ಮುಧೋಳ (ಬಾಗಲಕೋಟೆ ಜಿಲ್ಲೆ): ಮಹಾರಾಷ್ಟ್ರದಲ್ಲಿನ ಮಳೆಯಿಂದಾಗಿ ಘಟಪ್ರಭಾ ನದಿಗೆ ಪ್ರವಾಹ ಬಂದಿದ್ದು ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿದೆ.
ತಾಲ್ಲೂಕಿನ 11 ಬ್ಯಾರೇಜ್ಗಳು ಜಲಾವೃತಗೊಂಡಿರುವುದರಿಂದ ರಸ್ತೆ ಸಂಚಾರಕ್ಕೆ ತೊಂದರೆಯಾಗಿದೆ. ಯಾದವಾಡ ಸಂಪರ್ಕಿಸುವ ಸೇತುವೆ ಮುಳುಡೆಯಾಗಿದೆ.
‘ಮಿರ್ಜಿ ಗ್ರಾಮದಲ್ಲಿ ನೀರು ನುಗ್ಗಿದ್ದು 14 ಕುಟುಂಬದ 60 ಜನರನ್ನು ಆಯುರ್ವೇದ ಆಸ್ಪತ್ರೆಯ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ’ ಎಂದು ತಹಶೀಲ್ದಾರ್ ವಿನೋದ ಹತ್ತಳ್ಳಿ ತಿಳಿಸಿದ್ದಾರೆ.
ಗೋವಿಂದ ಕಾರಜೋಳ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದರು.
ಮುತ್ತೂರು ಗ್ರಾಮ ಜಲಾವೃತ: ಜಮಖಂಡಿ ತಾಲ್ಲೂಕಿನಲ್ಲಿ ಕೃಷ್ಣಾ ನದಿಯಲ್ಲಿ ಪ್ರವಾಹ ಸ್ಥಿತಿ ತಲೆದೋರಿದ್ದು ನದಿ ಪಾತ್ರದ ಮನೆ, ಜಮೀನು ಜಲಾವೃತಗೊಂಡಿವೆ.
ತಾಲ್ಲೂಕಿನ ಮುತ್ತೂರ ಹಾಗೂ ಕಂಕಣವಾಗಿ ಗ್ರಾಮ ನಡುಗಡ್ಡೆಯಾಗಿದ್ದು, ಅಲ್ಲಿನ 12ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ. ಕುಟುಂಬಗಳನ್ನು ದೋಣಿಯ ಮೂಲಕ ಸ್ಥಳಾಂತರಿಸಲಾಗಿದೆ.
ಒಟ್ಟು 80 ಮನೆಗಳಿವೆ. ಇನ್ನುಳಿದ ಕುಟುಂಬದವರು ಅಲ್ಲಿಯೇ ಇದ್ದಾರೆ. ಆದರೆ ಅಲ್ಲಿಂದ ಇತ್ತ ಬರಲು ರಸ್ತೆ ಇಲ್ಲ, ದೋಣಿ ಮೂಲಕವೇ ಅಡ್ಡಾಡಬೇಕು. 40ಕ್ಕೂ ಹೆಚ್ಚು ಮಕ್ಕಳು ಶಾಲಾ, ಕಾಲೇಜುಗಳಿಗೆ ತೆರಳಲು ಆಗದೆ ಮನೆಯಲ್ಲೇ ಉಳಿದಿದ್ದಾರೆ. ದೋಣಿ ಲಭ್ಯತೆಯೂ ಸಾಕಷ್ಟಿಲ್ಲ ಎನ್ನಲಾಗಿದೆ.