ಎಚ್.ಎಸ್. ಘಂಟಿ
ಗುಳೇದಗುಡ್ಡ: ಪಟ್ಟಣ ತಾಲ್ಲೂಕು ಕೇಂದ್ರವಾಗಿ ರೂಪುಗೊಂಡು ಐದು ವರ್ಷ ಕಳೆದಿವೆ. ಆದರೆ ಇನ್ನೂವರೆಗೆ ಎಲ್ಲ ಸರ್ಕಾರಿ ಕಚೇರಿಗಳು ಆರಂಭವಾಗಿಲ್ಲ.
ತಹಶೀಲ್ದಾರ, ತಾಲ್ಲೂಕು ಪಂಚಾಯಿತಿ, ಕೃಷಿ ಮತ್ತು ನೋಂದಣಿ ಕಚೇರಿ ಹೊರತು ಪಡಿಸಿದರೆ ಉಳಿದ ಯಾವ ಕಚೇರಿಗಳೂ ಶುರುವಾಗಿಲ್ಲ. ಇದರಿಂದ ಸಾರ್ವಜನಿಕರಿಗೆ ತಾಲ್ಲೂಕು ಕೇಂದ್ರ ಇದ್ದೂ ಇಲ್ಲದಂತಾಗಿದೆ.
ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಇದ್ದಾಗ 49 ತಾಲ್ಲೂಕುಗಳ ರಚನೆ ಮಾಡಲಾಯಿತು. ಅದರಲ್ಲಿ ಗುಳೇದಗುಡ್ಡವೂ ಸೇರಿತ್ತು. ಬಾದಾಮಿ ತಾಲ್ಲೂಕು ವಿಭಜನೆಗೊಂಡು 38 ಹಳ್ಳಿಗಳನ್ನು ಇದರ ವ್ಯಾಪ್ತಿಗೆ ಸೇರಿಸಲಾಯಿತು. ಪ್ರಸ್ತುತ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಇರುವುದರಿಂದ ಎಲ್ಲ ಕಚೇರಿಗಳನ್ನೂ ಆರಂಭಿಸಿ ಮೂಲ ಸೌಲಭ್ಯ ಕಲ್ಪಿಸಲು ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಪ್ರಯತ್ನಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತಾಲ್ಲೂಕು ರಚನೆಯಾದ ಸಂದರ್ಭದಲ್ಲಿ ಪುರಸಭೆಯು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮೀನುಗಾರಿಕೆ ಹಾಗೂ ತೋಟಗಾರಿಕೆ ಇಲಾಖೆ ಕಚೇರಿಗಳನ್ನು ಆರಂಭದಲ್ಲೇ ಮಳಿಗೆಯಲ್ಲಿ ಗುರುತಿಸಿ ಫಲಕ ಹಾಕಿಸಿದೆ. ಆದರೆ ಇದುವರೆಗೂ ಒಂದು ದಿನವೂ ಕಚೇರಿ ಬಾಗಿಲು ತೆರೆದಿಲ್ಲ.
ಸೌಲಭ್ಯಗಳಿಲ್ಲದ ತಹಶೀಲ್ದಾರ ಕಚೇರಿ: ಪಟ್ಟಣದ ಬಾದಾಮಿ ರಸ್ತೆಯ ನಾಕಾದ ಹತ್ತಿರ ನೀರಾವರಿ ಇಲಾಖೆಯು ಬಾಡಿಗೆ ಕಟ್ಟಡದಲ್ಲಿದೆ. ಇಲ್ಲಿ ಕುಡಿಯುವ ನೀರು, ಸಾರ್ವಜನಿಕ ಶೌಚಾಲಯ ಇಲ್ಲ. ಕೃಷಿ ಇಲಾಖೆ ಶಿರೂರು ರಸ್ತೆಯಲ್ಲಿದೆ. ಕನಿಷ್ಟ 2 ಕಿ.ಮೀ ದೂರದಲ್ಲಿದೆ. ಇದರಿಂದ ಹಳ್ಳಿಗಳ ಜನರಿಗೆ ತೊಂದರೆಯಾಗಿದ್ದು ಕೂಡಲೇ ಎಲ್ಲ ಕಚೇರಿಗಳನ್ನು ಒಂದೇ ಸೂರಿನ ಅಡಿ ಆರಂಭಿಸಬೇಕು ಎಂದು ನಾಗರಾಳ ಎಸ್.ಪಿ ಗ್ರಾಮದ ಲೆಂಕೆಪ್ಪ ಹಿರೇಕುರುಬರ ಒತ್ತಾಯಿಸಿದ್ದಾರೆ.
ಇನ್ನೂ ಆರಂಭವಾಗದ ಸರ್ಕಾರಿ ಕಚೇರಿಗಳು: ಬಿಇಒ, ಎಪಿಎಂಸಿ, ಒಬಿಸಿ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ತೋಟಗಾರಿಕೆ, ಪ್ರವಾಸೋದ್ಯಮ, ಸರ್ವೆ, ಅರಣ್ಯ, ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗಳನ್ನು ಸರ್ಕಾರ ಆರಂಭಿಸಬೇಕಿದೆ. ಅಗ್ನಿಶಾಮಕ ಠಾಣೆ ಮಂಜೂರಾಗಿ ಅದರ ನಿರ್ಮಾಣಕ್ಕೆ ₹ 6 ಕೋಟಿ ಮಂಜೂರಾಗಿದೆ. ಪುರಸಭೆಯವರು ಸರಿಯಾದ ಜಾಗ ಗುರುತಿಸದ ಕಾರಣ ನನೆಗುದಿಗೆ ಬಿದ್ದಿದೆ.
ತಾಲ್ಲೂಕು ಹೋರಾಟ ಸಮಿತಿಯ ಹೋರಾಟದ ಫಲದಿಂದ ತಾಲ್ಲೂಕಾಗಿದೆ. ಆದರೆ ಎಲ್ಲ ಕಚೇರಿಗಳನ್ನೂ ಇಂದಿಗೂ ಆರಂಭಿಸಿಲ್ಲ. ಎಲ್ಲ ಇಲಾಖೆ ಕಚೇರಿ ಆರಂಭಿಸಿ ಮೂಲ ಸೌಲಭ್ಯ ಕಲ್ಪಿಸಬೇಕು.ಅಶೋಕ ಹೆಗಡೆ ನೇಕಾರ ಮುಖಂಡ ಗುಳೆದಗುಡ್ಡ
ಗುಳೇದಗುಡ್ಡ ಪಟ್ಟಣದಲ್ಲಿ ಎಲ್ಲ ಇಲಾಖೆಯ ಕಚೇರಿಗಳು ಆರಂಭವಾಗದೇ ಇರುವುದು ನನ್ನ ಗಮನದಲ್ಲಿದೆ. ಮುಂದಿನ ದಿನಗಳಲ್ಲಿ ಕಚೇರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು.ಭೀಮಸೇನ ಬಿ. ಚಿಮ್ಮನಕಟ್ಟಿ ಶಾಸಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.