ವುಹಾನ್: ಭಾರತ–ಚೀನಾ ಗಡಿ ಭಾಗಗಳಲ್ಲಿ ಶಾಂತಿ ಕಾಪಾಡುವ ಪ್ರಾಮುಖ್ಯತೆಯ ಕುರಿತು ಪ್ರಧಾನಿ ಮೋದಿ ಹಾಗೂ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ ಮಾತುಕತೆ ನಡೆಸಿರುವುದಾಗಿ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಶನಿವಾರ ತಿಳಿಸಿದರು.
ಪರಸ್ಪರ ನಂಬಿಕೆ, ಸಹಕಾರ ವೃದ್ಧಿ ಹಾಗೂ ಸಂವಹನ ಉತ್ತಮಗೊಳಿಸಲು ಅನುಸರಿಸಬೇಕಾದ ನಿಯಮಗಳ ಬಗ್ಗೆ ಉಭಯ ರಾಷ್ಟ್ರಗಳ ನಾಯಕರು ತಮ್ಮ ಸೇನೆಗೆ ಮಾರ್ಗದರ್ಶನ ನೀಡಲು ನಿರ್ಧರಿಸಿದ್ದಾರೆ ಎಂದರು.
ಮಧ್ಯ ಚೀನಾದ ವುಹಾನ್ ನಗರದಲ್ಲಿ ಮೋದಿ–ಜಿನ್ಪಿಂಗ್ ನಡುವಣ ಎರಡು ದಿನಗಳ ಅನೌಪಚಾರಿಕ ಮಾತುಕತೆ ಶನಿವಾರ ಮುಕ್ತಾಯಗೊಂಡಿತು.
2017ರಲ್ಲಿ 73 ದಿನಗಳ ಡೊಕ್ಲಾಮ್ ಗಡಿ ವಿವಾದಿಂದಾಗಿ ಭಾರತ–ಚೀನಾ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಈ ಆಪ್ತ ಮಾತುಕತೆಯ ಬಳಿಕ ಉಭಯ ರಾಷ್ಟ್ರಗಳ ಸಹಕಾರ ಗಟ್ಟಿಯಾಗಲಿದೆ ಎಂದು ಗೋಖಲೆ ವಿಶ್ವಾಸ ವ್ಯಕ್ತಪಡಿಸಿದರು.
ಭಯೋತ್ಪಾದನೆಯ ಕುರಿತು ಕಳವಳ ವ್ಯಕ್ತಪಡಿಸಿರುವ ಉಭಯ ನಾಯಕರು, ಭಯೋತ್ಪಾದನೆ ನಿರ್ಮೂಲನೆಗಾಗಿ ಜತೆಯಾಗಿ ಹೋರಾಡಲು ನಿರ್ಧರಿಸಿದ್ದಾರೆ ಎಂದರು.