ಪಾಕಿಸ್ತಾನದ ಪ್ರಧಾನ ಮಂತ್ರಿ ನವಾಜ್ ಷರೀಫ್ ಅವರು ಭಾರತದ ಜತೆ ಮಾತುಕತೆಗೆ ಉತ್ಸುಕತೆ ತೋರಿದ್ದಾರೆ. 2008ರ ನವೆಂಬರ್ನಲ್ಲಿ ಮುಂಬೈನಲ್ಲಿ ನಡೆದ ಉಗ್ರರ ದಾಳಿಯ ನಂತರ ಮುರಿದುಬಿದ್ದ ಮಾತುಕತೆ ಪ್ರಕ್ರಿಯೆಯನ್ನು ಪುನರಾರಂಭಿಸಬೇಕು ಎಂದು ಅವರು ಭಾರತ ಸರ್ಕಾರವನ್ನು ಹಲವು ಸಲ ಕೋರಿದ್ದಾರೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನವಾಜ್ ಷರೀಫ್ ಅವರ ಸಹೋದರ ಶಹಬಾಜ್ ಷರೀಫ್ ಮುಖ್ಯಮಂತ್ರಿಯಾಗಿದ್ದಾರೆ. ಈಚೆಗೆ ಭಾರತದ ಪಂಜಾಬ್ಗೆ ಭೇಟಿ ಕೊಟ್ಟಿದ್ದ ಸಂದರ್ಭದಲ್ಲಿ ಶಹಬಾಜ್ ಅವರೂ ನವಾಜ್ ಷರೀಫ್ ಅವರ ಅನಿಸಿಕೆಗಳನ್ನೇ ಮತ್ತೆ ಹೇಳಿ ಜನರ ಗಮನ ಸೆಳೆದಿದ್ದಾರೆ. ಯುದ್ಧ ಯಾವುದಕ್ಕೂ ಪರಿಹಾರವೇ ಅಲ್ಲ ಎಂದಿರುವ ಅವರು ಸಂವಾದದ ಮೂಲಕ ಉಭಯ ದೇಶಗಳೂ ಸಂಬಂಧ ಸುಧಾರಣೆಗೆ ಒತ್ತು ನೀಡಬೇಕು ಎಂದಿದ್ದಾರೆ.
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ಕೂಡಾ ಅದೇ ಅಭಿಪ್ರಾಯ ಹೊಂದಿದ್ದಾರೆ. ಭಾರತ ಯಾವತ್ತೂ ಶಾಂತಿಯ ಮಾತುಕತೆಗೆ ವಿರೋಧ ವ್ಯಕ್ತ ಪಡಿಸಿಯೇ ಇಲ್ಲ ಎಂದೂ ಅವರು ನುಡಿದಿದ್ದಾರೆ. ಆದರೆ ಉಭಯ ದೇಶಗಳ ನಡುವಣ ಅಂತಹ ಮಾತುಕತೆಗೆ ಪೂರಕವಾದ ಉತ್ತಮ ವಾತಾವರಣ ನಿರ್ಮಾಣವಾಗಬೇಕಾದ ಅಗತ್ಯವಿದೆ ಎಂದಿದ್ದಾರೆ. ಎರಡೂ ದೇಶಗಳ ನಡುವಣ ಸಂಬಂಧ ಹದಗೆಡಲು ಕಾರಣವಾಗಿರುವ ಕೆಲವು ಅಹಿತಕರ ಘಟನೆಗಳನ್ನು ಮನಸ್ಸಿನೊಳಗಿರಿಸಿಕೊಂಡೇ ಸಲ್ಮಾನ್ ಅವರು ಮಾತನಾಡಿದಂತಿದೆ.
