ಬಾಗಲಕೋಟೆ: ಬಾದಾಮಿ ತಾಲ್ಲೂಕಿನ ಕೆರೂರ ಪಟ್ಟಣದಲ್ಲಿ ಪ್ರಾರಂಭಿಸಲಾಗುತ್ತಿರುವ ಸರ್ಕಾರಿ ಮದ್ಯ ಮಾರಾಟ ಕೇಂದ್ರಕ್ಕೆ ವಿರೋಧಿಸಿ ಪಟ್ಟಣದ ವಿವಿಧ ಮಹಿಳಾ ಸಂಘಟನೆಗಳು ಸೋಮವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.
ಇಲ್ಲಿನ ಜಿಲ್ಲಾಡಳಿತ ಭವನಕ್ಕೆ ಪ್ರತಿಭಟನಾ ರ್ಯಾಲಿ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಅಬಕಾರಿ ಇಲಾಖೆಯಿಂದ ಪ್ರಾರಂಭಿಸಲಾಗುತ್ತಿರುವ ಮದ್ಯ ಮಾರಾಟ ಮಳಿಗೆಗೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ವಿವಿಧ ಮಹಿಳಾ ಸಂಘಟನೆ ಸದಸ್ಯರಾದ ಎಸ್.ಎ.ಛಬ್ಬಿ, ಎಸ್.ಎಂ.ಗೌಡರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ಅವರಿಗೆ ಮನವಿ ಸಲ್ಲಿಸಿದರು.
ಆರ್.ಎಸ್.ಲಕಮಾಪುರ ಮಾತನಾಡಿ, ‘ಪಟ್ಟಣದ ಬಸ್ ನಿಲ್ದಾಣ ಬಳಿ ಈಗಾಗಲೇ ಹಲವಾರು ಮದ್ಯ ಮಾರಾಟದ ಅಂಗಡಿಗಳಿದ್ದು ನೂತನ ಅಂಗಡಿಗೆ ಅನುಮತಿ ನೀಡಬಾರದು. ದಿನೇ ದಿನೇ ಯುವ ಪೀಳಿಗೆ ಮದ್ಯ ವ್ಯಸನಿಗಳಾಗಲು ಮಾರಾಟ ಮಳಿಗೆಗಳು ಕಾರಣವಾಗುತ್ತಿವೆ ಎಂದ ಅವರು, ಹಾಡಹಗಲೇ ಕುಡುಕರ ಹಾವಳಿಯಿಂದ ಮಹಿಳೆಯರು ಮಕ್ಕಳು ತಿರುಗಾಡದ ಪರಿಸ್ಥಿತಿ ಬಂದಿರುವುದು ಬೇಸರದ ಸಂಗತಿ’ ಎಂದರು.
‘ಜಿಲ್ಲಾಧಿಕಾರಿಗಳು ಯಾವುದೇ ಕಾರಣಕ್ಕೂ ಹೊಸ ಮದ್ಯದ ಅಂಗಡಿ ತೆರೆಯಲು ಅವಕಾಶ ನೀಡಬಾರದು. ಒಂದು ವೇಳೆ ಅವಕಾಶ ನೀಡಿದ್ದೇ ಆದರೆ ಪಟ್ಟಣದ ಎಲ್ಲ ಮಹಿಳಾ ಸಂಘಟನೆ ಸದಸ್ಯೆಯರು, ಶಿಕ್ಷಕರ ಕಾಲೋನಿ ನಾಗರಿಕರು ಹಾಗೂ ಸ್ಥಳೀಯ ಪ್ರಜ್ಞಾವಂತರು ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಮಹಿಳಾ ಸಂಘಟನೆಯ ಸದಸ್ಯರಾದ ಶಾಂತವ್ವ ಹಡಪದ, ಸಾವಿತ್ರಿಬಾಯಿ ಪ್ರತಿಭಟನೆಯ ನೇತೃತ್ವವಹಿಸಿದ್ದರು. ಪಿ.ಎನ್.ಹುಲಮನಿ, ಶಂಕ್ರಮ್ಮ ಜಾಬಳಗಿ, ಗಂಗವ್ವ ಚಂದಾವರಿ, ಎಸ್.ಪಿ.ಕಠಾರಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.