ಡೈನೋಸಾರ್ ಎಂಬ ಅತಿ ದೊಡ್ಡ ಪ್ರಾಣಿ ಸಂಕುಲ ಒಂದು ಕಾಲಕ್ಕೆ ಈ ಭೂಮಿಯನ್ನು ಆವರಿಸಿತ್ತು. ಅಷ್ಟು ಬೃಹತ್ ಗಾತ್ರದ ಪ್ರಾಣಿಗೆ ಬಾಲ ಮುಟ್ಟಿದರೆ ಆ ಕೂಡಲೇ ಅರಿವಾಗುತ್ತಿರಲಿಲ್ಲ. ಆ ದೇಹದ ಗಾತ್ರಕ್ಕೆ ಹೋಲಿಸಿದರೆ ಅದರ ಮಿದುಳು ಬಲು ಚಿಕ್ಕದು. ಹಾಗಾಗಿ ಬೇರೊಂದು ಪ್ರಾಣಿ ಅದನ್ನು ಕಚ್ಚಿದರೆ ಗೊತ್ತಾಗುವ ಹೊತ್ತಿಗೆ ಆಪತ್ತು ಒದಗಿರುತ್ತಿತ್ತು. ಇಂದು ಭಾರತದ ಆರ್ಥಿಕತೆ ಡೈನೋಸಾರ್ನ ಹಾಗೆ ಬೃಹದಾಕಾರವಾಗಿ ಬೆಳೆದು ನಿಂತಿದೆ. ಮಿದುಳು ಮಾತ್ರ ಹಿಡಿಗಾತ್ರ.
ಸ್ವಾಧೀನ ತಪ್ಪಿದ ತನ್ನ ಕಾಲುಗಳನ್ನು ತಾನೇ ಕಚ್ಚಿ ತಿನ್ನಲು ಹೊರಟಂತಿದೆ. ಖಾಸಗಿ ಒಡೆತನದ ಕೈಗಾರಿಕಾ ವಲಯ ತಿನ್ನುವ ಕೈ ಬಾಯಿ ಮಾತ್ರವೇ ಅದರ ಅಂಗಾಂಗವೆಂದು ಭಾವಿಸಿದೆ. ದೇಹದ ಉಳಿದ ಭಾಗಗಳು ತಮ್ಮ ಯೋಗಕ್ಷೇಮವನ್ನು ತಾವೇ ನೋಡಿಕೊಳ್ಳಬೇಕಾಗಿದೆ. ಯೋಗ್ಯವಾದ ಹೃದಯವನ್ನೂ, ಮಿದುಳನ್ನೂ ರೂಪಿಸಬೇಕಾಗಿದೆ. ದೇಶದ ಆರ್ಥಿಕತೆಯಲ್ಲಿ ಹಿಂದುಳಿದ ಸಮುದಾಯಗಳೇ ಈ ಜವಾಬ್ದಾರಿಯನ್ನು ಕೈಗೆತ್ತಿಕೊಳ್ಳಬೇಕಾಗಿದೆ.
ಯುಪಿಎ, ಸರ್ಕಾರ ರಚಿಸಿ ಅಧಿಕಾರಕ್ಕೆ ಬಂದಾಗ ಖಾಸಗಿ ವಲಯದಲ್ಲಿ ಮೀಸಲಾತಿಯನ್ನು ತರಲು ಯೋಚಿಸುತ್ತಿದ್ದಂತೆಯೇ ಕಾರ್ಪೊರೇಟ್ ಜಗತ್ತು ಒಕ್ಕೊರಲಿನಿಂದ ಅದನ್ನು ವಿರೋಧಿಸಿತು. ಚೇಂಬರ್ ಆಫ್ ಕಾಮರ್ಸ್, ‘ಮೀಸಲಾತಿಗೆ ಸಂಬಂಧಿಸಿದಂತೆ ಕಾಯ್ದೆ ಮಾಡಬೇಡಿ. ನಾವೇ ಎಲ್ಲರಿಗೂ ಅವಕಾಶವಿರುವಂತೆ ನೋಡಿಕೊಳ್ಳುತ್ತೇವೆ’ ಎಂದು ಉತ್ತರಿಸಿತು.
ದಲಿತ ಮೀಸಲಾತಿಯನ್ನಾಗಲಿ, ಹಿಂದುಳಿದ ವರ್ಗಗಳಿಗೆ ಅವಕಾಶ ನೀಡುವುದನ್ನಾಗಲಿ, ಮಹಿಳೆಯರೂ ದುಡಿಮೆಯ ಭಾಗವಾಗಿ ಇರಲೇಬೇಕೆಂಬ ಸಾಮಾಜಿಕ ಕಾಳಜಿಯನ್ನು ಅರ್ಥ ಮಾಡಿಕೊಳ್ಳುವುದು ಖಾಸಗಿ ಬಂಡವಾಳಗಾರರಿಗೆ ಅಷ್ಟು ಸುಲಭ ಸಾಧ್ಯವೇ? ಮೀಸಲಾತಿಯನ್ನು ‘ಚಾರಿಟಿ’ ಎಂದು ಭಾವಿಸಿದವರೇ ಹೆಚ್ಚು. ಮೀಸಲಾತಿಯಿಂದ ತಮ್ಮ ಅವಕಾಶಗಳನ್ನು ಕಸಿದು ದಲಿತರಿಗೆ, ಹಿಂದುಳಿದ ವರ್ಗದವರಿಗೆ ಕೊಡುತ್ತಿದ್ದಾರೆಂದು ತಿಳಿದಿರುವ ಮೇಲ್ವರ್ಗದ ಗೊಣಗಾಟ ಕಿವಿಯ ಮೇಲೆ ಬೀಳುತ್ತಲೇ ಇರುತ್ತದೆ.
ಖಾಸಗೀಕರಣವನ್ನು ಬೆಂಬಲಿಸುವ ಹಾಗೂ ಸ್ವಾಗತಿಸುವ ಮಂದಿಯ ಮನದಾಳದಲ್ಲಿ ಮೀಸಲಾತಿಗೆ ಹೊಡೆತ ಕೊಡಬೇಕೆಂಬ ಹುನ್ನಾರ ಸದಾ ನಡೆದೇ ಇದೆ. ಆ ಮೂಲಕ ನಿಜವಾದ ಪ್ರತಿಭೆಯುಳ್ಳವರು ಮಾತ್ರ ಉಳಿಯುತ್ತೇವೆ ಎಂಬ ಬಾಲಿಶವಾದ ನಂಬಿಕೆ ಈ ದೇಶದ ದುರಂತವಾಗಿದೆ. ಈ ಚರ್ಚೆ ಹೊಸದೇನೂ ಅಲ್ಲ. ಹಾಗೆಂದು ಕೈ ಬಿಡಲು ಅದು ಕೊನೆಗೊಂಡಿಲ್ಲ. ಅದರೊಳಗಿನ ಸಣ್ಣತನ ಬಹಿರಂಗಗೊಳ್ಳುತ್ತಲೇ ಇರುತ್ತದೆ.
ಹಿಂದುಳಿದ ವರ್ಗಗಳ ಚಳವಳಿಯ ನಾಯಕರೊಬ್ಬರು, ‘ನಾವೇನೂ ಅವರ ಆಸ್ತಿ ಕೇಳುತ್ತಿಲ್ಲ. ನಾವು ದುಡಿಯುತ್ತೀವಿ. ಕೆಲಸ ಕೊಡಿ ಅಂತ ಮಾತ್ರ ಕೇಳುತ್ತಿದ್ದೇವೆ. ಅವರ ಆಸ್ತಿಯ ಪಾಲನ್ನೇನೂ ಕೇಳುತ್ತಿಲ್ಲವಲ್ಲ’ ಎಂದು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದರು. ಖಾಸಗಿ ಕಂಪೆನಿಗಳನ್ನು ಸ್ಥಾಪಿಸಲು ನೆಲ, ಜಲವನ್ನು ಬಳಸಿದ ಮೇಲೆ ಇಲ್ಲಿನ ಸಂವಿಧಾನಕ್ಕೆ ಬದ್ಧವಾಗಿರಬೇಕಾದುದು ಅವರ ಕರ್ತವ್ಯವಲ್ಲವೇ ಎಂದು ದಲಿತರ ಹಕ್ಕುಗಳ ಪರ ಮಾತನಾಡುವ ಯುವಕರು ಕಂಪೆನಿಗಳ ಮಾಲೀಕರನ್ನು ಕೇಳುತ್ತಾರೆ.
ಸಾಮಾಜಿಕ ನ್ಯಾಯದ ನೆಲೆಯಲ್ಲಿ ಮೀಸಲಾತಿಯನ್ನು ಕೇಳಲಾಗುತ್ತಿದೆ. ಅಂದರೆ ಚಾರಿತ್ರಿಕವಾಗಿ ಸಮುದಾಯಗಳಿಗೆ ಆದ ಅನ್ಯಾಯವನ್ನು ಸರಿದೂಗಿಸಲು ಮೀಸಲಾತಿಯನ್ನು ಕಾಯ್ದುಕೊಳ್ಳಬೇಕಾಗುತ್ತದೆ ಎಂಬ ಸಾಮಾನ್ಯವಾದ ತರ್ಕವಿದ್ದೇ ಇದೆ. ಹೀಗೆ ವಾದಿಸುವಾಗಲೂ ಆಳದಲ್ಲಿ ಅಸಹಾಯಕತೆ ಮನೆಮಾಡಿದೆ. ಚರಿತ್ರೆಯುದ್ದಕ್ಕೂ ನಡೆದ ತಪ್ಪಿಗೆ ಅದನ್ನು ಸರಿದೂಗಿಸಲು ಅವಕಾಶವನ್ನು ಕೇಳಲಾಗುತ್ತಿದೆ.
‘ಅದಕ್ಕಾಗಿ ಇಷ್ಟೂ ವರ್ಷ ಶಿಕ್ಷಣದಲ್ಲಿ, ಸಾರ್ವಜನಿಕ ಕ್ಷೇತ್ರದಲ್ಲಿ ಮೀಸಲಾತಿಯನ್ನು ಕೊಟ್ಟಿದ್ದೇವೆ. ಅವರನ್ನು ಇನ್ನೂ ಎಷ್ಟು ವರ್ಷ ಹೀಗೆ ಕಾಯಬೇಕು’ ಎಂಬ ಪ್ರತಿ ಉತ್ತರ ಸದಾ ಸಿದ್ಧವಾಗಿರುತ್ತದೆ. ಇಲ್ಲಿ ಅವರು ಎಂಬ ದನಿಯಲ್ಲೂ ಮೈಲಿಗೆಯ ಭಾವ ಅಂಟಿರುವುದನ್ನು ಕಾಣಬಹುದು. ‘ಅವರು ೩೫ ಅಂಕ ತೆಗೆದುಕೊಂಡರೂ ಕೆಲಸ ಸಿಗುತ್ತೆ, ನಾವು ೯೦ ಅಂಕ ತೆಗೆದುಕೊಂಡರೂ ಸಿಗುವುದಿಲ್ಲ’. ಹೀಗೆ ಸಮಾಜವನ್ನು ಅರಿಯದ ಮಕ್ಕಳೂ ಮಾತಾಡುವಂತಾಗಿದೆ. ಇಲ್ಲಿ ಪ್ರತಿಭೆಗಿರುವ ಅಳತೆಗೋಲು ಅಂಕಪಟ್ಟಿ. ಕಲಿಸಿದ್ದಾದರೂ ಏನು? ಜೀವಶಾಸ್ತ್ರ ಓದಿ ‘ಕೋಳಿ ಮರಿ, ಮೊಟ್ಟೆಯಿಂದ ಹೊರಬರಲು ಎಷ್ಟು ದಿನ ಬೇಕು’ ಎಂದು ಕೇಳಿದರೆ ಪುಸ್ತಕದಲ್ಲಿ ಉತ್ತರ ಹುಡುಕುತ್ತಾರೆ.
ಹೀರೆಕಾಯಿ ಮರದಲ್ಲಿ ಬಿಡುತ್ತದೆ ಎಂದು ತಿಳಿದ ಸಸ್ಯಶಾಸ್ತ್ರ ಬೋಧಿಸುವ ಪ್ರತಿಭಾವಂತ ಅಧ್ಯಾಪಕರಿದ್ದಾರೆ. ಇಂತಹ ಪ್ರತಿಭಾವಂತರ ಸಲಹೆಯ ಮೇರೆಗೆ ಶಾಲಾ ಮಕ್ಕಳಿಗೆ ಖನಿಜಾಂಶದ ಕೊರತೆಯನ್ನು ನಿವಾರಿಸಲು ಹಾಲು, ಹಣ್ಣು, ಮೊಟ್ಟೆ, ತರಕಾರಿಗೆ ಬದಲಾಗಿ ಕಬ್ಬಿಣಾಂಶವಿರುವ ಮಾತ್ರೆ ಕೊಡಲು ಸರ್ಕಾರ ಮುಂದಾಗುತ್ತದೆ. ಹೋಗಲಿ ಬಿಡಿ. ಪ್ರತಿಭಾವಂತರ ಖಾಸಗಿ ಕಂಪೆನಿಗಳಲ್ಲಿ ಸಿದ್ಧವಾದ ಮಾತ್ರೆಗಳಲ್ಲವೆ? ಈವರೆಗಿನ ಸಾರ್ವಜನಿಕ ಕ್ಷೇತ್ರದಲ್ಲಾಗಲಿ, ಶಿಕ್ಷಣ ಕ್ಷೇತ್ರದಲ್ಲಾಗಲಿ ವಾಸ್ತವದಲ್ಲಿ ಮೀಸಲಾತಿಯನ್ನು ಅನುಸರಿಸಲು ಸಾಧ್ಯವಾಗಿದೆಯೇ ಎಂದೂ ಕೇಳಿಕೊಳ್ಳಬೇಕಾಗಿದೆ. ಜೀತವಿಮುಕ್ತರಾಗಿ, ಹುಟ್ಟಿಗಂಟಿದ ಮೈಲಿಗೆಯಿಂದ ಹೊರಬಂದು ಶಾಲೆ ಮೆಟ್ಟಿಲು ಹತ್ತುವ ಹೊತ್ತಿಗೆ ಅರ್ಧ ಶತಮಾನವೇ ಕಳೆದು ಹೋಗಿತ್ತು. ಉದ್ಯೋಗದಲ್ಲಿ ಮೀಸಲಾತಿ ಕಾಗದದ ಮೇಲಿತ್ತು.
ಆ ಎಲ್ಲಾ ಉದ್ಯೋಗಗಳಿಗೆ ಅರ್ಜಿಗಳೇ ಇರಲಿಲ್ಲ. ಆ ಹೊತ್ತಿಗೆ ಉಳಿದ ಸಮುದಾಯಗಳು ಮುಂದೆ ಹೋಗಿ ಇಂದು ಬಂಡವಾಳಗಾರರಾಗಿದ್ದಾರೆ. ಉದ್ಯೋಗಪತಿಗಳಾಗಿದ್ದಾರೆ. ‘ನಮಗೂ ಅರ್ಹತೆ ಬಂದಿದೆ’ ಎಂದು ಅರ್ಜಿ ಹಿಡಿದು ಹೋಗುವ ಹೊತ್ತಿಗೆ ಸಾರ್ವಜನಿಕ ವಲಯದ ಕೈಗಾರಿಕೆಗಳೇ ಮುಚ್ಚುತ್ತಾ ಬಂದಿವೆ. ಸಾರ್ವಜನಿಕ ವಲಯದಲ್ಲಿ ಬಹುಪಾಲು ನೇಮಕಾತಿ ನಿಂತು ಹೋಗಿದೆ. ಹಾಗಾಗಿ ಬರುವ ಹೊಸ ಪೀಳಿಗೆಗೆ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ತೆಗೆದುಕೊಳ್ಳಲಾಗುತ್ತದೆ. ಐವತ್ತು ಸಾವಿರ ರೂಪಾಯಿ ಸಂಬಳ ಕೊಡಬೇಕಾದ ಕಡೆ ಹತ್ತು ಸಾವಿರಕ್ಕೆ ದುಡಿಸಿಕೊಳ್ಳಲಾಗುತ್ತದೆ. ಕಂಪೆನಿಗೇನಾದರೂ ಆರ್ಥಿಕ ಮುಗ್ಗಟ್ಟು ಎದುರಾದಲ್ಲಿ ಮೊದಲು ಗೇಟ್ ಪಾಸ್ ತೆಗೆದುಕೊಳ್ಳುವವರು ಇವರೇ ಆಗಿರುತ್ತಾರೆ. ಯೂನಿಯನ್ಗಳು ಸಹ ಕಾಯಂ ನೌಕರರ ಕ್ಷೇಮವನ್ನೇ ನೋಡುತ್ತವೆ.
ದಿನಗೂಲಿಯವರ ಹಿತ ಕಾಯುವವರಾರು? ಗುತ್ತಿಗೆ ನೌಕರರು ಎನ್ನುವುದಕ್ಕಿಂತ ಅರೆಹೊಟ್ಟೆ ನೌಕರರೆನ್ನುವುದು ಹೆಚ್ಚು ಸಮಂಜಸ. ಈ ಸ್ಥಿತಿ ಬೃಹತ್ ಕಂಪೆನಿಗಳಾದ ಬಿಎಚ್ಇಎಲ್, ಎಚ್ಎಎಲ್ನಿಂದ ಕೇಳಿಬರುವ ದಿನನಿತ್ಯದ ವೇದನೆಯಾಗಿದೆ.
ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯನ್ನು ಕೇಳುವುದು ಸಾಮಾಜಿಕ ನ್ಯಾಯದ ವಾದ ಮಾತ್ರವಲ್ಲ, ಅದಕ್ಕೆ ಇನ್ನೂ ಹಲವು ಮುಖಗಳಿವೆ. ಅಮೆರಿಕದಲ್ಲಿ ನಡೆದ ಸಂಶೋಧನೆಗಳಲ್ಲಿ ಕಂಡುಬಂದ ವಿಚಾರವೆಂದರೆ ಯಾವುದೇ ಕ್ಷೇತ್ರದಲ್ಲಿ ಮಿಶ್ರ ಸಮುದಾಯವನ್ನು ತೊಡಗಿಸಿಕೊಳ್ಳುವುದರಿಂದ ಸಿಗುವ ಪ್ರತಿಫಲ ಒಂದೇ ಹಿನ್ನೆಲೆಯ ಜನರಿಂದ ದೊರೆಯಲಾರದು. ಇದು ಶಾಲಾ ಕಾಲೇಜುಗಳಾಗಿರಬಹುದು ಅಥವಾ ಕಾರ್ಖಾನೆಗಳಾಗಿರಬಹುದು. ಎಲ್ಲದಕ್ಕೂ ಇದು ಅನ್ವಯಿಸುತ್ತದೆ. ಕರಿಯರಿಲ್ಲದ ತಂಡಗಳಿಗಿಂತ ಆಫ್ರಿಕಾದ ಅಮೆರಿಕನ್ನರು, ಲ್ಯಾಟಿನ್ ಅಮೆರಿಕನ್ನರು, ಏಷ್ಯನ್ನರು ಇರುವ ಕಡೆ ಅದರ ಸೊಗಸು ಏನೆಂದು ಅಮೆರಿಕನ್ನರಿಗೆ ಅರ್ಥವಾಗಿದೆ.
ಹಾಗಾಗಿಯೇ ಸರ್ಕಾರದ ಆಡಳಿತದಲ್ಲಿ ಜನಾಂಗಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ನೀಡಲಾಗಿದೆ. ಚಾರಿತ್ರಿಕ ದೋಷಗಳಿಗೆ ಕಂಡುಕೊಳ್ಳುತ್ತಿರುವ ಪರಿಹಾರವಾಗಿದೆ ಇದು. ಇದೇ ಖಾಸಗಿ ಕ್ಷೇತ್ರಕ್ಕೆ ಬಂದಾಗ ಯಾವ ಕೈಗಾರಿಕೆಗಳು ಲಕ್ಷ ಡಾಲರ್ಗಿಂತ ಹೆಚ್ಚು ಮೊತ್ತದ ಸರ್ಕಾರದ ಯೋಜನೆಯನ್ನು ಪಡೆದುಕೊಳ್ಳುತ್ತವೆಯೋ ಆ ಎಲ್ಲಾ ಕಂಪೆನಿಗಳಲ್ಲೂ ಆಫ್ರಿಕನ್ ಅಮೆರಿಕನ್ನರಿಗೆ ಮತ್ತಿತರ ಹಿಂದುಳಿದ ಸಮುದಾಯಗಳಿಗೆ ಉದ್ಯೋಗದಲ್ಲಿ ಮೀಸಲಾತಿ ಕಡ್ಡಾಯವಾಗಿರುತ್ತದೆ. ಭಾರತದಲ್ಲಿರುವ ಮೀಸಲಾತಿ ಕುರಿತು ಕಿಡಿಕಾರುವ ಬಹುರಾಷ್ಟ್ರೀಯ ಕಂಪೆನಿಗಳು ಅಮೆರಿಕದಲ್ಲಿ ತಮ್ಮ ಔದಾರ್ಯ ಮೆರೆಯುತ್ತವೆ. ಬಹುಶಃ ಭಾರತದಲ್ಲಿ ಅಂತಹ ಒತ್ತಡವನ್ನು ಯಾರೂ ಹೇರಿರಲಾರರು.
ದೊಡ್ಡ ಖಾಸಗಿ ಕಂಪೆನಿಗಳು, ಖಾಸಗಿ ಶಾಲಾ ಕಾಲೇಜುಗಳು ತಳ ಸಮುದಾಯದಿಂದ ಬಂದವರಿಗೆ ತೋರಿಕೆಗಾಗಿ ಕೆಲಸ ಕೊಡುವುದಿದೆ. ಹಾಗೆ ಕೊಡುವಾಗ ಕಸ ಗುಡಿಸುವ, ಇಲ್ಲ ಬಾಗಿಲು ಕಾಯುವ ನಾಲ್ಕನೇ ದರ್ಜೆ ನೌಕರಿಯನ್ನು ಕೊಟ್ಟು ಸಮಜಾಯಿಷಿ ನೀಡುವುದಿತ್ತು. ‘ಔಟ್ ಸೋರ್ಸಿಂಗ್’ (ಹೊರ ಗುತ್ತಿಗೆ) ಎಂಬ ಹೊಸ ನಾಮಧೇಯದಲ್ಲಿ ಈ ಕೆಲಸಗಳನ್ನು ಕಾಂಟ್ರ್ಯಾಕ್ಟ್ ಕೊಡಲಾಗುತ್ತಿದೆ. ಎಂದೂ ಕಾಯಂ ಆಗದ ಕೆಲಸ. ನಾಲ್ಕನೇ ದರ್ಜೆ ಕೆಲಸಕ್ಕೂ ಕಲ್ಲು. ಕಸ ಗುಡಿಸುವವನ ಮೇಲೆ ಜುಟ್ಟು ಹಿಡಿಯುವ ನೂರಾರು ಸಂಸ್ಥೆಗಳು ಇಂದು ಹುಟ್ಟಿಕೊಂಡಿವೆ. ಬಡವರನ್ನು ಮಟ್ಟ ಹಾಕಲು ಏನೆಲ್ಲಾ ಯೋಜನೆ! ಇದರಲ್ಲಿ ಖಾಸಗಿ ವಲಯ ಮಾತ್ರವಲ್ಲ ಸರ್ಕಾರಿ ಸಂಸ್ಥೆಗಳೂ ಹಿಂದೆ ಬಿದ್ದಿಲ್ಲ.
ಕಾಲೇಜು, ವಿಶ್ವವಿದ್ಯಾಲಯದ ಹಂತದಲ್ಲಿ ಮೀಸಲಾತಿ ಅನ್ವಯ ಅರ್ಜಿ ಕರೆದರೆ ಒಂದು ಕಾಲದಲ್ಲಿ ಅರ್ಜಿಗಳೇ ಬರುತ್ತಿರಲಿಲ್ಲ. ಅಂತಹ ಸಂದರ್ಭಗಳಲ್ಲಿ ಆ ಹುದ್ದೆಗಳನ್ನು ಸಾಮಾನ್ಯ ವರ್ಗಕ್ಕೆ ಬದಲಾಯಿಸಲಾಗುತ್ತಿತ್ತು. ಆನಂತರದಲ್ಲಿ ಬದಲಾಯಿಸಲಾಗದಂತೆ ಕಾನೂನನ್ನು ತಂದಾಗ ಆ ಹುದ್ದೆಗಳನ್ನು ಹಾಗೇ ಖಾಲಿ ಉಳಿಸಿಕೊಳ್ಳಲಾಗುತ್ತಿತ್ತು. ಆ ಮೂಲಕ ಅರೆಕಾಲಿಕ ಉದ್ಯೋಗಗಳನ್ನು ನೀಡಿ ತಮ್ಮ ಕುಲಜರು ಮಾತ್ರವೇ ಸಂಸ್ಥೆಗಳಲ್ಲಿ ಉಳಿಯುವಂತೆ ನೋಡಿಕೊಳ್ಳಲಾಗುತ್ತಿತ್ತು.
ಅವೆಲ್ಲಾ ಜಾತಿ ಹಿತಾಸಕ್ತಿಯನ್ನು ಹೊಂದಿದ ಖಾಸಗಿ ಸಂಸ್ಥೆಗಳಾಗಿರುತ್ತವೆ, ಇಲ್ಲವೇ ಮಠಮಾನ್ಯಗಳ ಅಡಿಯಲ್ಲಿ ಬೆಳೆದು ನಿಂತಿರುತ್ತವೆ. ಇಂತಹ ಧೋರಣೆಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರುಗಳು ದಲಿತ ಅಥವಾ ಮತ್ತಾವುದೇ ಹಿಂದುಳಿದ ವಿದ್ಯಾರ್ಥಿ ತೇರ್ಗಡೆಯಾಗದಂತೆ ನೋಡಿಕೊಳ್ಳುತ್ತಿದ್ದರು. ಇಲ್ಲವೇ ಅರ್ಜಿ ಸಲ್ಲಿಸಲು ಬೇಕಾದ ಕನಿಷ್ಠ ಅಂಕಗಳೂ ಬರದಂತೆ ಕಾಯುತ್ತಿದ್ದರು. ಇಂತಹ ಪ್ರಾಧ್ಯಾಪಕರೊಬ್ಬರು ದಾಖಲೆ ಸೃಷ್ಟಿಸುವ ಸಂಖ್ಯೆಯ ವಿದ್ಯಾರ್ಥಿಗಳಿಗೆ ಪಿಎಚ್.ಡಿ ಮಾರ್ಗದರ್ಶನ ನೀಡಿದ್ದರು.
ಅದರಲ್ಲಿ ನೂರಕ್ಕೆ ನೂರು ಮಂದಿಯೂ ಅವರ ಜಾತಿಯವರೇ ಇದ್ದರು. ಹಾಗಾಗಿ ಆ ವಿಭಾಗಗಳಿಗೆ ಬೇರೆ ಜಾತಿಯ ಅಭ್ಯರ್ಥಿಗಳು ಅರ್ಜಿ ಹಾಕಲೂ ಸಾಧ್ಯವಾಗುತ್ತಿರಲಿಲ್ಲ. ಹಿಂದುಳಿದ ವರ್ಗಗಳ ಮೀಸಲಾತಿಗೆ ನ್ಯಾಯ ಒದಗಿಸಲು, ಇಂದಿಗೂ ಅಭ್ಯರ್ಥಿಗಳಿಲ್ಲದ ಪರಿಸ್ಥಿತಿಯೇ ಇದೆ.
ಸಂವಿಧಾನ ರಚನಾ ಸಭೆಯಲ್ಲಿ ಬಿ.ಆರ್. ಅಂಬೇಡ್ಕರ್ ಅವರು ಮೀಸಲಾತಿಯನ್ನು ಕುರಿತು ಪ್ರಸ್ತಾವ ಮಂಡಿಸುವಾಗಲೂ ಅವರ ಉದ್ದೇಶ ಒಟ್ಟಾರೆ ಆಡಳಿತದಲ್ಲಿ ಎಲ್ಲರನ್ನೂ ಒಳಗೊಳ್ಳಬೇಕೆಂಬುದಾಗಿತ್ತು. ಮತ್ತು ಅಲ್ಲಿ ಅವರು ಹಿಂದುಳಿದ ವರ್ಗದ ಪರಿಕಲ್ಪನೆಯನ್ನು ವಿವರಿಸುತ್ತಾರೆ. ಆ ವಾದದಲ್ಲೂ ಕೇವಲ ದಲಿತ ಮೀಸಲಾತಿಯನ್ನು ಚರ್ಚಿಸದೆ ಉಳಿದವರಿಗೆ ಬೇಸರವೇ ಆದರೂ ಹೇಳಲೇಬೇಕಾದ ಸಮುದಾಯಗಳ ಹಿಂದುಳಿಯುವಿಕೆಗೆ ಕಾರಣವನ್ನು ವಿವರಿಸುತ್ತಾರೆ. ಬಹುಶಃ ನಾವಿಂದು ಅರ್ಥ ಮಾಡಿಕೊಳ್ಳಬೇಕಾಗಿರುವುದು ಎಲ್ಲರನ್ನೂ ಒಳಗೊಳ್ಳದ ಆಡಳಿತ ನೀತಿ ಪ್ರಜಾಪ್ರಭುತ್ವವಾಗಲಾರದು.
ಮೀಸಲಾತಿ, ಸಮಾಜವಾದಿ ನೆಲೆಯ ಆಲೋಚನೆಯಷ್ಟೇ ಅಲ್ಲ, ಪ್ರಜಾಪ್ರಭುತ್ವದ ಅರ್ಥಪರಿಪೂರ್ಣತೆಗೂ ಇದು ಅನಿವಾರ್ಯ. ಸಮಾಜದ ಎಲ್ಲ ಜನರನ್ನೂ ಒಳಗೊಳ್ಳದ ಆಡಳಿತ ಪ್ರಜಾಪ್ರಭುತ್ವವಾಗಲು ಹೇಗೆ ಸಾಧ್ಯ? ಇದೇ ವಾದ ಉತ್ಪಾದನಾ ಕ್ಷೇತ್ರಕ್ಕೂ ಅನ್ವಯಿಸುತ್ತದೆ. ಮಹಿಳೆಯರನ್ನು, ದಲಿತರನ್ನು, ಹಿಂದುಳಿದವರನ್ನು ಹೊರಗಿಟ್ಟು ಹಿಡಿ ಮಂದಿ ದೇಶ ಕಟ್ಟಬಲ್ಲರೆ? ಪ್ರತಿಭೆ, ಜ್ಞಾನ ಹತ್ತು ಹಲವು ನೆಲೆಗಳಿಂದ ಮೂಡಿಬರುತ್ತದೆ. ಅದನ್ನು ಅಳೆಯುವ ಅಳತೆಗೋಲು ಅಂಕಪಟ್ಟಿಯಾಗಲಾರದು.
ಕಾಡುಕುರುಬ, ಜೇನುಕುರುಬ, ಇರುಳಿಗರನ್ನು ಹೊರಗಿಟ್ಟು ಭಾರತದ ಅರಣ್ಯನೀತಿಯನ್ನು ರೂಪಿಸುತ್ತೇವೆ. ರೈತರೇ ಇಲ್ಲದೆ ಬೆಳೆ ಬೆಳೆಯಲು ಬಂಡವಾಳಗಾರರು ಮುಂದಾಗಿದ್ದಾರೆ. ಕರಾವಳಿಯ ಬೆಸ್ತರಿಲ್ಲದೆ ಕರಾವಳಿಯ ಯೋಜನೆಗಳು ರೂಪಿತವಾಗುತ್ತವೆ. ದೊಡ್ಡ ಬಂಡವಾಳವನ್ನು ಹೂಡಿ ಭಾರತ ಸರ್ಕಾರ ಉಪಗ್ರಹವನ್ನು ಉಡಾಯಿಸುತ್ತದೆ. ಅಲ್ಲಿ ದೊರೆಯುವ ಸಾಗರದ ಜೀವಗಳ ಮಾಹಿತಿ ಚಿತ್ರಗಳು ಸಂಗ್ರಹಾಲಯದಲ್ಲಿ ಶೇಖರಣೆಯಾಗಿವೆ. ಅದನ್ನು ಬಳಸುವವರೇ ಗತಿ ಇಲ್ಲ.
ಕರಾವಳಿಯಲ್ಲಿ ಅದರಲ್ಲೂ ಸಾಗರವೇ ಉಸಿರಾಗಿರುವ ಬೆಸ್ತರ ಅನುಭವದಿಂದ ಬಂದ ಜ್ಞಾನವನ್ನು ಪರಿಗಣಿಸಲು ಪ್ರತಿಭಾವಂತ ವಿಜ್ಞಾನಿಗಳು ಸಿದ್ಧರಿಲ್ಲ. ಆ ಜ್ಞಾನವನ್ನು ಅಳೆದು ಸರ್ಟಿಫಿಕೇಟ್ ಕೊಡಲು ವಿಶ್ವವಿದ್ಯಾಲಯಗಳಿಲ್ಲ. ಇಲ್ಲಿ ಮೀಸಲಾತಿಯ ಅಗತ್ಯವಿರುವುದು ಸಮಾಜದ ಒಳಿತಿಗಾಗಿಯೇ ಹೊರತು ಬೆಸ್ತನಿಗಾಗಿಯಲ್ಲ. ಬಹುರಾಷ್ಟ್ರೀಯ ಕಂಪೆನಿಯ ದೊಡ್ಡ ಬಂಡವಾಳಗಾರ ಮೀಸಲಾತಿಯಿಂದ ಬಂದ ಬೆಸ್ತನ ಸಹಜ ಪ್ರತಿಭೆಯಿಂದ ಕೋಟ್ಯಂತರ ರೂಪಾಯಿ ಲಾಭ ಗಳಿಸಬಹುದು.
ಅದಕ್ಕೆ ಪ್ರತಿಯಾಗಿ ಬೆಸ್ತನ ಕುಟುಂಬವೊಂದು ಸುಧಾರಿಸುತ್ತದೆ. ಅಲ್ಲಿಯೂ ಮೀನುಗಾರಿಕೆಯನ್ನೇ ನಂಬಿ ಬದುಕಿದ್ದ ಜನರ ಸಾಗರದ ಮೇಲೆ ಲಗ್ಗೆ ಹಾಕಿದ್ದಕ್ಕೆ ಕೊಡಬಹುದಾದ ಸಣ್ಣ ಪರಿಹಾರ. ಶತಮಾನಗಳ ಅನುಭವದ ಜ್ಞಾನ ಕಳೆದು ಹೋಗುವ ಮುನ್ನ ಸಮಾಜ ಅದರ ಲಾಭ ಪಡೆಯಲು ಮೀಸಲಾತಿಯನ್ನು ನೀಡಬೇಕಾಗಿದೆ. ಜ್ಞಾನದ ವಿಸ್ತರಣೆಗಾಗಿ ಮೀಸಲಾತಿಯ ಅಗತ್ಯವಿದೆ. ಉತ್ಪಾದನಾ ಲೋಕಕ್ಕೆ ಖಾಸಗಿ ಬಂಡವಾಳಗಾರರು ನುಗ್ಗಿ ಬರಲು ದಾರಿ ಮಾಡಿಕೊಂಡಿರುವ ಈ ಕಾಲದಲ್ಲಿ ಒತ್ತಾಯ ಪೂರ್ವಕವಾಗಿಯಾದರೂ ಮೀಸಲಾತಿಯ ಮೂಲಕವಾದರೂ ಎಲ್ಲರೂ ದುಡಿಮೆಗೆ ಕೈಜೋಡಿಸುವಂತೆ ಮಾಡುವುದು ಅನಿವಾರ್ಯ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.