ಮುಂಬೈ ದಾಳಿಯ ಪ್ರಕರಣವಂತೂ ಮಾತುಕತೆಯ ಆರಂಭಕ್ಕೆ ತೊಡಕಾಗಿಯೇ ಪರಿಣಮಿಸಿದೆ. ಆ ಪ್ರಕರಣಕ್ಕೆ ಸಂಬಂಧಿಸಿದವರ ಬಗ್ಗೆ ಕ್ರಮ ಕೈಗೊಳ್ಳುವ ದಿಸೆಯಲ್ಲಿ ಪಾಕಿಸ್ತಾನ ಸರ್ಕಾರ ಇನ್ನೂ ಮೀನ ಮೇಷ ಎಣಿಸುತ್ತಾ ಕುಳಿತಿರುವುದು ಭಾರತಕ್ಕೆ ಕಿರಿಕಿರಿ ಉಂಟು ಮಾಡಿದೆ. ಘಟನೆ ನಡೆದು ಐದು ವರ್ಷಗಳು ಕಳೆದಿದ್ದರೂ ಅಲ್ಲಿನ ನ್ಯಾಯಾಲಯದಲ್ಲಿ ವಿಚಾರಣೆಯು ಇನ್ನೂ ಪ್ರಾಥಮಿಕ ಹಂತದಲ್ಲಿಯೇ ಇದೆ. ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶರು ಒಂದೋ ವರ್ಗವಾಗಿ ಹೋಗುತ್ತಾರೆ ಇಲ್ಲವೇ ರಜೆಯ ಮೇಲೆ ಹೋಗುವುದು ಸಾಮಾನ್ಯವಾಗಿಬಿಟ್ಟಿದೆ.
ಇವುಗಳೆಲ್ಲದರ ನಡುವೆ ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಮಹಮ್ಮದ್ ಇಫ್ತಿಕಾರ್ ಚೌಧರಿ ಅವರು ಈಚೆಗೆ ತಾವು ನಿವೃತ್ತರಾಗುವ ಮೊದಲು ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿದು ಅತ್ಯುತ್ತಮ ಕೆಲಸವನ್ನೇ ಮಾಡಿದ್ದಾರೆ. ಎರಡೂ ದೇಶಗಳ ನಡುವೆ ಸಂಬಂಧ ಮಧುರಗೊಳ್ಳಬೇಕೆಂದರೆ, ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕೆನ್ನುವ ವಾದದಲ್ಲಿ ತಪ್ಪೇನಿದೆ?
ಮುಂಬೈ ದಾಳಿಗೆ ಸಂಬಂಧಿಸಿದಂತೆ ತಂತ್ರಗಳನ್ನು ಹೆಣೆದವನು ಎಂದು ಭಾರತ ಶಂಕಿಸಿರುವ ಹಫೀಜ್ ಸಯೀದ್ನನ್ನು ಸಾಕ್ಷ್ಯಾಧಾರಗಳ ಕೊರತೆಯ ಕಾರಣ ನೀಡಿ, ಪಾಕ್ ನ್ಯಾಯಾಲಯ ಆತನನ್ನು ಬಿಡುಗಡೆಗೊಳಿಸಿದೆ. ಆದರೆ ಆತ ಭಾರತದ ವಿರುದ್ಧ ಜಿಹಾದ್ಗೆ ಕರೆ ನೀಡಿದ್ದಾನೆ. ಇವತ್ತು ಪಾಕಿಸ್ತಾನದ ವಿದೇಶಾಂಗ ನೀತಿಯನ್ನು ಭಾರತದ ವಿರುದ್ಧ ರೂಪಿಸುವಲ್ಲಿ ಆತನ ಕೈವಾಡ ಇದೆ ಎಂದು ಹಲವರು ಹೇಳುತ್ತಿದ್ದಾರೆ.
ಇಂತಹ ಕೆಲವು ನಕಾರಾತ್ಮಕ ಅಂಶಗಳು ಎದುರಿಗಿದ್ದರೂ ಭಾರತದಾದ್ಯಂತ ಜನಸಾಮಾನ್ಯರು ಪಾಕಿಸ್ತಾನದ ಬಗ್ಗೆ ಸಕಾರಾತ್ಮಕ ಭಾವನೆಯನ್ನೇ ಹೊಂದಿದ್ದಾರೆ. ಪಾಕಿಸ್ತಾನಕ್ಕೆ ಹೋಗಿ ವಾಪಸಾದವರು ಅಲ್ಲಿನ ಜನಗಳ ಆತಿಥ್ಯ, ಸ್ನೇಹ, ಪ್ರೀತಿಯ ಕುರಿತು ಮನದುಂಬಿ ಮಾತನಾಡುವುದನ್ನು ನಾನು ಕೇಳಿದ್ದೇನೆ. ಭಾರತಕ್ಕೆ ಭೇಟಿ ನೀಡಿದ ಪಾಕ್ ಮಂದಿ ಕೂಡಾ ಭಾರತೀಯರ ಬಗ್ಗೆ ಅದೇ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.
ಈ ಎರಡೂ ದೇಶಗಳ ನಡುವೆ ಸಂಬಂಧ ಸೌಹಾರ್ದಮಯವಾಗಿರುವುದಕ್ಕೆ ಅಡ್ಡಗಾಲಾಗಿರುವುದು ಕೆಲವು ರಾಜಕಾರಣಿಗಳು ಮತ್ತು ಅಧಿಕಾರಿವರ್ಗ ಎಂದೆನಿಸತೊಡಗಿದೆ. ಸಂಬಂಧಗಳ ನಡುವೆ ಬೆಂಕಿ ಹೊತ್ತಿಸಿ ತಾವು ಬೆಚ್ಚಗೆ ಕುಳಿತುಕೊಳ್ಳುವ ಜಾಯಮಾನ ಅವರದು.
ಇಂತಹದೇ ಮನೋಭಾವದ ಅಧಿಕಾರಿಯೊಬ್ಬರು ಈಚೆಗೆ ಪತ್ರಿಕಾ ಹೇಳಿಕೆಯೊಂದನ್ನು ನೀಡಿ ಕಾಶ್ಮೀರ ಸಮಸ್ಯೆಯು ಭಾರತ ಮತ್ತು ಪಾಕಿಸ್ತಾನದ ನಡುವಣ ನಾಲ್ಕನೇ ಯುದ್ಧಕ್ಕೆ ಕಾರಣವಾಗಲಿದೆ ಎಂದು ಪ್ರಧಾನಿ ನವಾಜ್ ಷರೀಫ್ ತಿಳಿಸಿದ್ದಾರೆ ಎಂದು ಹೇಳಿದರು. ಆದರೆ ನವಾಜ್ ಅವರ ಕಚೇರಿ ಇದಕ್ಕೆ ತದ್ವಿರುದ್ಧವಾದ ಹೇಳಿಕೆಯನ್ನು ಪ್ರಕಟಿಸಿತು.
ಅಷ್ಟರಲ್ಲಿ ನೀರು ಕದಡಿ ಹೋಗಿತ್ತು. ಪ್ರಧಾನಿ ಮನಮೋಹನ್ ಸಿಂಗ್ ಅವರು ಹೇಳಿಕೆಯೊಂದನ್ನು ನೀಡಿ ‘ಪಾಕಿಸ್ತಾನವು ಭಾರತದ ವಿರುದ್ಧದ ಯುದ್ಧದಲ್ಲಿ ಗೆಲುವು ಪಡೆಯುವುದನ್ನಂತೂ ನನ್ನ ಜೀವಿತಾವಧಿಯಲ್ಲಿ ಕಾಣಲು ಸಾಧ್ಯವಿಲ್ಲ, ಬಿಡಿ’ ಎಂದರು. ಮನಮೋಹನ್ ಸಿಂಗ್ ಅವರಂತಹ ಮುತ್ಸದ್ದಿಯೇ ಇಂತಹದ್ದೊಂದು ಹೇಳಿಕೆ ನೀಡಿದ್ದೊಂದು ವಿಪರ್ಯಾಸ. ಮುಂಬರುವ ಸಾರ್ವತ್ರಿಕ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಶಕ್ತಿ ಪ್ರದರ್ಶನದ ನೆಲೆಯಲ್ಲಿ ಪ್ರಧಾನಿ ಸಿಂಗ್ ಇಂತಹ ಹೇಳಿಕೆ ನೀಡಿರಬಹುದೆನ್ನಿಸುತ್ತದೆ.
