ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾ.ಪಂ ಅಧ್ಯಕ್ಷರ ಚುನಾವಣೆ ಮುಂದೂಡಿಕೆ

ಬಿಜೆಪಿ ಸದಸ್ಯರ ಸಾಮೂಹಿಕ ಬಹಿಷ್ಕಾರ, ಕೋರಂ ಅಭಾವ
Last Updated 1 ಜೂನ್ 2018, 7:08 IST
ಅಕ್ಷರ ಗಾತ್ರ

ಚಾಮರಾಜನಗರ: ಇಲ್ಲಿನ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರ ಚುನಾವಣೆ ಸಭೆ ಕೋರಂ ಅಭಾವದಿಂದ ರದ್ದಾಯಿತು. ಮತ್ತೆ ಜೂನ್ 8ಕ್ಕೆ ಚುನಾವಣೆ ನಿಗದಿಯಾಗಿದೆ.

ಯಾನಗಳ್ಳಿ ಕ್ಷೇತ್ರದ ಸದಸ್ಯೆ ಕಾಂಗ್ರೆಸ್‌ನ ದೊಡ್ಡಮ್ಮ ಮಾತ್ರ ಅಧ್ಯಕ್ಷ ಸ್ಥಾನಕ್ಕೆ ಉಮೇದುವಾರಿಕೆ ಸಲ್ಲಿಸಿದ್ದರು. ಆದರೆ, ಬಿಜೆಪಿ ಸದಸ್ಯರು ಸಾಮೂಹಿಕವಾಗಿ ಸಭೆಯಿಂದ ದೂರು ಉಳಿದರು. ಇದರಿಂದ ಕೋರಂ ಅಭಾವ ಸೃಷ್ಟಿಯಾಗಿ ಸಭೆ ನಡೆಯಲಿಲ್ಲ.

ಏನಿದು ಘಟನೆ?: ಚಾಮರಾಜನಗರ ತಾಲ್ಲೂಕು ಪಂಚಾಯಿತಿಯ ಸದಸ್ಯ ಬಲ 29. ಇದರಲ್ಲಿ ಬಿಜೆಪಿ 17, ಕಾಂಗ್ರೆಸ್ 11 ಹಾಗೂ ಕನ್ನಡ ಚಳವಳಿ ವಾಟಾಳ್ ಪಕ್ಷ 1 ಸ್ಥಾನಗಳನ್ನು ಹೊಂದಿವೆ. ಬಿಜೆಪಿ ಸದಸ್ಯರೇ ಹೆಚ್ಚಾಗಿದ್ದರೂ ಕಾಂಗ್ರೆಸ್ ಮೀಸಲಾತಿ ತಂತ್ರದ ಮೂಲಕ ಬಿಜೆಪಿಯನ್ನು ಅಧಿಕಾರದಿಂದ ದೂರು ಇಡುವ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದೆ. ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಒಬ್ಬ ಸದಸ್ಯರೂ ಇಲ್ಲ. ಹೀಗಾಗಿ, ಅನಾಯಾಸವಾಗಿ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ಗೆ ಒಲಿದಿದೆ.

ಹಿಂದೆ ಎಚ್.ವಿ.ಚಂದ್ರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ, ನಂತರ ಪಕ್ಷದ ವರಿಷ್ಠರ ಒತ್ತಡಕ್ಕೆ ಕಟ್ಟುಬಿದ್ದು ಅವರು ರಾಜೀನಾಮೆ ನೀಡಿದ್ದರು. ನಂತರ, ಮೇ 31ಕ್ಕೆ ನಿಗದಿಯಾದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಯಾನಗಹಳ್ಳಿ ಕ್ಷೇತ್ರದ ಸದಸ್ಯೆ ದೊಡ್ಡಮ್ಮ ಅವರೊಬ್ಬರು ಮಾತ್ರ ನಾಮಪತ್ರ ಸಲ್ಲಿಸಿದರು. ಆದರೆ, ಬಿಜೆಪಿಯ ಎಲ್ಲ 17 ಸದಸ್ಯರು ಹಾಗೂ ಕನ್ನಡ ಚಳವಳಿ ವಾಟಾಳ್ ಪಕ್ಷದ ಒಬ್ಬ ಸದಸ್ಯರು ಚುನಾವಣಾ ಸಭೆಗೆ ಗೈರಾಗುವ ಮೂಲಕ ಕೋರಂ ಅಭಾವವನ್ನು ತಂದೊಡ್ಡಿದರು. ಇದರಿಂದ ಸಭೆ ರದ್ದಾಯಿತು.

