಪ್ರಜಾತಂತ್ರಕ್ಕೆ ಐದು ವರ್ಷಗಳಿಗೊಮ್ಮೆ ನಡೆಯುವ ತಿಥಿ. ಆ ನಂತರ ಐದು ವರ್ಷ ಆಯ್ದ ಪುರೋಹಿತರಿಂದ ಅದ್ಧೂರಿ ತಿಥಿಯೂಟ. ಈ ತಿಥಿಯೂಟದ ಎಲೆಯ ಸುತ್ತ ಚೆಲ್ಲಿದ ಎಂಜಲನ್ನು ನಾವು ಅಭಿವೃದ್ಧಿ, ಜನಸೇವೆ ಇತ್ಯಾದಿ ಹೆಸರುಗಳಿಂದ ಕರೆಯುತ್ತೇವೆ. ಆದುದರಿಂದ ಪ್ರಜಾತಂತ್ರದ ಮಾನಹರಣ, ಮೌಲ್ಯಗಳ ಪತನ ಎಂದೆಲ್ಲಾ ಹೇಳುವುದರಲ್ಲಿ ಯಾವುದೇ ಅರ್ಥ ಇಲ್ಲ.

ಇಡೀ ಪ್ರಹಸನದಲ್ಲಿ ಕುತೂಹಲಕರ ಅಂಶ ಅಂತ ಏನಾದರೂ ಇದ್ದರೆ ಅದು ಒಮ್ಮಿಂದೊಮ್ಮೆಲೇ ಅತೃಪ್ತಿ ಅತೃಪ್ತಿ ಅಂತ ಅರಚುತ್ತಿರುವ ಶಾಸಕರ ಅತೃಪ್ತಿಯ ಮೂಲ ಏನಿರಬಹುದು ಎನ್ನುವ ಪ್ರಶ್ನೆ. ಈ ಪ್ರಶ್ನೆಯನ್ನು ಬೆಂಬತ್ತಿ ಹೊರಟರೆ ಅಧಿಕಾರ ರಾಜಕೀಯದ ಇಂದಿನ ಕರಾಳ ಮುಖಗಳೆಲ್ಲಾ ಅನಾವರಣಗೊಳ್ಳಬಹುದು. ಈ ಬಾರಿ ಹಣ ಮತ್ತು ಅಧಿಕಾರದ ಆಚೆಗಿನ ವ್ಯವಹಾರಗಳೆಲ್ಲಾ ಈ ಅತೃಪ್ತಿಯ ಮೂಲದಲ್ಲಿರುವಂತೆ ಕಾಣಿಸುತ್ತವೆ. ಹಣದ ಅಗತ್ಯವೇ ಇಲ್ಲದವರು, ಮಂತ್ರಿಸ್ಥಾನಾದಿಯಾಗಿ ಸಕಲ ಅಧಿಕಾರಗಳನ್ನು ಅನುಭವಿಸುತ್ತಿರುವವರೆಲ್ಲಾ ಏಕಾಏಕಿ ಅತೃಪ್ತಿಯಾಗುವುದೆಂದರೇನು? ಬಿಜೆಪಿಗೆ ಹೋದಾಕ್ಷಣ ಎಲ್ಲಾ ಅತೃಪ್ತಿ ಅಂತ್ಯವಾಗುವುದೆಂದರೇನು? ಅತೃಪ್ತಿ ಸೃಷ್ಟಿಗೆ ಕಾರಣ ಆಮಿಷವೇ ಅಥವಾ ಬೆದರಿಕೆಯೇ? ಅಲ್ಲ, ಮೂಲ ಪಕ್ಷದಲ್ಲಿರುವ ಯಾರಾದೋ ಮೇಲಿನ ಕೋಪದಿಂದ ಈ ಅತೃಪ್ತಿ ಸೃಷ್ಟಿಯಾಗಿದ್ದಾದರೆ ಅತೃಪ್ತರ ಯಾವ ವ್ಯವಹಾರಕ್ಕೆ ಸರ್ಕಾರದಲ್ಲಿರುವ ಯಾರು ಹೇಗೆ ತೊಡಕಾದರು ಎಂಬುದು ಮುಖ್ಯ ಪ್ರಶ್ನೆಯಾಗುತ್ತದೆ.

