ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಾನುಜ ಜಯಂತಿ 2022: ಕಾರುಣ್ಯದ ಆಚಾರ್ಯ ರಾಮಾನುಜಾಚಾರ್ಯ

Last Updated 4 ಮೇ 2022, 19:31 IST
ಅಕ್ಷರ ಗಾತ್ರ

ಭಗವದ್ರಾಮಾನುಜರ ಜನನವಾದದ್ದು ಕಾಂಚಿಪುರದ ಬಳಿಯಿರುವ ಶ್ರೀಪೆರಂಬುದೂರ್ ಎಂಬ ಗ್ರಾಮದಲ್ಲಿ, ಕ್ರಿ. ಶ. 1017ರಲ್ಲಿ. ಅವರ ಜನ್ಮನಾಮ ಲಕ್ಷ್ಮಣಸೂರಿ ಎಂದಿತ್ತು ಎನ್ನುವ ಪ್ರತೀತಿಯುಂಟು. ತಮ್ಮ ಸೋದರಮಾವಂದಿರಾದ ಶ್ರೀ ತಿರುಮಲೈ ನಂಬಿ ಅವರ ಮೂಲಕ ಆಧ್ಯಾತ್ಮಿಕ ವಿದ್ಯಾಭ್ಯಾಸವು ಪ್ರಾರಂಭವಾಯಿತು. ಮುಂದೆ ವೇದಾಂತ ಶಾಸ್ತ್ರಗಳ ಅಧ್ಯಯನವು ಯಾದವ
ಪ್ರಕಾಶರ ಮಾರ್ಗದರ್ಶನದಲ್ಲಿ ನಡೆದರೂ, ಶಿಷ್ಯರಿಗೆ ಗುರುಗಳ ತಾತ್ತ್ವಿಕಬೋಧನೆಯು ಸರಿಹೊಂದದೆ, ರಾಮಾನುಜರು ಯಾದವಪ್ರಕಾಶರಿಂದ ದೂರ ಸರಿದರು. ಮುಂದೆ ಯಾಮುನಾಚಾರ್ಯರೆಂಬ ವಿಶಿಷ್ಟಾದ್ವೈತ ಗುರುಗಳ ಶಿಷ್ಯತ್ತ್ವಕ್ಕಾಗಿ ಶ್ರೀರಂಗಂ ನಗರಕ್ಕೆ ತೆರಳಿದ ರಾಮಾನುಜರಿಗೆ ಅವರು ಅಲ್ಲಿಗೆ ಸೇರುವ ಮುನ್ನವೇ ಗುರುಗಳು ವೈಕುಂಠವನ್ನು ಸೇರಿದ್ದು ವಿಧಿವೈಚಿತ್ಯ್ರವೆನಿಸಿತು. ರಾಮಾನುಜರು ಜ್ಞಾನಕ್ಕಾಗಿ ವಿವಿಧ ವರ್ಣಗಳ ಗುರುಗಳನ್ನು ಆಶ್ರಯಿಸಿ ಶಾಸ್ತ್ರಗಳ ಅಧ್ಯಯನವನ್ನು ಮಾಡಿದರು. ಯಾಮುನಾಚಾರ್ಯರ ಶಿಷ್ಯರಾದ ಮಹಾಪೂರ್ಣರಿಂದ ಸಂನ್ಯಾಸದೀಕ್ಷೆಯನ್ನು ಪಡೆದರು.

ಮುಂದೆ ಶ್ರೀರಂಗಂ ನಗರದಲ್ಲಿ ಅರವತ್ತಕ್ಕೂ ಹೆಚ್ಚು ವರ್ಷಗಳು ಬಾಳಿ ಅಲ್ಲಿ ಲಕ್ಷಕ್ಕೂ ಹೆಚ್ಚು ಗೃಹಸ್ಥರಿಗೆ, ಏಳು ನೂರು ಜೀಯರ್‌ಗಳಿಗೆ, ಎಪ್ಪತ್ತು ನಾಲ್ಕು ಆಚಾರ್ಯಪುರುಷರಿಗೆ ಮಾರ್ಗದರ್ಶನವನ್ನು ನೀಡಿ, ಹಲವರಿಗೆ ಶ್ರೀವೈಷ್ಣವತತ್ತ್ವದ ಬೋಧನೆಯನ್ನು ಮಾಡಿದರು. ಶ್ರೀರಂಗಂ ದೇವಾಲಯದ ಆಚರಣೆ ಮತ್ತು ಆಡಳಿತಗಳಲ್ಲಿ ಅನೇಕ ಉಪಯುಕ್ತವಾದ ಬದಲಾವಣೆಗಳನ್ನು ತಂದರು. ಮುಂದೆ ತಿರುಪತಿಗೂ ಭೇಟಿ ನೀಡಿ ಅಲ್ಲಿಯೂ ಸರ್ಜನಾತ್ಮಕವಾದ ಬದಲಾವಣೆಗಳನ್ನು ಮಾಡಿದರು. ಯಾಮುನಾಚಾರ್ಯರು ತೀರಿಕೊಂಡಾಗ ಅವರ ಬಲಗೈಯ ಮೂರು ಬೆರಳುಗಳು ಚಾಚಿದ್ದು, ಇನ್ನೆರಡು ಬೆರಳುಗಳು ಮಡಿಚಿದ್ದನ್ನು ರಾಮಾನುಜರು ಕಂಡಿದ್ದರು - ಇದು ಯಾಮುನಾಚಾರ್ಯರಿಗೆ ಇದ್ದ ಮೂರು ಕೊನೆಗಾಣದ ಧ್ಯೇಯಗಳ ಸಂಕೇತವೆಂದು ರಾಮಾನುಜರು ಅರಿತರು. ಅದರಲ್ಲಿ ಅನ್ಯತಮವಾದದ್ದು ಬಾದರಾಯಣರ ಬ್ರಹ್ಮಸೂತ್ರಗಳಿಗೆ ವಿಶಿಷ್ಟಾದ್ವೈತಪರವಾದ ಭಾಷ್ಯದ ರಚನೆ. ಅದರಂತೆಯೇ ಭಗವದ್ರಾಮಾನುಜಾಚಾರ್ಯರು ಶ್ರೀಭಾಷ್ಯವನ್ನು ರಚಿಸಿದರು. ಮುಂದೆ ಭಗವದ್ಗೀತಾಭಾಷ್ಯವನ್ನೂ, ವೇದಾಂತಸಾರ, ವೇದಾಂತದೀಪ, ಗದ್ಯತ್ರಯ ಮತ್ತು ವೇದಾಂತಸಂಗ್ರಹ ಎಂಬುವ ಗ್ರಂಥಗಳನ್ನೂ ವಿದ್ವದ್ಪ್ರಪಂಚಕ್ಕೆ ನೀಡಿದರು.

ರಾಮಾನುಜದರ್ಶನವನ್ನು ತತ್ತ್ವತ್ರಯದರ್ಶನವೆಂದೂ ಕರೆಯುವುದುಂಟು - ಚಿತ್ ಎಂದರೆ ಭೋಕ್ತೃ , ಅಚಿತ್ ಎಂದರೆ ಭೋಜ್ಯವಾದ ಜಗತ್ತು ಮತ್ತು ಈಶ್ವರ, ಅರ್ಥಾತ್ ಸರ್ವಾಂತರ್ಯಾಮಿಯಾದ ಪರಮಾತ್ಮ - ಇವು ಮೂರು ತತ್ತ್ವಗಳು. ನಿತ್ಯವೂ ಸತ್ಯವೂ ಆದಂತಹ ಜೀವ-ಜಗತ್ತುಗಳು ಪರಮಾತ್ಮನ ಅಂಗವೆಂದೂ ಮತ್ತು ಪರಮಾತ್ಮನು ಅಂಗಿ ಎಂದೂ ಇಲ್ಲಿಯ ತಾತ್ಪರ್ಯ. ಇದನ್ನೇ ಶೇಷ-ಶೇಷಿಭಾವವೆಂದೂ ಕರೆಯುವುದುಂಟು. ಈಶ್ವರನು ಸಗುಣನೂ ಸಾಕಾರನೂ ಹೌದು, ಹಾಗೆಯೇ ಕಾರುಣ್ಯಧಾಮ, ಸರ್ವಜ್ಞ, ಸರ್ವಶಕ್ತ ಮತ್ತು ಸರ್ವಾಂತರ್ಯಾಮಿ. ಜಗತ್ತಿನ ಸೃಷ್ಟಿ-ಸ್ಥಿತಿ-ಲಯಗಳು ಪರಮಾತ್ಮನ ಲೀಲೆ, ಮತ್ತು ಇದರಿಂದ ಅವನಿಗೆ ಆನಂದ ಎಂಬುವುದು ರಾಮಾನುಜರ ಸಿದ್ಧಾಂತ. ಜೀವನು ಭವಬಂಧನದಿಂದ ಬಿಡಿಸಿಕೊಳ್ಳಲು ಭಕ್ತಿಯೊಂದೇ ಸಾಧನ. ಕರ್ಮಜ್ಞಾನಗಳು ಭಕ್ತಿಗೆ ಸಹಕಾರಿ. ಸರ್ವಕರ್ಮಗಳನ್ನೂ ಭಗವದ್ ಕೈಂಕರ್ಯರೂಪದಿಂದಲೇ ಮಾಡಬೇಕು. ಶ್ರೀಮನ್ನಾರಾಯಣನಲ್ಲಿ ಅನನ್ಯವಾದ ಭಕ್ತಿ-ಶ್ರದ್ಧೆಗಳನ್ನು ಇರಿಸಬೇಕು. ಸರ್ವಸ್ವವನ್ನೂ ಭಗವಂತನಲ್ಲಿ ಸಮರ್ಪಿಸುವುದನ್ನು ಪ್ರಪತ್ತಿ ಅಥವಾ ಶರಣಾಗತಿ ಎಂದು ಕರೆಯುವರು. ರಾಮಾನುಜದರ್ಶನದಲ್ಲಿ ಇದೇ ಮುಕ್ತಿಗೆ ಸಾಧನ.

ಶ್ರೀಮದ್ರಾಮಾನುಜಾಚಾರ್ಯರು ಪಾಂಚರಾತ್ರಾಗಮದ ಆಚಾರಪದ್ಧತಿಯನ್ನು ಪ್ರಚಾರಕ್ಕೆ ತಂದದ್ದಲ್ಲದೆ ಅನೇಕ ದೇವಸ್ಥಾನಗಳಲ್ಲಿ ಅದನ್ನು ವ್ಯವಸ್ಥಾಪಿಸಿದರು. ರಾಮಾನುಜರ ಸರ್ವಜನಸಮಭಾವವು ಅನ್ಯಾದೃಶವಾದದ್ದು. ಯಾವುದೇ ಜಾತಿ-ವರ್ಣಗಳ ಭೇದವಿಲ್ಲದೆ ನಿರ್ಮಲ ಭಕ್ತಿಯುಕ್ತರಾದವರಿಗೆ ಮಾರ್ಗದರ್ಶನವನ್ನು ಮಾಡಿದರು. ಹಿಂದುಳಿದ ವರ್ಗದ ಜನರನ್ನು ‘ತಿರುಕುಲತ್ತರ್’ (ದಿವ್ಯಕುಲಕ್ಕೆ ಸೇರಿದವರು) ಎಂದು ಪರಿಗಣಿಸಿ ದಿವ್ಯಪ್ರಬಂಧಗಳ ಬೋಧನೆಯ ಮೂಲಕ ಅವರನ್ನು ಶ್ರೀವೈಷ್ಣವ ಭಕ್ತಿಪಂಥಕ್ಕೆ ಸೇರಿಸಿಕೊಂಡರು. ಭಗವದ್ರಾಮಾನುಜಾಚಾರ್ಯರ ಕಾರುಣ್ಯದಿಂದ ಹಲವಾರು ಹಿಂದುಳಿದ ಜನಾಂಗಳಿಗೆ ದೇವತಾರಾಧನೆ ಮತ್ತು ಆಧ್ಯಾತ್ಮಿಕ ಪಥಗಳಿಗೆ ಪ್ರವೇಶ ದೊರಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT