ಭಾರತದ ರಾಜಕಾರಣ ಹೊಸ ಆಯಾಮವೊಂದನ್ನು ಪಡೆದುಕೊಳ್ಳುವತ್ತ ದಾಪುಗಾಲಿಡುತ್ತಿದೆ. ಇಲ್ಲಿ ಎಲ್ಲವೂ ಸರಿ ದಿಕ್ಕಿನಲ್ಲಿದೆ, ನಮ್ಮ ಮೂಗಿನ ನೇರಕ್ಕಿದೆ ಎಂದುಕೊಳ್ಳಬೇಕೆಂದೇನಿಲ್ಲ. ಅದೇನೇ ಇದ್ದರೂ, ಬದಲಾವಣೆಯ ಗಾಳಿಯಂತೂ ಬೀಸುತ್ತಿದೆ. ಸರ್ಕಾರೇತರ ಸಂಸ್ಥೆಗಳ ಸಾವಿರಾರು ಕಾರ್ಯಕರ್ತರ ನೇತೃತ್ವದಲ್ಲಿ ಹತ್ತು ಹಲವು ಚಳವಳಿಗಳು, ಪ್ರತಿಭಟನೆಗಳು ನಡೆದು, ಆ ಮೂಲಕ ಜನಮನ ತಲುಪಿದ ಅವರು ಆಮ್ ಆದ್ಮಿ ಪಕ್ಷದ ಸ್ವರೂಪದಲ್ಲಿ ಎದ್ದು ನಿಂತಿದ್ದಾರೆ.
ಈ ಸಂದರ್ಭದಲ್ಲಿ ಅದೇ ಹಳೆಯ ವೈನ್ ತುಂಬಿಟ್ಟುಕೊಂಡಿರುವ ಅದೇ ಹಳೆಯ ವಿಭಿನ್ನವಾದ ಎರಡು ಶೀಷೆಗಳು ಎಂದೇ ನಾವು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳನ್ನು ಅರ್ಥ್ಯೆಸಬಹುದಾಗಿದೆ. ಇಂತಹ ‘ಹಳೆಯ ಶೀಷೆ’ಗಳಿಗೆ ಅಗತ್ಯವಾಗಿದ್ದ ಪರ್ಯಾಯವೊಂದನ್ನು ಜನ ‘ಆಮ್ ಆದ್ಮಿ’ಗಳಲ್ಲಿ ಕಂಡು ಕೊಂಡಿದ್ದರೆ ಅಚ್ಚರಿ ಏನಲ್ಲ.
ರಾಜ್ಯಗಳಲ್ಲಿ ಸಾಕಷ್ಟು ಪ್ರಭಾವಿಯಾಗಿದ್ದ ಪ್ರಾದೇಶಿಕ ಪಕ್ಷಗಳು ಇಂತಹ ಬೆಳವಣಿಗೆಗಳಿಂದ ಈಚೆಗಿನ ದಿನಗಳಲ್ಲಿ ತಾವು ಪಡೆದುಕೊಂಡಿದ್ದನ್ನು ಕಳೆದುಕೊಳ್ಳುತ್ತಿರುವುದೇ ಹೆಚ್ಚು. ಅಂತಹ ಪ್ರಾದೇಶಿಕ ಪಕ್ಷಗಳ ಮುಖ್ಯ ಬಂಡವಾಳವಾಗಿದ್ದ ಭಾಷೆ, ಪ್ರಾದೇಶಿಕತೆ, ಧರ್ಮ ಇತ್ಯಾದಿ ಅಂಶಗಳೆಲ್ಲಾ ಈಗ ಸವಕಲು ಎನಿಸತೊಡಗಿವೆ. ಜಾತಿ, ಜನಾಂಗ ಇತ್ಯಾದಿ ವಿಷಯಗಳನ್ನೇ ಮುಂದಿಟ್ಟುಕೊಂಡು ರಾಜಕಾರಣ ನಡೆಸುತ್ತಿದ್ದವರ ನಡುವೆ ಇದ್ದ ಧ್ರುವೀಕರಣ ಪ್ರಕ್ರಿಯೆಗಳೆಲ್ಲಾ ಅಪ್ರಸ್ತುತ ಎನಿಸುವಂತೆ ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಬಂದಿತು. ಆಮ್ ಆದ್ಮಿ ಪಕ್ಷದ (ಎಎಪಿ) ಜಯಭೇರಿಯು ಮತದಾರರ ಹೊಸ ಆಲೋಚನೆಯ ಸಂಕೇತದಂತಿದೆ.
ಎಎಪಿ ಯಶಸ್ಸನ್ನು ಕಂಡಾಗ ಅದರಿಂದ ತಾವೂ ಕಲಿಯುವುದು ಬಹಳಷ್ಟಿದೆ ಎಂಬುದನ್ನು ಸ್ವತಃ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಕೆಲವು ಮುಖಂಡರೇ ಒಪ್ಪಿಕೊಂಡಿದ್ದಾರೆ.
ಎಎಪಿ ಒಳಗೆ ಮಾರ್ಕ್ಸಿಸ್ಟರು ಅಥವಾ ಮಾವೊವಾದಿಗಳಿದ್ದರೂ ಪರವಾಗಿಲ್ಲ ಬಿಡಿ, ಅವರು ಜನರ ಭಾವನೆಗಳಿಗೆ ಸ್ಪಂದಿಸುತ್ತಿದ್ದಾರಲ್ಲಾ ಅಷ್ಟೇ ಸಾಕು ಎನ್ನುವಂತಹ ಮನಸ್ಥಿತಿಗೆ ನಾವು ಬಂದು ಬಿಟ್ಟಿದ್ದೇವೆ. ಭಾರತಕ್ಕೆ ಸ್ವಾತಂತ್ರ್ಯ ಬಂದು ಆರೂವರೆ ದಶಕಗಳು ಉರುಳಿವೆ. ಆದರೂ ಈ ನೆಲದ ಅರ್ಧಕ್ಕೂ ಹೆಚ್ಚಿನ ಜನಸಂಖ್ಯೆ ಬಡತನದ ರೇಖೆಯ ಕೆಳಗಿದೆ. ಇಂತಹ ಸಂದಿಗ್ಧದಲ್ಲಿ ಬಡವರನ್ನು ಆರ್ಥಿಕವಾಗಿ ಮೇಲೆತ್ತುವ ಕೈಂಕರ್ಯದಲ್ಲಿ ಎಎಪಿ ಯಾವ ರೀತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ ಎನ್ನುವುದು ಮುಖ್ಯವಾಗುತ್ತದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಎಡಪಕ್ಷಗಳು ಗೊಂದಲಕ್ಕೆ ಬಿದ್ದಿರುವುದಂತೂ ನಿಜ. ಎಡಪಕ್ಷಗಳು ಈ ಎಲ್ಲಾ ಬೆಳವಣಿಗೆಗಳಿಂದ ದಿಕ್ಕು ತೋಚದಂತಾಗಿರುವುದನ್ನು ಅಲ್ಲಗಳೆಯುವಂತಿಲ್ಲ. ಸಮಸಮಾಜ ನಿರ್ಮಾಣದ ಮಾತುಗಳು ಘೋಷಣೆಯಾಗಷ್ಟೇ ಉಳಿದಿರುವ ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದವರು ತಳಮಟ್ಟದಲ್ಲಿರುವ ಜನರನ್ನು ಮೇಲೆತ್ತುವ ಕಾರ್ಯಕ್ರಮಗಳೊಂದಿಗೆ ಬಂದಿರುವುದು ಗಮನಾರ್ಹ.
ಕಮ್ಯುನಿಸ್ಟರು ಪಶ್ಚಿಮ ಬಂಗಾಳದಲ್ಲಿ ಮೂರೂವರೆ ದಶಕಗಳ ಕಾಲದ ತಮ್ಮ ಅಧಿಕಾರಾವಧಿಯಲ್ಲಿ ಏನು ಮಾಡಿದ್ದಾರೆ ಎಂಬ ಪ್ರಶ್ನೆ ಧುತ್ತೆನ್ನುತ್ತಿದೆ. ಅಲ್ಲಿ ಕಮ್ಯುನಿಸ್ಟರು ಅಭಿವೃದ್ಧಿ ಮಾಡಿರುವುದಾಗಿ ಸೋಗು ಹಾಕಿದ್ದರಷ್ಟೇ ಎಂಬ ಮಾತುಗಳೇ ಕೇಳಿ ಬರುತ್ತಿವೆ. ಅವರ ಒಡಲ ಒಳಗೆ ಹೊಕ್ಕು ನೋಡಿದರೆ, ಅವರೂ ವ್ಯವಸ್ಥೆಯ ಭಾಗವಾಗಿದ್ದುಕೊಂಡು ಎಲ್ಲದರೊಂದಿಗೆ ಹೊಂದಿಕೊಂಡು ನಡೆದರು ಎಂದು ಗೊತ್ತಾಗುತ್ತದೆ. ಎಎಪಿ ಇದೀಗ ಒಂದೇ ಒಂದು ವರ್ಷದಲ್ಲಿ ಮಾಡಿ ತೋರಿಸುತ್ತೇವೆಂದು ಎದೆ ತಟ್ಟಿ ನಿಂತಿರುವ ಜನಪರ ಕಾರ್ಯಕ್ರಮ ಗಳನ್ನು ಕಮ್ಯುನಿಸ್ಟರು ಅವರ ಸುದೀರ್ಘ ಅಧಿಕಾರಾವಧಿಯಲ್ಲಿ ಮಾಡಲು ಸಾಧ್ಯವಾಗಲಿಲ್ಲವಲ್ಲ.
ಇನ್ನು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಂತೂ ದೇವಸ್ಥಾನಗಳ ಮಹಂತರಂತೆ ಕಾಣಿಸುತ್ತಿವೆ. ಆ ಪಕ್ಷಗಳು ಕಲಿತದ್ದೂ ಏನಿಲ್ಲ, ಮರೆತದ್ದೂ ಏನಿಲ್ಲ. ಹೊಸ ರಾಜಕೀಯ ಬೆಳವಣಿಗೆಗಳನ್ನು ಕಂಡು ತಾವು ಸುಧಾರಿಸಿಕೊಳ್ಳುವ ಬದಲು ಕಾಂಗ್ರೆಸ್, ಬಿಜೆಪಿಗಳು ಎಎಪಿ ವಿರುದ್ಧವೇ ಕಿಡಿ ಕಾರತೊಡಗಿವೆ. ‘ಆಮ್ ಆದ್ಮಿ ಬೆಳವಣಿಗೆ ಕ್ಷಣಿಕ. ಇದು ನೀರ ಮೇಲಣ ಗುಳ್ಳೆಯಂತೆ. ಮುಂದಿನ ಸಾರ್ವತ್ರಿಕ ಚುನಾವಣೆಯ ವೇಳೆಗೆ ಈ ಗುಳ್ಳೆ ಒಡೆದು ಹೋಗುತ್ತದೆ...’ ಎಂದೆಲ್ಲಾ ಆ ಪಕ್ಷಗಳ ಮುಖಂಡರು ಮಾತಾಡಿಕೊಳ್ಳುತ್ತಿರುವುದೊಂದು ವಿಪರ್ಯಾಸ. ಲಕ್ಷಾಂತರ ಮಂದಿ ಆಮ್ ಆದ್ಮಿ ಆಂದೋಲನದ ಜತೆಗೆ ಸಾಗಿದ್ದನ್ನು ಅಷ್ಟೊಂದು ಲಘುವಾಗಿ ಪರಿಗಣಿಸುವಂತಹದ್ದೇನಲ್ಲ.
ಬಿಜೆಪಿಯು ಈಗಾಗಲೇ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿದೆ. ಆದರೆ ಇವತ್ತು ಮೋದಿ ಅಲೆ ಹಿಂದಿನಂತಿಲ್ಲ. ಆದರೂ ಮಾಧ್ಯಮ ಮಾತ್ರ ಅಂತಹದ್ದೊಂದು ಅಲೆ ಇದೆ ಎಂದೇ ಬಿಂಬಿಸುತ್ತಿದೆ. ಮೋದಿ ಅಲೆಯ ಎದುರು ಆಮ್ ಆದ್ಮಿ ಅಲೆ ಗಮನ ಸೆಳೆಯುತ್ತಿರುವುದನ್ನು ಅಲ್ಲಗಳೆಯುವಂತಿಲ್ಲ. ಪರಿಸ್ಥಿತಿ ಈ ರೀತಿ ಇರುವುದರಿಂದಲೇ ಬಿಜೆಪಿಯು ಎಎಪಿ ಬಗ್ಗೆ ಹೆಚ್ಚು ಎಚ್ಚರ ವಹಿಸಬೇಕೆಂದು ಆರ್ಎಸ್ಎಸ್ ಮುಖಂಡರು ಹೇಳುತ್ತಿದ್ದಾರೆ.
ದೆಹಲಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದ ಕಾಂಗ್ರೆಸ್ಗಿಂತ ಎಎಪಿಯೇ ಹೆಚ್ಚು ಶಕ್ತಿಶಾಲಿ ಎಂಬ ವಾಸ್ತವ ಆರ್ಎಸ್ಎಸ್ ಮಂದಿಗೆ ಗೊತ್ತಿಲ್ಲದ್ದೇನೂ ಅಲ್ಲ. ಈ ನಡುವೆ ನರೇಂದ್ರ ಮೋದಿ ಅವರನ್ನು ತಡೆಯುವ ಉದ್ದೇಶದಿಂದ ಕಾಂಗ್ರೆಸ್, ಎಎಪಿಗೆ ಬೆಂಬಲ ನೀಡಿದೆ ಎಂದರೆ ಅತಿಶಯೋಕ್ತಿಯಂತೂ ಅಲ್ಲ. ದೆಹಲಿ ವಿಧಾನಸಭೆಯಲ್ಲಿ ಮರಳಿ ಅಧಿಕಾರದ ಗದ್ದುಗೆ ಏರಲು ಸದ್ಯಕ್ಕಂತೂ ಸಾಧ್ಯವಿಲ್ಲ ಎಂಬ ವಾಸ್ತವ ಕಾಂಗ್ರೆಸ್ಗೆ ಚೆನ್ನಾಗಿ ಗೊತ್ತಿರುವುದರಿಂದ ಅದು ಈ ನಿರ್ಧಾರ ತೆಗೆದುಕೊಂಡಿತು. ಮೋದಿ ಮುಂದಿನ ದಿನಗಳಲ್ಲಿ ಕೇಂದ್ರದ ಗಾದಿಗೆ ಏರುವುದನ್ನು ತಡೆಯಲು ಕಾಂಗ್ರೆಸ್ ತನಗೆ ಸಿಗುವ ಯಾವುದೇ ಅವಕಾಶವನ್ನೂ ವ್ಯರ್ಥ ಮಾಡುವುದಿಲ್ಲ.
ಇವತ್ತು ಸಾರ್ವಜನಿಕ ಬದುಕನ್ನು ಭ್ರಷ್ಟಾಚಾರ ಇನ್ನಿಲ್ಲದಂತೆ ಕಾಡುತ್ತಿದೆ. ಇದೀಗ ಮೌಲ್ಯಗಳ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿಗಳು ಅದೆಷ್ಟೇ ಮಾತನಾಡಿದರೂ, ಆ ಪಕ್ಷಗಳಲ್ಲಿ ಅನೇಕ ಮಂದಿ ಕಳಂಕಿತ ಮುಖಂಡರಿದ್ದಾರೆ ಎನ್ನುವುದು ನಿಜ. ಕಾಂಗ್ರೆಸ್ ಪಕ್ಷ ಇವತ್ತಿಗೂ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹೊಡೆಯುತ್ತಲೇ ಇದೆ.
ಹಿಮಾಚಲದಲ್ಲಿ ದೊಡ್ಡ ಮಟ್ಟದ ಅವ್ಯವಹಾರವೊಂದರಲ್ಲಿ ಭಾಗಿಯಾಗಿರುವ ಕಂಪೆನಿಯೊಂದರ ಬಹಳಷ್ಟು ಷೇರುಗಳು ವೀರಭದ್ರ ಸಿಂಗ್ ಅವರ ಸಮೀಪ ಬಂಧುಗಳ ಬಳಿಯೇ ಇರುವುದು ಸಾಬೀತಾಗಿದೆ. ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿರುವ ಮೋದಿ ಅವರ ಸಚಿವ ಸಂಪುಟದಲ್ಲಿಯೇ ಕಳಂಕಿತ ವ್ಯಕ್ತಿಯೊಬ್ಬರಿದ್ದಾರೆ. ಅವರು ಅಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಲಾಲೂ ಪ್ರಸಾದ್ ಮತ್ತು ಕಾಂಗ್ರೆಸ್ ಪಕ್ಷದ ರಶೀದ್ ಮಸೂದ್ ಅವರನ್ನು ಸಂಬಂಧಪಟ್ಟ ಪ್ರಕರಣಗಳಲ್ಲಿ ಅಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದ ತಕ್ಷಣ ಇಬ್ಬರೂ ಲೋಕಸಭೆಯಲ್ಲಿನ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದರು. ಆದರೆ ಗುಜರಾತ್ ಸರ್ಕಾರದಲ್ಲಿ ಸಚಿವರಾಗಿರುವ ಕಳಂಕಿತ ವ್ಯಕ್ತಿಯನ್ನು ಬಿಜೆಪಿ ರಕ್ಷಿಸುತ್ತಿರುವುದಾದರೂ ಏಕೆ?
ವ್ಯಕ್ತಿ ಪೂಜೆಯ ಹಾವಳಿಯಂತೂ ಇವತ್ತಿನ ರಾಜಕಾರಣದಲ್ಲಿ ಎದ್ದು ಕಾಣುತ್ತಿದೆ. ‘ಬಲಿಷ್ಠ ವ್ಯಕ್ತಿ ಇದ್ದರೆ, ಪ್ರಬಲ ಸರ್ಕಾರ ಇರುತ್ತದೆ’ ಎಂಬ ಮೋದಿಯವರ ಘೋಷಣೆಯು ವ್ಯಕ್ತಿ ಪೂಜೆಯ ಸಂಕೇತವೇ ಆಗಿದೆ.
ಹಿಂದೆ ಅಹಮದಾಬಾದ್ನಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮೋದಿ ವಿರುದ್ಧ ಪೊಲೀಸರು ಮೊದಲ ಮಾಹಿತಿ ವರದಿಯನ್ನು ದಾಖಲಿಸಿಕೊಳ್ಳಲು ಹಿಂಜರಿದಿದ್ದರು. ಅದು ಅಚ್ಚರಿಯ ಸಂಗತಿ ಎನ್ನುವಂತಿಲ್ಲ, ಅದೊಂದು ಆಘಾತಕಾರಿ ವಿಷಯ ಎಂದುಕೊಳ್ಳಬೇಕು.
ಯುವತಿಯೊಬ್ಬರ ಮೇಲೆ ಸರ್ಕಾರಿ ವ್ಯವಸ್ಥೆಯನ್ನು ಬಳಸಿಕೊಂಡು ಕಣ್ಗಾವಲು ಇರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋದಿ ಅವರ ಮೇಲೆ ಆರೋಪ ಇದೆ. ಕೇಂದ್ರ ಸರ್ಕಾರ ನೇಮಿಸಿದ ಸಮಿತಿಯಷ್ಟೇ ಇದಕ್ಕೆ ಸಂಬಂಧಿಸಿದ ಸತ್ಯವನ್ನು ಬಯಲಿಗೆ ಎಳೆಯಲು ಸಾಧ್ಯ. ಆದರೆ ಸ್ಥಳೀಯ ಆಡಳಿತ ವ್ಯವಸ್ಥೆಯು ಈ ತನಿಖೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಸಹಕಾರ ನೀಡಲೂ ಸಿದ್ಧವಿದ್ದಂತಿಲ್ಲ.
ಮುಂದಿನ ಸಾರ್ವತ್ರಿಕ ಚುನಾವಣೆಯು ವ್ಯಕ್ತಿ ಆಧಾರಿತವಾಗಿರುವಂತೆ ನೋಡಿಕೊಳ್ಳುವುದು ಮೋದಿ ಅವರ ಆಶಯವಾಗಿರುವಂತಿದೆ. ಅವರಿಗೆ ವಿಷಯಾಧಾರಿತ ಚುನಾವಣೆ ಬೇಕಿಲ್ಲವೆನಿಸುತ್ತದೆ. ಕಾಂಗ್ರೆಸ್ನಲ್ಲಿಯೂ ರಾಹುಲ್ ಗಾಂಧಿ ಅವರನ್ನು ಬಿಂಬಿಸಲಾಗುತ್ತಿದೆ.
ರಾಹುಲ್ ಅವರು ಸಿದ್ಧಾಂತಗಳ ಬಗ್ಗೆ, ಮೌಲ್ಯಗಳ ಕುರಿತು ಪದೇ ಪದೇ ಮಾತನಾಡುತ್ತಿದ್ದಾರೆ. ಆದರೆ ಅವರದೇ ಪಕ್ಷದ ನೇತೃತ್ವದ ಸರ್ಕಾರಗಳೇ ರಾಹುಲ್ ವಿಚಾರಗಳಿಗೆ ವಿರುದ್ಧವಾಗಿ ನಡೆದುಕೊಂಡಿವೆ. ಜನಪ್ರತಿನಿಧಿಯೊಬ್ಬನನ್ನು ಅಪರಾಧಿ ಎಂಬುದಾಗಿ ನ್ಯಾಯಾಲಯ ತೀರ್ಪು ನೀಡಿದರೆ, ಅಂತಹ ಜನಪ್ರತಿನಿಧಿಯು ಶಾಸನಸಭೆಯಲ್ಲಿ ತನ್ನ ಸ್ಥಾನವನ್ನು ತೆರವುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತು. ಆ ತೀರ್ಪನ್ನು ರಾಹುಲ್ ಹೊಗಳಿದ್ದರು. ಆದರೆ ಕೇಂದ್ರ ಸರ್ಕಾರ ಆ ತೀರ್ಪನ್ನು ಮೊಟಕುಗೊಳಿಸುವ ವಿಶೇಷ ಆದೇಶವನ್ನು ತಂದಿತು.
ಮುಂಬೈನಲ್ಲಿ ಆದರ್ಶ ಗೃಹ ನಿರ್ಮಾಣ ಅವ್ಯವಹಾರಕ್ಕೆ ಸಂಬಂಧಿಸಿದಂತೆ ರಾಹುಲ್ ನಿಲುವಿಗೆ ವಿರುದ್ಧವಾಗಿ ಮಹಾರಾಷ್ಟ್ರ ಸರ್ಕಾರ ನಡೆದುಕೊಂಡಿತು. ಇಂತಹ ಸಂದಿಗ್ಧ ಕಾಲಘಟ್ಟದಲ್ಲಿ ದೆಹಲಿಯಲ್ಲಿ ಎಎಪಿ ಜನಮನ್ನಣೆಯ ಉತ್ತುಂಗದಲ್ಲಿರಬಹುದು. ಆದರೆ ಎಎಪಿ ಒಳಗೆ ಯಾವತ್ತೂ ಏಕಾಭಿಪ್ರಾಯವೇ ಇರುತ್ತೆ ಎಂದು ಕೇಜ್ರಿವಾಲ್ ನಂಬಿಕೊಳ್ಳುವ ಅಗತ್ಯವಿಲ್ಲ. ಅದೇನೇ ಇರಲಿ, ಅವರೊಬ್ಬರೇ ಹದಿನಾರು ಇಲಾಖೆಗಳನ್ನು ತಮ್ಮಲ್ಲಿಯೇ ಇರಿಸಿಕೊಂಡಿರುವುದು ಅಚ್ಚರಿ ಎನಿಸುತ್ತದೆ.
ಜಯಪ್ರಕಾಶ್ ನಾರಾಯಣ್ ನೇತೃತ್ವದ ಜನಾಂದೋಲನದಿಂದ ಕೇಂದ್ರದಲ್ಲಿ ಜನತಾ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದಿತ್ತು. ಅದೂ ಹೆಚ್ಚು ಕಾಲ ಬಾಳಲಿಲ್ಲ ಬಿಡಿ. ಆದರೆ ನಂತರ ಎಂದೂ ತುರ್ತು ಪರಿಸ್ಥಿತಿ ಬರಲಿಲ್ಲ. ಅದೂ ಆ ಆಂದೋಲನದ ಬಲು ದೊಡ್ಡ ಕೊಡುಗೆ ಎನ್ನುವುದನ್ನೂ ನಾವು ಮರೆಯುವಂತಿಲ್ಲ. ಅದೇ ರೀತಿ ಆಮ್ ಆದ್ಮಿ ಪಕ್ಷ ತನ್ನ ಮಿತಿಯೊಳಗೆ ವ್ಯವಸ್ಥೆಯೊಂದನ್ನು ಶುದ್ಧಗೊಳಿಸುವಲ್ಲಿ ಯಶಸ್ಸಿನ ಹೊಸ ಹೆಜ್ಜೆಗಳನ್ನಿರಿಸಿದರೆ, ಅದು ಈ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಲು ದೊಡ್ಡ ಕೊಡುಗೆಯಾಗುತ್ತದೆ. ಆ ಪಕ್ಷ ಅಧಿಕಾರದಲ್ಲಿ ಎಷ್ಟು ದೀರ್ಘ ಕಾಲ ಇರುತ್ತದೆ ಅಥವಾ ಎಷ್ಟು ಬೇಗ ಉರುಳುತ್ತದೆ ಎನ್ನುವುದಕ್ಕಿಂತ ಅದು ತನ್ನ ಅವಧಿಯಲ್ಲಿ ನೀಡಿದ ಕೊಡುಗೆಯೇ ಮುಖ್ಯವಾಗುತ್ತದೆ. ಅದೇ ನೆನಪಲ್ಲಿರುವುದು.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.