ಹೊಸನಗರ: ಪಟ್ಟಣದ ಹೊರವಲಯದ ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡಚಿಟ್ಟೆ ಗ್ರಾಮಸ್ಥರು ಹೊರಗಿನವರಿಗೆ ತಮ್ಮ ಊರಿಗೆ ಪ್ರವೇಶಿಸದಂತೆ ನಿರ್ಬಂಧ ಹೇರಿ ಗೇಟ್ ಅಳವಡಿಸಿದ್ದಾರೆ. ಅಲ್ಲದೇ ಗೇಟ್ ಬಳಿ ಸೋಪು, ನೀರು ಇಟ್ಟಿದ್ದಾರೆ.
32 ಮನೆಗಳು ಇರುವ ಗ್ರಾಮದಲ್ಲಿ ಹೊರಗಿನವರಿಗೆ ಪ್ರವೇಶ ನಿಷೇಧಿಸಲಾಗಿದೆ. ತಮ್ಮ ಗ್ರಾಮದ ಯಾರೇ ಹೊರಗಡೆ ಹೋಗುವಾಗ, ಒಳಗಡೆ ಬರುವಾಗ ಕೈ, ಕಾಲು ತೊಳೆದು ಬರುವಂತೆ ನೀರು ಹಾಗೂ ಸೋಪಿನ ವ್ಯವಸ್ಥೆ ಮಾಡಲಾಗಿದೆ ಎಂದು ಗ್ರಾಮದ ಹಿರಿಯ ವಿಜಯಕುಮಾರ ತಿಳಿಸಿದರು.
ಗ್ರಾಮಸ್ಥರ ಅನಗತ್ಯ ತಿರುಗಾಟಕ್ಕೆ ಕಡಿವಾಣಕ್ಕೆ ಹಾಕಲಾಗಿದ್ದು, ದಿನ ನಿತ್ಯದ ಕೂಲಿ ಕೆಲಸದಲ್ಲಿ ಅಂತರ ಕಾಪಾಡುವಂತೆ ಆಶಾ ಕಾರ್ಯಕರ್ತೆಯರು ನೀಡಿದ ಸಲಹೆ ಪಾಲಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಗ್ರಾಮದ ಬಹುತೇಕರು ಪರಿಶಿಷ್ಟ ಜಾತಿಗೆ ಸೇರಿದ ಕೃಷಿ ಕೂಲಿ ಕಾರ್ಮಿಕರಾಗಿದ್ದು, ಸಮುದಾಯದ ಆರೋಗ್ಯ ಕಾಳಜಿಯನ್ನು ಸಾರ್ವಜನಿಕರು, ಆರೋಗ್ಯ ಇಲಾಖೆ, ತಾಲ್ಲೂಕು ಆಡಳಿತದ ಶ್ಲಾಘಿಸಿದೆ.