ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾದಾಮಿ: ರಸ್ತೆ ಮೇಲ್ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ

ಪಾರಂಪರಿಕ ಸುಸಜ್ಜಿತ ರೈಲು ನಿಲ್ದಾಣ
Published 26 ಫೆಬ್ರುವರಿ 2024, 13:46 IST
Last Updated 26 ಫೆಬ್ರುವರಿ 2024, 13:46 IST
ಅಕ್ಷರ ಗಾತ್ರ

ಬಾದಾಮಿ: ‘ಐತಿಹಾಸಿಕ ಪ್ರವಾಸಿ ತಾಣದಲ್ಲಿ ಅಂತರರಾಷ್ಟ್ರೀಯ ಮಟ್ಟದ ಪಾರಂಪರಿಕ ರೈಲು ನಿಲ್ದಾಣವನ್ನು ನಿರ್ಮಿಸಿ ಪ್ರವಾಸಿಗರಿಗೆ ಉತ್ತಮ ಸೌಲಭ್ಯವನ್ನು ಕಲ್ಪಿಸಲಾಗುವುದು’ ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಹೇಳಿದರು.

ಇಲ್ಲಿನ ರೈಲ್ವೆ ಸ್ಟೇಷನ್‌ನಲ್ಲಿ ಹುಬ್ಬಳ್ಳಿ ನೈರುತ್ಯ ವಲಯದ ರೈಲ್ವೆ ಇಲಾಖೆ ಆಶ್ರಯದಲ್ಲಿ ಸೋಮವಾರ ಅಮೃತ ಭಾರತ ಸ್ಟೇಷನ್ ಯೋಜನೆ ಕಾಮಗಾರಿಯಲ್ಲಿ ನೂತನ ರೈಲ್ವೆ ಸ್ಟೇಶನ್ ಲೋಕಾರ್ಪಣೆ ಮತ್ತು ಮೇಲ್ಸೇತುವೆ ಕಾಮಗಾರಿ ಶಂಕುಸ್ಥಾಪನೆ ಸಮಾರಂಭಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆಗೆ ₹103.37 ಕೋಟಿ ಅನುದಾನ ಕೊಟ್ಟಿದ್ದಾರೆ ’ ಎಂದರು.

‘ಉನ್ನತೀಕರಣಗೊಳ್ಳುತ್ತಿರುವ ಬಾದಾಮಿ ರೈಲ್ವೆ ಸ್ಟೇಷನ್ ಕಟ್ಟಡ ನಿರ್ಮಾಣಕ್ಕೆ ₹15.1 ಕೋಟಿ ಮತ್ತು ರಸ್ತೆ ಮೇಲ್ಸೇತುವೆಗೆ ₹39.63 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. 2024ರ ಡಿಸೆಂಬರೊಳಗೆ ಸ್ಟೇಷನ್ ಕಾಮಗಾರಿ ಮುಗಿಯಲಿದ್ದು ಪ್ರವಾಸಿಗರಿಗೆ ಉತ್ತಮ ಸೌಲಭ್ಯ ಹೊಂದುವ ರೈಲ್ವೆ ನಿಲ್ದಾಣವಾಗಲಿದೆ ’ ಎಂದು ತಿಳಿಸಿದರು.

‘ಬಾದಾಮಿ ರೈಲ್ವೆ ನಿಲ್ದಾಣದ ಕಟ್ಟಡ ಕಾಮಗಾರಿ ಮುಗಿಯುವ ಹಂತದಲ್ಲಿದೆ. ಸ್ಟೇಷನ್‌ನಲ್ಲಿ ಎರಡು ಲಿಫ್ಟ್ , ಎರಡು ಎಸ್ಕಲೇಟರ್, ಪ್ಲಾಟ್ ಫಾರ್ಮ, ವೈ ಫೈ ಸೌಲಭ್ಯ, ಸೂಚನಾ ಫಲಕಗಳು ಮತ್ತು ಪಾರ್ಕಿಂಗ್ ಮತ್ತಿತರ ಕಾಮಗಾರಿಗಳನ್ನು ಶೀಘ್ರವಾಗಿ ಕೈಗೊಳ್ಳಲಾಗುವುದು’ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ವಲಯದ ಎಂಜಿನಿಯರ್ ಆಂಜನೇಯ ಪ್ರಾಸ್ತಾವಿಕವಾಗಿ ಮಾತನಾಡಿದರು.

ಆಡಗಲ್ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನಾಗಮ್ಮ ಮುಷ್ಟಿಗೇರಿ, ಉಪಾಧ್ಯಕ್ಷೆ ಸುವರ್ಣ ಕೊಳ್ಳನ್ನವರ, ಬಿಜೆಪಿ ಮುಖಂಡರಾದ ಬಿ.ಪಿ. ಹಳ್ಳೂರ, ಶಿವನಗೌಡ ಸುಂಕದ, ಎನ್. ಎಸ್. ಬೊಮ್ಮನಗೌಡರ ಅತಿಥಿಗಳಾಗಿ ಆಗಮಿಸಿದ್ದರು.

ರೈಲ್ವೆ ಇಲಾಖೆಯು ವಿದ್ಯಾರ್ಥಿಗಳಿಗೆ ಏರ್ಪಡಿಸಿದ ನಿಬಂಧ, ಭಾಷಣ ಮತ್ತು ಕಲಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT