ಲೋಕಸಭಾ ಚುನಾವಣಾ ಪ್ರಕ್ರಿಯೆಯ ಕೊನೆಯ ಹಂತದಲ್ಲಿದ್ದೇವೆ. ನಾವು ಇದೀಗ ನೋಡುತ್ತಿರುವಂತೆಯೇ ಚುನಾವಣೆಯಲ್ಲಿ ಜಾತಿ ಮತ್ತು ಹಣದ ಪಾತ್ರ ಎದ್ದು ಕಾಣುತ್ತಿದೆ. ಜಾತಿಯ ಪಾತ್ರವಂತೂ ಸಹಜ ಎನಿಸಿ ಬಿಟ್ಟಿದೆ. ದೇಶಕ್ಕೆ ಸ್ವಾತಂತ್ರ ಸಿಕ್ಕಿ 67 ವರ್ಷಗಳು ಕಳೆದಿವೆಯಲ್ಲಾ, ಅದರ ಜತೆಜತೆಗೇ ಇವೆಲ್ಲವೂ ಬೆಳೆದು ಬಂದು ಬಿಟ್ಟಿವೆ. ಕೊನೆಯದಾಗಿ ಭಾರತೀಯ ಜನತಾ ಪಕ್ಷವು ಧರ್ಮ ಅಥವಾ ಮತೀಯ ವಿಚಾರವನ್ನೂ ಇದರೊಳಗೆ ಸೇರಿಸಿ ಬಿಟ್ಟಿದೆ.
ಐವತ್ತರ ದಶಕದ ಆರಂಭದಲ್ಲಿ ಚುನಾವಣೆಗೆ ನಿಂತವರು ಧರ್ಮದ ಹೆಸರಲ್ಲಿ ಮತಯಾಚನೆ ನಡೆಸಿದ್ದರೆ ಅದರ ಹಿಂದಿನ ಕಾರಣ ಅರ್ಥವಾಗುತಿತ್ತು. ಏಕೆಂದರೆ 1947ರ ಆಗಸ್ಟ್ನಲ್ಲಿ ದೇಶವು ಧರ್ಮದ ನೆಪದಲ್ಲಿಯೇ ಇಬ್ಭಾಗವಾಯಿತಲ್ಲ. ಆಗ ನಡೆದ ಹಿಂಸಾಚಾರಗಳಿವೆಯಲ್ಲಾ ಅದು, ಜಗತ್ತಿನ ಬಲುದೊಡ್ಡ ನರಮೇಧಗಳಲ್ಲಿ ಒಂದೆನಿಸಿಬಿಟ್ಟಿತು. ಸುಮಾರು ಮೂರೂವರೆ ಕೋಟಿಗೂ ಹೆಚ್ಚು ಜನರ ಸಾಮೂಹಿಕ ವಲಸೆ ನಡೆದು ಹೋಯಿತು. ಆ ಹಿನ್ನೆಲೆಯಲ್ಲಿ ಆ ದಿನಗಳ ಚುನಾವಣೆಯಲ್ಲಿ ಮತೀಯ ವಿಚಾರಗಳು ಪ್ರಾಮುಖ್ಯ ಪಡೆದುಕೊಂಡಿದ್ದರೆ ಅಚ್ಚರಿ ಎನಿಸುತ್ತಿರಲಿಲ್ಲ, ಬಿಡಿ. ಆದರೆ ಈಗ ?
ರಾಜಕಾರಣದಲ್ಲಿ ಯಾವುದೇ ಕಾರಣಕ್ಕೂ ಧಾರ್ಮಿಕ ವಿಷಯಗಳನ್ನು ಬೆರೆಸಬಾರದು ಎಂಬುದು ಮಹಾತ್ಮ ಗಾಂಧೀಜಿ ಮತ್ತು ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಅವರ ಆಶಯವಾಗಿತ್ತು. ಸ್ವಾತಂತ್ರ್ಯಾನಂತರದ ಕೆಲವು ವರ್ಷಗಳಲ್ಲಿ ಈ ನೆಲದ ರಾಜಕಾರಣ ಆ ಇಬ್ಬರು ಮಹನೀಯರ ಆಶಯಗಳಿಗೆ ಪೂರಕವಾಗಿಯೇ ಇತ್ತು. ಅರವತ್ತರ ದಶಕದಲ್ಲಿ ಚೀನಾದ ಎದುರು ಭಾರತ ಸೋತಿತಲ್ಲಾ, ಆಗ ನಡೆದ ಚುನಾವಣೆಯ ಸಂದರ್ಭದಲ್ಲಿ ಆ ಸೋಲಿನ ಸಂಗತಿಯೇ ಮುಖ್ಯ ವಿಷಯವಾಗಿತ್ತು. ನೆಹರು ಅವರ ನಿರ್ಲಕ್ಷ್ಯ ಧೋರಣೆಯಿಂದಾಗಿ ಭಾರತದ ಸೇನೆ ಅಂದು ಸರ್ವ ರೀತಿಯಿಂದಲೂ ಸಿದ್ಧಗೊಂಡಿರಲಿಲ್ಲ. ಹೀಗಾಗಿ ಅಂತಹದ್ದೊಂದು ಸೋಲು ಭಾರತಕ್ಕೆ ಎದುರಾಯಿತು ಎಂಬ ಭಾವನೆ ಮತದಾರರಲ್ಲಿ ಕಂಡು ಬಂದಿತ್ತು.
ಎಪ್ಪತ್ತರ ದಶಕದಲ್ಲಿ ಆಗಿನ ಪ್ರಧಾನಿ ಇಂದಿರಾಗಾಂಧಿಯವರು ತುರ್ತುಪರಿಸ್ಥಿತಿ ಹೇರಿದ್ದರು. ಅದನ್ನು ಪ್ರತಿಭಟಿಸಿದ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಯೇ ಇಲ್ಲದೆ ಜೈಲಿಗೆ ಕಳುಹಿಸಲಾಗಿತ್ತು. ಆಗ ನಡೆದ ಚುನಾವಣೆಯಲ್ಲಿ ತುರ್ತುಪರಿಸ್ಥಿತಿಯ ಕರಾಳ ಸಂಗತಿಗಳೇ ಮುಖ್ಯ ವಿಷಯಗಳಾಗಿದ್ದವು. ಉತ್ತರ ಭಾರತದಲ್ಲಿ ಕಾಂಗ್ರೆಸ್ ಆಗ ಮೂಲೆ ಪಾಲಾಯಿತು. ಜನತಾ ಪಕ್ಷದೊಳಗಿನ ಕಿತ್ತಾಟವೇ ಮತ್ತೆ 1980ರಲ್ಲಿ ಇಂದಿರಾಗಾಂಧಿಯವರು ಅಧಿಕಾರಕ್ಕೆ ಬರಲು ಕಾರಣವಾಯಿತು. ಅಂದು ಜನ ಇಷ್ಟ ಪಟ್ಟು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಲ್ಲ, ಜನತಾ ಪಕ್ಷದ ಕಿತ್ತಾಟದಿಂದ ರೋಸಿ ಹೋಗಿ ಬೇರೆ ದಾರಿಯೇ ಇಲ್ಲದೆ ಜನ ಆ ರೀತಿ ನಡೆದುಕೊಂಡಿದ್ದರು. ಈ ಎಲ್ಲಾ ಸಂದರ್ಭಗಳಲ್ಲಿಯೂ ಜಾತಿ ಪ್ರಧಾನ ಪಾತ್ರವನ್ನೇನೂ ವಹಿಸಿಲ್ಲ ಬಿಡಿ.
ಆದರೆ ಚುನಾವಣೆಯಲ್ಲಿ ಹಣದ ಪಾತ್ರವನ್ನು ಅಲ್ಲಗಳೆಯುವಂತೆಯೇ ಇಲ್ಲ. 1951ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆದಿದ್ದಾಗ ಅಭ್ಯರ್ಥಿಯೊಬ್ಬರ ಖರ್ಚುವೆಚ್ಚ 40 ಲಕ್ಷ ರೂಪಾಯಿಗಳನ್ನು ಮೀರಬಾರದೆಂದು ಚುನಾವಣಾ ಆಯೋಗ ಹೇಳಿತ್ತು. ಇವತ್ತು ಅದನ್ನು ಎಪ್ಪತ್ತು ಲಕ್ಷ ರೂಪಾಯಿಗಳಿಗೆ ಏರಿಸಲಾಗಿದೆ. ಇವತ್ತು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಸರಾಸರಿ ಖರ್ಚುವೆಚ್ಚ ಮೂರು ಕೋಟಿ ರೂಪಾಯಿಗಳನ್ನೂ ಮೀರಬಹುದು ಎಂಬುದು ಒಂದು ಅಂದಾಜು. ಕೆಲವರು ಇದರ ಹಲವು ಪಟ್ಟು ಹೆಚ್ಚು ಖರ್ಚು ಮಾಡುತ್ತಿದ್ದರೆ ಅಚ್ಚರಿ ಏನಿಲ್ಲ.
ಚುನಾವಣಾ ಆಯೋಗ ಅಭ್ಯರ್ಥಿಗಳ ವೆಚ್ಚಗಳ ಮೇಲೆ ಕಡಿವಾಣ ಹಾಕುವ ದಿಸೆಯಲ್ಲಿ ಕಾನೂನುಗಳ ಚಾವಟಿಯನ್ನು ಹೊಂದಿದೆ. ಆದರೆ ಎಲ್ಲೆ ಮೀರಿ ಖರ್ಚು ಮಾಡಿದ ಕಾರಣಕ್ಕಾಗಿ ಈವರೆಗೆ ಈ ಕಾನೂನಿನ ನೆರವಿನಿಂದ ಆಯೋಗ ಯಾರನ್ನೂ ಅನರ್ಹಗೊಳಿಸಿಲ್ಲ. ಆದರೆ ನಮ್ಮ ದೇಶದ ರಾಜಕೀಯ ಪಕ್ಷಗಳು ಯಾವುದೇ ಕಾನೂನು ಕಟ್ಟಳೆಗಳಿಗೆ ಬದ್ಧವಾಗಿಲ್ಲ. ಇಂತಹ ಪಕ್ಷಗಳ ಅಪ್ರಾಮಾಣಿಕತೆಯೇ ಇವತ್ತಿನ ಬಲು ದೊಡ್ಡ ಸಮಸ್ಯೆಯಾಗಿದೆ. ರಾಜಕೀಯ ಪಕ್ಷಗಳ ಆಂತರಿಕ ವಹಿವಾಟುಗಳನ್ನು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ತರಬೇಕೆಂಬ ಪ್ರಸ್ತಾಪ ಕೇಳಿ ಬರುತ್ತಿದ್ದಂತೆಯೇ ಅದನ್ನು ದೇಶದ ಎಲ್ಲಾ ರಾಜಕೀಯ ಪಕ್ಷಗಳೂ ತೀವ್ರವಾಗಿ ವಿರೋಧಿಸಿದವು.
ಇಂತಹ ಅಂಶಗಳಿಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ಚುನಾವಣಾ ಆಯೋಗ ಬಹಳ ಹಿಂದೆ ಬಿದ್ದಿರುವುದು ವಾಸ್ತವ. ಹೀಗಾಗಿ ಚುನಾವಣೆಯ ಇಂತಹ ಆಗುಹೋಗುಗಳ ಬಗ್ಗೆ ಹದ್ದಿನ ಕಣ್ಣಿಡುವ ದಿಸೆಯಲ್ಲಿ ವಿಶ್ವಾಸಾರ್ಹತೆಯ ಆಯೋಗದ ಅಗತ್ಯವಿದೆ ಎಂದೆನಿಸುತ್ತಿದೆ. ಒಂದು ವೇಳೆ ಇಂತಹದ್ದೊಂದು ಮಸೂದೆ ಮಂಡನೆಯಾಗುತ್ತದೆ ಎಂದಿಟ್ಟುಕೊಳ್ಳಿ, ಅದಕ್ಕೆ ಲೋಕಸಭೆಯ ಯಾವ ಸದಸ್ಯ ಒಪ್ಪಿಗೆ ನೀಡುತ್ತಾನೆ ಹೇಳಿ.
ಇವತ್ತು ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳು ಮನ ಬಂದಂತೆ ಹಣ ಖರ್ಚು ಮಾಡಿರುವುದು ನಿಜ. ಈ ದಿಸೆಯಲ್ಲಿ ಸೂಕ್ಷ್ಮವಾಗಿ ಗಮನಿಸಿದಾಗ ಬಿಜೆಪಿಯ ಬೆನ್ನಿಗೆ ಕಾರ್ಪೊರೇಟ್ ವಲಯ ಹಣದ ಥೈಲಿ ಹಿಡಿದು ನಿಂತಿರುವುದರಿಂದ ಆ ಪಕ್ಷವೇ ಹೆಚ್ಚು ಹಣ ಖರ್ಚು ಮಾಡಿದೆ ಎಂದೆನಿಸುತ್ತಿದೆ. ಒಂದು ವೇಳೆ ನರೇಂದ್ರ ಮೋದಿ ಪ್ರಧಾನಿಯಾದರೆ, ಈ ಕಾರ್ಪೊರೇಟ್ ವಲಯದ ಮಂದಿ
ಆಡಿದ್ದೇ ಆಟ ಎಂದರೆ ಅತಿಶಯೋಕ್ತಿಯಂತೂ ಅಲ್ಲವೇ ಅಲ್ಲ.
ಹಾಗೆ ನೋಡಿದರೆ ಇವತ್ತು ಧಾರ್ಮಿಕ ವಿಷಯಗಳು ಹಿಂದಿನ ಸಾಲಿನಲ್ಲಿವೆ. ನರೇಂದ್ರ ಮೋದಿಯವರು ಹಿಂದುತ್ವ ಎಂಬ ಕೇಂದ್ರದ ಸುತ್ತಲೇ ಗಿರಕಿ ಹೊಡೆಯುತ್ತಿದ್ದಾರೆ ನಿಜ. ಆದರೆ ಅವರು ತಮ್ಮ ಭಾಷಣಗಳಲ್ಲಿ ಆ ವಿಷಯವನ್ನೇ ಕೇಂದ್ರವನ್ನಾಗಿಸಿಕೊಂಡಿಲ್ಲ. ಇದೊಂದು ಗಮನಾರ್ಹ ಸಂಗತಿಯೂ ಹೌದು. ಇದೂ ಒಂದು ತೆರನಾದ ತಂತ್ರಗಾರಿಕೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಿಂದಿನಿಂದಲೂ ತಾನೊಂದು ಸಾಂಸ್ಕೃತಿಕ ಸಂಘ ಎಂದೇ ಬಿಂಬಿಸಿಕೊಂಡು ಬರುತ್ತಿದೆ. ಆದರೆ ಈ ಸಲದ ಚುನಾವಣೆಯಲ್ಲಿ ಅದು ನೇರವಾಗಿಯೇ ಬಿಜೆಪಿ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಆರ್ಎಸ್ಎಸ್ನ ಮುಖ್ಯಸ್ಥ ಮೋಹನ್ ಭಾಗವತ್ ಅವರೇ ಖುದ್ದು ಬಿಜೆಪಿಯ ರಾಷ್ಟ್ರೀಯ ಚುನಾವಣಾ ಸಮಿತಿಯ ಸಭೆಯಲ್ಲಿ ಕುಳಿತು ಅಭ್ಯರ್ಥಿಗಳ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ದೇಶದ ರಾಜಕಾರಣದ ಭವಿಷ್ಯ ಅದೆಷ್ಟು ಆತಂಕಕಾರಿಯಾಗಿದೆ ಎನ್ನುವುದರ ಮುನ್ಸೂಚನೆ ಇದಾಗಿದೆ.
ರಾಜಕೀಯದ ಜತೆಗೆ ಮತೀಯ ವಿಚಾರಗಳು ಬೆರೆತುಕೊಳ್ಳುತ್ತಿರುವುದು ಈಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವುದು ನನ್ನ ಆತಂಕವನ್ನು ಹೆಚ್ಚಾಗಿಸಿದೆ. ಬಿಜೆಪಿಯಂತಹ ಪಕ್ಷ ಇವತ್ತು ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಮಾತನಾಡುತ್ತಾ, ಉದ್ದೇಶಪೂರ್ವಕವಾಗಿಯೇ ಮೌಲಾನಾ ಅಬುಲ್ ಕಲಾಂ ಆಜಾದ್ ಮತ್ತು ಅಬ್ದುಲ್ ಗಫಾರ್ ಖಾನ್ ಅವರಂತಹ ಧೀಮಂತರ ಹೆಸರನ್ನು ಮರೆಯುತ್ತಿದೆ. ಈ ನಾಡಿನಲ್ಲಿ ಹಿಂದೂಗಳೇ ಸರ್ವಮಾನ್ಯರು ಎಂಬ ಸೂಕ್ಷ್ಮ ಬಿಜೆಪಿಯ ಅಂತರಾಳದಲ್ಲಿರುವಂತಿದೆ. ಜಗತ್ತಿನ ಪ್ರತಿಯೊಬ್ಬ ಯಹೂದಿ ಕೂಡಾ ಇಸ್ರೇಲನ್ನು ತನ್ನ ಮಾತೃಭೂಮಿ ಎಂದು ಭಾವಿಸಬಹುದು ಮತ್ತು ಆತ ಯಾವಾಗ ಬೇಕಿದ್ದರು ಇಸ್ರೇಲ್ಗೆ ಬಂದು ಹೋಗಬಹುದು ಎಂಬ ನೀತಿಯನ್ನು ಇಸ್ರೇಲ್ ಸರ್ಕಾರ ಹೊಂದಿದೆ. ಅದೇ ದಿಕ್ಕಿನಲ್ಲಿ ಭಾರತದಲ್ಲಿಯೂ ಈ ಬಲಪಂಥೀಯ ಪಕ್ಷ ಸಾಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ.
ನರೇಂದ್ರ ಮೋದಿಯವರ ಬಲಗೈ ಬಂಟ ಅಮಿತ್ ಷಾ ಅವರ ಈಚೆಗಿನ ಹೇಳಿಕೆಗಳಂತೂ ಬಿಜೆಪಿಯ ಬಲಪಂಥೀಯ ಕಟ್ಟರ್ವಾದಕ್ಕೆ ಇನ್ನಷ್ಟು ಇಂಬು ಕೊಡುವಂತಿದೆ. ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಬಿಜೆಪಿಗೆ ಮತ ಚಲಾಯಿಸುವ ಮೂಲಕ ‘ಸೇಡು’ ತೀರಿಸಿಕೊಳ್ಳಬೇಕೆಂದು ಜನರಿಗೆ ಕರೆ ನೀಡಿದರು. ಅವರು ಪರೋಕ್ಷವಾಗಿ ಮುಸ್ಲಿಮರ ವಿರುದ್ಧವೇ ಮಾತನಾಡಿರುವುದಂತೂ ನಿಜ. ಈ ನಿಲುವು ಏನನ್ನು ಹೇಳುತ್ತದೆ.
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಅಜಮ್ ಖಾನ್ ಎಂಬುವವರು ‘ಮುಸ್ಲಿಮರ ಮೋದಿ’ ಎಂದೆನಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅವರು ಈ ದೇಶದ ಸೇನೆಗೂ ತಮ್ಮ ಹೇಳಿಕೆಯ ಮೂಲಕ ಕೋಮು ಬಣ್ಣ ಹಚ್ಚಲು ಯತ್ನಿಸಿದ್ದನ್ನು ಮರೆಯುವುದೆಂತು. ಪಾಕ್ ವಿರುದ್ಧ ನಡೆದ ಕಾರ್ಗಿಲ್ ಯುದ್ಧದಲ್ಲಿ ಆ ಗಿರಿಶೃಂಗಗಳನ್ನು ಏರಿ ಹೋರಾಡಿದವರು ಭಾರತದ ಸೇನೆಯಲ್ಲಿರುವ ಮುಸ್ಲಿಮರು ಮಾತ್ರ ಎಂಬ ಹೇಳಿಕೆ ನೀಡಿದ್ದರು. ಪಾಕ್ ಸೈನಿಕರನ್ನು ಓಡಿಸಿ, ಆ ಗಿರಿಶಿಖರಗಳನ್ನು ಆಕ್ರಮಿಸಿ ಕುಳಿತವರು ಭಾರತೀಯ ಸೇನೆಯ ಹಿಂದೂಗಳಲ್ಲ, ಮುಸ್ಲಿಮರು ಎಂದೂ ಅವರು ಆವೇಶದಿಂದ ಭಾಷಣ ಮಾಡಿದ್ದರು.
ಅಜಮ್ ಖಾನ್ ಯೋಚನಾ ಸರಣಿ ಅದೆಷ್ಟು ಕೆಟ್ಟದಾಗಿದೆ ಎಂಬುದಕ್ಕೆ ಅವರ ಈ ಚಿಂತನೆಯೇ ನಿದರ್ಶನವಾಗಿದೆ. ಅಂದು ಕಾರ್ಗಿಲ್ನಲ್ಲಿ ಹೋರಾಡಿದ್ದು, ಭಾರತೀಯ ಸೇನೆಯ ವಿವಿಧ ರೆಜಿಮೆಂಟ್ಗಳು ಎಂಬ ಸಂಗತಿ ಅವರಿಗೆ ಗೊತ್ತಿಲ್ಲದಿರುವುದೊಂದು ವಿಪರ್ಯಾಸ. ಆ ರೆಜಿಮೆಂಟ್ಗಳಲ್ಲಿ ಈ ದೇಶದ ಎಲ್ಲಾ ಧರ್ಮ, ಜಾತಿ, ಭಾಷೆಗಳಿಗೆ ಸೇರಿದ ಯೋಧರಿದ್ದರು ಎಂಬುದು ಸತ್ಯ. ಅಂತಹ ಸಮರಗಳಲ್ಲಿ ರೆಜಿಮೆಂಟ್ ಅಥವಾ ಸೇನಾ ತುಕಡಿಯೊಂದು ಗೆಲ್ಲುತ್ತದೆಯೇ ಹೊರತು, ಯಾವುದೋ ಒಂದು ಜಾತಿ ಅಥವಾ ಧರ್ಮಕ್ಕೆ ಸೇರಿದ ಸೈನಿಕನಲ್ಲ ಎಂಬ ಸತ್ಯವನ್ನು ಅಜಮ್ ಖಾನ್ ಅರಿತುಕೊಳ್ಳಬೇಕಿದೆ.
ಕೋಮು ಭಾವನೆಗಳ ವಿಷ ಹರಡುವ ಅಮಿತ್ ಷಾ ಅಥವಾ ಅಜಮ್ ಖಾನ್ ಅವರಂತಹ ವ್ಯಕ್ತಿಗಳು ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಚುನಾವಣಾ ಆಯೋಗ ಅವಕಾಶ ನೀಡಬಾರದು. ಅಂತಹವರಿಗೆ ನೀಡುವ ಶಿಕ್ಷೆ ಕೂಡಾ ಕಠಿಣವಾಗಿರುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಚುನಾವಣಾ ಆಯೋಗದ್ದಾಗಿದೆ.
ಇವತ್ತು ನಡೆಯುತ್ತಿರುವ ಚುನಾವಣೆಯಲ್ಲಿ ಜಾತಿಯ ಪ್ರಭಾವ ಕಡಿಮೆ ಏನೂ ಇಲ್ಲ. ಉಪ ಜಾತಿಗಳ ಸದ್ದು ಹೆಚ್ಚಾಗುತ್ತಿದೆ. ದಲಿತರ ಒಳಗೇ ಹಲವು ಉಪಜಾತಿಗಳಿವೆ. ಈಗಾಗಲೇ ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಎತ್ತರಕ್ಕೇರಿರುವ ದಲಿತರಲ್ಲಿಯೇ ಕೆಲವರು ಸರ್ಕಾರಕ್ಕೆ ನಿರ್ದೇಶನ ನೀಡುತ್ತಿದ್ದಾರೆ. ಮರಾಠರು, ರಜಪುತರು, ಜಾಟರು ಸೇರಿದಂತೆ ಹಲವು ಮೇಲ್ಜಾತಿಗಳು ಚುನಾವಣೆಯಲ್ಲಿ ಪ್ರಭಾವಿಗಳಾಗಿವೆ.
ಅದೇನೇ ಇದ್ದರೂ, ಈ ಸಲದ ಸಾರ್ವತ್ರಿಕ ಚುನಾವಣೆಯು ಒಂದಷ್ಟು ಆಶಾಕಿರಣ ಮೂಡಿಸಿದೆ. ಮನಬಂದಂತೆ ಹಣ ಚೆಲ್ಲುವುದಕ್ಕೆ ಈ ಸಲ ಸ್ವಲ್ಪ ಮಟ್ಟಿಗೆ ಕಡಿವಾಣ ಬಿದ್ದಂತಿದೆ. ಧಾರ್ಮಿಕ ನೆಲೆಯಿಂದ ನಡೆಯುತ್ತಿದ್ದ ಮನವಿಗಳೂ ಕಡಿಮೆಯಾಗಿವೆ. ಆದರೆ ಜಾತಿಯ ಕೈಚಳಕವೇನೂ ಕಡಿಮೆಯಾಗಿಲ್ಲ ಬಿಡಿ. ಇವುಗಳನ್ನೆಲ್ಲಾ ಮೀರಿ ನಿಂತ ಚುನಾವಣಾ ಪ್ರಕ್ರಿಯೆ ಈ ದೇಶದಲ್ಲಿ ನಡೆಯಲು ಇನ್ನೆಷ್ಟು ಕಾಲ ಬೇಕಿದೆಯೋ ಗೊತ್ತಿಲ್ಲ. ಆ ಔನ್ನತ್ಯಕ್ಕೆ ಏರುವವರೆಗೆ ನಮ್ಮ ಪ್ರಜಾಸತ್ತಾತ್ಮಕ ವ್ಯವಸ್ಥೆ ಕೃತಿಗಳಲ್ಲಿ, ಘೋಷಣೆಗಳಲ್ಲಿ ಪ್ರಬಲವಾಗಿರುತ್ತದೆ, ಅಷ್ಟೆ. ಅಂತಹ ಕಾಲ್ತೊಡಕುಗಳನ್ನು ಮೀರಿದಾಗ ಮಾತ್ರ ನಾವು ಪಾಶ್ಚಿಮಾತ್ಯ ದೇಶಗಳಲ್ಲಿ ಯಶಸ್ವಿಯಾಗಿರುವ ಪ್ರಜಾಪ್ರಭುತ್ವದ ಹಾದಿಯಲ್ಲಿ ಸಾಗುತ್ತಿದ್ದೇವೆ ಎಂದು ಕೊಳ್ಳಬಹುದಾಗಿದೆ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.