ಸಭೆಗೆ ಗೈರಾದದ್ದು ಏಕೆ?: ಬಿಜೆಪಿ ಸದಸ್ಯರು ಬೆಳಿಗ್ಗೆಯಿಂದಲೇ ಸಭೆ ಸೇರಿ ಕಾರ್ಯತಂತ್ರ ರೂಪಿಸತೊಡಗಿದರು. ಹಲವು ಸದಸ್ಯರು ಕಾಂಗ್ರೆಸ್ ಪಕ್ಷದ ಸದಸ್ಯರು ಸಹಕಾರ ಕೋರದಿರುವ ವಿಷಯ ಪ್ರಸ್ತಾಪಿಸಿ ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿಯಲ್ಲಿ ಇಲ್ಲದ ಮೀಸಲಾತಿ ನಿಗದಿ ಮಾಡುವ ಮೂಲಕ ತಂತ್ರಗಾರಿಕೆ ಮೆರೆದಿರುವ ಕಾಂಗ್ರೆಸ್ ಇದೀಗ ಸೌಜನ್ಯಕ್ಕಾದರೂ ಸಭೆಗೆ ಕರೆಯಬಹುದಿತ್ತು ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದರ ಜತೆಗೆ, ಕಾಂಗ್ರೆಸ್‌ನ ಚಂದ್ರು ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಇತರರನ್ನು ಸೆಳೆಯುವ ಬಿಜೆಪಿ ತಂತ್ರಗಾರಿಕೆಗೆ ಫಲ ಕೊಡಲಿಲ್ಲ. ಹೀಗಾಗಿ, ಬಿಜೆಪಿ ಸದಸ್ಯರು ಸಾಮೂಹಿಕವಾಗಿ ಸಭೆಯನ್ನು ಬಹಿಷ್ಕರಿಸಿದರು.

ತಂತ್ರಗಾರಿಕೆ ಫಲಿಸುವುದೇ?

ಈ ಮಧ್ಯೆ ಬಿಜೆಪಿ ಕಾಂಗ್ರೆಸ್‌ನ ಕುಮಾರನಾಯಕ ಅವರೂ ಗೈರಾಗುವಂತೆ ನೋಡಿಕೊಳ್ಳುವ ಮೂಲಕ ಕಾಂಗ್ರೆಸ್ ಗುಂಪಿನಲ್ಲಿ ಆತಂಕವನ್ನು ತಂದೊಡ್ಡಿದೆ. ಚುನಾವಣೆ ತಡವಾದಷ್ಟೂ ಬಂಡಾಯ ಸದಸ್ಯರನ್ನು ಸೆಳೆಯುವ ತಂತ್ರಗಾರಿಕೆಗೆ ಕಾಂಗ್ರೆಸ್‌ ಬೆಚ್ಚಿದೆ. ಒಂದು ವೇಳೆಯ ಕಾಂಗ್ರೆಸ್‌ನಲ್ಲಿರುವ ಚಂದ್ರು ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಇತರ ಸದಸ್ಯರು ಬಿಜೆಪಿ ಗುಂಪಿಗೆ ಜಿಗಿದರೆ ಅಧ್ಯಕ್ಷ ಸ್ಥಾನ ದೊಡ್ಡಮ್ಮ ಅವರ ಕೈತಪ್ಪುವ ಸಾಧ್ಯತೆ ಇದೆ. ಸತತವಾಗಿ 2ನೇ ಸಭೆಗೂ ಬಿಜೆಪಿ ಸದಸ್ಯರು ಗೈರಾಗಬಹುದು. 3ನೇ ಸಭೆಗೆ ಗೈರಾದರೆ ಅವರ ಸದಸ್ಯತ್ವ ರದ್ದುಗೊಳ್ಳುವ ಸಂಭವ ಇದೆ. ಹೀಗಾಗಿ, ಕಾಂಗ್ರೆಸ್ ಮುಂದಿನ ಸಭೆವರೆಗೂ ತನ್ನ ಬಂಡಾಯ ಸದಸ್ಯರನ್ನು ತಮ್ಮಲ್ಲೇ ಉಳಿಸಿಕೊಳ್ಳುವ ತಂತ್ರಗಾರಿಕೆಯ ಮೊರೆ ಹೋಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT