<p>ವಾಸನೆ ವಿವೇಚನೆಗಳೆರಡಕಂ ಸಂಘರ್ಷೆ |</p>.<p>ಪ್ರಾಚೀನಕಂ ಪೌರುಷಕ್ಕಮಿರುವಂತೆ ||<br />ಆಶಾವಿನಾಶಮುಂ, ಧೀಶಕ್ತಿಯುದ್ಭವಮುಮ್ |<br />ಈಶಪ್ರಸಾದದಿಂದ – ಮಂಕುತಿಮ್ಮ || 700 ||</p>.<p><strong>ಪದ-ಅರ್ಥ:</strong>ವಿವೇಚನೆಗಳೆರಡಕಂ=ವಿವೇಚನೆಗಳು+ಎರಡಕಂ(ಎರಡಕ್ಕೂ), ಸಂಘರ್ಷೆ=ತಿಕ್ಕಾಟ, ಘರ್ಷಣೆ, ಪ್ರಾಚೀನಕಂ=ಪ್ರಾಚೀನಕ್ಕೆ, ಹಳೆಯದಕ್ಕೆ, ಪೌರುಷಕ್ಕಮಿರುವಂತೆ= ಪೌರುಷಕ್ಕಂ(ಪೌರುಷಕ್ಕೆ)+ಇರುವಂತೆ, ಆಶಾವಿನಾಶಮುಂ=ಆಶಾ+ವಿನಾಶಮುಂ (ವಿನಾಶವು), ಧೀಶಕ್ತಿಯುದ್ಭವಮುಮ್=ಧೀಶಕ್ತಿ(ವಿವೇಕದ ಶಕ್ತಿ)+ಉದ್ಭವಂಮುಮ್(ಉದ್ಭವ).</p>.<p><strong>ವಾಚ್ಯಾರ್ಥ</strong>: ವಾಸನೆಗಳಿಗೂ, ವಿವೇಚನೆಗೂ ಸಂಘರ್ಷ; ಹಳೆಯದಕ್ಕೂ, ಪೌರುಷಕ್ಕೂ ಸಂಘರ್ಷ ನಡೆದೇ ಇರುತ್ತದೆ. ಆಶೆಯ ನಾಶ ಮತ್ತು ವಿವೇಕಶಕ್ತಿಯ ಉದಯವಾಗುವುದು ಭಗವಂತನ ಕೃಪೆಯಿಂದ.</p>.<p><strong>ವಿವರಣೆ</strong>: ಅಂಗುಲಿಮಾಲನಿಗೆ ಬುದ್ಧನ ದರ್ಶನ, ಆಶೀರ್ವಾದ ದೊರೆತ ಮೇಲೆ ಅವನ ಬದುಕಿನಲ್ಲೊಂದು ಬಹುದೊಡ್ಡ ಸಂಘರ್ಷ<br />ತಲೆಯೆತ್ತಿ ನಿಂತಿತು. ಹಿಂದಿನ ಅಪರಾಧಗಳ ಸರಮಾಲೆಯ ವಾಸನೆ, ಅಪರಾಧಿ ಭಾವ, ಅವನನ್ನು ಬಿಗಿದಿದೆ. ಬುದ್ಧನ ಅನಂತ ಪ್ರೇಮ ಅವನಲ್ಲಿ ಸರಿ, ತಪ್ಪುಗಳ ವಿವೇಚನೆಯನ್ನು ಮೂಡಿಸಿದೆ.<br />ಇದುವರೆಗೂ ನಡೆದ ಬಂದ ದಾರಿಯನ್ನು, ಜೀವನ ವಿಧಾನವನ್ನು ಬಿಟ್ಟುಬಿಡುವುದು ಸುಲಭವೆ? ಮಹಾಂತ ತೋರಿದ ಹೊಸ ಹಾದಿಯಲ್ಲಿ<br />ನಡೆಯಲು ಸಾಧ್ಯವಾದೀತೆ? ಇದು ವಾಸನೆ ಮತ್ತು<br />ವಿವೇಚನೆಗಳ ನಡುವಿನ ಸಂಘರ್ಷ. ಇದು ಅಂಗುಲಿಮಾಲನಿಗೆ ಮಾತ್ರವಲ್ಲ, ನಮ್ಮೆಲ್ಲರ ಬದುಕಿನಲ್ಲಿ ಬರುವಂಥದ್ದು. ಹಿಂದೆ ಬದುಕಿದ ರೀತಿ, ಮುಂದೆ ಮಾಡಬಹುದಾದ ಕಾರ್ಯಯೋಜನೆಗಳ<br />ನಡುವೆ ತಿಕ್ಕಾಟ ಅನಿವಾರ್ಯವಾದದ್ದು.</p>.<p>ನಮಗೆ ಹಿಂದಿನಿಂದ ಬಂದದ್ದು, ದೊರೆತದ್ದು, ಪ್ರಾಚೀನ. ಅದು ಸಂಪ್ರದಾಯವೂ ಆಗುತ್ತದೆ. ತಾನು ಪಡೆದದ್ದನ್ನು ಹಾಗೆಯೇ ರಕ್ಷಿಸಿಕೊಂಡು ಹೋಗುವ ಬುದ್ಧಿ, ಸಂಪ್ರದಾಯವನ್ನು ಚಿರಂಜೀವಿಯಾಗಿಸುತ್ತದೆ. ಸಂಪ್ರದಾಯ ಕೇವಲ ಅಂಧಭಾರವಾದಾಗ, ಅದು ನಮ್ಮನ್ನು ಅಳಿಸುತ್ತದೆ, ಹಾಗಿಲ್ಲದಾಗ ಅದು ನಮ್ಮನ್ನು ಉಳಿಸುತ್ತದೆ. ಹೀಗಿರುವಾಗ,<br />ಪ್ರತಿಯೊಬ್ಬ ವ್ಯಕ್ತಿಯಲ್ಲಿರುವ ಸ್ವತಂತ್ರ ಪ್ರತಿಭೆ<br />ಸಂಪ್ರದಾಯಬದ್ಧವಾಗದೆ ಅದರಾಚೆ ಸಿಡಿದು ಬೆಳೆಯುತ್ತದೆ. ಪ್ರತಿಭಟನೆ ತೋರಿ ತನ್ನ ಅಸ್ತಿತ್ವವನ್ನು ಸಾಧಿಸುತ್ತದೆ. ಅದು ಪೌರುಷ. ಹೀಗೆ ವಾಸನೆ ಮತ್ತು ವಿವೇಚನೆ, ಸಂಪ್ರದಾಯ ಮತ್ತು ಪೌರುಷ, ಇವುಗಳ ಸಂಘರ್ಷದ ಫಲಿತಾಂಶವಾದ ಸಾಮರಸ್ಯವೆ ಪರಂಪರೆ.</p>.<p>ಪ್ರಾಚೀನವನ್ನು ಅರ್ವಾಚೀನದಲ್ಲಿ ಒಂದು<br />ಪ್ರತ್ಯೇಕ ಮುಟ್ಟಲಾಗದ ಮೂಲೆಯನ್ನಾಗಿಸದೆ, ಅದನ್ನು ಬಳಸುವ, ಬಳಸಿ ಅರಗಿಸಿಕೊಳ್ಳುವ ಪ್ರತಿಭೆಯ ಪ್ರಯತ್ನದ ಫಲವೆ ಪರಂಪರೆ.<br />ಹೀಗೆ ಪ್ರಾಚೀನವನ್ನು ಪಾಲಿಸುತ್ತಲೇ ಪೌರುಷವನ್ನು<br />ಮೆರೆಯಲು ಸಾಧ್ಯವಾಗುವುದು ಭಗವಂತನ ಕೃಪೆಯಿಂದ ಎನ್ನುತ್ತದೆ ಕಗ್ಗ. ಇದು ಬದುಕಿನ ಕರ್ಮದ ದಾರಿ. ಇನ್ನು ಮುಕ್ತಿಯ ದಾರಿಗೂ ಎರಡು ಊರುಗೋಲುಗಳು ಬೇಕು.</p>.<p><strong>ಒಂದು ಆಶಾನಾಶ</strong>. ಎಲ್ಲಿಯವರೆಗೆ ನಮ್ಮಲ್ಲಿ ಆಸೆಯ ಮೊಳಕೆ ಇದೆಯೋ, ಅಲ್ಲಿಯವರೆಗೆ ಬಂಧನ ತಪ್ಪದು. ಅದರ ಬಿಡುಗಡೆಗೆ ವಿವೇಕ ಜಾಗ್ರತವಾಗಬೇಕು. ಆ ಧೀಶಕ್ತಿಯ ವೃದ್ಧಿಯಾದಂತೆ ನಮ್ಮ ಆಸೆಗಳ ಕುಡಿ ಮುರುಟಿಕೊಳ್ಳುತ್ತದೆ, ಬಿಡುಗಡೆ ಸಾಧ್ಯವಾಗುತ್ತದೆ. ಆದರೆ ಆಶಾನಾಶ ಮತ್ತು ಅದಕ್ಕೆ ಕಾರಣವಾದ ಧೀಶಕ್ತಿಯ ವೃದ್ಧಿ ಎರಡೂ ದೊರೆಯುವುದು ಈಶ ಕೃಪೆಯಿಂದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಾಸನೆ ವಿವೇಚನೆಗಳೆರಡಕಂ ಸಂಘರ್ಷೆ |</p>.<p>ಪ್ರಾಚೀನಕಂ ಪೌರುಷಕ್ಕಮಿರುವಂತೆ ||<br />ಆಶಾವಿನಾಶಮುಂ, ಧೀಶಕ್ತಿಯುದ್ಭವಮುಮ್ |<br />ಈಶಪ್ರಸಾದದಿಂದ – ಮಂಕುತಿಮ್ಮ || 700 ||</p>.<p><strong>ಪದ-ಅರ್ಥ:</strong>ವಿವೇಚನೆಗಳೆರಡಕಂ=ವಿವೇಚನೆಗಳು+ಎರಡಕಂ(ಎರಡಕ್ಕೂ), ಸಂಘರ್ಷೆ=ತಿಕ್ಕಾಟ, ಘರ್ಷಣೆ, ಪ್ರಾಚೀನಕಂ=ಪ್ರಾಚೀನಕ್ಕೆ, ಹಳೆಯದಕ್ಕೆ, ಪೌರುಷಕ್ಕಮಿರುವಂತೆ= ಪೌರುಷಕ್ಕಂ(ಪೌರುಷಕ್ಕೆ)+ಇರುವಂತೆ, ಆಶಾವಿನಾಶಮುಂ=ಆಶಾ+ವಿನಾಶಮುಂ (ವಿನಾಶವು), ಧೀಶಕ್ತಿಯುದ್ಭವಮುಮ್=ಧೀಶಕ್ತಿ(ವಿವೇಕದ ಶಕ್ತಿ)+ಉದ್ಭವಂಮುಮ್(ಉದ್ಭವ).</p>.<p><strong>ವಾಚ್ಯಾರ್ಥ</strong>: ವಾಸನೆಗಳಿಗೂ, ವಿವೇಚನೆಗೂ ಸಂಘರ್ಷ; ಹಳೆಯದಕ್ಕೂ, ಪೌರುಷಕ್ಕೂ ಸಂಘರ್ಷ ನಡೆದೇ ಇರುತ್ತದೆ. ಆಶೆಯ ನಾಶ ಮತ್ತು ವಿವೇಕಶಕ್ತಿಯ ಉದಯವಾಗುವುದು ಭಗವಂತನ ಕೃಪೆಯಿಂದ.</p>.<p><strong>ವಿವರಣೆ</strong>: ಅಂಗುಲಿಮಾಲನಿಗೆ ಬುದ್ಧನ ದರ್ಶನ, ಆಶೀರ್ವಾದ ದೊರೆತ ಮೇಲೆ ಅವನ ಬದುಕಿನಲ್ಲೊಂದು ಬಹುದೊಡ್ಡ ಸಂಘರ್ಷ<br />ತಲೆಯೆತ್ತಿ ನಿಂತಿತು. ಹಿಂದಿನ ಅಪರಾಧಗಳ ಸರಮಾಲೆಯ ವಾಸನೆ, ಅಪರಾಧಿ ಭಾವ, ಅವನನ್ನು ಬಿಗಿದಿದೆ. ಬುದ್ಧನ ಅನಂತ ಪ್ರೇಮ ಅವನಲ್ಲಿ ಸರಿ, ತಪ್ಪುಗಳ ವಿವೇಚನೆಯನ್ನು ಮೂಡಿಸಿದೆ.<br />ಇದುವರೆಗೂ ನಡೆದ ಬಂದ ದಾರಿಯನ್ನು, ಜೀವನ ವಿಧಾನವನ್ನು ಬಿಟ್ಟುಬಿಡುವುದು ಸುಲಭವೆ? ಮಹಾಂತ ತೋರಿದ ಹೊಸ ಹಾದಿಯಲ್ಲಿ<br />ನಡೆಯಲು ಸಾಧ್ಯವಾದೀತೆ? ಇದು ವಾಸನೆ ಮತ್ತು<br />ವಿವೇಚನೆಗಳ ನಡುವಿನ ಸಂಘರ್ಷ. ಇದು ಅಂಗುಲಿಮಾಲನಿಗೆ ಮಾತ್ರವಲ್ಲ, ನಮ್ಮೆಲ್ಲರ ಬದುಕಿನಲ್ಲಿ ಬರುವಂಥದ್ದು. ಹಿಂದೆ ಬದುಕಿದ ರೀತಿ, ಮುಂದೆ ಮಾಡಬಹುದಾದ ಕಾರ್ಯಯೋಜನೆಗಳ<br />ನಡುವೆ ತಿಕ್ಕಾಟ ಅನಿವಾರ್ಯವಾದದ್ದು.</p>.<p>ನಮಗೆ ಹಿಂದಿನಿಂದ ಬಂದದ್ದು, ದೊರೆತದ್ದು, ಪ್ರಾಚೀನ. ಅದು ಸಂಪ್ರದಾಯವೂ ಆಗುತ್ತದೆ. ತಾನು ಪಡೆದದ್ದನ್ನು ಹಾಗೆಯೇ ರಕ್ಷಿಸಿಕೊಂಡು ಹೋಗುವ ಬುದ್ಧಿ, ಸಂಪ್ರದಾಯವನ್ನು ಚಿರಂಜೀವಿಯಾಗಿಸುತ್ತದೆ. ಸಂಪ್ರದಾಯ ಕೇವಲ ಅಂಧಭಾರವಾದಾಗ, ಅದು ನಮ್ಮನ್ನು ಅಳಿಸುತ್ತದೆ, ಹಾಗಿಲ್ಲದಾಗ ಅದು ನಮ್ಮನ್ನು ಉಳಿಸುತ್ತದೆ. ಹೀಗಿರುವಾಗ,<br />ಪ್ರತಿಯೊಬ್ಬ ವ್ಯಕ್ತಿಯಲ್ಲಿರುವ ಸ್ವತಂತ್ರ ಪ್ರತಿಭೆ<br />ಸಂಪ್ರದಾಯಬದ್ಧವಾಗದೆ ಅದರಾಚೆ ಸಿಡಿದು ಬೆಳೆಯುತ್ತದೆ. ಪ್ರತಿಭಟನೆ ತೋರಿ ತನ್ನ ಅಸ್ತಿತ್ವವನ್ನು ಸಾಧಿಸುತ್ತದೆ. ಅದು ಪೌರುಷ. ಹೀಗೆ ವಾಸನೆ ಮತ್ತು ವಿವೇಚನೆ, ಸಂಪ್ರದಾಯ ಮತ್ತು ಪೌರುಷ, ಇವುಗಳ ಸಂಘರ್ಷದ ಫಲಿತಾಂಶವಾದ ಸಾಮರಸ್ಯವೆ ಪರಂಪರೆ.</p>.<p>ಪ್ರಾಚೀನವನ್ನು ಅರ್ವಾಚೀನದಲ್ಲಿ ಒಂದು<br />ಪ್ರತ್ಯೇಕ ಮುಟ್ಟಲಾಗದ ಮೂಲೆಯನ್ನಾಗಿಸದೆ, ಅದನ್ನು ಬಳಸುವ, ಬಳಸಿ ಅರಗಿಸಿಕೊಳ್ಳುವ ಪ್ರತಿಭೆಯ ಪ್ರಯತ್ನದ ಫಲವೆ ಪರಂಪರೆ.<br />ಹೀಗೆ ಪ್ರಾಚೀನವನ್ನು ಪಾಲಿಸುತ್ತಲೇ ಪೌರುಷವನ್ನು<br />ಮೆರೆಯಲು ಸಾಧ್ಯವಾಗುವುದು ಭಗವಂತನ ಕೃಪೆಯಿಂದ ಎನ್ನುತ್ತದೆ ಕಗ್ಗ. ಇದು ಬದುಕಿನ ಕರ್ಮದ ದಾರಿ. ಇನ್ನು ಮುಕ್ತಿಯ ದಾರಿಗೂ ಎರಡು ಊರುಗೋಲುಗಳು ಬೇಕು.</p>.<p><strong>ಒಂದು ಆಶಾನಾಶ</strong>. ಎಲ್ಲಿಯವರೆಗೆ ನಮ್ಮಲ್ಲಿ ಆಸೆಯ ಮೊಳಕೆ ಇದೆಯೋ, ಅಲ್ಲಿಯವರೆಗೆ ಬಂಧನ ತಪ್ಪದು. ಅದರ ಬಿಡುಗಡೆಗೆ ವಿವೇಕ ಜಾಗ್ರತವಾಗಬೇಕು. ಆ ಧೀಶಕ್ತಿಯ ವೃದ್ಧಿಯಾದಂತೆ ನಮ್ಮ ಆಸೆಗಳ ಕುಡಿ ಮುರುಟಿಕೊಳ್ಳುತ್ತದೆ, ಬಿಡುಗಡೆ ಸಾಧ್ಯವಾಗುತ್ತದೆ. ಆದರೆ ಆಶಾನಾಶ ಮತ್ತು ಅದಕ್ಕೆ ಕಾರಣವಾದ ಧೀಶಕ್ತಿಯ ವೃದ್ಧಿ ಎರಡೂ ದೊರೆಯುವುದು ಈಶ ಕೃಪೆಯಿಂದ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>