ಎಸ್ಪಿ ನಿವಾಸದ ಭದ್ರತೆಗೆ ನಿಯೋಜಿಸಿದ್ದ ಕಾನ್ಸ್ಟೆಬಲ್ ಅನುಮಾನಾಸ್ಪದ ಸಾವು

ಬಾಗಲಕೋಟೆ : ಇಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ನಿವಾಸದ ಭದ್ರತೆಗೆ ನಿಯೋಜಿತರಾಗಿದ್ದ ಕಾನ್ಸ್ಟೆಬಲ್ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.
ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಾನ್ಸ್ಟೆಬಲ್ ಮಂಜುನಾಥ ಹರಿಜನ (30) ಮೃತಪಟ್ಟವರು.
ಎಸ್ ಪಿ ನಿವಾಸದ ಗೇಟ್ ಎದುರು ತಲೆಗೆ ಗುಂಡು ತಗುಲಿದ ಸ್ಥಿತಿಯಲ್ಲಿ ಮುಂಜಾನೆ ಮಂಜುನಾಥ ಶವ ಪತ್ತೆಯಾಗಿದೆ. ಶವದ ಪಕ್ಕ ಎರಡು ಜೀವಂತ ಗುಂಡು ಹಾಗೂ ರೈಫಲ್ ಬಿದ್ದಿದೆ.
ಮಂಜುನಾಥ ಅವರದ್ದು ಆತ್ಮಹತ್ಯೆಯೋ, ಕೊಲೆಯೊ ಎಂಬುದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮೂಲತಃ ಕೊಪ್ಪಳ ಸಮೀಪದ ಮೆಟಲಗುಡ್ಡದವರಾದ ಮಂಜುನಾಥ ಈ ಮೊದಲು ದಾವಣಗೆರೆಯಲ್ಲಿ ಸಶಸ್ತ್ರ ಮೀಸಲು ಪಡೆ ಕಾನ್ಸ್ಟೆಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ವರ್ಷದ ಹಿಂದಷ್ಟೇ ಬಾಗಲಕೋಟೆಗೆ ವರ್ಗಾವಣೆಯಾಗಿ ಬಂದಿದ್ದರು. ಅವರನ್ನು ಎಸ್ಪಿ ನಿವಾಸದ ಭದ್ರತೆಗೆ ನಿಯೋಜಿಸಲಾಗಿತ್ತು. ಮಂಜುನಾಥ ಅವಿವಾಹಿತರಾಗಿದ್ದರು. ಘಟನೆ ಬೆಳಗಿನ ಜಾವ ನಡೆದಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.