ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿ ಸಂಭ್ರಮ | ರಾಷ್ಟ್ರವಿಪತ್ತಿನಲ್ಲಿ ವ್ರತ ಪೂಜೆಗಳು

Last Updated 8 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಕೊರೊನಾ ಇಂದು ವಿಶ್ವದಾದ್ಯಂತ ಭೀತಿಯನ್ನು ಹುಟ್ಟಿಸಿದೆ. ನಮ್ಮ ದೇಶದಲ್ಲೂ ಎಲ್ಲೆಡೆ ಪಸರಿಸುತ್ತಲೇ ಇದೆ. ಈ ವೈರಸ್‌ನ ಹರಡುವಿಕೆಯನ್ನು ತಡೆಯಲು ಸರ್ಕಾರ ಅನೇಕ ನಿರ್ದೇಶನಗಳನ್ನು ಕೊಟ್ಟಿದೆ. ಸರ್ಕಾರದ ಆದೇಶವನ್ನು ಪಾಲಿಸುವುದು ನಮ್ಮ ಕರ್ತವ್ಯ; ಈಗಿನ ಸಂದರ್ಭ ನಮ್ಮ ಅಳಿವು–ಉಳಿವಿನ ಪ್ರಶ್ನೆಯಾಗಿದೆ.

ಈಗ ನಾವೆಲ್ಲರೂ ಲಾಕ್‌ಡೌನ್‌ನಲ್ಲಿದ್ದೇವೆ. ಈ ಸಮಯದಲ್ಲಿ ನಮ್ಮ ನಿತ್ಯ–ನೈಮಿತ್ತಿಕ ಧಾರ್ಮಿಕ ಆಚರಣೆಗಳನ್ನು ಹೇಗೆ ನಿರ್ವಹಿಸುವುದು ಎಂಬ ಪ್ರಶ್ನೆ ಹಲವರಿಗೆ ಎದುರಾಗುವುದು ಸಹಜ. ನಮ್ಮ ಪರಂಪರೆಗೂ ಕುಟುಂಬಕ್ಕೂ ದೇಶಕ್ಕೂ ತೊಂದರೆಯಾಗದಂತೆ ನಮ್ಮ ಧಾರ್ಮಿಕ ಆಚರಣೆಗಳನ್ನು ನಡೆಸಬೇಕಾಗಿದೆ.

ದೇವಪೂಜೆ ನಿತ್ಯಕರ್ಮ. ಇದನ್ನು ಬಿಟ್ಟರೆ ದೋಷ. ಈಗ ದೇವಾಲಯಗಳನ್ನೂ ತೆರೆಯುವಂತಿಲ್ಲ; ಜನರು ಗುಂಪು ಸೇರುತ್ತಾರೆ. ಅರ್ಚಕರಿಗೂ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಆಗುವುದೂ ಇಲ್ಲ; ಹೋದರೆ ಎದುರಾಗುವ ಸಂದರ್ಭವೂ ಇದೆ. ಹೀಗಾಗಿ ಪೂಜೆಯಲ್ಲಿ ವಿಚ್ಛತ್ತಿ ಎಂದರೆ, ಭಂಗ ಉಂಟಾದರೆ ನಮಗೆ ಕೇಡು ಉಂಟಾಗುತ್ತದೆ ಎಂದು ಭಾವಿಸಬೇಕಾದ್ದಿಲ್ಲ. ಧರ್ಮಶಾಸ್ತ್ರಕಾರರಾದ ಬೋಧಾಯನಾಚಾರ್ಯರು ಹೀಗೆಂದಿದ್ದಾರೆ: ‘ಪೂರ್ವಪ್ರತಿಷ್ಠಾಪಿತಸ್ಯ ಅಬುದ್ಧಿಪೂರ್ವಕಂ ಏಕರಾತ್ರಂ ದ್ವಿರಾತ್ರಂ ಏಕಮಾಸಂ ದ್ವಿಮಾಸಂ ಅರ್ಚನಾದಿ ವಿಚ್ಛೇದೆ....’ (ನಿರ್ಣಯಸಿಂಧು). ಇದರ ತಾತ್ಪರ್ಯ: ‘ಬುದ್ಧಿಪೂರ್ವಕವಾಗಲ್ಲದೆ ರಾಷ್ಟ್ರದ ವಿಪತ್ತಿನ ವೇಳೆಯಲ್ಲಿ ಪ್ರತಿದಿನದ ದೇವಾಲಯಪೂಜೆಯಲ್ಲಿ ಭಂಗ ಉಂಟಾದಾಗ ಪ್ರತಿಮೆಯಲ್ಲಿ ದೇವತಾಸಾನ್ನಿಧ್ಯ ಇರುವುದಿಲ್ಲ.

ಹೀಗೆ ಎರಡು ತಿಂಗಳು ಭಂಗ ನಡೆದರೂ, ಪುನಃ ಪೂಜೆಯನ್ನು ಪ್ರಾರಂಭಿಸುವ ಮೊದಲು ಶಾಸ್ತ್ರದಲ್ಲಿ ಹೇಳಿದ ಪ್ರಾಯಶ್ಚಿತ್ತವನ್ನು ಕೈಗೊಂಡು ಪೂಜೆ ಮಾಡಿದರೆ ದೇವತಾ ಅನುಗ್ರಹ ಉಂಟಾಗುತ್ತದೆ; ಗ್ರಾಮದ, ರಾಷ್ಟ್ರದ ಅಭ್ಯುದಯವೂ ಉಂಟಾಗುತ್ತದೆ.’ ಶ್ರಾದ್ಧ, ಎಂದರೆ ಹಿರಿಯರ ದಿನವನ್ನು ಮೃತತಿಥಿಯಂದು ನಡೆಸಬೇಕಾದ್ದು ಕರ್ತವ್ಯ. ಆದರೆ ಈಗಿನ ಸಂದರ್ಭದಲ್ಲಿ ಶ್ರಾದ್ಧದ ಆಚರಣೆಯಿಂದ ಸಾಮಾಜಿಕ ಅಂತರಕ್ಕೂ ಭಂಗ ಬರಬಹುದು. ಇಂಥ ವಿಷಮ ಸಂದರ್ಭದಲ್ಲೂ ಶಾಸ್ತ್ರಕಾರರು ರಿಯಾಯಿತಿಗಳನ್ನು ತೋರಿದ್ದಾರೆ. ವ್ಯಾಘ್ರಪಾದ ಎಂಬ ಧರ್ಮಶಾಸ್ತ್ರಕಾರ ಹೀಗೆಂದಿದ್ದಾರೆ: ‘ಆರ್ತವೇ ದೇಶಕಾಲಾನಾಂ ವಿಪ್ಲವೇ ಸಮುಪಸ್ಥಿತೇ ಆಮಶ್ರಾದ್ಧಂ ದ್ವಿಜೈಃ ಕಾರ್ಯಂ...’ ಎಂದರೆ ದೇಶ ವಿಪತ್ತಿನಲ್ಲಿರುವ ಸಂದರ್ಭದಲ್ಲಿ ಆಮಶ್ರಾದ್ಧವನ್ನು ಮಾಡಬಹುದು.

ಆಮಶ್ರಾದ್ಧ ಎಂದರೆ ಪಾಕದ್ರವ್ಯವನ್ನು (ಅಕ್ಕಿ, ಬೇಳೆ, ತರಕಾರಿ ಮುಂತಾದವನ್ನು) ಯೋಗ್ಯರಿಗೆ ದಾನ ಮಾಡುವುದು. ಗೋವಿಗೆ ಗ್ರಾಸ, ಎಂದರೆ ಮೇವನ್ನೂ ನೀಡಬಹುದು. ಈ ಲಾಕ್‌ಡೌನ್‌ ಸಂದರ್ಭದಲ್ಲಿ ಯಾರೂ ಸಿಗಲಾರರು. ಹೀಗಾಗಿ ಸಂಕಲ್ಪಮಾಡಿ, ಅವನ್ನು ಒಂದೆಡೆ ತೆಗೆದಿಟ್ಟುಕೊಂಡು, ಬಳಿಕ ಯೋಗ್ಯ ಸಮಯ ಪ್ರಾಪ್ತವಾದಾಗ ದಾನ ಮಾಡಬಹುದು.

ಹೀಗೆಯೇ ವ್ರತಾಚರಣೆಗಳನ್ನು ಮಾಡಲಾಗದಿದ್ದರೂ ಆ ದಿನಗಳಲ್ಲಿ ಗಾಯತ್ರೀಜಪ, ಅಷ್ಟಾಕ್ಷರೀಜಪಗಳನ್ನು ಮಾಡಿ, ವಿಘ್ನನಿವಾರಣೆಯಾದ ಬಳಿಕ ವ್ರತವನ್ನು ಮಾಡಬಹುದು ಎಂದು ‘ಧರ್ಮಸಿಂಧು’ ಹೇಳುತ್ತದೆ.

ರಾಷ್ಟ್ರಕ್ಕೆ ವಿಪತ್ತು ಒದಗಿದಾಗ ಧಾರ್ಮಿಕ ವಿಧಿ–ವಿಧಾನಗಳಿಗೆ ಪರ್ಯಾಯ ಮಾರ್ಗಗಳನ್ನು ಸೂಚಿಸುವ ಔದಾರ್ಯವನ್ನು ತೋರಿದ್ದಾರೆ. ಆ ಮೂಲಕ ರಾಷ್ಟ್ರದ ಹಿತವನ್ನೂ ಕುಟುಂಬದ ಹಿತವನ್ನೂ ಕಾಪಾಡುವ ಪ್ರಬುದ್ಧತೆಯನ್ನು ತೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT