ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಸುರಂಗದ ವೈಭವ

Last Updated 16 ಮೇ 2021, 19:31 IST
ಅಕ್ಷರ ಗಾತ್ರ

ಮಹೋಷಧಕುಮಾರನ ಬುದ್ಧಿಶಕ್ತಿಗೆ, ಕರ್ತೃತ್ವ ಶಕ್ತಿಗೆ ಮರುಳಾದ ಬ್ರಹ್ಮದತ್ತ ರಾಜ, ‘ಈ ಸುರಂಗದ ಮತ್ತೇನಾದರೂ ವಿಶೇಷಗಳಿವೆಯೇ?’ ಎಂದು ಕೇಳಿದ. ‘ಮಹಾರಾಜಾ, ಅಕಸ್ಮಾತ್ ಸುರಂಗದಲ್ಲಿ ಬರುವಾಗ ಯಾರಿಗಾದರೂ ಸಂಶಯ ಬಂದರೆ ಅಥವಾ ತಮ್ಮ ಬುದ್ಧಿವಂತ ಗೂಢಚಾರರು ಅದನ್ನು ಕಂಡುಹಿಡಿಯಲು ಬಂದರೆ ಅವರಿಗೆ ಏನೂ ತಿಳಿಯದಂತೆ ಮಾಡಿದ್ದೇನೆ. ತೋರಿಸುತ್ತೇನೆ ಬನ್ನಿ’ ಎಂದು ಕುಮಾರ ರಾಜನನ್ನು ಮುಂದೆ ಕರೆದೊಯ್ದ. ಮುಂದೆ ಅಲಂಕೃತವಾದ ಸುರಂಗ ಮಾರ್ಗದಲ್ಲಿ ಒಳಗೆ ಬಂದರೆ, ಎಂಭತ್ತು ಮಹಾದ್ವಾರಗಳು, ಅರವತ್ನಾಲ್ಕು ಚಿಕ್ಕ ಬಾಗಿಲುಗಳು, ನೂರು ಶಯನಾಗಾರಗಳಿದ್ದವು. ಎಲ್ಲವೂ ಬೆಳಕಿನಿಂದ ಹೊಳೆಯುತ್ತಿದ್ದವು. ಕುಮಾರ ರಾಜನಿಗೆ ನೂರು ಶಯನಾಗಾರಗಳನ್ನು ತೋರಿಸಿದ. ಒಂದು ಮುಖ್ಯ ಶಯನಾಗಾರದ ಬಾಗಿಲು ಮುಚ್ಚಿಕೊಂಡರೆ ಎಲ್ಲ ಶಯನಾಗಾರಗಳ ಬಾಗಿಲುಗಳು ಮುಚ್ಚಿ ಹೋಗುತ್ತಿದ್ದವು. ಅದನ್ನು ತೆರೆದರೆ ಮಾತ್ರ ಉಳಿದವು ತೆರೆಯುತ್ತಿದ್ದವು. ‘ಇದು ಯಾಕೆ ಹೀಗೆ?’ ಎಂದು ರಾಜ ಕೇಳಿದಾಗ, ‘ರಾಜಾ, ನಿನ್ನವರು, ನಮ್ಮ ಮೇಲೆ ದಾಳಿ ಮಾಡಲು ಬಂದರೆ ಅವರೆಲ್ಲರನ್ನು ಈ ಕೊಠಡಿಗಳಲ್ಲಿ ಕೂಡಿ ಹಾಕಿ ಮುಖ್ಯ ಒಂದು ಬಾಗಿಲನ್ನು ಮುಚ್ಚಿದರೆ, ಅವರೆಲ್ಲ ಬಂದಿಗಳಾಗುತ್ತಾರೆ. ಆಗ ಆ ಕೋಣೆಗಳಲ್ಲಿ ಒಂದು ಚೂರೂ ಬೆಳಕಿರುವುದಿಲ್ಲ. ಅವರು ಗಾಳಿ, ಬೆಳಕಿಲ್ಲದೆ, ಎದೆಯೊಡೆದು ಸಾಯುತ್ತಾರೆ’ ಎಂದು ಉತ್ತರಿಸಿದ ಕುಮಾರ.

ಈಗಾಗಲೇ ರಾಜನ ಅನೇಕ ಹಿಂಬಾಲಕರು ಬಂದು ಬೇರೆ ಬೇರೆ ಕೋಣೆಗಳನ್ನು ನೋಡುತ್ತ ನಿಂತಿದ್ದರು. ಕುಮಾರ ಪ್ರಧಾನ ಶಯನಾಗಾರದ ಬಾಗಿಲು ಹಾಕಿದೊಡನೆ ಎಲ್ಲಾ ಮಾರ್ಗಗಳು ಮುಚ್ಚಿಕೊಂಡವು. ಒಳಗಿದ್ದವರು ಕಂಗಾಲಾದರು. ಬಾಗಿಲುಗಳು ಎಷ್ಟು ಭದ್ರವಾಗಿದ್ದವೆಂದರೆ ಒಳಗಿನವರ ಕೂಗಾಟ ಸ್ವಲ್ಪವೂ ಹೊರಗೆ ಕೇಳಿಸುತ್ತಿರಲಿಲ್ಲ. ಅದೇ ಕ್ಷಣದಲ್ಲಿ ನೂರು ಜನ ಅತ್ಯಂತ ಬಲಿಷ್ಠರಾದ, ಆಯುಧಗಳಿಂದ ಸಜ್ಜಾದ ಸೈನಿಕರು, ಖಡ್ಗಗಳನ್ನು ಹಿಡಿದುಕೊಂಡು ಹಾರಿ ಮುಂದೆ ಬಂದರು. ರಾಜ ಗಾಬರಿಯಾದ. ಕುಮಾರ ನಕ್ಕು ಹೇಳಿದ, ‘ಮಹಾರಾಜಾ, ಭಯಬೇಡ. ಇದೊಂದು ರಕ್ಷಣೆಯ ವ್ಯವಸ್ಥೆ. ಬಾಗಿಲುಗಳು ಹಾಕಿದೊಡನೆ ಹೊರಗಿನವರು ಯಾರೋ ಬಂದಿದ್ದಾರೆಂದು ಈ ಸೈನಿಕರು ಹಾರಿಬರುತ್ತಾರೆ, ಬಂದವರನ್ನು ಕೊಂದು ಹಾಕುತ್ತಾರೆ. ಇದೇ ತರಹ ಮುಂದೆ ಕೂಡ ಐದು ನೂರು ಜನ ಸೈನಿಕರಿದ್ದಾರೆ’. ಮತ್ತೆ ಶಯನಾಗಾರದ ಬಾಗಿಲುಗಳನ್ನು ತೆರೆಸಿದ.

ಮುಂದೆ ಹಾಗೆಯೇ ಸಾಗಿ ಬಂದಾಗ ಎದುರಿಗೆ ಒಂದು ವಿಶಾಲವಾದ ಸಭಾಂಗಣ. ಅಲ್ಲಿ ನೂರು ಜನ ರಾಜರು ಕುಳಿತಿದ್ದರು. ಅಮಾತ್ಯ ಕೇವಟ್ಟ ಯಾರಿಗೆ ಸುರೆಯಲ್ಲಿ ವಿಷ ಹಾಕಿ ಕೊಲ್ಲಬೇಕೆಂದು ಮಾಡಿದ್ದನೋ, ಅವರೇ ಇವರು. ಈ ರಾಜರು ಕೂಡ ಕುಮಾರನ ಅತಿಥಿಗಳಂತೆ ಬಂದು ಬಂಧಿಯಾದವರೇ. ರಾಜರುಗಳು ಹೇಳಿದರು, ‘ಮಹೋಷಧಕುಮಾರ ಅಂದು ಬುದ್ಧಿವಂತಿಕೆಯಿಂದ ಸೈನಿಕರನ್ನು ಕಳುಹಿಸಿ ಸುರೆಯ ಮಡಕೆಗಳನ್ನು ಒಡಿಸದಿದ್ದರೆ ನಾವೆಲ್ಲ ಸತ್ತೇ ಹೋಗುತ್ತಿದ್ದೆವು’. ಆಗ ಬ್ರಹ್ಮದತ್ತ ರಾಜ ಅವರ ಕ್ಷಮೆ ಕೇಳಿದ, ‘ನಾನು ಈ ದುಷ್ಟ ಕೇವಟ್ಟನ ಮಾತು ಕೇಳಿ ಆ ತಪ್ಪು ಮಾಡಿದ್ದೆ. ದಯವಿಟ್ಟು ಕ್ಷಮಿಸಿ’ ಎಂದ.

ಇದನ್ನೆಲ್ಲ ಕಂಡು ಆಶ್ಚರ್ಯಪಟ್ಟ ರಾಜ ಕೇಳಿದ, ‘ಕುಮಾರ ಇಷ್ಟು ಬುದ್ಧಿ ಇರುವ ನೀನೇ ಯಾಕೆ ರಾಜ್ಯವನ್ನು ವಶಪಡಿಸಿಕೊಳ್ಳಲಿಲ್ಲ? ನಿನ್ನಂತಹವನಿಗೆ ಮತ್ತೊಬ್ಬ ರಾಜನ ಕೆಳಗೆ ಆಳಾಗಿರುವುದು ಶೋಭೆಯಲ್ಲ’. ಅದಕ್ಕೆ ಮಹೋಷಧಕುಮಾರ ನೀಡಿದ ಉತ್ತರ ಮಾರ್ಮಿಕವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT