<p>ನಮ್ಮ ಮನಸ್ಸು ಎಷ್ಟೋ ಸಂದರ್ಭಗಳಲ್ಲಿ ಏನೋನೋ ಸಿಕ್ಕುಗಳಲ್ಲಿ ಸಿಕ್ಕಿಹಾಕಿಕೊಂಡು ಸಂಕಟಕ್ಕೆ ತುತ್ತಾಗುತ್ತಿರುತ್ತದೆ. ಇಂಥ ಸಂಕಟಸಮಯಗಳು ಇಂಥದೇ ವಯಸ್ಸಿನವರಿಗೆ, ಇಂಥದೇ ವೃತ್ತಿಯರವರಿಗೆ, ಇಂಥದೇ ಜಾತಿಯವರಿಗೆ, ಇಂಥದೇ ವ್ಯಕ್ತಿಗಳಿಗೆ ಮಾತ್ರವೇ ಬರುತ್ತವೆ ಎಂದೇನಿಲ್ಲ; ಯಾರಿಗೂ ಯಾವ ಕಾಲದಲ್ಲೂ ಬಿಕ್ಕಟ್ಟುಗಳು ಎದುರಾಗಬಹುದೆನ್ನಿ. ಆಗ ಮನಸ್ಸು ಪರಿಹಾರಕ್ಕಾಗಿ ಹುಡುಕುತ್ತದೆ; ಮಾರ್ಗದರ್ಶನಕ್ಕಾಗಿ ಹಂಬಲಿಸುತ್ತದೆ. ಅವರವರ ಸಮಸ್ಯೆಗಳಿಗೆ ತಕ್ಕ ಪರಿಹಾರ ಸಿಕ್ಕರೆ ನೆಮ್ಮದಿ. ಆದರೆ ಹೀಗೆ ಎಲ್ಲರಿಗೂ ಸಮಾಧಾನ ನಿಶ್ಚಯವಾಗಿ ಸಿಕ್ಕೇ ಸಿಗುತ್ತದೆ ಎನ್ನಲಾಗುವುದಿಲ್ಲ. ಹೀಗಿರುವಾಗ ಎಲ್ಲರ ಸಮಸ್ಯೆಗಳಿಗೂ ಒಂದೇ ಕಡೆ ಪರಿಹಾರ ಸಿಗುವಂತಾದರೆ ಹೇಗಿರುತ್ತದೆ? ಹೀಗೆ ಸರ್ವದುಃಖಪರಿಹಾರದ ಏಕಸ್ಥಳವೊಂದು ಇರಲು ಸಾಧ್ಯವೆ? ಈ ಪ್ರಶ್ನೆಗೆ ಉತ್ತರ ಎಂದರೆ, ಅದು ಶ್ರೀಕೃಷ್ಣ.</p>.<p>ಶ್ರೀಕೃಷ್ಣನನ್ನು ಪೂರ್ಣಾವತಾರ ಎಂದು ಪರಂಪರೆ ಒಕ್ಕಣಿಸಿದೆ. ಮಾನುಷಭಾವದ ಎಲ್ಲ ಭಾವಗಳ ಮೂರ್ತರೂಪವಾಗಿ ಅವನು ಕಾಣಿಸಿಕೊಂಡ; ಮಾತ್ರವಲ್ಲ, ಆ ಎಲ್ಲ ಭಾವಗಳನ್ನೂ ಮೀರಿನಿಂತ ಕೂಡ. ಹೀಗಾಗಿಯೇ ಅವನು ಪೂರ್ಣಾವತಾರಿ. ಅವನು ಎಲ್ಲರ ಭಾವಗಳನ್ನೂ ಅರ್ಥಮಾಡಿಕೊಳ್ಳಬಲ್ಲ; ಅವನು ಎಲ್ಲರ ಸಮಸ್ಯೆಗಳಿಗೂ ಪರಿಹಾರವಾಗಿಯೂ ಒದಗಬಲ್ಲ. ಹೀಗಾಗಿಯೇ ಅವನು ಜಗದ್ಗುರು.</p>.<p>ಶ್ರೀಕೃಷ್ಣನು ಗೀತೆಯನ್ನು ಉಪದೇಶಿಸಿದ್ದು ಕೇವಲ ಅರ್ಜುನನಿಗೆ ಮಾತ್ರವಲ್ಲ; ಅರ್ಜುನ ಅವನಿಗೆ ಒಂದು ನೆಪ ಅಷ್ಟೆ; ಅವನ ಉಪದೇಶದ ಉದ್ದೇಶ ಇಡಿಯ ಮನುಕುಲ. ನಮ್ಮ ಎಲ್ಲರ ಜೀವನದ ನೆಮ್ಮದಿಗೂ ಬೇಕಾದ ತಿಳಿವಳಿಕೆಯಷ್ಟೂ ಗೀತೆಯಲ್ಲಿದೆ. ಶ್ರೀಕೃಷ್ಣನು ಯಾರಿಗೂ ಒದಗಬಲ್ಲ; ಯಾರ ಸಮಸ್ಯೆಗೂ ಪರಿಹಾರವಾಗಬಲ್ಲ – ಎಂಬುದೇ ಅವನ ವ್ಯಕ್ತಿತ್ವದ ವಿಶೇಷತೆ. ನಾವಿಂದು ಬದುಕುವುದಕ್ಕಾಗಿಯೇ ಹೋರಾಡುತ್ತಿದ್ದೇವೆ, ಹೊಡೆದಾಡುತ್ತಿದ್ದೇವೆ. ಆದರೆ ಗೀತೆ ನಮಗೆ ಚೆನ್ನಾಗಿ ಬದುಕುವ ದಾರಿಯನ್ನು ಕಾಣಿಸಿಕೊಡುತ್ತದೆ; ಮಾತ್ರವಲ್ಲ, ನೆಮ್ಮದಿಯಾಗಿಯೂ ಬದುಕುವ ಬಗೆಯನ್ನು ತಿಳಿಸಿಕೊಡುತ್ತದೆ. ಸಂಗ್ರಾಮದ ನಡುವೆ ತೋರಿಕೊಂಡ ಗೀತೆಗೆ ಜೀವನಸಂಗ್ರಾಮದ ಎಲ್ಲ ಪಟ್ಟುಗಳೂ ಗೊತ್ತಿದೆ. ಶ್ರೀಕೃಷ್ಣನಾದರೂ ಈ ಪಟ್ಟು–ವರಸೆಗಳನ್ನು ಉಪದೇಶಿಸಿದವನಷ್ಟೆ ಅಲ್ಲ; ಅವನ್ನು ತಾನೇ ಅನುಸರಿಸಿದವನು; ಅನುಸರಿಸಿ ‘ಜಯ’ಕ್ಕೆ ಕಾರಣನಾದವನು. </p>.<h2>ಎಲ್ಲ ವಿಧದ ದುಃಖಗಳೂ ನಾಶವಾಗುವ ಬಗೆಯನ್ನು ಗೀತೆ ಹೀಗೆಂದಿದೆ:</h2>.<p>ಪ್ರಸಾದೇ ಸರ್ವದುಃಖಾನಾಂ</p>.<p>ಹಾನಿರಸ್ಯೋಪಜಾಯತೇ ।</p>.<p>ಪ್ರಸನ್ನಚೇತಸೋ ಹ್ಯಾಶು</p>.<p>ಬುದ್ಧಿಃಪರ್ಯವತಿಷ್ಠತೇ ।।</p>.<p>‘ಮನಸ್ಸು ನೆಮ್ಮದಿಯಾಗಿದ್ದಾಗ ಎಲ್ಲ ದುಃಖಗಳೂ ನಾಶವಾಗುತ್ತವೆ. ಏಕೆಂದರೆ ಅಂಥ ಚಿತ್ತಶುದ್ಧನ ಬುದ್ಧಿ ಬೇಗನೆ ಸ್ಥಿರವಾಗುತ್ತದೆ’ ಎಂಬುದು ಶ್ರೀಕೃಷ್ಣನ ಈ ಮಾತಿನ ತಾತ್ಪರ್ಯ.</p>.<p>ನಮ್ಮ ಎಲ್ಲರ ಇಂದಿನ ಸಮಸ್ಯೆಯನ್ನು ಶ್ರೀಕೃಷ್ಣ ಅಂದೇ ಗುರುತಿಸಿದ್ದು ಮಾತ್ರವಲ್ಲ, ಅದಕ್ಕೆ ಪರಿಹಾರವನ್ನೂ ಸೂಚಿಸಿದ್ದಾನೆ. ನಾವು ನಮ್ಮ ಮನಸ್ಸನ್ನು ಎಲ್ಲಿ ನೆಲೆಯಾಗಿಸಬೇಕೋ ಅಲ್ಲಿ ಅದನ್ನು ನೆಲೆಗೊಳ್ಳಲು ಬಿಡುತ್ತಿಲ್ಲ; ಈ ಕಾರಣದಿಂದಲೇ ಮನಸ್ಸು ಉದ್ವೇಗಕ್ಕೆ ಒಳಗಾಗುತ್ತಿರುತ್ತದೆ. ಉದ್ವೇಗಕ್ಕೆ ಸಿಕ್ಕಿದ ಮನಸ್ಸು ಬುದ್ಧಿಯನ್ನು ಕೆಡಿಸುವುದು ಸಹಜ. ಅಂಕೆಯಲ್ಲಿರದ ಮನಸ್ಸು–ಬುದ್ಧಿಗಳು ಒಂದಾಗಿ ನಮ್ಮ ಜೀವನದಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತಿರುತ್ತದೆ.</p>.<p>ನಮ್ಮ ಮನಸ್ಸು ಪ್ರತಿ ಕ್ಷಣವೂ ಕೆರಳುತ್ತಿರುತ್ತದೆ; ಅದು ಒಂದೆಡೆ ನಿಲ್ಲದು; ಸದಾ ಕಾಲ ಯಾವುದಾದರೊಂದು ವಿಷಯದ ಹಿಂದೆ ಬಿದ್ದು ಅಲೆಯುತ್ತಲೇ ಇರುತ್ತದೆ. ಒಂದು ಕ್ಷಣವೂ ನೆಮ್ಮದಿಯಾಗಿ ಯಾವ ವಿಷಯದ ಬಗ್ಗೆಯೂ ನಾವು ನಮ್ಮ ಗಮನವನ್ನು ಕೇಂದ್ರೀಕರಿಸಲು ಸೋಲುತ್ತಿದ್ದೇವೆ. ಮನಸ್ಸಿನ ನಿಗ್ರಹದಲ್ಲಿಯೇ ಜೀವನದ ನೆಮ್ಮದಿಯ ಗುಟ್ಟು ಅಡಗಿದೆ ಎಂಬುದು ಶ್ರೀಕೃಷ್ಣನ ಮುಖ್ಯ ಉಪದೇಶ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಮ್ಮ ಮನಸ್ಸು ಎಷ್ಟೋ ಸಂದರ್ಭಗಳಲ್ಲಿ ಏನೋನೋ ಸಿಕ್ಕುಗಳಲ್ಲಿ ಸಿಕ್ಕಿಹಾಕಿಕೊಂಡು ಸಂಕಟಕ್ಕೆ ತುತ್ತಾಗುತ್ತಿರುತ್ತದೆ. ಇಂಥ ಸಂಕಟಸಮಯಗಳು ಇಂಥದೇ ವಯಸ್ಸಿನವರಿಗೆ, ಇಂಥದೇ ವೃತ್ತಿಯರವರಿಗೆ, ಇಂಥದೇ ಜಾತಿಯವರಿಗೆ, ಇಂಥದೇ ವ್ಯಕ್ತಿಗಳಿಗೆ ಮಾತ್ರವೇ ಬರುತ್ತವೆ ಎಂದೇನಿಲ್ಲ; ಯಾರಿಗೂ ಯಾವ ಕಾಲದಲ್ಲೂ ಬಿಕ್ಕಟ್ಟುಗಳು ಎದುರಾಗಬಹುದೆನ್ನಿ. ಆಗ ಮನಸ್ಸು ಪರಿಹಾರಕ್ಕಾಗಿ ಹುಡುಕುತ್ತದೆ; ಮಾರ್ಗದರ್ಶನಕ್ಕಾಗಿ ಹಂಬಲಿಸುತ್ತದೆ. ಅವರವರ ಸಮಸ್ಯೆಗಳಿಗೆ ತಕ್ಕ ಪರಿಹಾರ ಸಿಕ್ಕರೆ ನೆಮ್ಮದಿ. ಆದರೆ ಹೀಗೆ ಎಲ್ಲರಿಗೂ ಸಮಾಧಾನ ನಿಶ್ಚಯವಾಗಿ ಸಿಕ್ಕೇ ಸಿಗುತ್ತದೆ ಎನ್ನಲಾಗುವುದಿಲ್ಲ. ಹೀಗಿರುವಾಗ ಎಲ್ಲರ ಸಮಸ್ಯೆಗಳಿಗೂ ಒಂದೇ ಕಡೆ ಪರಿಹಾರ ಸಿಗುವಂತಾದರೆ ಹೇಗಿರುತ್ತದೆ? ಹೀಗೆ ಸರ್ವದುಃಖಪರಿಹಾರದ ಏಕಸ್ಥಳವೊಂದು ಇರಲು ಸಾಧ್ಯವೆ? ಈ ಪ್ರಶ್ನೆಗೆ ಉತ್ತರ ಎಂದರೆ, ಅದು ಶ್ರೀಕೃಷ್ಣ.</p>.<p>ಶ್ರೀಕೃಷ್ಣನನ್ನು ಪೂರ್ಣಾವತಾರ ಎಂದು ಪರಂಪರೆ ಒಕ್ಕಣಿಸಿದೆ. ಮಾನುಷಭಾವದ ಎಲ್ಲ ಭಾವಗಳ ಮೂರ್ತರೂಪವಾಗಿ ಅವನು ಕಾಣಿಸಿಕೊಂಡ; ಮಾತ್ರವಲ್ಲ, ಆ ಎಲ್ಲ ಭಾವಗಳನ್ನೂ ಮೀರಿನಿಂತ ಕೂಡ. ಹೀಗಾಗಿಯೇ ಅವನು ಪೂರ್ಣಾವತಾರಿ. ಅವನು ಎಲ್ಲರ ಭಾವಗಳನ್ನೂ ಅರ್ಥಮಾಡಿಕೊಳ್ಳಬಲ್ಲ; ಅವನು ಎಲ್ಲರ ಸಮಸ್ಯೆಗಳಿಗೂ ಪರಿಹಾರವಾಗಿಯೂ ಒದಗಬಲ್ಲ. ಹೀಗಾಗಿಯೇ ಅವನು ಜಗದ್ಗುರು.</p>.<p>ಶ್ರೀಕೃಷ್ಣನು ಗೀತೆಯನ್ನು ಉಪದೇಶಿಸಿದ್ದು ಕೇವಲ ಅರ್ಜುನನಿಗೆ ಮಾತ್ರವಲ್ಲ; ಅರ್ಜುನ ಅವನಿಗೆ ಒಂದು ನೆಪ ಅಷ್ಟೆ; ಅವನ ಉಪದೇಶದ ಉದ್ದೇಶ ಇಡಿಯ ಮನುಕುಲ. ನಮ್ಮ ಎಲ್ಲರ ಜೀವನದ ನೆಮ್ಮದಿಗೂ ಬೇಕಾದ ತಿಳಿವಳಿಕೆಯಷ್ಟೂ ಗೀತೆಯಲ್ಲಿದೆ. ಶ್ರೀಕೃಷ್ಣನು ಯಾರಿಗೂ ಒದಗಬಲ್ಲ; ಯಾರ ಸಮಸ್ಯೆಗೂ ಪರಿಹಾರವಾಗಬಲ್ಲ – ಎಂಬುದೇ ಅವನ ವ್ಯಕ್ತಿತ್ವದ ವಿಶೇಷತೆ. ನಾವಿಂದು ಬದುಕುವುದಕ್ಕಾಗಿಯೇ ಹೋರಾಡುತ್ತಿದ್ದೇವೆ, ಹೊಡೆದಾಡುತ್ತಿದ್ದೇವೆ. ಆದರೆ ಗೀತೆ ನಮಗೆ ಚೆನ್ನಾಗಿ ಬದುಕುವ ದಾರಿಯನ್ನು ಕಾಣಿಸಿಕೊಡುತ್ತದೆ; ಮಾತ್ರವಲ್ಲ, ನೆಮ್ಮದಿಯಾಗಿಯೂ ಬದುಕುವ ಬಗೆಯನ್ನು ತಿಳಿಸಿಕೊಡುತ್ತದೆ. ಸಂಗ್ರಾಮದ ನಡುವೆ ತೋರಿಕೊಂಡ ಗೀತೆಗೆ ಜೀವನಸಂಗ್ರಾಮದ ಎಲ್ಲ ಪಟ್ಟುಗಳೂ ಗೊತ್ತಿದೆ. ಶ್ರೀಕೃಷ್ಣನಾದರೂ ಈ ಪಟ್ಟು–ವರಸೆಗಳನ್ನು ಉಪದೇಶಿಸಿದವನಷ್ಟೆ ಅಲ್ಲ; ಅವನ್ನು ತಾನೇ ಅನುಸರಿಸಿದವನು; ಅನುಸರಿಸಿ ‘ಜಯ’ಕ್ಕೆ ಕಾರಣನಾದವನು. </p>.<h2>ಎಲ್ಲ ವಿಧದ ದುಃಖಗಳೂ ನಾಶವಾಗುವ ಬಗೆಯನ್ನು ಗೀತೆ ಹೀಗೆಂದಿದೆ:</h2>.<p>ಪ್ರಸಾದೇ ಸರ್ವದುಃಖಾನಾಂ</p>.<p>ಹಾನಿರಸ್ಯೋಪಜಾಯತೇ ।</p>.<p>ಪ್ರಸನ್ನಚೇತಸೋ ಹ್ಯಾಶು</p>.<p>ಬುದ್ಧಿಃಪರ್ಯವತಿಷ್ಠತೇ ।।</p>.<p>‘ಮನಸ್ಸು ನೆಮ್ಮದಿಯಾಗಿದ್ದಾಗ ಎಲ್ಲ ದುಃಖಗಳೂ ನಾಶವಾಗುತ್ತವೆ. ಏಕೆಂದರೆ ಅಂಥ ಚಿತ್ತಶುದ್ಧನ ಬುದ್ಧಿ ಬೇಗನೆ ಸ್ಥಿರವಾಗುತ್ತದೆ’ ಎಂಬುದು ಶ್ರೀಕೃಷ್ಣನ ಈ ಮಾತಿನ ತಾತ್ಪರ್ಯ.</p>.<p>ನಮ್ಮ ಎಲ್ಲರ ಇಂದಿನ ಸಮಸ್ಯೆಯನ್ನು ಶ್ರೀಕೃಷ್ಣ ಅಂದೇ ಗುರುತಿಸಿದ್ದು ಮಾತ್ರವಲ್ಲ, ಅದಕ್ಕೆ ಪರಿಹಾರವನ್ನೂ ಸೂಚಿಸಿದ್ದಾನೆ. ನಾವು ನಮ್ಮ ಮನಸ್ಸನ್ನು ಎಲ್ಲಿ ನೆಲೆಯಾಗಿಸಬೇಕೋ ಅಲ್ಲಿ ಅದನ್ನು ನೆಲೆಗೊಳ್ಳಲು ಬಿಡುತ್ತಿಲ್ಲ; ಈ ಕಾರಣದಿಂದಲೇ ಮನಸ್ಸು ಉದ್ವೇಗಕ್ಕೆ ಒಳಗಾಗುತ್ತಿರುತ್ತದೆ. ಉದ್ವೇಗಕ್ಕೆ ಸಿಕ್ಕಿದ ಮನಸ್ಸು ಬುದ್ಧಿಯನ್ನು ಕೆಡಿಸುವುದು ಸಹಜ. ಅಂಕೆಯಲ್ಲಿರದ ಮನಸ್ಸು–ಬುದ್ಧಿಗಳು ಒಂದಾಗಿ ನಮ್ಮ ಜೀವನದಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತಿರುತ್ತದೆ.</p>.<p>ನಮ್ಮ ಮನಸ್ಸು ಪ್ರತಿ ಕ್ಷಣವೂ ಕೆರಳುತ್ತಿರುತ್ತದೆ; ಅದು ಒಂದೆಡೆ ನಿಲ್ಲದು; ಸದಾ ಕಾಲ ಯಾವುದಾದರೊಂದು ವಿಷಯದ ಹಿಂದೆ ಬಿದ್ದು ಅಲೆಯುತ್ತಲೇ ಇರುತ್ತದೆ. ಒಂದು ಕ್ಷಣವೂ ನೆಮ್ಮದಿಯಾಗಿ ಯಾವ ವಿಷಯದ ಬಗ್ಗೆಯೂ ನಾವು ನಮ್ಮ ಗಮನವನ್ನು ಕೇಂದ್ರೀಕರಿಸಲು ಸೋಲುತ್ತಿದ್ದೇವೆ. ಮನಸ್ಸಿನ ನಿಗ್ರಹದಲ್ಲಿಯೇ ಜೀವನದ ನೆಮ್ಮದಿಯ ಗುಟ್ಟು ಅಡಗಿದೆ ಎಂಬುದು ಶ್ರೀಕೃಷ್ಣನ ಮುಖ್ಯ ಉಪದೇಶ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>