ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಶಾನ್ಯದ ದಳ್ಳುರಿಗೆ ಕೇಂದ್ರ ನಿರ್ಲಿಪ್ತ

Last Updated 7 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಭಾರತದ ಈಶಾನ್ಯ ಪ್ರದೇಶಗಳು ಹೊತ್ತಿ ಉರಿಯುವಂತಹ ಸ್ಥಿತಿಯಲ್ಲಿವೆ. ಆ ಪ್ರದೇಶದಲ್ಲಿರುವ ಸುಮಾರು 250ಕ್ಕೂ ಹೆಚ್ಚು ಜನಾಂಗೀಯ ಗುಂಪುಗಳು, ಸಮುದಾಯಗಳು ಪರಸ್ಪರ ತಮ್ಮಳಗೇ ಕಿತ್ತಾಡುತ್ತಿರುವುದರ ಜತೆಗೆ, `ದೆಹಲಿಯ ಆಡಳಿತಗಾರ~ರ ಜತೆಗೂ ಕಾದಾಟ ನಡೆಸುತ್ತಲೇ ಇವೆ.

ತಮ್ಮ ಅಸ್ತಿತ್ವದ ಸಾಬೀತಿಗಾಗಿ ಅವುಗಳು ನಡೆಸುತ್ತಿರುವ ಪ್ರಯತ್ನಗಳು ಒಂದೇ ಎರಡೇ. ಕೆಲವು ಸಮದಾಯಗಳಂತೂ ಭಾರತದ ಒಕ್ಕೂಟ ವ್ಯವಸ್ಥೆಯಿಂದ ಹೊರಗೆ ನಿಲ್ಲಲೂ ತುದಿಗಾಲಲ್ಲಿ ನಿಂತಿವೆ. ಧಾರ್ಮಿಕ ನಂಬಿಕೆಗಳನ್ನು ಪರಿಗಣಿಸಿ ನೋಡುವುದಿದ್ದರೆ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತರ ಸಂಖ್ಯೆಗಳು ಹೆಚ್ಚೂ ಕಡಿಮೆ ಸಮವಾಗಿಯೇ ಇವೆ.

ಬಾಂಗ್ಲಾದೇಶದಿಂದ ಅಕ್ರಮವಾಗಿ ಈ ಪ್ರದೇಶಗಳಿಗೆ ನುಸುಳಿ ಬಂದು ನೆಲೆಸಿರುವ ವಲಸಿಗರ ಸಂಖ್ಯೆಯಂತೂ ಬಲು ದೊಡ್ಡದು. ಆ ಪ್ರದೇಶದ ಎಲ್ಲೆಡೆ ಇರುವ ಅಸಮಾಧಾನವೆಂಬ `ಬೆಂಕಿ~ಗೆ ಅಕ್ರಮ ವಲಸಿಗರ ಸಮಸ್ಯೆ `ಬಿರುಗಾಳಿ~ಯಂತಾಗಿದ್ದು ಇಡೀ ಪ್ರದೇಶವೇ ಧಗಧಗ ಎನ್ನುತ್ತಿದೆ. ಭಾಷಾವಾರು ಪ್ರಾಂತ್ಯ ವಿಂಗಡಣೆಯ ನೆಲೆಯಲ್ಲಿ ಐವತ್ತರ ದಶಕದಲ್ಲಿ ಅಸ್ಸಾಮಿ ಜನರಿಗಾಗಿಯೇ ಪ್ರತ್ಯೇಕ ರಾಜ್ಯವನ್ನು ನೀಡಲಾಯಿತು. ಆದರೆ ಆಗಿನ ಆ ವಿಶಾಲ ರಾಜ್ಯದಲ್ಲಿ ಅಸ್ಸಾಮಿ ಮಾತನಾಡುವವರೇ ಅಲ್ಪಸಂಖ್ಯಾತರಾಗಿದ್ದರು !

ಅಸ್ಸಾಂನಲ್ಲಿ ಬೋಡೊ ಸಮುದಾಯದವರ ದಳ್ಳುರಿಯಂತೂ ಈಚೆಗಿನ ದಶಕಗಳಲ್ಲಿ ಸದಾ ಸುದ್ದಿಯಲ್ಲಿದೆ. ಬಂಗಾಳಿ ಭಾಷೆಯನ್ನು ಮಾತನಾಡುವ ಮುಸ್ಲಿಮರ ಮೇಲೆಯೇ ಬೋಡೊ ಪ್ರತ್ಯೇಕತಾವಾದಿಗಳು ಹರಿಹಾಯುತ್ತಿದ್ದಾರೆ. ಬೋಡೊ ಬಂಡುಕೋರರು ಅದೆಷ್ಟು ಕ್ರೋಧತಪ್ತರಾಗಿದ್ದಾರೆಂದರೆ, ಅವರು ನಿರಾಶ್ರಿತರ ಶಿಬಿರಗಳ ಮೇಲೆಯೂ ಅಮಾನವೀಯವಾಗಿ ದಾಳಿ ನಡೆಸುತ್ತಿದ್ದಾರೆ.

ಶಾಂತಿಯ ಮಾತುಕತೆಗಳೆಲ್ಲಾ ವಿಫಲವಾಗಿವೆ. ಬ್ರಿಟೀಷರು ಭಾರತವನ್ನು ಬಿಟ್ಟು ಹೋದ ನಂತರ `ಅಕ್ರಮ ವಲಸಿಗರು ಮತ್ತು ಹೊರಗಿನವರು~ ಒಳನುಗ್ಗಿ ಆಕ್ರಮಿಸಿಕೊಂಡಿರುವ ತಮ್ಮ ನೆಲವನ್ನೆಲ್ಲಾ  ವಾಪಸು ನೀಡುವಂತೆ ಬೋಡೊ ಹೋರಾಟಗಾರರು ಆಗ್ರಹಿಸುತ್ತಲೇ ಇದ್ದಾರೆ. ತಮಗೆ ಪ್ರತ್ಯೇಕ ರಾಜ್ಯ ಬೇಕೆಂಬುದು ಬೋಡೊ ಹೋರಾಟಗಾರರ ಪ್ರಮುಖ ಬೇಡಿಕೆಯಾಗಿದೆ.

ಕೆಲವು ಗುಂಪುಗಳು ಪ್ರತ್ಯೇಕತಾವಾದವನ್ನೇ ಮುಂದಿಟ್ಟು ಹೋರಾಟ ನಡೆಸಿದ್ದರಿಂದ ಅಸ್ಸಾಂ ರಾಜ್ಯ ತನ್ನ ಬೃಹತ್ ಸ್ವರೂಪವನ್ನೇ ಕಳೆದುಕೊಂಡಿತು. ಆ ರಾಜ್ಯದ ವ್ಯಾಪ್ತಿಯಲ್ಲಿಯೇ ಇದ್ದ ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ ಮತ್ತು ತ್ರಿಪುರಗಳು ಪ್ರತ್ಯೇಕ ರಾಜ್ಯಗಳಾದವು. ಅಂದು ಬೋಡೊಗಳು ಅಸ್ಸಾಂನ ಜತೆಗೆ ಉಳಿಯಲು ನಿರ್ಧರಿಸಿದ್ದರು.

ಆದರೆ ಗುವಾಹಟಿಯ ಆಡಳಿತಗಾರರು ಬೋಡೊ ಮನಸ್ಸುಗಳನ್ನು ಸ್ನೇಹದಿಂದ ಕಂಡು ಮುಖ್ಯವಾಹಿನಿಯಲ್ಲಿ ಕರೆದೊಯ್ಯುವಲ್ಲಿ ಯಶಸ್ಸು ಪಡೆಯಲಿಲ್ಲ.  ಬೋಡೊ ಸಂಸ್ಕೃತಿ, ವಿಚಾರಗಳು ಅವಗಣನೆಗೆ ಈಡಾಗುತ್ತಿದೆ ಎಂಬ ಭಾವನೆ ಬೋಡೊ ಜನಸಮುದಾಯದಲ್ಲಿ ಬೆಳೆಯ ತೊಡಗಿತು. ಅಸಮಾಧಾನ ಹೊಗೆಯಾಡತೊಡಗಿತು.

ಬೋಡೊ ಹೋರಾಟಗಾರರು ನುಸುಳುಕೋರರ ವಿರುದ್ಧ ಸಿಡಿದೆದ್ದರು. ಬಂಗಾಲಿ ಭಾಷೆ ಮಾತನಾಡುವ ಮುಸಲ್ಮಾನರ ಮೇಲೆ ನಡೆದಿರುವ ದೌರ್ಜನ್ಯದ ಬಗ್ಗೆ ಎಲ್ಲಾ ಕಡೆಯಿಂದಲೂ ಟೀಕೆಗಳು ವ್ಯಕ್ತವಾದವು. ಪ್ರಧಾನಿ ಮನಮೋಹನ್ ಸಿಂಗ್ ಅವರು ಈಚೆಗೆ ಕೊಕ್ರಝಾರ್‌ಗೆ ಭೇಟಿ ನೀಡಿದಾಗ `ಇಂತಹ ಹಿಂಸಾಕೃತ್ಯಗಳಿಂದಾಗಿ ಅಸ್ಸಾಂ ರಾಜ್ಯವು ಭಾರತದ ಕಪ್ಪುಚುಕ್ಕೆಯಂತೆ ಕಾಣಿಸಿಕೊಳ್ಳುತ್ತಿದೆ. ಅಸ್ಸಾಂಗೆ ಕಳಂಕ ಮೆತ್ತಿಕೊಳ್ಳುತ್ತಿದೆ~ ಎಂದು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
 
ಇಂತಹ ಸಂದಿಗ್ಧ ಕಾಲಘಟ್ಟದಲ್ಲಿ ದೆಹಲಿಯಲ್ಲಿ ಕುಳಿತಿರುವ ಆಡಳಿತಗಾರರು ತಮ್ಮ ಆತ್ಮವಿಮರ್ಶೆ ಮಾಡಿಕೊಳ್ಳಲಿ. ಈ ರೀತಿ ಈಶಾನ್ಯ ರಾಜ್ಯಗಳು ಮುಖ್ಯವಾಹಿನಿಯಿಂದ ಸದಾ ದೂರವಾಗಲು ಕಾರಣವೇನು ? ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವವರು ಈಶಾನ್ಯ ರಾಜ್ಯಗಳಿಗೆ ಸಂಬಂಧಿಸಿದಂತೆ ಜವಾಬ್ದಾರಿಯುತವಾಗಿ, ಸೂಕ್ಷ್ಮನೆಲೆಯಲ್ಲಿ ವ್ಯವಹರಿಸಿದ್ದಾರೆಯೇ ಎಂಬುದರ ಬಗ್ಗೆಯೂ ಪ್ರಶ್ನಿಸಿಕೊಳ್ಳಬೇಕಿದೆ.

ಈಶಾನ್ಯ ರಾಜ್ಯಗಳಲ್ಲಿ ಯಾವುದೇ ಸಮಸ್ಯೆಯಾದರೂ, ಅದೆಂತಹದೇ ವಿವಾದ ಕೇಳಿ ಬಂದರೂ ಎಲ್ಲದಕ್ಕೂ `ಕಾನೂನು ಸುವ್ಯವಸ್ಥೆ~ ಸಮಸ್ಯೆ ಅಥವಾ ಅಪರಾಧ ಪ್ರಕರಣ ಎಂದೇ ಕೇಂದ್ರ ಪರಿಗಣಿಸಿಬಿಡುತ್ತದೆ. ಈಗಾಗಲೇ ಈಶಾನ್ಯ ರಾಜ್ಯಗಳಲ್ಲಿ ಭಾರತದ ಸೇನೆಯೇ ಶಾಂತಿ ಸುವ್ಯವಸ್ಥೆ ಕಾಪಾಡಲು ನಿಂತು ಬಿಟ್ಟಿದೆ.
 
