ನಾಲ್ಕಾರು ದಿನದ ನಂತರ ಕಣ್ಣಿಗೆ ಬಿದ್ದ ಸುದ್ದಿ, ತಮಿಳುನಾಡಿನ ಪಂಚಾಂಗ ನೋಡಿ ಮೈತ್ರಿ ಸರ್ಕಾರದ ಭವಿಷ್ಯ ಹೇಳುವೆನೆಂದ ಕುಮಾರಣ್ಣನಣ್ಣನ ಹೇಳಿಕೆ. ಜೊತೆಗೆ ಸದ್ಯಕ್ಕೆ ಕಮಲಕ್ಕನ ಆಪರೇಷನ್ನು ಬೇಡವೆಂದು ಪಂಚಾಂಗ ಹೂ ಉದುರಿಸಿದೆಯಂತೆ. ಅಂದರೆ ಮೈತ್ರಿಗೂ, ಮೈತ್ರಿ ಮುರಿಯಲೂ ಈ ಪಂಚಾಂಗವೇ ಸರಿ.‘ಅಮ್ಮ’ನಿಲ್ಲದ ತಮಿಳುನಾಡಿನ ಪಂಚಾಂಗ ಈಗಲೂ ಈ ಪರಿ ಸ್ಟ್ರಾಂಗಿರುತ್ತಾ ಎಂದುಕೊಂಡ ಯಶೋದಕ್ಕನಿಗೆ ತಾನೂ ಆ ಪಂಚಾಂಗ ನೋಡಿಯೇ ಬಿಡಬೇಕೆನ್ನಿಸಿತು. ಈ ಸಲ ನಟಭಯಂಕರರು ಗೆದ್ದರೆ, ಆಗಲಾದರೂ ನಂ.ಏಳು, ರೇಸ್ಕೋರ್ಸ್ ಭವನಕ್ಕೆ ಕಾಲಿಡಲು ತನ್ನನ್ನು ಕರೆಯಬಹುದೇ ಎಂದು ಬರೆದಿರಬಹುದೇನೋ ನೋಡುವ ಎಂಬಾಸೆಯನ್ನು ಜೀಕುತ್ತ ಯಶೋದಕ್ಕ ಆನ್ಲೈನಿನಲ್ಲಿ ತಮಿಳು ಪಂಚಾಂಗದ ಗುಜರಾತಿ ಅಥವಾ ಇಂಗ್ಲೀಷು ಆವೃತ್ತಿ ಸಿಗುತ್ತದೆಯೇ ಎಂದು ಹುಡುಕತೊಡಗಿದರು!