ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೌಕೀದಾರ್ ಚೋರ್ ಅಲ್ಲದಿರಲೂಬಹುದು

ಜನತಂತ್ರದ ಪ್ರಧಾನಿ ನಿಜವಾದ ಚೌಕೀದಾರ್ ಆಗಿರಲೂಬಹುದು; ಆದರೆ ಯಾರಿಗೆ?
Last Updated 15 ಏಪ್ರಿಲ್ 2019, 20:15 IST
ಅಕ್ಷರ ಗಾತ್ರ

‘ಕನಿಷ್ಠಸರ್ಕಾರ ಗರಿಷ್ಠ ಆಡಳಿತ’ ಎಂಬ ಮಾತಿದೆಯಲ್ಲಾ ಇದು ಇಂದಿನ ಜಾಗತೀಕರಣದ ಮಾಯಾಜಿಂಕೆ ಅನ್ನಿಸಿಬಿಡುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ‘ನಮ್ಮ ಸರ್ಕಾರ ಅನುಕೂಲ ಮಾಡಿಕೊಡುವ ವ್ಯವಸ್ಥಾಪಕನಂತೆ ಕಾರ್ಯ ನಿರ್ವಹಿಸುತ್ತದೆ, ನಮ್ಮ ಸರ್ಕಾರದ ಗಮನವೆಲ್ಲಾ- ಕನಿಷ್ಠ ಸರ್ಕಾರ ಗರಿಷ್ಠ ಆಡಳಿತದತ್ತ’ ಎನ್ನುತ್ತಾರೆ. ವಾಣಿಜ್ಯ ಉದ್ಯಮ ನಡೆಸುವುದು ಸರ್ಕಾರದ ಉಸಾಬರಿಯಲ್ಲ ಎಂಬರ್ಥದಲ್ಲಿ ‘I believe, government has no business to be in business. The focus should be on Minimum Government but Maximum Governance’ ಎಂದು ಘೋಷಿಸುತ್ತಾರೆ.

ಈ ಮಾತುಗಳು ಕೇಳುವುದಕ್ಕೆ ಮೋಹಕ. ಈ ನುಡಿಗಳ ಆಳದಲ್ಲಿ ಭಯಾನಕ ಪಾತಾಳ ಲೋಕವಿದೆ; ಭೂಗತ ಜಗತ್ತಿನ ವ್ಯಾಪಾರ ವ್ಯವಹಾರಗಳು ಜರುಗುತ್ತಿರುವುದು ಅಲ್ಲಿ ಗೋಚರಿಸುತ್ತದೆ. ಇದಕ್ಕೊಂದು ಉದಾಹರಣೆ- ಬಿಇಎಂಎಲ್‍ ಅನ್ನು ಖಾಸಗೀಕರಣ ಮಾಡಕೂಡದೆಂದು ಮೈಸೂರಿನಲ್ಲಿ 2017ರ ಮೇ ತಿಂಗಳಿನಲ್ಲಿ ಒಂದು ಚಳವಳಿಯಾಯಿತು. ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ಬಿಇಎಂಎಲ್, ಸಾರ್ವಜನಿಕ ವಲಯದ ಪ್ರಮುಖ ಉದ್ದಿಮೆ. ಬೆಂಗಳೂರು, ಕೆಜಿಎಫ್, ಮೈಸೂರು, ಕೇರಳದ ಪಾಲಕ್ಕಾಡ್‍ನಲ್ಲಿ ಇದರ ಘಟಕಗಳಿವೆ. ಈ ಉದ್ದಿಮೆ, ಸತತವಾಗಿ ಲಾಭದಾಯಕವಾಗಿ ನಡೆದುಕೊಂಡು ಬರುತ್ತಿದೆ. ಬಿಇಎಂಎಲ್ ಘಟಕಗಳು, ಸುಮಾರು 4,500 ಎಕರೆ ಭೂಮಿ ಹೊಂದಿವೆ. ಇದರ ಮಾರುಕಟ್ಟೆ ಬೆಲೆ ಲಕ್ಷ ಕೋಟಿಗೂ ಹೆಚ್ಚಾಗುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಿ ಆರ್ಡರ್ ಪಡೆದುಕೊಳ್ಳುತ್ತದೆ ಎಂಬ ಹೆಗ್ಗಳಿಕೆಯೂ ಬಿಇಎಂಎಲ್‍ಗೆ ಇದೆ.

ಇಂತಹ ಒಂದು ಸಾರ್ವಜನಿಕ ಉದ್ದಿಮೆಯನ್ನು ಖಾಸಗಿ ಕಂಪನಿಯೊಂದಕ್ಕೆ ವಹಿಸಿಕೊಡುವ ಹುನ್ನಾರಕ್ಕಾಗಿ ಕೇಂದ್ರ ಸರ್ಕಾರವು ತನ್ನಲ್ಲಿ ಇರುವ ಶೇಕಡ 54ರಷ್ಟು ಷೇರುಗಳಲ್ಲಿ 26ರಷ್ಟನ್ನು ಅನಿಲ್ ಅಂಬಾನಿಯವರ ರಿಲಯನ್ಸ್ ಕಂಪನಿಗೆ ಮಾರುವ ವ್ಯವಹಾರ ಕುದುರಿಸುತ್ತಿತ್ತು. ಈ ಖಾಸಗೀಕರಣದ ಸಂಚಿನ ವಿರುದ್ಧ ಬಿಇಎಂಎಲ್ ಕಾರ್ಮಿಕರ ಧರಣಿ, ಮೆರವಣಿಗೆಗಳು ನಡೆಯುತ್ತಿರುವಾಗ ಸಾರ್ವಜನಿಕ ಅಭಿಪ್ರಾಯವನ್ನು ಗಮನಿಸುತ್ತಾ ಹೋದೆ. ‘ಏನೋ ಕಾರ್ಖಾನೆ ನಷ್ಟದಲ್ಲಿರಬೇಕು. ಕಾರ್ಖಾನೆ ಮುಚ್ತಾ ಇರಬೇಕು. ಕೆಲಸ ಹೋಗುತ್ತೆ ಅಂತ ಕೂಗಾಡುತ್ತಿದ್ದಾರೆ’– ಸುಮಾರು ಜನರ ಅಭಿಪ್ರಾಯ ಇದೇ ಆಗಿತ್ತು. ಕಾರ್ಮಿಕರು ಸಾರ್ವಜನಿಕ ಸಂಪತ್ತನ್ನು ಸಾರ್ವಜನಿಕವಾಗೇ ಉಳಿಸುವುದಕ್ಕಾಗಿ ಹೋರಾಡುತ್ತಿದ್ದಾರೆ ಅಂದುಕೊಂಡ ಒಬ್ಬನೇ ಒಬ್ಬ ಸಾರ್ವಜನಿಕನೂ ನನಗೆ ಕಂಡುಬರಲಿಲ್ಲ. ಸಾರ್ವಜನಿಕ ಸಂಪತ್ತನ್ನು ಸಾರ್ವಜನಿಕರು ತಮ್ಮದು ಎಂದುಕೊಂಡಿಲ್ಲ. ಇಲ್ಲೇ ಭಾರತದ ದುರಂತ ಇರುವುದು ಅನ್ನಿಸಿಬಿಟ್ಟಿತು.

ಇದು ಒಂದು ಉದಾಹರಣೆ ಮಾತ್ರ.

ಹೀಗೆಯೇ ಜಾಗತೀಕರಣ ಆರಂಭವಾದಾಗಲಿಂದ ಸಾರ್ವಜನಿಕ ಸಂಪತ್ತನ್ನು ಖಾಸಗಿ ಕಂಪನಿಗಳಿಗೆ ಒಪ್ಪಿಸುವ ಪ್ರಕ್ರಿಯೆ ನಡೆಯುತ್ತಲೇ ಬಂದಿದೆ. ಇದು ಮೋದಿಯವರ ಆಡಳಿತದಲ್ಲಿ ಉಲ್ಬಣಗೊಂಡಿತು. ಮೋದಿಯವರು ಎದೆಯುಬ್ಬಿಸಿ, ಸಾರ್ವಜನಿಕ ಸಂಪತ್ತನ್ನು ಖಾಸಗಿ ಕಂಪನಿಗಳ ಪದತಳಕ್ಕೆ ಒಪ್ಪಿಸತೊಡಗಿದರು. ಇದನ್ನು ಸಾಧನೆ, ಧೈರ್ಯ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ದಡ್ಡನಿಗೆ ಧೈರ್ಯ ಜಾಸ್ತಿಯೆಂಬ ಹಳ್ಳಿಗಾಡಿನ ನುಡಿಗಟ್ಟನ್ನು ಅವರು ನೆನಪಿಸಿಕೊಳ್ಳುವುದು ಒಳಿತು. ಇದು ನೆನಪಿನಲ್ಲಿದ್ದಿದ್ದರೆ ನೋಟು ಅಮಾನ್ಯೀಕರಣ ಮಾಡಿ ನೂರಾರು ಜನರ ಸಾವಿಗೂ, ಉದ್ಯೋಗನಷ್ಟಕ್ಕೂ ತಾವು ಕಾರಣರಾಗದಿರಬಹುದಿತ್ತು. ಆರ್ಭಟಿಸುವ ಅವರಿಂದ ಯಾವುದನ್ನೂ ನಿರೀಕ್ಷಿಸುವಂತಿಲ್ಲ.

ಈ ಹಿಂದೆ ವಾಜಪೇಯಿಯವರ ಆಡಳಿತದಲ್ಲಿ ಸಾರ್ವಜನಿಕ ಸಂಪತ್ತನ್ನು ಖಾಸಗಿ ಕಂಪನಿಗಳಿಗೆ ವಹಿಸುವ ಕೃತ್ಯಕ್ಕಾಗಿಯೇ ‘ಹೂಡಿಕೆ ಹಿಂತೆಗೆತ ಇಲಾಖೆ’ಯೊಂದನ್ನು ಹುಟ್ಟುಹಾಕಲಾಗಿತ್ತು. ಆಮೇಲೆ ಈ ಪ್ರಕ್ರಿಯೆಯನ್ನು ಸುಲಲಿತಗೊಳಿಸುವ ಸಲುವಾಗಿ ಪ್ರತ್ಯೇಕ ‘ಹೂಡಿಕೆ ಹಿಂತೆಗೆತ ಸಚಿವ ಸಮಿತಿ’ ಬಂತು. ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಯೋಜನಾ ಆಯೋಗವನ್ನು ಬಿಸಾಕಿ ಅದರ ಬದಲು ನೀತಿ ಆಯೋಗವನ್ನು ಚಲಾವಣೆಗೆ ತರುತ್ತಾರೆ. ಇದರ ಪ್ರಮುಖ ಕಾರ್ಯವೆಂದರೆ– ಕೇಂದ್ರ ಸರ್ಕಾರದ ಸುಪರ್ದಿಯಲ್ಲಿರುವ ಉದ್ದಿಮೆ ಸಂಸ್ಥೆಗಳನ್ನು ಮಾರಾಟ ಮಾಡುವುದು ಅಥವಾ ಸರ್ಕಾರಿ ಷೇರುಗಳನ್ನು ಹಿಂತೆಗೆದುಕೊಳ್ಳುವುದು. ಈ ನೀತಿ ಆಯೋಗವು ಸಾರ್ವಜನಿಕ ಆಡಳಿತದ 76 ಉದ್ದಿಮೆ ಸಂಸ್ಥೆಗಳನ್ನು ಖಾಸಗಿ ಕಂಪನಿಗಳ ಪದತಳಕ್ಕೆ ಒಪ್ಪಿಸಲು ಟೊಂಕಕಟ್ಟಿ ನಿಂತಿದೆ.

ಇಷ್ಟೇ ಅಲ್ಲ, ಸರ್ಕಾರಿ ಉದ್ದಿಮೆ ಸಂಸ್ಥೆಗಳನ್ನು ಮಾರಲೋಸುಗ ನೀತಿ ಆಯೋಗ ರಣಹದ್ದಿನಂತೆ ಹಾರಾಡುತ್ತಿದೆ. ಈಗ ಸರ್ಕಾರ ತನ್ನ ಬಿಎಸ್‍ಎನ್‍ಎಲ್ ಸಂಸ್ಥೆಯ ಕುತ್ತಿಗೆಯನ್ನು ತಾನೇ ಹಿಸುಕಿ ಅದರ ಉಸಿರುಗಟ್ಟಿಸಿ ಖಾಸಗಿ ಕಂಪನಿಗೆ ಒಪ್ಪಿಸಲು ತಯಾರಿ ನಡೆಸುತ್ತಿದೆ. ಇದೇ ಗತಿ ರೈಲ್ವೆಗೂ ಕಾದಿದೆ. ಅರಣ್ಯ ಅಷ್ಟೇ ಯಾಕೆ, ನದಿಗಳೂ ಖಾಸಗೀಕರಣದ ದವಡೆಗೆ ಸಿಲುಕುವ ಭೀತಿಯಿದೆ. ಆಯ್ತು, ಪೂರ್ವಿಕರು ಕಷ್ಟಪಟ್ಟು ಕಟ್ಟಿ ಬೆಳೆಸಿ ಉಳಿಸಿಕೊಂಡು ಬಂದಿದ್ದ ಆಸ್ತಿಪಾಸ್ತಿಗಳನ್ನು ಮಾರಾಟ ಮಾಡಿ ಮನೆ ನಡೆಸುವ ಮಗನನ್ನು ಏನೆಂದು ಕರೆಯುತ್ತೇವೆ? ಮನೆಹಾಳ ಅಥವಾ ಕೇಡುಗ ಅನ್ನುತ್ತೇವೆ. ಹಾಗೇನೇ ಪೂರ್ವಿಕರು ಕಟ್ಟಿ ಬೆಳೆಸಿ ಉಳಿಸಿಕೊಂಡು ಬಂದಿದ್ದ ದೇಶದ ಸಂಪತ್ತನ್ನು ಮಾರಾಟ ಮಾಡುತ್ತಾ ‘ದೇಶವನ್ನು ನಡೆಸುವವ’ನನ್ನು ಏನೆನ್ನಬೇಕು? ಮಹಾನ್ ಮನೆಹಾಳ ಅಥವಾ ಮಹಾಕೇಡುಗ ಅನ್ನಬೇಕಾಗುತ್ತದೆ.

ಆದರೆ ಪ್ರಧಾನಮಂತ್ರಿಯವರು ತಮ್ಮನ್ನು ಕೇಡುಗ ಅಥವಾ ಮನೆಹಾಳ ಎಂದುಕೊಂಡಿಲ್ಲ. ದೇಶದ ಸಂಪತ್ತನ್ನು ಮಾರುವುದನ್ನು ಒಂದು ಸುಂದರ ಸ್ವಪ್ನ ಎಂದುಕೊಂಡಿದ್ದಾರೆ. ಇದನ್ನೇ ಕನಿಷ್ಠ ಸರ್ಕಾರ ಗರಿಷ್ಠ ಆಡಳಿತ ಎಂದುಕೊಂಡಿದ್ದಾರೆ. ಜನತಂತ್ರ ಸರ್ಕಾರವೇನೋ ಕನಿಷ್ಠ ಆಗುತ್ತಿದೆ, ನಿಜ. ಆದರೆ ಹಣತಂತ್ರದ ಕಂಪನಿ ಸರ್ಕಾರಗಳ ಆಡಳಿತ ಗರಿಷ್ಠವಾಗುತ್ತಿದೆ. ದೇಶದ ಸಂಪತ್ತಿನ 70ರಷ್ಟು ಭಾಗ ಶೇಕಡ ಒಂದರಷ್ಟು ಜನರ ಕೈಸೇರಿದೆ. ನಿಜವಾದ ಆಳ್ವಿಕೆ ಹಣತಂತ್ರದ ಕಂಪನಿಗಳ ಸರ್ಕಾರದ ಕೈವಶವಾಗುತ್ತಿದೆ. ಇದರ ಪರಿಣಾಮವಾಗಿ ಚುನಾವಣಾ ಆಯೋಗ, ಕೋರ್ಟು, ಮಾಧ್ಯಮ ಇತ್ಯಾದಿ ಎಲ್ಲಾ ಕ್ಷೇತ್ರಗಳು ತಮ್ಮ ಸ್ವಭಾವವನ್ನು, ಸ್ವಾಯತ್ತತೆಯನ್ನು ಕಳೆದುಕೊಳ್ಳುತ್ತಿವೆ. ಇಂತಲ್ಲಿ ಚುನಾವಣಾ ವ್ಯವಸ್ಥೆ ನ್ಯಾಯಸಮ್ಮತವಾಗಿ ಇರುತ್ತದೆಯೇ? ಇನ್ನು ಜನತಂತ್ರದ ಪ್ರಜಾಪ್ರಭುತ್ವ?

ಹೀಗಿರುವಾಗ ಜನತಂತ್ರದ ಕನಿಷ್ಠ ಸರ್ಕಾರದ ಪ್ರಧಾನಿ ಮೋದಿಯವರು ತಮ್ಮನ್ನು ‘ಚೌಕೀದಾರ್’ ಎಂದು ಹೆಮ್ಮೆಯಿಂದ ಕರೆದುಕೊಳ್ಳುತ್ತಿದ್ದಾರೆ. ರಾಹುಲ್ ಗಾಂಧಿ ‘ಚೌಕೀದಾರ್ ಚೋರ್ ಹೈ’ ಅನ್ನುತ್ತಿದ್ದಾರೆ. ಚೌಕೀದಾರ್ ಚೋರ್ ಅಲ್ಲದಿರಲೂಬಹುದು. ಅವರು ನಿಜವಾದ ಚೌಕೀದಾರ್ ಆಗಿರಲೂಬಹುದು. ಆದರೆ ಯಾರಿಗೆ? ಜನತಂತ್ರದ ಪ್ರಧಾನಿಯೊಬ್ಬರು ಹಣತಂತ್ರದ ಕಂಪನಿ ಸರ್ಕಾರಗಳ ಸಂಪತ್ತನ್ನು ಕಾಯುವ ಚೌಕೀದಾರ್ ಆಗಿಬಿಟ್ಟರೆ? ಉಡಾಳ ಭೂಮಾಲೀಕನೊಬ್ಬ ತನ್ನ ಕುಟುಂಬ ನಿರ್ವಹಣೆಗಾಗಿ ತನ್ನ ಆಸ್ತಿಪಾಸ್ತಿಗಳನ್ನು ಸಿರಿವಂತನೊಬ್ಬನಿಗೆ ಮಾರಿ, ಕೊನೆಗೆ ಆ ಸಿರಿವಂತನ ಮನೆ ಕಾಯುವ ಚೌಕೀದಾರ್ ಆಗಿಬಿಟ್ಟರೆ? ಆ ಕಾವಲುಗಾರ ತನ್ನ ಕೆಲಸ ಉಳಿಸಿಕೊಳ್ಳಲು ತನ್ನ ಮಾಲೀಕನ ಕಾಳದಂಧೆಗೆಲ್ಲ ಶಾಮೀಲಾಗಬೇಕಾಗುತ್ತದೆ ಅಷ್ಟೆ. ಆ ಚೌಕೀದಾರ್‌ಗೂ ಈ ಚೌಕೀದಾರ್‌ಗೂ ವ್ಯತ್ಯಾಸವಿದೆಯೇ? ಜನತಂತ್ರ ವ್ಯವಸ್ಥೆಯ ಪ್ರಧಾನಿಯೊಬ್ಬ ಹಣತಂತ್ರ ಕಂಪನಿ ಸರ್ಕಾರಗಳ ಸಂಪತ್ತು ಕಾಯುವ ಚೌಕೀದಾರ್ ಆಗಿಬಿಡುವುದನ್ನು ಕಲ್ಪಿಸಿಕೊಳ್ಳಲು ಸಂಕಟವಾಗುತ್ತಿದೆ.

ಹೀಗೆ ದೇಶದ ಸಂಪತ್ತನ್ನು ಮಾರುತ್ತಿರುವ ವ್ಯಕ್ತಿಯನ್ನೇ ‘ದೇಶಕ್ಕಾಗಿ ಮೋದಿ’ ಎಂದು ವ್ಯವಸ್ಥಿತವಾಗಿ ಪ್ರಚಾರ ಮಾಡಲಾಗುತ್ತಿದೆ. ಅನೇಕಾನೇಕ ಮುಗ್ಧರೂ ನಂಬಿಕೆಯಿಂದಲೇ ‘ದೇಶಕ್ಕಾಗಿ ಮೋದಿ’ ಎನ್ನುತ್ತಿದ್ದಾರೆ. ಮುಗ್ಧ ಜನತೆ ಹೀಗೆ ಭಾವಿಸುತ್ತಿರುವುದು ಅತ್ಯಂತ ಯಾತನಾಮಯವಾಗಿದೆ. ಯಾಕೆಂದರೆ ಭಾರತದಲ್ಲಿ ನಂಬಿಕೆಯಿಂದ ಜಡ ಕಲ್ಲೂ ದೇವರಾಗಿ ವರ್ತಿಸುತ್ತದೆ. ಜನ ತಮ್ಮ ಉದ್ಧಾರಕನೆಂದು ಬಹಳವಾಗಿ ನಂಬಿರುವ ಜೀವಂತ ವ್ಯಕ್ತಿಯೊಬ್ಬ ಕಲ್ಲಾಗಿಬಿಟ್ಟ. ಇದಾಗಬಾರದಿತ್ತು, ಇದಾಗಬಾರದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT