ರಬಕವಿ ಬನಹಟ್ಟಿ: ತೇರದಾಳ ವಿಧಾನಸಭಾ ವ್ಯಾಪ್ತಿಯ ಗ್ರಾಮೀಣ ಪ್ರದೇಶದ ಹಲವು ರಸ್ತೆಗಳನ್ನು ಈಗಾಗಲೇ ಅಭಿವೃದ್ಧಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.
ಅವರು ಬುಧವಾರ ಸ್ಥಳೀಯ ವೈಭವ ಚಿತ್ರ ಮಂದಿರದಿಂದ ಆಸಂಗಿ ಕ್ರಾಸ್ವರೆಗಿನ ₹ 5 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಈಗಾಗಲೇ ಮಹಾಲಿಂಗಪುರದಲ್ಲಿ ₹ 6.5 ಕೋಟಿ ವೆಚ್ಚದ ದ್ವಿಪಥ ರಸ್ತೆ ಕಾಮಗಾರಿ ಮುಕ್ತಾಯಗೊಂಡಿದೆ. ಈಗ ನೀರಾವರಿ, ಸಮಾಜ ಕಲ್ಯಾಣ ಹಾಗೂ ಲೋಕೋಪಯೋಗಿ ಇಲಾಖೆಯಲ್ಲಿನ ಯೋಜನೆಗಳನ್ನು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬಳಸಿಕೊಳ್ಳಲಾಗುತ್ತಿದೆ.
ಅವಶ್ಯವಿರುವ ಎಲ್ಲ ರಸ್ತೆ ಮಾರ್ಗಗಳನ್ನು ನಿಗದಿತ ಅವಧಿಯಲ್ಲಿ ಮುಕ್ತಾಯಗೊಳಿಸಲು ತಿಳಿಸಲಾಗಿದೆ. ಗುತ್ತಿಗೆದಾರರು ಉತ್ತಮ ರಸ್ತೆಗಳನ್ನು ನಿರ್ಮಾಣ ಮಾಡಬೇಕು. ರಸ್ತೆ ಅಭಿವೃದ್ಧಿ ಕಾಮಗಾರಿಯು ಗುಣಮಟ್ಟದ್ದಾಗಿರಲಿ ಎಂದು ತಿಳಿಸಿದರು.
ಒಳ ಚರಂಡಿ ಯೋಜನೆಯಿಂದಾಗಿ ಅವಳಿ ನಗರದಲ್ಲಿಯ ರಸ್ತೆಗಳು ಸಾಕಷ್ಟು ಹಾಳಾಗಿವೆ. ಮುಂದಿನ ದಿನಗಳಲ್ಲಿ ಅವುಗಳ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಂಡು ನಗರ ಪ್ರದೇಶದಲ್ಲಿಯ ರಸ್ತೆಗಳ ಅಭಿವೃದ್ಧಿಯನ್ನು ಕೈಗೊಳ್ಳಲಾಗುವುದು ಎಂದು ಸಿದ್ದು ಸವದಿ ತಿಳಿಸಿದರು.
ನಗರಸಭೆಯ ಅಧ್ಯಕ್ಷ ಶ್ರೀಶೈಲ ಬೀಳಗಿ, ನಗರ ಬಿಜೆಪಿ ಘಟಕದ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ಸಿದ್ದನಗೌಡ ಪಾಟೀಲ, ಚಿದಾನಂದ ಹೊರಟ್ಟಿ,ಶಿವಾನಂದ ಬುದ್ನಿ, ಸದಾಶಿವ ಪರೀಟ, ಸಂಜಯ ತೆಗ್ಗಿ, ಗೋವಿಂದ ಡಾಗಾ, ಅಶೋಕ ರಾವಳ ಇದ್ದರು.