ಅದರ ಬಂದೂಕಿನ ಅಡಿಯಲ್ಲಿಯೇ ಶಾಂತಿಪಾಲನೆ ನಡೆಯುತ್ತಿದೆ ! ಅಲ್ಲಿ ಬೇಕಿರುವುದು ರಾಜಕೀಯ ಪರಿಹಾರವೇ ಹೊರತು, ಯೋಧರಿಂದ ಕಾನೂನು ಪಾಲನೆಯ `ಉಸ್ತುವಾರಿ~ಯಲ್ಲ ಎಂಬ ಸತ್ಯ ಯಾರಿಗೂ ಅರಿವಾಗುತ್ತಿಲ್ಲ. ಈಶಾನ್ಯ ರಾಜ್ಯಗಳ ಸಮಸ್ಯೆಯ ಪರಿಹಾರಕ್ಕೆ ಸಂಬಂಧಿಸಿದಂತೆ ಕೇಂದ್ರದಿಂದ ಗೃಹ ಸಚಿವಾಲಯದ ಅಧಿಕಾರಿಗಳು ಅಲ್ಲಿಗೆ ಭೇಟಿ ಕೊಡುವುದರಿಂದಲೇ ಎಲ್ಲವೂ ಸರಿಯಾಗುತ್ತದೆ ಎಂದುಕೊಂಡಿದ್ದರೆ ಅದು ತಪ್ಪು.

ಸೇನೆಯ ಕೈಗೆ ಸಂಪೂರ್ಣ ಅಧಿಕಾರ ನೀಡುವಂತಹ ಸೇನೆಗೆ ವಿಶೇಷಾಧಿಕಾರ ಕಾಯ್ದೆ (ಎಎಫ್‌ಎಸ್‌ಪಿಎ)ಯಂತೂ ಅತ್ಯಂತ ನಿರ್ದಯವಾಗಿರುವಂತಹದ್ದು. ಕೇವಲ ಅನುಮಾನಾಸ್ಪದ ಚಲನವಲನ ಕಂಡ ತಕ್ಷಣ ವ್ಯಕ್ತಿಯೊಬ್ಬನನ್ನು ಸೈನಿಕರು ಗುಂಡಿಕ್ಕಿ ಕೊಂದು ಬಿಡುವ ಅವಕಾಶ ಈ ಕಾಯ್ದೆಯಲ್ಲಿದೆ.
 
ಪ್ರಾದೇಶಿಕ ಮಟ್ಟದ ದುರ್ಬಲ ಆಡಳಿತಗಾರರ ನಡುವೆ ಸೇನೆಯದೇ ಪಾರುಪತ್ಯೆ ನಡೆಯುವಂತಾಗಿಬಿಟ್ಟಿದೆ. ಸ್ಥಳೀಯ ಸರ್ಕಾರಗಳು ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಸೇನಾಧಿಕಾರಿಗಳನ್ನೇ ನೆಚ್ಚಿಕೊಂಡಂತಿದೆ. ಹೀಗಾಗಿ ಸೇನೆಯ `ಅಧಿಕಾರ ವ್ಯಾಪ್ತಿ~ಯೂ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಕಡೆ ಗಲಭೆಗಳು ನಡೆದಾಗಲೂ ಅಲ್ಲಿಗೆ ಸೇನೆ ಹೋಗುವುದು ವಿಳಂಬವಾಗುತ್ತಿದೆ.

ಮೊನ್ನೆ ಕೊಕ್ರಝಾರ್‌ನಲ್ಲಿ ಕೂಡಾ ಹೀಗೆಯೇ ಆಗಿದೆ. ಕೊಕ್ರಝಾರ್ ಪ್ರಕರಣದಲ್ಲಿಯೂ ಸೇನೆ ತಡವಾಗಿ ಅಲ್ಲಿಗೆ ತಲುಪಿತು ಎಂದು ಸ್ವತಃ ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೊಯ್ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದಾರೆ. ಜತೆಗೆ ಆ ಪ್ರದೇಶಕ್ಕೆ ಅಗತ್ಯವಾಗಿ ಬೇಕಿದ್ದ ಅರೆಸೇನಾಪಡೆಯನ್ನು ಈಚೆಗಷ್ಟೇ ವಾಪಸು ಕರೆಸಿಕೊಳ್ಳಲಾಗಿತ್ತಂತೆ.

 ಸ್ವತಃ ಜಿಲ್ಲಾದಂಡಾಧಿಕಾರಿಯವರೇ ಲಿಖಿತ ಮನವಿ ಕಳುಹಿಸಿದ ಮೇಲೆಯೂ ಸೇನೆಯು ಗಲಭೆ ಪೀಡಿತ ಪ್ರದೇಶಗಳಿಗೆ ಮೂರು ದಿನಗಳಷ್ಟು ತಡವಾಗಿ ತಲುಪಿದ್ದು ಏಕೆಂದು ಹೇಳುವುದು ಕಷ್ಟ. ಕೆಲವರು ಹೇಳುವಂತೆ ಸೇನೆಗೆ ಆ ಪ್ರದೇಶದ ಕೋಮುಗಲಭೆಯಂತಹ ಪ್ರಕರಣಗಳಲ್ಲಿ ಸಿಲುಕಿಕೊಳ್ಳುವುದು ಬೇಕಿರಲಿಲ್ಲ.
 
ರಾಜ್ಯದ ಭದ್ರತಾ ಸಿಬ್ಬಂದಿಯೇ ಅದನ್ನು ನಿಭಾಯಿಸಲಿ ಎಂಬ ಧೋರಣೆ ತಳೆದಿರಲೂಬಹುದು. ಕೇಂದ್ರದ ರಕ್ಷಣಾ ಇಲಾಖೆಯ ಅನುಮತಿಗಾಗಿ ಕಾದು ಕುಳಿತಿದ್ದಿರಲೂಬಹುದು ಎಂದು ಇನ್ನೂ ಕೆಲವರು ಅಭಿಪ್ರಾಯಪಡುತ್ತಾರೆ. ಇಂತಹ ಅನಿಸಿಕೆ, ಅಭಿಪ್ರಾಯಗಳು ನಿಜವಾಗಿದ್ದರೆ ಮೂಲಭೂತ ಪ್ರಶ್ನೆಯೊಂದು ಧುತ್ತೆನ್ನುತ್ತದೆ. ಸೇನೆಯು ನಾಗರಿಕ ಆಡಳಿತಗಾರರ ನೆರವಿಗೆ ನಿಲ್ಲಲೇಬೇಕೆಂದೇನಿಲ್ಲ. ಯಾವುದೇ ಪ್ರಕರಣದಲ್ಲಿಯೂ ಅದು ನಿರ್ಧರಿಸುವ `ಪ್ರಾಮುಖ್ಯತೆ~ಗೆ ಸಂಬಂಧಿಸಿದಂತೆ ಅದು ಪ್ರತಿಕ್ರಿಯಿಸಲೂಬಹುದು.

ಈ ಎಲ್ಲಾ ಗೊಂದಲ, ಕ್ಲೀಷೆಗಳ ಬಗ್ಗೆ ರಾಜಕೀಯ ಪಕ್ಷಗಳು ಚರ್ಚಿಸಿ ಒಂದು ನಿರ್ಧಾರಕ್ಕೆ ಬರಬೇಕಿದೆ. ಆದರೆ ರಾಜಕೀಯ ಪಕ್ಷಗಳ ಮುಖಂಡರುಗಳಿಗೆ ಇಂತಹ ವಿಷಯಗಳಿಗೆಲ್ಲಾ ಪುರುಸೊತ್ತಾದರೂ ಎಲ್ಲಿದೆ. ಈ ನಾಯಕರೆಲ್ಲಾ ನಿಜವಾದ ಸಮಸ್ಯೆ ಮತ್ತು ವಾಸ್ತವಗಳನ್ನೆಲ್ಲಾ ಬಿಟ್ಟು ತಮ್ಮತಮ್ಮಳಗೆ ಕಿತ್ತಾಡುವುದರಲ್ಲಿಯೇ ತಲ್ಲೆನರಾಗಿಬಿಟ್ಟಿದ್ದಾರೆ.

ಇಂತಹ ಗಂಭೀರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಅಲ್ಲಿ ಈಗಿರುವ ನೇತಾರರಿಗೆ ಸ್ಪಷ್ಪ ಪರಿಜ್ಞಾನವೂ ಇದ್ದಂತಿಲ್ಲ. ದೆಹಲಿಯಲ್ಲಿರುವ ಕಾಂಗ್ರೆಸ್, ಬಿಜೆಪಿಯಂತಹ ರಾಜಕೀಯ ಪಕ್ಷಗಳ ಮುಖಂಡರು ಈಶಾನ್ಯ ರಾಜ್ಯಗಳ ಸಮಸ್ಯೆಗಳ ಆಳಕ್ಕೆ ಇಳಿಯುವುದೇ ಕಡಿಮೆ.

ಅಂತಹ ಸಮಸ್ಯೆಗಳು ಬಿಗಡಾಯಿಸಿದಾಗಲೂ ತೇಪೆ ಹಾಕಿ ಕೈತೊಳೆದುಕೊಳ್ಳುವವರೇ ಹೆಚ್ಚು. ಈಶಾನ್ಯ ಪ್ರದೇಶದಲ್ಲಿ ನಾಗಾಲ್ಯಾಂಡ್ ದೊಡ್ಡ ರಾಜ್ಯವೇ ಆಗಿದೆ. ಭಾರತದ ಒಕ್ಕೂಟ ವ್ಯವಸ್ಥೆಯ ಒಳಗೇ ನಾಗಾಲ್ಯಾಂಡ್‌ಗೆ ಇನ್ನಷ್ಟೂ ಅಧಿಕಾರ ಕೊಡಬೇಕೆ, ಬೇಡವೆ ಎಂಬ ಬಗ್ಗೆ ಕಳೆದ ಹಲವು ದಶಕಗಳಿಂದ ಮಾತುಕತೆ, ಸಂಧಾನ, ಚರ್ಚೆ ನಡೆಯುತ್ತಲೇ ಇವೆ. ಆದರೆ ಈವರೆಗೂ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.

ಅರುಣಾಚಲ ಪ್ರದೇಶವಂತೂ ಚೀನಾ ಗಡಿಗೆ ಹೊಂದಿಕೊಂಡಂತೆಯೇ ಇದೆ. ವಿಶೇಷವೆಂದರೆ ಚೀನಾದ ಆಡಳಿತಗಾರರು ಅರುಣಾಚಲ ಪ್ರದೇಶದ ಮಂದಿಗೆ ಪ್ರತ್ಯೇಕವಾದ ವೀಸಾ ನೀಡುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿಯೂ ಚೀನಾ ಇದೇ ರೀತಿ ನಡೆದುಕೊಂಡಿದೆ. ಆದರೆ ಇದರ ವಿರುದ್ಧ ಕಟುವಾಗಿಯೇ ನಡೆದುಕೊಳ್ಳಬೇಕಿದ್ದ ಭಾರತ ಸರ್ಕಾರ ಮಾಡಿದ್ದಾದರೂ ಏನು?

ಮಣಿಪುರದಲ್ಲಂತೂ ಸೂರ್ಯ ಮುಳುಗಿದ ಮೇಲೆ `ಕರ್ಫ್ಯೂ~ ಜಾರಿಯಲ್ಲಿರುತ್ತದೆ. ಹಲವಾರು ವರ್ಷಗಳಿಂದ ಈ ಪದ್ಧತಿ ಇರುವುದರಿಂದ ಜನಸಾಮಾನ್ಯರು ಇದಕ್ಕೆ ಒಗ್ಗಿ ಹೋಗಿದ್ದಾರೆ ! ಆದರೆ ಅಲ್ಲೊಬ್ಬಳಿದ್ದಾಳೆ, ಆಕೆ ಇರೊಮ್ ಚಾನು ಶರ್ಮಿಳಾ. `ಸೇನೆಗೆ ವಿಶೇಷಾಧಿಕಾರ ಕಾಯ್ದೆ~ಯನ್ನು ತೆಗೆದುಹಾಕಬೇಕೆಂದು ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಉಪವಾಸ ನಡೆಸುತ್ತಿದ್ದಾಳೆ.