ಬಿಜೆಪಿಯಂತಹ ಪಕ್ಷವೇ ಈಚೆಗೆ ಪಾಕಿಸ್ತಾನ ವಿರುದ್ಧದ ಹೇಳಿಕೆಗಳಿಗೆ ತನ್ನ ಶ್ರಮ ವ್ಯಯ ಮಾಡುತ್ತಿಲ್ಲ. ಈ ವಿಷಯಕ್ಕೆ ಸಾರ್ವಜನಿಕರ ಪ್ರತಿಕ್ರಿಯೆ ನೀರಸ ಎಂಬುದು ಆ ಪಕ್ಷಕ್ಕೆ ಮನದಟ್ಟಾಗಿಬಿಟ್ಟಿದೆ. ಪರಿಸ್ಥಿತಿ ಹೀಗಿರುವಾಗ ಪ್ರಧಾನಿಯವರಿಗೆ ಅಥವಾ ಅವರು ಪ್ರತಿನಿಧಿಸುವ ಕಾಂಗ್ರೆಸ್ ಪಕ್ಷಕ್ಕೆ ಈ ವಾಸ್ತವ ಅರಿವಾಗಿಲ್ಲ ಎನ್ನುವುದೊಂದು ವಿಪರ್ಯಾಸ. ಪಕ್ಷದಲ್ಲಿರುವ ಕೆಲವರು 1947ರ ಇತಿಹಾಸ, ಆಗ ನಡೆದ ದೇಶ ವಿಭಜನೆ, ಹತ್ಯಾಕಾಂಡಗಳೆಲ್ಲದರ ಬಗ್ಗೆ ಕಣ್ಣಿಗೆ ಕಟ್ಟಿದಂತೆ ಮಾತನಾಡುವುದಿದೆ. ಅದೇನೇ ಇದ್ದರೂ ಪಾಕ್ ವಿರೋಧಿ ವಿಚಾರಗಳು ಈಗ ಲಾಭದಾಯಕವಂತೂ ಅಲ್ಲವೇ ಅಲ್ಲ.
ಪಾಕಿಸ್ತಾನದಲ್ಲಿ ಮಾಧ್ಯಮಗಳು ಭಾರತದ ವಿರುದ್ಧ ಪ್ರಚಾರ ಮಾಡುತ್ತಿವೆ ಎಂದು ಭಾರತೀಯ ಮಾಧ್ಯಮಗಳು ಹಲವು ಸಲ ಆರೋಪಿಸಿವೆ. ಅದು ನಿಜವಲ್ಲ. ಈ ವಿಷಯದಲ್ಲಿ ನಾವು ಎರಡೂ ದೇಶಗಳ ಸರ್ಕಾರವನ್ನೇ ಟೀಕಿಸಬೇಕಾಗುತ್ತದೆ. ಎರಡೂ ದೇಶಗಳು ಕೇವಲ ಒಂದು ಸುದ್ದಿ ಸಂಸ್ಥೆಗೆ ಮತ್ತು ಒಂದು ದಿನಪತ್ರಿಕೆಗೆ ವೀಸಾ ನೀಡಿವೆ. ಅಲ್ಲಿ ಒಂದು ಟಿ.ವಿ. ಚಾನೆಲ್ ಇದ್ದು, ಅದರಲ್ಲಿ ‘ಸಮರೋತ್ಸಾಹ’ವೇ ಎದ್ದು ಕಾಣುತ್ತದೆ. ಆದರೆ ಭಾರತದಲ್ಲಿ ಮೂನ್ನೂರಕ್ಕೂ ಹೆಚ್ಚು ಚಾನೆಲ್ಗಳಿದ್ದು, ಅವು ಪಾಕಿಸ್ತಾನದ ಒಂದು ಚಾನೆಲ್ ಬೇರೆ ದೇಶಗಳ ಬಗ್ಗೆ ಏನು ಮಾಡುತ್ತಿದೆಯೋ ಅದನ್ನು ಈ ಎಲ್ಲಾ ಚಾನೆಲ್ಗಳು ಮಾಡುತ್ತವೆ!
ಅದೇನೇ ಇರಲಿ, ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಈ ಎರಡೂ ದೇಶಗಳು ಹೆಗಲಿಗೆ ಹೆಗಲು ನೀಡಿ ಹೋರಾಡಬಹುದು. ಇದಕ್ಕೆ ಸಂಬಂಧಿಸಿದಂತೆ ನವಾಜ್ ಷರೀಫ್ ಈಚೆಗೆ ಪ್ರಸ್ತಾಪಿಸಿದ ಸಂಗತಿಯೊಂದು ಗಮನಾರ್ಹ. ಭಾರತ ಮತ್ತು ಪಾಕಿಸ್ತಾನಗಳ ಭದ್ರತಾ ಸಲಹೆಗಾರರ ಮಟ್ಟದ ಸಭೆ ನಿರಂತರವಾಗಿ ನಡೆಯಬೇಕು ಮತ್ತು ಅಲ್ಲಿ ಭಯೋತ್ಪಾದಕರ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದಂತೆ ಜಂಟಿ ಕಾರ್ಯತಂತ್ರವನ್ನು ಹೆಣೆಯಬೇಕು ಎಂದು ನವಾಜ್ ಷರೀಫ್ ಸಲಹೆ ನೀಡಿದ್ದರು.
ಕೊನೆಗೂ ಎರಡೂ ದೇಶಗಳ ನಡುವೆ ಈ ದಿಸೆಯಲ್ಲಿ ಸಕಾರಾತ್ಮಕ ಬೆಳವಣಿಗೆಯೊಂದು ನಡೆದಿದೆ. ಉಭಯ ದೇಶಗಳ ಸೇನಾ ಕಾರ್ಯಾಚರಣೆಗಳ ಮಹಾ ನಿರ್ದೇಶಕರುಗಳ ಮಟ್ಟದ ಸಭೆಯೊಂದನ್ನು ನಿಗದಿ ಮಾಡಲಾಗಿದೆ. ಆ ಸಭೆಯಲ್ಲಿ ಗಡಿ ನಿಯಂತ್ರಣ ರೇಖೆಯ ಪಾವಿತ್ರ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಚರ್ಚಿಸಲಾಗುವುದು. ಇದೊಂದು ಸರಿದಿಕ್ಕಿನಲ್ಲಿ ನಡೆಯುತ್ತಿರುವ ಪ್ರಯತ್ನವಾಗಿದೆ.
ಎರಡೂ ದೇಶಗಳ ನಡುವೆ ಇಂತಹ ಅದೆಷ್ಟೇ ಚಟುವಟಿಕೆ ನಡೆಯಬಹುದು. ಆದರೆ ಎರಡೂ ದೇಶಗಳ ಮಂದಿ ಪರಸ್ಪರ ನಂಬುವಂತಹ ವಾತಾವರಣ ನಿರ್ಮಾಣಕ್ಕೆ ಪೂರಕವಾದಂತಹ ಕೆಲಸ ಆಗಬೇಕಿದೆ. ಇದೇ ಮಾತನ್ನು ಸ್ವತಃ ನವಾಜ್ ಅವರೇ ಒಪ್ಪಿಕೊಂಡಿದ್ದಾರೆ. ಆದರೆ ಇಂತಹ ಪ್ರಯತ್ನಗಳಿಗೆ ಕಾಶ್ಮೀರ ಸಮಸ್ಯೆಯೇ ತೊಡಕಾಗಿದೆ ಎಂದು ಪಾಕಿಸ್ತಾನದಲ್ಲಿಯೇ ಬಹಳ ಮಂದಿ ನಂಬಿದ್ದಾರೆ. ಆದರೆ ಇದೊಂದು ‘ಲಕ್ಷಣ ಅಷ್ಟೇ, ಕಾಯಿಲೆಯಲ್ಲ’.
ಒಂದು ವೇಳೆ ಕಾಶ್ಮೀರ ಸಮಸ್ಯೆ ಬಗೆಹರಿಯಿತು ಎಂದಿಟ್ಟುಕೊಳ್ಳಿ, ಎರಡೂ ದೇಶಗಳ ನಡುವೆ ಇನ್ನೊಂದು ಸಮಸ್ಯೆ ಧುತ್ತೆನ್ನುವುದಂತೂ ನಿಜ. ಪರಸ್ಪರ ನಂಬಿಕೆಯ ಕೊರತೆಯಿಂದಲೇ ಇಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹೀಗಾಗಿ ಭಾರತ – ಪಾಕ್ ನಡುವಣ ಸಂಬಂಧ ಸುಧಾರಣೆಗೆ ಕಾಶ್ಮೀರ ವಿವಾದವೇ ತೊಡಕು ಎನ್ನುವಂತೆಯೂ ಇಲ್ಲ.
ತಮ್ಮಲ್ಲಿರುವ ಅಣ್ವಸ್ತ್ರಗಳ ಸಂಗ್ರಹ ಯಾವ ಮಟ್ಟಿಗೆ ಕೆಡುಕು ಮಾಡುವಂತಹದ್ದು ಎಂಬ ಅರಿವು ಎರಡೂ ದೇಶಗಳಿಗೇ ಇದ್ದೇ ಇದೆ. ಪರಿಸ್ಥಿತಿ ಈ ರೀತಿ ಇರುವಾಗ ಎರಡೂ ದೇಶಗಳು ತಮ್ಮ ನಡುವಣ ಭಿನ್ನಾಭಿಪ್ರಾಯಗಳನ್ನು ಶಾಂತ ರೀತಿಯಿಂದಲೇ ಬಗೆಹರಿಸಿಕೊಳ್ಳುವುದು ಒಳ್ಳೆಯ ತೀರ್ಮಾನ. 1965ರ ಸಮರದ ನಂತರ ತಾಷ್ಕೆಂಟ್ನಲ್ಲಿ ಉಭಯ ದೇಶಗಳ ನಡುವೆ ನಡೆದ ಒಪ್ಪಂದದಲ್ಲಿ ಈ ಕುರಿತೂ ಚರ್ಚಿಸಿ ಒಂದು ತೀರ್ಮಾನಕ್ಕೆ ಬರಲಾಗಿತ್ತು.
ಈ ದಿಸೆ-ಯಲ್ಲಿ ಆಗಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಮಹತ್ವದ ಹೆಜ್ಜೆಯನ್ನಿರಿಸಿದ್ದನ್ನು ಯಾರೂ ಮರೆಯುವಂತಿಲ್ಲ. ಆಗ ಪಾಕಿಸ್ತಾನದ ಸೇನಾಡಳಿತದ ಮುಖ್ಯಸ್ಥರಾಗಿದ್ದ ಜನರಲ್ ಅಯೂಬ್ ಖಾನ್, ವಿಶ್ವಸಂಸ್ಥೆಯ ನಿಯಮಗಳಿಗೆ ಅನುಸಾರ ನಡೆದುಕೊಳ್ಳುವುದಾಗಿಯೂ ಹೇಳಿದ್ದರು. ಅಂದು ಅವರಿಬ್ಬರೂ ನೀಡಿದ ಜಂಟಿ ಹೇಳಿಕೆಯಲ್ಲಿ ‘ಮತ್ತೆ ಶಸ್ತ್ರಾಸ್ತ್ರಗಳ ಮೊರೆ ಹೋಗುವುದಿಲ್ಲ’ ಎಂದು ಘೋಷಿಸಿದ್ದರು.
ಇದೀಗ ಇಸ್ಲಾಮಾಬಾದ್ನಲ್ಲಿ ಆಡಳಿತಗಾರರು ‘ಗಡಿ ನಿಯಂತ್ರಣ ರೇಖೆಯನ್ನು ಗೌರವಿಸುವುದು ಎರಡೂ ಸರ್ಕಾರಗಳ ಜವಾಬ್ದಾರಿಯಾಗಿದೆ’ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ದೆಹಲಿಯ ಆಡಳಿತಗಾರರು ‘ಗಡಿ ನಿಯಂತ್ರಣ ರೇಖೆಯ ವಿಷಯ ಸೇನೆಗೆ ಸಂಬಂಧಿಸಿದ್ದು, ಇದು ರಾಜಕೀಯ ವಿಷಯವಲ್ಲ’ ಎಂದಿದ್ದಾರೆ.
ಇಂತಹದ್ದೊಂದು ಹೇಳಿಕೆ ಪಾಕಿಸ್ತಾನದ ಕಡೆಯಿಂದ ಬಂದಿದ್ದರೆ ನಮಗೆ ಪರಿಸ್ಥಿತಿ ಏನೆಂದು ಅರ್ಥವಾಗುತಿತ್ತು. ಏಕೆಂದರೆ ಅಲ್ಲಿ ಸೇನೆಯದೇ ಮಾತು ನಡೆಯುವುದಲ್ಲವೇ? ಆದರೆ ಇದೀಗ ಇಂತಹದ್ದೊಂದು ಹೇಳಿಕೆಯನ್ನು ಭಾರತ ಸರ್ಕಾರವೇ ನೀಡಿದೆ. ಇದಕ್ಕೇನನ್ನುವುದು ? ಗಡಿ ನಿಯಂತ್ರಣ ರೇಖೆಯ ಬಗ್ಗೆ ಶಿಮ್ಲಾದಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಮತ್ತು ಪಾಕ್ನ ಆಡಳಿತದ ಮುಖ್ಯಸ್ಥ ಜುಲ್ಫಿಕರ್ ಅಲಿ ಭುಟ್ಟೊ ನಡುವೆ ಮಾತುಕತೆ ನಡೆದಿತ್ತು.
ಆಗ ಈ ರೇಖೆಯ ಬಗ್ಗೆ ಒಂದು ಖಚಿತವಾದ ನಿರ್ಧಾರಕ್ಕೆ ಬರಲಾಗಿತ್ತು. ಆದರೆ ಈಗ ದೆಹಲಿಯಲ್ಲಿರುವ ಆಡಳಿತಗಾರರು ಗಡಿ ನಿಯಂತ್ರಣ ರೇಖೆಯ ವಿಷಯವನ್ನು ಸೇನೆಯ ಜವಾಬ್ದಾರಿ ಎನ್ನುತ್ತಿರುವುದು ಅದೆಷ್ಟರ ಮಟ್ಟಿಗೆ ಸರಿ? ಉಭಯ ದೇಶಗಳ ನಡುವಣ ಸಂಬಂಧ ಸುಧಾರಣೆಯ ನಿಟ್ಟಿನಲ್ಲಿ ಭಾರತವೂ ಅರ್ಥಪೂರ್ಣ ನಿರ್ಧಾರ ತೆಗೆದುಕೊಳ್ಳಬೇಕಿದೆಯಲ್ಲವೇ?
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.