ರಬಕವಿ ಬನಹಟ್ಟಿ: ‘ರಾಜ್ಯದಲ್ಲಿರುವ ನೇಕಾರರು ಆರೇಳು ತಿಂಗಳಿಂದ ವಿದ್ಯುತ್ ಬಿಲ್ ಪಾವತಿಸಿಲ್ಲ. ಈ ಬಿಲ್ ಪಾವತಿಸಲು ನೇಕಾರರಿಂದ ಸಾಧ್ಯವಾಗುತ್ತಿಲ್ಲ. ನೇಕಾರರ ಬಾಕಿ ಇರುವ ವಿದ್ಯುತ್ ಬಿಲ್ನ್ನು ಸರ್ಕಾರವೇ ಭರಿಸಿದರೆ ನೇಕಾರರಿಗೆ ಅನುಕೂಲವಾಗಲಿದೆ’ ಎಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ತಿಳಿಸಿದರು.
ಗುರುವಾರ ಇಲ್ಲಿನ ತಹಶೀಲ್ದಾರ್ ಕಾರ್ಯಾಲಯದಲ್ಲಿ ತಹಶೀಲ್ದಾರ್ ಗಿರೀಶ ಸ್ವಾದಿಯವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
‘ಇಲಾಖೆಯು ನೇಕಾರರಿಗೆ ಮೊದಲಿನಂತೆ ₹1.25 ಬಿಲ್ ಪಾವತಿಸಲು ಅನುಕೂಲ ಮಾಡಿಕೊಡಬೇಕು. ಹೆಚ್ಚುವರಿ ಬಿಲ್ ತುಂಬಲು ಸಾಧ್ಯವಾಗುವುದೇ ಇಲ್ಲ. ಬನಹಟ್ಟಿಯಲ್ಲಿರುವ ನೇಕಾರರ ವಿದ್ಯುತ್ ಬಿಲ್ ಅಂದಾಜು ₹1.50 ಕೋಟಿಯಷ್ಟಾಗುತ್ತದೆ. ಸರ್ಕಾರ ನೇಕಾರರ ವಿದ್ಯುತ್ ಬಿಲ್ ಪಾವತಿಸುವುದರಿಂದ ನೇಕಾರರಿಗೆ ಆರ್ಥಿಕವಾಗಿ ಸಹಾಯವಾಗಲಿದೆ. ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ನೇಕಾರರ ಹಕ್ಕೊತ್ತಾಯಗಳಿಗೆ ಬೃಹತ್ ಹೋರಾಟ ಮಾಡಲಾಗುವುದು. ಸರ್ಕಾರ ಜವಳಿ ಇಲಾಖೆಗೆ ₹1,500 ಕೋಟಿ ಅನುದಾನ ನೀಡುವುದರ ಮೂಲಕ ನೇಕಾರ ಮತ್ತು ನೇಕಾರಿಕೆಯ ಉದ್ಯೋಗವನ್ನು ಉತ್ತೇಜಿಸಬೇಕು’ ಎಂದು ಆಗ್ರಹಿಸಿದರು.