ಆದರೆ ದೆಹಲಿಯಲ್ಲಿ ಕುಳಿತಿರುವವರು ಸೇನಾಧಿಕಾರಿಗಳನ್ನೇ ಹೆಚ್ಚಾಗಿ ನಂಬಿಕೊಂಡಿರುವುದರಿಂದ ಅವರು ಈ ಉಗ್ರ ಕಾಯ್ದೆಯನ್ನು ಒಂದಿನಿತು ಸಡಿಲಗೊಳಿಸಲೂ ಇಚ್ಛಿಸುತ್ತಿಲ್ಲ. ಕೆಲವು ವರ್ಷಗಳ ಹಿಂದೆ ಈ ಕುರಿತು ವರದಿ ನೀಡಲು ಸಮಿತಿಯೊಂದನ್ನು ಕೇಂದ್ರ ಸರ್ಕಾರ ನೇಮಿಸಿತ್ತು. ಆಗ ಆ ಸಮಿತಿಯು ಈ ವಿಶೇಷ ಕಾಯ್ದೆಯನ್ನು ಹಿಂತೆಗೆದುಕೊಳ್ಳಬೇಕೆಂದು ಸರ್ಕಾರಕ್ಕೆ ಸಲಹೆ ಮಾಡಿತ್ತು. ಆದರೆ ಅಂತಿಮದಲ್ಲಿ ಸೇನಾಧಿಕಾರಿಗಳ ಮಾತೇ ಮೇಲುಗೈ ಸಾಧಿಸಿತ್ತು.

ಮೇಘಾಲಯದಲ್ಲಂತೂ ಜನಾಂಗೀಯ ಪ್ರಶ್ನೆ ಇನ್ನಿಲ್ಲದಂತೆ ಕಾಡುತ್ತಿದೆ, ನಿಜ. ಆದರೆ ಆ ರಾಜ್ಯದ ಜನರು ಹಿಂದಿನ ರೌರವ ನರಕದ ಕಥೆಗಳನ್ನು ಮರೆತಿಲ್ಲ. ಈಗಿನ ಶಾಂತ ವ್ಯವಸ್ಥೆಗೆ ಹೊಂದಿಕೊಂಡಿದ್ದಾರೆ. ಹೀಗಾಗಿ ಮೇಘಾಲಯದಲ್ಲಿ `ಕೊಕ್ರಝಾರ್~ನಂತಹ ಗಲಭೆಗಳನ್ನು ಕಾಣಲು ಸಾಧ್ಯವಿಲ್ಲ. ಪ್ರತ್ಯೇಕತಾವಾದದ ಹೆಸರಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಬಾಂಗ್ಲಾ ಮತ್ತು ಮ್ಯೋನ್ಮಾರ್‌ಗಳಿಂದ ಹಿಂದಿನಂತೆ ಬೆಂಬಲ ಸಿಗುತ್ತಿಲ್ಲ. ಇಲ್ಲಿನ ಬಂಡುಕೋರರಿಗೆ ಅಲ್ಲಿದ್ದ ಅಡಗುತಾಣಗಳು ಕಡಿಮೆಯಾಗಿವೆ.

ಈಶಾನ್ಯ ರಾಜ್ಯಗಳ ಹಲವು ಸಮಸ್ಯೆಗಳಿಗೆ ಅಕ್ರಮ ನುಸುಳುಕೋರರೇ ಕಾರಣ ಎನ್ನುವುದರಲ್ಲಿ ಅತಿಶಯೋಕ್ತಿ ಏನಿಲ್ಲ. ಐವತ್ತರ ದಶಕದಲ್ಲಿ ಇಂತಹ ನುಸುಳುಕೋರರಿಗೆ ಸ್ವತಃ ಕಾಂಗ್ರೆಸ್ ಪಕ್ಷವೇ ಅಭಯ ಹಸ್ತ ನೀಡಿತ್ತೆನ್ನುವುದೊಂದು ವಿಪರ್ಯಾಸ. ಆದರೆ ಇದು ನಿಜ. ಹಿಂದೆ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ದೇವಕಾಂತ್ ಬರುವಾ ಅವರು ಹಿಂದೊಮ್ಮೆ ನನ್ನೊಡನೆ ಮಾತನಾಡುತ್ತಿರುವಾಗ ನಮ್ಮ ಕ್ಷೇತ್ರಗಳಲ್ಲಿ `ಅಲಿ~ (ಮುಸ್ಲಿಮರು)ಗಳು ಮತ್ತು `ಕೂಲಿ~ (ಬಿಹಾರದಿಂದ ಬಂದ ಕಾರ್ಮಿಕರು) ಗಳಿದ್ದಾರೆ. ಚುನಾವಣೆಗಳಲ್ಲಿ ಗೆಲ್ಲಲು ನಮಗೆ ಇಷ್ಟೇ ಸಾಕು ಎಂದಿದ್ದು ಇವತ್ತಿಗೂ ನನಗೆ ನೆನಪಾಗುತ್ತಿದೆ.

ಚುನಾವಣಾ ಸಂದರ್ಭದಲ್ಲಾದರೂ ನುಸುಳುಕೋರ ವಿದೇಶಿಯರನ್ನು ಗುರುತಿಸಿ ಅಂತಹವರ ಹೆಸರನ್ನು ಮತಪಟ್ಟಿಯಿಂದ ತೆಗೆದು ಹಾಕುವುದಕ್ಕೆ ಸಂಬಂಧಿಸಿದಂತೆ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಮತ್ತು ಅಖಿಲ ಅಸ್ಸಾಂ ವಿದ್ಯಾರ್ಥಿ ಒಕ್ಕೂಟ (ಎಎಎಸ್‌ಯು) ನಡುವೆ ನಡೆದಿದ್ದ ಒಪ್ಪಂದವನ್ನು ಕಾಂಗ್ರೆಸ್ ಆಡಳಿತಗಾರರು ಜಾರಿಗೆ ತರಬೇಕಿತ್ತು.

ಆದರೆ ಪ್ರಸಕ್ತ ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೊಯ್ ಅವರಿಗೂ ಇದು ಬೇಕಾಗಿಲ್ಲ. ಏಕೆಂದರೆ ಈ ಸಲ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರುವುದಕ್ಕೆ ಸಂಬಂಧಿಸಿದಂತೆ ಚುನಾವಣೆಯಲ್ಲಿ ಇಂತಹ ನುಸುಳುಕೋರರ ಪಾತ್ರ ಇತ್ತು ತಾನೆ. ಹಿಂದಿನ ಎರಡು ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಗೆಲುವಿನಲ್ಲಿ ಇಂತಹ ಮತದಾರರ ಪಾತ್ರವೇ ಬಲು ದೊಡ್ಡದು ಎನ್ನುವುದು ಆ ಪಕ್ಷಕ್ಕೆ ಗೊತ್ತಿಲ್ಲದ್ದೇನೂ ಅಲ್ಲ.

ಕಿತ್ತು ತಿನ್ನುವ ಬಡತನ, ನಿರುದ್ಯೋಗ ಇತ್ಯಾದಿ ಆರ್ಥಿಕ ಸಮಸ್ಯೆಗಳಿಂದ ಪಾರಾಗಲು ಬಾಂಗ್ಲಾ ದೇಶಿಯರು ಕದ್ದು ಮುಚ್ಚಿ ಗಡಿದಾಟಿ ಭಾರತದೊಳಗೆ ಬರುತ್ತಾರೆ ಎನ್ನುವುದಂತು ನಿಜ. ಅವರು ಇಲ್ಲಿ ಕೆಲಸ ಮಾಡಲು `ಪರವಾನಗಿ~ ನೀಡಿದ್ದೇ ಆದರೆ ಅವರು ದುಡಿದು ಸಿಗುವ ಹಣ ತೆಗೆದುಕೊಂಡು ತಮ್ಮ ದೇಶಕ್ಕೆ ಹಿಂತಿರುಗಬಹುದು.

ಆದರೆ ಅಂತಹದ್ದೊಂದು ಅವಕಾಶ ಅಥವಾ ವ್ಯವಸ್ಥೆಯೂ ಈಗ ಇಲ್ಲ. ಪ್ರಸಕ್ತ ಈಶಾನ್ಯ ರಾಜ್ಯಗಳ ಹೊತ್ತಿ ಉರಿಯುತ್ತಿರುವ ಸಮಸ್ಯೆಗೆ ಕೇವಲ ಇಂತಹ ಬಡವರತ್ತಲೇ ಬೆಟ್ಟು ಮಾಡಿ ತೋರಿಸುವ ಅಗತ್ಯವೂ ಇಲ್ಲ. ಆದರೆ ಈ ಎಲ್ಲದರ ಬಗ್ಗೆಯೂ ಕೇಂದ್ರ ಸರ್ಕಾರ ಗಂಭೀರವಾಗಿ ಚಿಂತಿಸಬೇಕು, ಕಾರ್ಯೋನ್ಮುಖವಾಗಬೇಕಾದ ಅಗತ್ಯವಿದೆ ಎನ್ನುವುದಂತು ನಿಜ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT