ಧರ್ಮ ಮಾನವನ ಬೆನ್ನೆಲುಬು. ಬದುಕಲು, ಬದುಕಿ ಕುಲ ಕೀರ್ತಿ ಬದುಕಿಸಲು ಧರ್ಮವೇ ಪ್ರಾಣ. ಅಂತೆಯೇ ಬಸವಣ್ಣನವರು ‘ದಯವೇ ಧರ್ಮದ ಮೂಲ’ ಎಂದಿದ್ದಾರೆ. ಈಗ ದೇವರು, ಧರ್ಮದ ಹೆಸರಿನಲ್ಲಿ ಮತಿಹೀನ ಕೆಲಸಗಳೇ ಹೆಚ್ಚಾಗಿವೆ. ಹಿಂಸೆಯಲ್ಲಿ, ಪ್ರಾಣವಧೆಯಲ್ಲಿ ಪುಣ್ಯವುಂಟೆ?
ದಯೆಯು ಒಂದು ದೈವಿ ಸಂಪದ್ಗುಣವಾಗಿದೆ. ಅಸುರಿ ಗುಣಗಳಿಂದ ಅಸುರತ್ವ ಬರುವಂತೆ, ದೈವಿ ಗುಣಗಳಿಂದ ದೇವತ್ವ ಬರುವುದು. ಯಾರು ತನ್ನ ಮೇಲಾಗಲಿ, ಪರರ ಮೇಲಾಗಲಿ ದಯೆ ತೋರುವುದಿಲ್ಲವೋ ಅಂಥವರು ಮನುಷ್ಯ ಲೋಕದಲ್ಲಿ ಬಲಿ ತಿಂದು ಬದುಕುವ ಕಾಗೆಗಿಂತಲೂ ಹೇಯವೆಂದಿದ್ದಾರೆ. ಅಂಥವರ ಜೀವನ ನಿರರ್ಥಕ.