ಪ್ರಕೃತಿ ಹಾಗೂ ಮಾನವ ಜನ್ಮವು ಹಲವು ವಿಶೇಷತೆ, ವೈರುಧ್ಯಗಳಿಂದ ಕೂಡಿದೆ. ಇವುಗಳಲ್ಲಿ ಯಾವ ರೀತಿ ಬದುಕುತ್ತೇವೆ ಎಂಬುದರ ಮೇಲೆ ಶಾಶ್ವತ ಸುಖ, ದುಃಖಗಳು ಲಭಿಸುತ್ತವೆ. ಮರದ ಮೇಲೆ ರುಚಿಕರವಾದ ಹಣ್ಣುಗಳು ಇರುವವರೆಗೂ ಪಕ್ಷಿಗಳು ದೂರದಿಂದ ಬಂದು, ಕೊಂಬೆಗಳ ಮೇಲೆ ಕುಳಿತು ಅದರ ಹಣ್ಣುಗಳನ್ನು ತಿಂದು ಆನಂದಿಸುತ್ತವೆ. ಆದರೆ ಎಲ್ಲ ಹಣ್ಣುಗಳು ಮುಗಿದ ನಂತರ ಮತ್ತು ಹವಾಮಾನ ಬದಲಾವಣೆಯಿಂದಾಗಿ ಹೊಸ ಹಣ್ಣುಗಳ ಸಂಖ್ಯೆ ಕ್ಷೀಣಿಸಿದಾಗ ಪಕ್ಷಿಗಳು ಅದನ್ನು ಬಿಟ್ಟು ಬೇರೆಡೆಗೆ ಹೋಗುತ್ತವೆ.
ಇದು ಪ್ರಕೃತಿಯ ನಿಯಮವಾದರೂ ಮಾನವ ಇದರಿಂದ ಕಲಿಯುವುದು ಸಾಕಷ್ಟಿದೆ. ಮಾನವನಲ್ಲಿ ಸದ್ಗುಣಗಳು ಮತ್ತು ಅವುಗಳ ಪ್ರಭಾವ ಇರುವವರೆಗೆ, ವಿವಿಧ ರೀತಿಯ ಆನಂದಗಳು ಆತನ ಸುತ್ತ ಬಂದು ಸೇರುತ್ತವೆ.
ಸದ್ಗುಣಗಳು ಕ್ಷೀಣಿಸಿದಾಗ, ಕ್ರಮೇಣ ಆ ಎಲ್ಲ ಆನಂದಗಳು ಮಾಯವಾಗುತ್ತವೆ. ಕೊನೆಯಲ್ಲಿ ಸಂತೋಷದ ನೆನಪು ಮಾತ್ರ ಉಳಿಯುತ್ತದೆ. ಅದು ಮನುಷ್ಯನನ್ನು ದುಃಖಿತನನ್ನಾಗಿ ಮಾಡುತ್ತದೆ. ಈ ಕಾರಣ ಮಾನವ ಜನ್ಮದಲ್ಲಿ ಸದ್ಗುಣಗಳ ಕಾರಣಕ್ಕೆ ನಮಗೆ ಲಭ್ಯವಿರುವ ಆನಂದವನ್ನು ಮಾತ್ರ ಅನುಭವಿಸುವುದು ಬುದ್ಧಿವಂತಿಕೆಯ ಲಕ್ಷಣವಾಗಿದೆ.