ಬಾಗಲಕೋಟೆ:ಗೋಹತ್ಯೆ ನಿಷೇಧ ಬಳಿಕ ವಯಸ್ಸಾದ ಗೋವುಗಳನ್ನು ಏನು ಮಾಡಬೇಕು ಎಂಬ ಚರ್ಚೆ ನಡೆಸಿದ್ದೇವೆ. ಅವುಗಳ ಸಂರಕ್ಷಣೆಗೆ ಸರ್ಕಾರ ಮುಂದಾಗಲಿದೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.
ಗುಳೇದಗುಡ್ಡ ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಯಸ್ಸಾದ ಗೋವುಗಳ ಪಾಲನೆಗೆ ಹಣ ನಿಗದಿ ಮಾಡಲಾಗುವುದು. ವಯಸ್ಸಾದ ಗೋವುಗಳನ್ನು ಎಲ್ಲಿಡಬೇಕು, ಯಾರು ಪಾಲನೆ ಮಾಡಬೇಕು ಅನ್ನೋ ಚರ್ಚೆ ಮಾಡುತ್ತಿದ್ದೇವೆ ಎಂದರು.
ಗೋಹತ್ಯೆ ನಿಷೇಧ ಕಾಯ್ದೆಗೆ ಸರ್ಕಾರ ಬದ್ಧವಾಗಿದೆ. ಗೋಹತ್ಯೆ ನಿಷೇಧಕ್ಕೂ ಕೊಡಗಿನ ಜನರನ್ನು ತಳಕು ಹಾಕುವುದು ಸರಿಯಲ್ಲ. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೊಡಗಿನ ಜನ ಗೋಮಾಂಸ ತಿನ್ನುತ್ತಾರೆ ಎಂಬ ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ.
ಈ ಬಗ್ಗೆ ಕೊಡಗಿನ ಜನ ಸಿದ್ದರಾಮಯ್ಯ ಅವರನ್ನು ತಮ್ಮ ಜಿಲ್ಲೆಗೆ ಬರದಂತೆ ನಿಷೇಧ ಹೇರಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಕೊಡಗಿನ ಜನರ ಕ್ಷಮೆ ಕೇಳಬೇಕು ಎಂದು ಹೇಳಿದರು.