ದೇಶದ ಜನ ಕುತೂಹಲದಿಂದ ಎದುರು ನೋಡುತ್ತಿದ್ದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಚೊಚ್ಚಲ ಬಜೆಟ್ ಕಳೆದ ವಾರ ಮಂಡನೆ ಆಗಿದೆ. ಅರ್ಥ ಸಚಿವ ಅರುಣ್ ಜೇಟ್ಲಿ ಅತೀ ಜಾಣ್ಮೆಯಿಂದ ಎಲ್ಲರನ್ನೂ ಸಮಾಧಾನಪಡಿಸಲು ಪ್ರಯತ್ನಿಸಿದ್ದಾರೆ. ತಮ್ಮಲ್ಲಿರುವ ಒಂದು ರೊಟ್ಟಿಯನ್ನು ಕಿತ್ತು ಎಲ್ಲರಿಗೂ ಒಂದೊಂದು ಮುರುಕು ಕೊಟ್ಟಿದ್ದಾರೆ. ಲೋಕಸಭೆ ಚುನಾವಣೆ ಪ್ರಚಾರದ ವೇಳೆ ನೀಡಿರುವ ಭರವಸೆಗಳನ್ನೇ ಹೆಚ್ಚುಕಡಿಮೆ ಎನ್ಡಿಎ ಬಜೆಟ್ ಒಳಗೊಂಡಿದೆ. ನದಿ ಜೋಡಣೆ ಮತ್ತು ಗಂಗಾ ನದಿ ಸ್ವಚ್ಛತೆ ಯೋಜನೆಗಳೂ ಪ್ರಕಟವಾಗಿವೆ.
ವಾರಾಣಸಿ ಜನರಿಗೆ ಮೋದಿ, ಗಂಗೆ ‘ಮೈಲಿಗೆ’ ತೊಳೆಯುವ ಮಾತು ಕೊಟ್ಟಿದ್ದಾರೆ. ಈ ಉದ್ದೇಶಕ್ಕಾಗಿ ಜಲ ಸಂಪನ್ಮೂಲ ಖಾತೆ ಸಚಿವಾಲಯದ ಅಧೀನದಲ್ಲಿ ಪ್ರತ್ಯೇಕ ಇಲಾಖೆಯನ್ನೇ ತೆರೆದಿದ್ದಾರೆ. ಬಜೆಟ್ನಲ್ಲಿ ಎರಡು ಸಾವಿರ ಕೋಟಿ ರೂಪಾಯಿ ಇಟ್ಟಿದ್ದಾರೆ. ಇದು ಮೆಚ್ಚುವಂಥ ಕೆಲಸ. ಕೊಳೆತು ನಾರುತ್ತಿರುವ ಗಂಗೆ ಶುದ್ಧವಾಗಬೇಕು. ಗಂಗಾ ನದಿ ಅಷ್ಟೇ ಅಲ್ಲ, ಎಲ್ಲ ನದಿಗಳನ್ನೂ ಶುಚಿಗೊಳಿಸುವ ಕಾರ್ಯಕ್ರಮ ರೂಪುಗೊಳ್ಳಬೇಕು. ಈ ಕೆಲಸಕ್ಕೆ ಹೆಚ್ಚು ಹಣ ಬೇಕು. ಹಣ ಹೊಂದಿಸುವುದೇ ದೊಡ್ಡ ಸವಾಲು.
ಗಂಗಾ ನದಿ ಶುಚಿಗೊಳಿಸುವ ಮಾತು ಮೊದಲ ಸಲ ಕೇಳುತ್ತಿಲ್ಲ. ಸರ್ಕಾರ ಹಿಂದೆಯೂ ಗಂಗೆ ಒಡಲು ತೊಳೆಯುವ ಕೆಲಸ ಮಾಡಿದೆ. ಸಾವಿರಾರು ಕೋಟಿ ಹಣವನ್ನು ಸುರಿದಿದೆ. ಅದರಿಂದ ಹಣ ಪೋಲಾಗಿರುವುದು ಬಿಟ್ಟರೆ, ಯಾವುದೇ ಉಪಯೋಗ ಆಗಿಲ್ಲ. ‘ಗಂಗಾ ನದಿ ಪುನಶ್ಚೇತನಕ್ಕೆ ಗಣನೀಯ ಪ್ರಮಾಣದಲ್ಲಿ ಹಣ ಖರ್ಚಾದರೂ ನಿರೀಕ್ಷಿತ ಫಲ ಸಿಕ್ಕಿಲ್ಲ’ ಎನ್ನುವ ಮಾತನ್ನು ಅರುಣ್ ಜೇಟ್ಲಿ ಅವರೇ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ. ಸರ್ಕಾರಕ್ಕಿದು ಎಚ್ಚರಿಕೆ ಗಂಟೆ. ಇದನ್ನು ನೆನಪಿನಲ್ಲಿಟ್ಟುಕೊಂಡು ಮುನ್ನಡೆಯಬೇಕಿದೆ. ಹಳೇ ಅನುಭವದಿಂದ ಪಾಠ ಕಲಿಯಬೇಕಿದೆ.
ಕೇವಲ ಹಣ ಖರ್ಚು ಮಾಡುವುದರಿಂದ ಅಥವಾ ಧಾರ್ಮಿಕ– ಆಧ್ಯಾತ್ಮಿಕ ಭಾವನೆ ಕೆರಳಿಸುವುದರಿಂದ ಗಂಗೆ ಮಾಲಿನ್ಯ ತೊಳೆಯಲು ಸಾಧ್ಯವಿಲ್ಲ. ಅದಕ್ಕೆ ಬೇಕಾಗಿರುವುದು ಪರಿಸರ ಪ್ರಜ್ಞೆ ಮತ್ತು ವೈಜ್ಞಾನಿಕ ದೃಷ್ಟಿಕೋನ. ‘ನದಿ ನಮ್ಮದು; ಅದು ಉಳಿದರೆ ನಾವು ಉಳಿಯುತ್ತೇವೆ’ ಎನ್ನುವ ಸಾಮೂಹಿಕ ಪ್ರಜ್ಞೆ.
ಕಾಡುಮೇಡು, ಗಿರಿಕಂದರಗಳು, ನದಿಗಳ ಸಂರಕ್ಷಣೆ ಬಗೆಗೆ ಆದಿವಾಸಿಗಳಿಗಿರುವಂಥ ಕನಿಷ್ಠ ಬದ್ಧತೆ ನಮಗಿದ್ದರೆ ಸಾಕಿತ್ತು!
ಗಂಗೆ ಸಂರಕ್ಷಣೆ ಕುರಿತು ಕೇಂದ್ರ ಸರ್ಕಾರ ಜುಲೈ 7ರಂದು ದೆಹಲಿಯಲ್ಲಿ ಮಂಥನ ಸಭೆ ನಡೆಸಿತು. ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದವರು ಸಾಧು– ಸಂತರು.
ಗಂಗಾ ನದಿಯನ್ನು ನಿಜವಾದ ಅರ್ಥದಲ್ಲಿ ಮಲಿನಗೊಳಿಸುತ್ತಿರುವವರೇ ಈ ಸಾಧು– ಸಂತರು. ಮತ್ತೆ ಅವರನ್ನೇ ಕರೆದು ಸಲಹೆ ಪಡೆದರೆ ಕೇಂದ್ರ ಸರ್ಕಾರದ ಉದ್ದೇಶದ ಬಗ್ಗೆಯೇ ಅನುಮಾನ ಹುಟ್ಟುತ್ತದೆ.
ಬಿಜೆಪಿ ಸರ್ಕಾರಕ್ಕೆ ನಿಜವಾಗಿ ಗಂಗಾ ನದಿ ಶುಚಿಗೊಳಿಸುವ ಕಾಳಜಿ ಇದ್ದರೆ ಪರಿಸರ ಮತ್ತು ಜಲ ಸಂಪನ್ಮೂಲ ತಜ್ಞರು, ನದಿ ಮಾಲಿನ್ಯದ ವಿರುದ್ಧ ದನಿ ಎತ್ತಿರುವ ಜನರನ್ನು ಕರೆಯಬೇಕಿತ್ತು. ಈ ಬಗ್ಗೆ ಕಾಂಗ್ರೆಸ್ ಹಿರಿಯ ಮುಖಂಡ, ಪರಿಸರ ಖಾತೆ ಹೊಣೆ ನಿರ್ವಹಿಸಿದ ಅನುಭವ ಹೊಂದಿರುವ ಜೈರಾಂ ರಮೇಶ್ ಸರಿಯಾಗಿಯೇ ಮಾತನಾಡಿದ್ದಾರೆ. ‘ಗಂಗಾ ಪುನಶ್ಚೇತನ ಹಿಂದುತ್ವದ ಯೋಜನೆ ಆಗದೆ, ರಾಷ್ಟ್ರೀಯ ಕಾರ್ಯಕ್ರಮ ಆಗಬೇಕು. ಇಡೀ ಸಮಾಜವನ್ನು ಒಳಗೊಳ್ಳಬೇಕು’ ಎಂದು ಕಿವಿಮಾತು ಹೇಳಿದ್ದಾರೆ.
ಪಶ್ಚಿಮ ಹಿಮಾಲಯದ ತಪ್ಪಲಿನ ಉತ್ತರಾಖಂಡದ ಗಂಗೋತ್ರಿಯಲ್ಲಿ ಹುಟ್ಟಿ, ಬಂಗಾಳ ಕೊಲ್ಲಿಯಲ್ಲಿ ಸಮುದ್ರ ಸೇರುವವರೆಗೆ ಸುಮಾರು 2,525 ಕಿ.ಮೀ. ದೂರ ಹರಿಯುವ ಗಂಗೆ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ ಜೀವನದಿ. ಸುಮಾರು 42 ಕೋಟಿ ಜನರಿಗೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಆಸರೆಯಾಗಿದೆ. ಹಿಂದೂಗಳ ಧಾರ್ಮಿಕ– ಆಧ್ಯಾತ್ಮಿಕ ಜೀವನದ ಭಾಗವಾಗಿದೆ. ಲಕ್ಷಾಂತರ ರೈತರ ಬೆನ್ನೆಲುಬಾಗಿದೆ. ಈ ನದಿ ಒಡಲನ್ನು ತೊಳೆಯುವುದು ಸುಲಭದ ಮಾತಲ್ಲ. ಇದುವರೆಗೆ ಆಗಿರುವಂತೆ ಕೇವಲ ಕಣ್ಣೊರೆಸುವ ಕಾರ್ಯಕ್ರಮವಾಗದೆ, ಪ್ರಾಯೋಗಿಕ ತಳಹದಿ ಮೇಲೆ ಯೋಜನೆ ರೂಪಿಸಬೇಕು.
ಗಂಗೆ ದೇಶದ ಅತ್ಯಂತ ದೊಡ್ಡ ನದಿ. ಹರಿವಿನ ಪ್ರಮಾಣವೂ ದೊಡ್ಡದು. ಮಾಲಿನ್ಯ ಸಮಸ್ಯೆಯೂ ಅತ್ಯಂತ ದೊಡ್ಡದು. ಹರಿದ್ವಾರ, ಹೃಷಿಕೇಶದಿಂದ ಬಾಂಗ್ಲಾವರೆಗೆ ನದಿ ದಂಡೆಯಲ್ಲಿ ಬೃಹತ್ತಾಗಿ ಬೆಳೆದಿರುವ ನಗರ, ಪಟ್ಟಣಗಳು ಹೊರಗೆಸೆಯುವಂಥ ಬೇಡವಾದ ಪದಾರ್ಥಗಳು ಗಂಗೆ ಒಡಲನ್ನು ಸೇರುತ್ತಿವೆ. ಕಾನ್ಪುರದಲ್ಲಿ ಈ ನದಿ ಆತಂಕ ಹುಟ್ಟಿಸುವ ಪ್ರಮಾಣದಲ್ಲಿ ಕಲುಷಿತವಾಗುತ್ತಿದೆ. ತೊಗಲಿನ ಉದ್ಯಮಕ್ಕೆ ಹೆಸರಾದ ಕಾನ್ಪುರದ ನೂರಾರು ಉದ್ಯಮಗಳು ಬಿಡುತ್ತಿರುವ ವಿಷಕಾರಿ ವಸ್ತುಗಳು ನದಿ ಸೇರಿಕೊಳ್ಳುತ್ತಿವೆ. ಬೇರೆ ಬೇರೆ ಕಾರ್ಖಾನೆಗಳ ತ್ಯಾಜ್ಯವೂ ನದಿ ಪಾಲಾಗುತ್ತಿದೆ. ಜನ ವಸತಿಗಳ ಚರಂಡಿ ನೀರೂ ಸೇರುತ್ತಿದೆ.
ಪ್ರತಿದಿನ ಕಾನ್ಪುರವೊಂದರಲ್ಲೇ ಸುಮಾರು ಒಂದು ಶತಕೋಟಿ ಲೀಟರ್ ಕಲುಷಿತ ನೀರನ್ನು ಗಂಗಾ ನದಿಗೆ ಬಿಡಲಾಗುತ್ತಿದೆ. ಮುಂದಿನ ಹತ್ತಿಪ್ಪತ್ತು ವರ್ಷಗಳಲ್ಲಿ ಇದು ದ್ವಿಗುಣವಾಗಲಿದೆ ಎಂದು ಅಂದಾಜಿಸಲಾಗಿದೆ. ಕಾರ್ಖಾನೆ ತ್ಯಾಜ್ಯವನ್ನು ಸಂಸ್ಕರಣೆ ಮಾಡಿದ ಬಳಿಕ ನದಿಗೆ ಬಿಡಬೇಕು ಎನ್ನುವ ನಿಯಮವನ್ನು ಯಾರೂ ಪಾಲಿಸುತ್ತಿಲ್ಲ. ಗಂಗಾ ನದಿ ಮಾಲಿನ್ಯ ತೊಳೆಯುವ ಮಾತು ಆಡುತ್ತಿರುವ ಬಿಜೆಪಿ ಸರ್ಕಾರ ಈ ಸಮಸ್ಯೆಯನ್ನು ಹೇಗೆ ನಿಭಾಯಿಸುತ್ತದೆ ಎನ್ನುವ ಬಗ್ಗೆ ಇನ್ನೂ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ.
ನದಿ ಪಾತ್ರದ ವಾತಾವರಣದ ಏರಿಳಿತ, ಪ್ರವಾಹ– ಬರಗಾಲದ ಪರಿಣಾಮ ಗಂಗಾ ನದಿ ಮೇಲಾಗುತ್ತಿದೆ. ವಾರಾಣಸಿಯಲ್ಲಿ ಅರೆಬರೆ ಸುಟ್ಟಿರುವ ಶವಗಳನ್ನು ನದಿಗೆ ಎಸೆಯಲಾಗುತ್ತಿದೆ. ಅನೇಕರು ಶವಗಳನ್ನು ಸಂಸ್ಕಾರ ಮಾಡದೆ ನದಿಯಲ್ಲಿ ಬಿಟ್ಟು ಹೋಗುವ ಪ್ರಸಂಗಗಳು ಸಾಮಾನ್ಯವಾಗಿವೆ. ವಿವಿಧ ಭಾಗಗಳಲ್ಲಿ ಸುಟ್ಟ ದೇಹಗಳ ಬೂದಿ ತಂದು ಮೋಕ್ಷದ ನೆಪದಲ್ಲಿ ಗಂಗೆಗೆ ಬಿಡಲಾಗುತ್ತಿದೆ. ಅಂದಾಜಿನ ಪ್ರಕಾರ ಪ್ರತಿದಿನ ಸುಮಾರು ಎರಡು ಕೋಟಿ ಜನ ಗಂಗಾ ಸ್ನಾನ ಮಾಡುತ್ತಾರೆ. ಕುಂಭಮೇಳ ಸಮಯದಲ್ಲಿ ಗಂಗಾ– ಯಮುನಾ ಮತ್ತು ಸರಸ್ವತಿ ನದಿ ಕೂಡುವ ಅಲಹಾಬಾದಿನಲ್ಲಿ ‘ಪುಣ್ಯ ಸ್ನಾನ’ ಮಾಡುವವರ ಸಂಖ್ಯೆ ಲೆಕ್ಕಕ್ಕಿಲ್ಲ. ಗಂಗೆಯಲ್ಲಿ ಮಿಂದು ಪುಣ್ಯ ಹೊತ್ತುಕೊಂಡು ಹೋಗುವ ಜನ, ತಮ್ಮ ಪಾಪವನ್ನೆಲ್ಲ ನದಿಯೊಳಗೇ ಬಿಟ್ಟು ಹೋಗುತ್ತಾರೆ.
ಗಂಗಾ ಮಾಲಿನ್ಯ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಮತ್ತು ವಿಶ್ವ ಬ್ಯಾಂಕ್ ಪದೇ ಪದೇ ಕಳವಳ ವ್ಯಕ್ತಪಡಿಸುತ್ತಲೇ ಇವೆ. ವಿಶ್ವ ಆರೋಗ್ಯ ಸಂಸ್ಥೆ, ಸುರಕ್ಷಿತ ಎಂದು ನಿಗದಿಪಡಿಸಿದ ಪ್ರಮಾಣಕ್ಕಿಂತ ಮೂರು ಸಾವಿರ ಪಟ್ಟು ಹೆಚ್ಚು ವಿಷಕಾರಿ, ರಾಸಾಯನಿಕ ವಸ್ತುಗಳು, ಬ್ಯಾಕ್ಟಿರಿಯಗಳು ಗಂಗಾ ನದಿ ಸೇರುತ್ತಿವೆ ಎಂದು ವೈಜ್ಞಾನಿಕ ಅಧ್ಯಯನಗಳು ಖಚಿತಪಡಿಸಿವೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ 1986ರಲ್ಲಿ ‘ಗಂಗಾ ನದಿ ಶುದ್ಧೀಕರಣ ಯೋಜನೆ’ ಆರಂಭಿಸಿದರು. ಆಗ ₨ 1500 ಕೋಟಿ ಬಿಡುಗಡೆ ಮಾಡಿದ್ದರು. ಈ ಹಣ ಕಡಿಮೆಯೇನಲ್ಲ. ಆದರೆ, ಅದು ಸರಿಯಾಗಿ ಬಳಕೆ ಆಗಲಿಲ್ಲ. ಗಂಗೆ ಹೆಸರಿನಲ್ಲಿ ಅನೇಕರು ನುಂಗಿ ನೀರು ಕುಡಿದರು. ಅನಂತರದ ಎನ್ಡಿಎ ಸರ್ಕಾರವೂ ಸ್ವಲ್ಪ ಹಣ ನೀಡಿತು. ಜಪಾನ್, ₨ 2,600 ಕೋಟಿ ನೆರವು ಕೊಟ್ಟಿದೆ. ವಿಶ್ವಬ್ಯಾಂಕ್ ದೊಡ್ಡ ಪ್ರಮಾಣದಲ್ಲಿ ಸಹಾಯ ಮಾಡಿದೆ. ಗಂಗಾ ಒಂದು ಮತ್ತು ಎರಡನೇ ಹಂತದ ಯೋಜನೆ ವಿಫಲವಾಗಿವೆ ಎಂದು ವಿಶ್ವಬ್ಯಾಂಕ್ ವರದಿಯೇ ಹೇಳಿದೆ.
ಗಂಗಾ ನದಿ ಮಾಲಿನ್ಯ ನಾಲ್ಕು ದಶಕದ ಸಮಸ್ಯೆ. ಎರಡು ದಶಕದಿಂದ ಈ ಸಮಸ್ಯೆ ತೀವ್ರವಾಗಿದೆ. ಮಾಲಿನ್ಯ ತಡೆಗೆ ಕೇಂದ್ರ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದ್ದರೂ ಪ್ರಯೋಜನವಾಗಿಲ್ಲ. ನದಿ ಮಾಲಿನ್ಯದಲ್ಲಿ ಶೇಕಡ 80ರಷ್ಟು ಕೊಡುಗೆ ಒಳಚರಂಡಿ ನೀರಿನದು. ಅನಂತರದ ಪಾಲು ಕಾರ್ಖಾನೆ ಮತ್ತು ಕೃಷಿ ವಲಯದ್ದು ಎನ್ನುವುದು ಯುಪಿಎ ಸರ್ಕಾರದಲ್ಲಿದ್ದ ‘ರಾಷ್ಟ್ರೀಯ ಗಂಗಾ ನದಿ ಪ್ರಾಧಿಕಾರ’ದ ಸದಸ್ಯ ಡಾ.ಬಿ.ಡಿ.ತ್ರಿಪಾಠಿ ಅವರ ಅಭಿಪ್ರಾಯ.
‘ನದಿಯಲ್ಲಿ ನೀರಿನ ಹರಿವು ಇಳಿಮುಖವಾಗಿದೆ. ಅಂದಾಜು ಶೇ 20ರಷ್ಟು ನೀರು ಕಡಿಮೆಯಾಗಿದೆ. ನದಿ ಹೂಳು ದೊಡ್ಡ ತಲೆನೋವು. ನದಿಯಲ್ಲಿ ಸಮರ್ಪಕ ಪ್ರಮಾಣದಲ್ಲಿ ನೀರು ಹರಿಯುವಂತೆ ನೋಡಿಕೊಳ್ಳುವುದೊಂದೇ ಮಾಲಿನ್ಯ ತಡೆಗೆ ಇರುವ ದಾರಿ’ ಎನ್ನುವುದು ತ್ರಿಪಾಠಿ ಕಿವಿಮಾತು. ಗಂಗಾ ಮಂಥನ ಸಭೆಯಲ್ಲಿ ಸಚಿವ ನಿತಿನ್ ಗಡ್ಕರಿ ಸರ್ಕಾರದ ಯೋಜನೆಯನ್ನು ವಿವರಿಸಿದ್ದಾರೆ. ವಿಶ್ವಬ್ಯಾಂಕಿನಿಂದ ₨ 4000 ಕೋಟಿ ತಂದು ಜಲ ಸಾರಿಗೆ, ಪ್ರವಾಸೋದ್ಯಮ ಅಭಿವೃದ್ಧಿ ಮಾಡುವುದಾಗಿ ಹೇಳಿದ್ದಾರೆ.
ಪ್ರತಿ ನೂರು ಕಿ.ಮೀ.ಗೆ ಒಂದರಂತೆ ಅಣೆಕಟ್ಟೆ ಅಥವಾ ಬ್ಯಾರೇಜ್ ನಿರ್ಮಿಸುವುದಾಗಿ ತಿಳಿಸಿದ್ದಾರೆ. ಈ ಯೋಜನೆಗೆ ಅದೇ ಸಭೆಯಲ್ಲಿ ವಿರೋಧ ವ್ಯಕ್ತವಾಗಿದೆ. ಕೆಲವು ತಜ್ಞರು ಇದರಿಂದ ಮಾಲಿನ್ಯ ಹೆಚ್ಚಾಗಲಿದೆ. ಅಲ್ಲದೆ, ಜಲಚರಗಳಿಗೆ ಅಪಾಯವಾಗಲಿದೆ ಎಂದು ಎಚ್ಚರಿಸಿದ್ದಾರೆ. ನಿಜಕ್ಕೂ ಇದೊಂದು ಸೂಕ್ಷ್ಮ ಸಲಹೆ. ಸರ್ಕಾರಕ್ಕೆ ಗಂಗಾ ನದಿ ರಕ್ಷಣೆ ಮಾಡುವ ಕಾಳಜಿ ಇದ್ದರೆ ಈ ಸಲಹೆಯನ್ನು ಒಪ್ಪಬೇಕು. ಆದರೆ, ಅದಕ್ಕೆ ಒಪ್ಪಿಗೆಯಾದಂತೆ ಕಾಣುವುದಿಲ್ಲ.
ಉತ್ತರ ಭಾರತಕ್ಕೆ ವರದಾನವಾಗಿರುವ ಗಂಗಾ ನದಿ ಉಳಿಯಬೇಕು. ನದಿ ಸಂರಕ್ಷಣೆ ವಿಚಾರದಲ್ಲಿ ರಾಜಕಾರಣ ಮಾಡಬಾರದು. ವೈಜ್ಞಾನಿಕ ಕ್ರಮಗಳ ಮೂಲಕ ನದಿ ಸಂರಕ್ಷಣೆ ಸಾಧ್ಯ. ಈ ನಿಟ್ಟಿನಲ್ಲಿ ಹಲವು ಕಠಿಣ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು. ನದಿ ಯಾರೊಬ್ಬರ ಸ್ವತ್ತಲ್ಲ. ಸಮಾಜದ ಸಂಪತ್ತು. ಪರಿಸರ ಕಾಳಜಿ ಇರುವ ಎಲ್ಲ ಪಕ್ಷಗಳು, ಸಂಘಟನೆಗಳು ಹಾಗೂ ಚಳವಳಿಗಾರರನ್ನು ಒಳಗೊಂಡೇ ಈ ಕೆಲಸ ಮಾಡಬೇಕು. ಸಾಧು– ಸಂತರನ್ನು ಕಟ್ಟಿಕೊಂಡು ಸಭೆ ಮಾಡುವುದರಿಂದ ಪ್ರಯೋಜನವಿಲ್ಲ. ಈ ವಾಸ್ತವ ಅರ್ಥ ಮಾಡಿಕೊಂಡೇ ಸರ್ಕಾರ ಮುನ್ನಡೆಯಬೇಕು. ಇದುವರೆಗೆ ಆಗಿರುವಂತೆ ಕೇವಲ ಇನ್ನಷ್ಟು ಹಣ ಸುರಿಯುವುದರಿಂದ ಗಂಗೆ ಉಳಿಯುವುದಿಲ್ಲ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.