ಮುಧೋಳ: ಮತದಾರರಿಗೆ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಜನರ ನಿರೀಕ್ಷೆ ಹುಸಿಗೊಳಿಸಿದೆ. ಜನರು ಭ್ರಮನಿರಸಗೊಂಡಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಪಟ್ಟಣದಲ್ಲಿ ಬುಧವಾರ ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆ ಅಡಿ ಮಹಿಳೆಯರಿಗೆ ₹2000 ನೀಡುವುದಾಗಿ ಹೇಳಿ ಈಗ ಎಲ್ಲರಿಗೂ ನೀಡುತ್ತಿಲ್ಲ. ಮದುವೆಯಾದ ಎಲ್ಲ ಮಹಿಳೆಯರಿಗೂ ಹಣ ನೀಡಬೇಕು. ವಿದ್ಯಾ ನಿಧಿ ಯೋಜನೆ ಎಲ್ಲ ವಿದ್ಯಾವಂತ ನಿರುದ್ಯೋಗಿಗಳಿಗೆ ನೀಡಬೇಕು. 10 ಕೆ.ಜಿ ಪಡಿತರ ಅಕ್ಕಿ ನೀಡುವುದಾಗಿ ಭರವಸೆ ಕೊಟ್ಟಿದ್ದಿರಿ, ಈಗ ನೀಡಲು ಸಕಾಲವಾಗಿದೆ. ಹಿಂಗಾರು, ಮುಂಗಾರು ಮಳೆ ವಿಫಲವಾಗಿ ರಾಜ್ಯದಲ್ಲಿ ಬರ ಆವರಿಸಿದೆ. ಬರ ಕುರಿತು ಯಾವ ಕೆಲಸಗಳು ನಡೆಯುತ್ತಿಲ್ಲ. ಪ್ರತಿ ಹೊಬಳಿಗೆ 2 ರಂತೆ ಮೇವು ಬ್ಯಾಂಕ್, ಹೋಬಳಿಗೆ ಒಂದರಂತೆ ಗೋಶಾಲೆ ಆರಂಭಿಸಬೇಕು ಎಂದು ಆಗ್ರಹಿಸಿದರು.
ಕೃಷಿ ಕಾರ್ಮಿಕರು ಕೆಲಸವಿಲ್ಲದೆ ಅನ್ನಕ್ಕಾಗಿ ಗುಳೆ ಹೋಗುತ್ತಿದ್ದಾರೆ. ಇದನ್ನು ತಡೆಗಟ್ಟಲು ಪ್ರತಿ ಗ್ರಾಮದಲ್ಲಿ ಕಾಮಗಾರಿ ಆರಂಭಿಸಿ ದುಡಿಯುವ ಕೈಗಳಿಗೆ ಕಲಸ ನೀಡಬೇಕು. ಜನರು ಗುಳೆ ಹೋಗುತ್ತಿರುವುದನ್ನು ನೋಡಿ ಸರ್ಕಾರ ಕೈಕಟ್ಟಿ ಕುಳಿತಿರುವುದು ನಾಚಿಗೇಡಿನ ವಿಷಯ. ಬರದಿಂದ ರೈತರ ಆತ್ಮಹತ್ಯೆ ಹೆಚ್ಚಾಗುತ್ತಿದೆ. ರೈತ ಸತ್ತ ನಂತರ ಪರಿಹಾರ ನೀಡುವುದಕ್ಕಿಂತ ಎಲ್ಲ ರೈತರ ₹2 ಲಕ್ಷ ಸಾಲಮನ್ನಾ ಮಾಡಬೇಕು. ಸಮರ್ಪಕ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿದರು. ಎಲ್ಲ ರಂಗದಲ್ಲೂ ವೈಫಲ್ಯತೆ ಎದ್ದು ಕಾಣುತ್ತಿದೆ. ಕಾಂಗ್ರೆಸ್ ಮುಖಂಡರು ಜನರಿಗೆ ಕ್ಷಮೆ ಕೋರಬೇಕು ಎಂದರು.