ಇವುಗಳನ್ನೆಲ್ಲಾ ಶೋಧಿಸಬೇಕಾದ ಮಾಧ್ಯಮಗಳು ತಮ್ಮನ್ನೇ ಮಾರಿಕೊಂಡೋ ಅಥವಾ ತಾವಾಗಿಯೇ ಮಂಕುಗೊಂಡೋ ಅತೃಪ್ತರ ತುತ್ತೂರಿಯಂತೆ ವರ್ತಿಸು ತ್ತಿರುವುದು ದುರಂತದೊಳಗಣ ದುರಂತ. ಅಂದರೆ, ಒಂದು ಸರ್ಕಾರದಲ್ಲಿ ಎಲ್ಲರೂ ತೃಪ್ತರಾಗಿರುವ ಸ್ಥಿತಿಯಲ್ಲಿ ಏನೇನು ವ್ಯವಹಾರಗಳೆಲ್ಲಾ ಸಲೀಸಾಗಿ ನಡೆಯು ತ್ತಿರುತ್ತವೆ ಎನ್ನುವ ಘೋರ ಸತ್ಯವನ್ನು ನಾವೀಗ ಊಹಿಸಿ ಕೊಳ್ಳಬಹುದು. ಅತೃಪ್ತರನ್ನೆಲ್ಲಾ ತನ್ನ ಅಂಗಳಕ್ಕೆ ಬಿಟ್ಟುಕೊಳ್ಳುತ್ತಿರುವ ಬಿಜೆಪಿ ಇದರಿಂದಾಗಿ ಬಲಗೊಳ್ಳುವು ದಿಲ್ಲ. ಅದು ಹೇಗೋ ಮಾಡಿ ಈಗ ಅಧಿಕಾರ ಸಂಪಾದಿಸಿ ಕೊಳ್ಳಬಹುದು. ಆದರೆ ಹೊರಗಿನಿಂದ ಬಂದವರು ಒಳಗೆ ಇರುವವರ ಅತೃಪ್ತಿ ಹೆಚ್ಚಿಸುತ್ತಾರೆ. ಇನ್ನೊಂದು ಪಕ್ಷದಿಂದ ಆಮದು ಮಾಡಿಕೊಂಡ ಅತೃಪ್ತರನ್ನು ಎಷ್ಟು ತೃಪ್ತಿಗೊ ಳಿಸಬಹುದು? ಅದಕ್ಕೂ ಒಂದು ಮಿತಿಯಿದೆ. ಒಳಗಿನಿಂದ ಹುಟ್ಟಿಕೊಂಡ ಅತೃಪ್ತಿ ಮತ್ತು ಹೊರಗಿನಿಂದ ಬಂದ ವಂಚಕರ ಅರೆತೃಪ್ತಿ ಸೇರಿ ಬಿಜೆಪಿಯನ್ನು ಒಳಗಿನಿಂದಲೇ ಹಿಂಡಿ ಹಿಪ್ಪೆ ಮಾಡಲಿದೆ. ಅದನ್ನೇ ಬಂಡವಾಳ ವಾಗಿಸಿಕೊಂಡು ಹೊಸ ರಾಜಕೀಯ, ಹೊಸ ನಾಯಕತ್ವ ಉದಯಿಸಿದರೂ ಉದಯಿಸೀತು. ಅಷ್ಟರಮಟ್ಟಿಗೆ ಬಿಜೆಪಿಯ ಲಜ್ಜಾಹೀನ ಕಾರ್ಯತಂತ್ರದ ಯಶಸ್ಸು ಸತ್ತು ಮಲಗಿರುವ ಪ್ರಜಾತಂತ್ರಕ್ಕೆ ಶಾಪದ ರೂಪದ ವರವೇ ಸರಿ. ಬಿಜೆಪಿಗಿದು ದೇವರು (ಅಂತಹದ್ದೇನಾದರೂ ಒಂದು ಇದ್ದರೆ ಅದು) ಕೊಟ್ಟ ಬುದ್ಧಿ.

ಈ ಲೇಖನ ಮುಗಿಸುವಾಗ ಬೇಡವೆಂದರೂ ಪೂರ್ಣಚಂದ್ರ ತೇಜಸ್ವಿಯವರ ‘ತಬರನ ಕತೆ’ಯಲ್ಲಿ ತಬರ ತಹಶೀಲ್ದಾರ್ ಕಚೇರಿಯಲ್ಲಿ ಬಳಸಿದ ಕೊನೆಯ ಬೈಗುಳದ ಮಾತು ನೆನಪಾಗುತ್ತಿದೆ. ತಬರ ಬಳಸಿದ ಬೈಗುಳದ ಮಾತನ್ನು ಕರ್ನಾಟಕ ರಾಜಕೀಯದ ಗೊಡ್ಡು ಪುರಾಣದಲ್ಲಿ ಕಾಣಿಸಿಕೊಂಡ ಸೂತ್ರಧಾರಿಗಳಿಗೆ ಮತ್ತು ಪಾತ್ರಧಾರಿಗಳಿಗೆ ಅನ್ವಯಿಸುವ ಉದ್ದೇಶ ಲವಲೇಶವೂ ಇಲ್ಲ. ಆದರೆ ಈ ಅಸಂಗತ ನಾಟಕ ನೋಡುತ್ತಿರುವ ಬಹುಮಂದಿ ಮತದಾರರ ಮುಖದಲ್ಲಿ ಕಾಣುವುದು ಅಸ ಹಾಯಕ ತಬರನ ಆಕ್ರೋಶ. ನೆನಪಿರಲಿ.

ಇಂತಿ,ಶ್ರೀ ಸಂವಿಧಾನ ಸ್ಮರಣೆಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT