ಬಾದಾಮಿ: ‘ಮಲಪ್ರಭಾ ನದಿ ನೀರು ಸಂಪೂರ್ಣ ಬತ್ತಿದ್ದು, ನದಿಗೆ ಬೇಗ ನೀರು ಹರಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಗುಂಡಪ್ಪ ಕೋಟಿ ಆಗ್ರಹಿಸಿದ್ದಾರೆ.
‘ಜನವರಿ ಕೊನೆ ವಾರದಲ್ಲಿ ನದಿಗೆ ನೀರು ಬಿಡಲಾಗಿತ್ತು. ಮಾರ್ಚ್ ಕೊನೆಯ ವಾರದಲ್ಲೂ ನೀರು ಬಿಡುಗಡೆ ಮಾಡಿಲ್ಲ. ನದಿ ತೀರದ 50ಕ್ಕೂ ಅಧಿಕ ಗ್ರಾಮಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗಿದೆ. ಜನ, ಜಾನುವಾರು ಮತ್ತು ಪ್ರಾಣಿ-ಪಕ್ಷಿಗಳು ನೀರಿಗಾಗಿ ಪರದಾಡುವಂತಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಜನರು ಹಣ ಕೊಟ್ಟು ನೀರು ಪಡೆಯಬೇಕಾದ ಸ್ಥಿತಿ ಇದೆ. ಪಟ್ಟದಕಲ್ಲು ಸಮೀಪ ಪಕ್ಷಿಗಳು ಒದ್ದಾಡುತ್ತಿರುವ ದೃಶ್ಯ ಕಾಣಬಹುದು. ನವಿಲುತೀರ್ಥ ಜಲಾಶಯದಿಂದ ಒಂದು ಟಿಎಂಸಿ ನೀರು ಬಿಡಬೇಕು ’ ಎಂದು ಒತ್ತಾಯಿಸಿದ್ದಾರೆ.