ಸರ್ಕಾರ ಅಧಿಕಾರಕ್ಕೆ ಬಂದು 8 ತಿಂಗಳಾದರೂ ಒಂದೇ ಒಂದು ಯೋಜನೆ ಆರಂಭಗೊಂಡಿಲ್ಲ. ನಮ್ಮ ಸರ್ಕಾರದಲ್ಲಿ ಮಂಜೂರಾದ ಕಾಮಗಾರಿ ಆರಂಭವಾಗಿರುವ ಯೋಜನೆಗಳನ್ನು ಕಮೀಷನ್ ಆಸೆಗಾಗಿ ನಿಲ್ಲಿಸಲಾಗಿದೆ. ಯಾರು ದುಡ್ಡು ಕೊಡುತ್ತಿದ್ದಾರೆ ಅವರಿಗೆ ಅವಕಾಶ ನೀಡಲಾಗುತ್ತಿದೆ. ಇಂಥ ದರಿದ್ರ ಸರ್ಕಾರವನ್ನು ಎಂದು ಕಂಡಿರಲಿಲ್ಲ. ಬಿಜೆಪಿ ಸರ್ಕಾರ ಇದ್ದಾಗ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಮುನ್ನ ಆತ್ಮಾವಲೋಕನ ಮಾಡಿಕೊಳ್ಳಲಿ. ಸರ್ಕಾರ ಬಂದು 8 ತಿಂಗಳಾದರೂ ಭ್ರಷ್ಟಾಚಾರದ ಆರೋಪ ಸಾಬೀತು ಮಾಡಲು ಆಗಿಲ್ಲ. ಸರ್ಕಾರಕ್ಕೆ ಧೈರ್ಯ ಇದ್ದರೆ 2013 ರಿಂದ 2023ವ ರೆಗಿನ ಎಲ್ಲ ಭ್ರಷ್ಟಾಚಾರದ ಆರೋಪಗಳನ್ನು ಲೋಕಾಯುಕ್ತರಿಂದ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದರು.
ಮುಖಂಡರಾದ ಕೆ.ಆರ್.ಮಾಚಪ್ಪನವರ, ರಾಜು ಯಡಹಳ್ಳಿ, ಸಂಗಣ್ಣ ಕಾತರಕಿ, ಹಣಮಂತ ತುಳಸಿಗೇರಿ, ಬಸವರಾಜ ಮಳಲಿ, ಸೋನಪ್ಪಿ ಕುಲಕರ್ಣಿ, ರುದ್ರಪ್ಪ ಅಡವಿ ಇದ್ದರು.
ಸಮಚಿತ್ತ ಕಳೆದುಕೊಂಡ ಮೋಯಿಲಿ
ಮುಧೋಳ: ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಜನಮನದಲ್ಲಿ ಸೌಹಾರ್ದತೆ ಹಾಗೂ ಸಮಭಾವ ಮೂಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ಮುಖಂಡ ಎಂ.ವೀರಪ್ಪ ಮೊಯಿಲಿ ಅವರು ರಾಜಕಾರಣಕ್ಕಾಗಿ ಕುಚೋದ್ಯವಾಗಿ ಹೇಳುವುದು ಖಂಡನೀಯ ಎಂದು ಗೋವಿಂದ ಕಾರಜೋಳ ಹೇಳಿದರು. ರಾಜ್ಯದ ಹಿರಿಯ ರಾಜಕಾರಣಿ ಸಾಹಿತಿಗಳಾಗಿ 600 ಪುಟಗಳ ಶ್ರೀರಾಮಾಯಣ ಮಹಾನ್ವೇಷಣೆ ಪುಸ್ತಕ ಬರೆದವರು. ರಾಜಕೀಯವಾಗಿ ಮೂಲೆಗುಂಪಾಗಿರುವ ಅವರು ಇಂಥ ಹೇಳಿಕೆಗಳ ಮೂಲಕ ಮೇಲೆ ಬಂದು ಲೋಕಸಭೆ ಚುನಾವಣೆಗೆ ನಿಲ್ಲಲು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಓಲೈಸಲು ಇಂಥ ಹೇಳಿಕೆ ನೀಡಿದ್ದಾರೆ. ಮೋದಿಯವರ ವೈಯಕ್ತಿಕ ನಡೆನುಡಿಯಲ್ಲಿ ಹುಳುಕು ಹುಡುಕುವುದು ಮೊಸರಿನಲ್ಲಿ ಕಲ್ಲು ಹುಡುಕುವುದು ಒಂದೆ ಎಂಬುದನ್ನು ಅರಿತುಕೊಂಡು ವೃದ್ಧರಾದ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಿಕೆ ಹಿಂದಕ್ಕೆ ಪಡೆಯಬೇಕು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.