ಹಿಂದೆ ಸಾಹಿತಿಗಳಿಗೆ, ಕವಿಗಳಿಗೆ, ಕಲಾವಿದರಿಗೆ ರಾಜಾಶ್ರಯ ಬಹುದೊಡ್ಡ ಭರವಸೆಯಾಗಿತ್ತು. ಹೊಟ್ಟೆಪಾಡಿಗೆ ಚಿಂತೆಪಡದೇ ತಮ್ಮ ಸೃಜನಶೀಲತೆ ವೃದ್ಧಿಸಿಕೊಳ್ಳಲು ರಾಜರ ಆಶ್ರಯ ಸಹಾಯ ಮಾಡುತ್ತಿತ್ತು. ಅದು ಬಹಳಷ್ಟು ಬಾರಿ ಯಜಮಾನ – ಕೆಲಸಗಾರನ ಸಂಬಂಧವಾಗಿರದೇ ಆತ್ಮೀಯ ಗೆಳೆಯನ ಸ್ನೇಹದಂತಿತ್ತು. ಭೋಜರಾಜ ಮತ್ತು ಕಾಳಿದಾಸರ ಸ್ನೇಹ, ಅಕ್ಬರ್ ಮತ್ತು ತಾನಸೇನ್ನ ಆತ್ಮೀಯತೆ ಇದಕ್ಕೆ ಮಾದರಿಯಾದಂಥವುಗಳು.
ಕೆಲವೊಂದು ಬಾರಿ ಆಸ್ಥಾನ ಕವಿಗಳು, ಸಾಹಿತಿಗಳು ತಮಗೆ ಆಶ್ರಯ ನೀಡಿದ ರಾಜನಿಗೆ ಕೃತಜ್ಞತೆ ಸಮರ್ಪಿಸಲು ಅವನನ್ನೇ ಹೊಗಳಿ, ಹಾಡಿ ಅತಿರೇಕಕ್ಕೆ ಹೋದದ್ದೂ ಉಂಟು. ಅದೇ ರೀತಿ ತಾನು ಯಾವಾಗಲೂ ಯಜಮಾನನೇ ಎಂದು ತೋರುವ ದರ್ಪದಲ್ಲಿ ಕಲಾವಿದರಿಗೆ ತೋರುವ ಗೌರವವನ್ನು ಬಹುದೊಡ್ಡ ಉಪಕಾರ ಎಂದು ಪ್ರದರ್ಶಿಸುವ ರಾಜರೂ ಇದ್ದರು. ಗಾಯನ ಸಾಮ್ರಾಜ್ಯದ ಚಕ್ರವರ್ತಿ ಎಂದು ಕರೆಯಿಸಿಕೊಳ್ಳುತ್ತಿದ್ದ ಪಂಡಿತ ಅಲ್ಲಾದಿಯಾಖಾನರ ಮನೆತನದಲ್ಲಿ ಹಿಂದೆ ಶಾದೀಖಾನ್ ಎಂಬ ಮಹಾನ್ ಗಾಯಕರಿದ್ದರಂತೆ.
ಅವರ ಕೀರ್ತಿ ಭಾರತದೆಲ್ಲೆಡೆ ಹರಡಿತ್ತು. ಅದನ್ನು ಕೇಳಿ ತಿಳಿದ ಉತ್ತರ ಭಾರತದ ರಾಜನೊಬ್ಬ ಅವರನ್ನು ತನ್ನ ರಾಜ್ಯಕ್ಕೆ ಕರೆಯಿಸಿಕೊಂಡ. ಅವರನ್ನು ತನ್ನ ಅರಮನೆಗೆ ಕರೆದೊಯ್ದು ಕೇವಲ ತನ್ನ ಪರಿವಾರ ಹಾಗೂ ಆಸ್ಥಾನಿಕರಿಗೆ ಒಂದು ಗಾಯನ ಕಾರ್ಯಕ್ರಮ ಏರ್ಪಡಿಸಿದ. ಅಲ್ಲಿ ಶಾದೀಖಾನ್ ಅದ್ಭುತವಾಗಿ ಹಾಡಿದರು. ರಾಜನಿಗೆ ಅಷ್ಟರಿಂದಲೇ ತೃಪ್ತಿಯಾಗಲಿಲ್ಲ. ಮರುದಿನ ಅರಮನೆಯ ಮುಂಭಾಗದಲ್ಲಿ ಇಡೀ ನಗರದ ಜನಕ್ಕೆ ಒಂದು ಕಾರ್ಯಕ್ರಮ ಆಯೋಜಿಸಿದ. ಸಹಸ್ರಾರು ಜನ ಬಂದರು.
ಅಂದಂತೂ ಖಾನ್ ಸಾಹೇಬರ ಗಾಯನ ಅತ್ಯದ್ಭುತವಾಗಿತ್ತು. ಜನ ಹುಚ್ಚೆದ್ದು ಕುಣಿದರು. ರಾಜನಿಗೆ ಸಂಪೂರ್ಣ ತೃಪ್ತಿಯಾಯಿತು. ತಕ್ಷಣವೇ ಅಷ್ಟೊಂದು ಜನರ ಮುಂದೆ ಶಾದೀಖಾನ್ರಿಗೆ ಸನ್ಮಾನ ಮಾಡಲು ನಿರ್ಧರಿಸಿದ. ಗಾಯಕರಿಗೆ ಗೌರವ ಸಲ್ಲಿಸುವುದರ ಜೊತೆಗೆ ತನ್ನ ಘನತೆಯನ್ನು, ಉದಾರತೆಯನ್ನು ತೋರಿಸುವುದು ಕೂಡ ಮುಖ್ಯವಾಗಿತ್ತು.
ತನ್ನ ಗೌರವದ ದ್ಯೋತಕವಾಗಿ ರಾಜ ನೂರಾರು ರೇಷ್ಮೆಯ ಚೀಲಗಳಲ್ಲಿ ಬೆಳ್ಳಿಯ ನಾಣ್ಯಗಳನ್ನು ತುಂಬಿ ಅವುಗಳನ್ನು ಅಲಂಕರಿಸಿದ ಆನೆಯ ಮೇಲೆ ಹೊರಿಸಿ ಆ ಚೀಲಗಳ ಮಧ್ಯೆ ಪಂಡಿತ ಶಾದೀಖಾನ್ ಅವರನ್ನು ಕುಳ್ಳಿರಿಸಿ ಸತ್ಕರಿಸಿದ. ಆಗ ಎಲ್ಲರಿಗೆ ಕೇಳುವಂತೆ ಹೇಳಿದ, ‘ನಿಮಗೆ ಹಿಂದೆ ಹಲವಾರು ಜನರು ಮರ್ಯಾದೆ ತೋರಿರಬಹುದು. ಆದರೆ, ಆನೆಯ ಮೇಲೆ ಕುಳ್ಳಿರಿಸಿ, ಆನೆ ಹೊರುವಷ್ಟು ಹಣವನ್ನು ಕೊಡುವ ರಾಜನನ್ನು ನೋಡಿದ್ದು ನಿಮಗೆ ಇದೇ ಮೊದಲನೇ ಸಲವಿರಬಹುದಲ್ಲವೇ?’ ಶಾದೀಖಾನ್ರು ನಸುನಕ್ಕು, ‘ಹೌದು ಮಹಾಸ್ವಾಮಿ’ ಎಂದರು.
ಮಹಾನ್ ಗಾಯಕರ ಮೆರವಣಿಗೆ ನಗರದಲ್ಲಿ ನಡೆಯಿತು. ಆನೆಯ ಮೇಲೆ ಕುಳಿತಿದ್ದ ಶಾದೀಖಾನ್ ಅವರು ಒಂದೊಂದೇ ಹಣದ ಚೀಲವನ್ನು ತೆಗೆದು ಅದರಲ್ಲಿಯ ನಾಣ್ಯಗಳನ್ನು ಒಂದೊಂದಾಗಿ ರಸ್ತೆಯ ಮೇಲೆ ಎಸೆಯುತ್ತ ಬಂದರು. ಮೆರವಣಿಗೆ ಮುಗಿದು ಅರಮನೆಯ ಹತ್ತಿರ ಬರುವಷ್ಟರಲ್ಲಿ ಒಂದೂ ನಾಣ್ಯ ಉಳಿದಿರಲಿಲ್ಲ. ಈ ವಿಷಯ ರಾಜನಿಗೆ ತಲುಪಿತ್ತು.
ಆಗ ಶಾದೀಖಾನ್ ವಿನಯದಿಂದಲೇ ರಾಜನಿಗೆ ಕೇಳಿದರು, ‘ಮಹಾರಾಜ್, ಆನೆ ಹೊರುವಷ್ಟು ದೊರೆತ ನಾಣ್ಯಗಳನ್ನು ರಸ್ತೆಯಲ್ಲಿ ತೂರಿಬಂದ ಗಾಯಕನನ್ನು ನೀವು ನೋಡಿದ್ದು ಇದೇ ಮೊದಲ ಬಾರಿಯಲ್ಲವೇ?’ ರಾಜನಿಗೆ ತನ್ನ ಮೂರ್ಖತನದ ಅರಿವಾಗಿ ಅವರನ್ನು ಮತ್ತೊಮ್ಮೆ ಪ್ರಾಮಾಣಿಕವಾಗಿ ಗೌರವಿಸಿದ.
ಅಧಿಕಾರಿಗಳಿಗೆ, ಅಧಿಕಾರದಲ್ಲಿ ಇರುವವರಿಗೆ, ಕಲಾವಿದರನ್ನು, ಸಜ್ಜನರನ್ನು ಗೌರವಿಸುವಾಗ ವಿನಯವಿರಬೇಕು, ಅವರು ತಮ್ಮ ಗೌರವವನ್ನು ಸ್ವೀಕರಿಸಲು ಒಪ್ಪಿದರಲ್ಲ ಎಂಬ ಧನ್ಯತೆ ಇರಬೇಕು. ತಾವು ಅವರಿಗೆ ಗೌರವ ತೋರಿ ಮಹೋಪಕಾರ ಮಾಡಿದ್ದೇವೆ ಎನ್ನುವ ಅಹಂಕಾರ ಭಾವ ಸರಿಯಲ್ಲ. ಅಂತೆಯೇ ಗೌರವ ಬಂದರೆ ಸಾಕು ಎಂಬಂತೆ ಅಧಿಕಾರಿಗಳನ್ನು, ಗದ್ದುಗೆಗಳಲ್ಲಿದ್ದವರನ್ನು ಓಲೈಸುವ ಲಕ್ಷಣವೂ ಕಲಾವಿದರಿಗೆ ಗೌರವ ತರದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.