ಆ ಶಾಲೆಗೆ ಸರ್ಕಾರದ ಯಾವ ಸಹಾಯವೂ ಇಲ್ಲ, ಮಾನ್ಯತೆ ಮಾತ್ರ ನೀಡಿದೆ. ಅಂಥ ಹಿಂದುಳಿದ ಪ್ರದೇಶದಲ್ಲಿ, ಅಲ್ಲಿಯ ಮಕ್ಕಳಿಗೆ ಆದರ್ಶ ಶಿಕ್ಷಣ ನೀಡುತ್ತಿರುವ ಹಂಪಣ್ಣ ದಂಪತಿಗಳಿಗೆ ಇಂದಿಗೂ ಕಷ್ಟದ ಜೀವನವೇ. ದಿನದಿನಕ್ಕೂ ಹಣ ತಂದು ಸಂಸ್ಥೆಯ ಹೊಟ್ಟೆ ತುಂಬಿಸುವ ಚಿಂತೆ. ಈಗಲೂ ಕೂಲಿ ಮಾಡಿ ಬಂದ ಹಣವನ್ನು ಶಾಲೆಗೆ ಸುರಿಯುತ್ತಾರೆ. ಆದರೆ ಆ ಶಾಲೆಯನ್ನು ಒಮ್ಮೆ ನೋಡಬೇಕು. ಪಟ್ಟಣದ ಶಾಲೆಗಳಲ್ಲಿ ಕೂಡ ಕಾಣದ ಸ್ವಚ್ಛತೆ ಅಲ್ಲಿ ಕಾಣುತ್ತದೆ. ಸುಂದರವಾದ ತರಗತಿಗಳು, ಮುಂದೆ ಮೈದಾನ, ಅಲ್ಲಲ್ಲಿ ಮಕ್ಕಳಿಗೆ ಪ್ರಚೋದನೆ ನೀಡುವ ನೀತಿ ಮಾತುಗಳು ರಾರಾಜಿಸುತ್ತವೆ. ಬಾಲಕರಿಗೆ, ಬಾಲಕಿಯರಿಗೆ ಪ್ರತ್ಯೇಕ, ಸ್ವಚ್ಛವಾದ ಶೌಚಾಲಯಗಳು, ಪ್ರೀತಿಯಿಂದ ಪಾಠಮಾಡುವ ಶಿಕ್ಷಕಿಯರು ಮತ್ತು ಕಲಿಯಲು ಸಿದ್ಧವಾಗಿ ನಿಂತಿರುವ ಮುಗ್ಧ ಮಕ್ಕಳು ವಾತಾವರಣವನ್ನು ಆದರ್ಶವಾಗಿಸಿವೆ.