ರಾಂಪುರ: ಜಮೀನುಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿರುವ ಕಾಡುಹಂದಿ ಸೇರಿ ಇತರೆ ಕಾಡು ಪ್ರಾಣಿಗಳ ಉಪಠಳ ತಪ್ಪಿಸುವಂತೆ ಆಗ್ರಹಿಸಿ ಸಮೀಪದ ಶಿರೂರ ಪಟ್ಟಣದ ರೈತರು ಮಂಗಳವಾರ ವಲಯ ಅರಣ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಶಿರೂರ-ನೀಲಾನಗರ ಭಾಗದ ಗುಡ್ಡಕ್ಕೆ ಹೊಂದಿಕೊಂಡಿರುವ ಜಮೀನುಗಳಿಗೆ ಕಾಡುಹಂದಿ, ನವಿಲು ಮತ್ತಿತರ ಕಾಡು ಪ್ರಾಣಿಗಳು ನುಗ್ಗಿ, ಬೆಳೆ ತಿನ್ನುವುದಷ್ಟೇ ಅಲ್ಲದೆ ನಾಶ ಮಾಡುತ್ತಿವೆ. ಇದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಕಬ್ಬು, ಶೇಂಗಾ, ತೊಗರಿ ಮತ್ತಿತರ ಬೆಳೆಗಳನ್ನು ನಿತ್ಯ ನಾಶ ಮಾಡುತ್ತಿವೆ. ರೈತರು ನಿದ್ದೆ ಬಿಟ್ಟು ರಾತ್ರಿ ಹೊಲಗಳಲ್ಲಿ ತಿರುಗಾಡುವಂತಾಗಿದೆ. ಅರಣ್ಯ ಪ್ರದೇಶದ ಅಂಚಿಗೆ ತಂತಿಬೇಲಿ ಹಾಕಿ ಪ್ರಾಣಿಗಳು ಹೊಲಗಳಿಗೆ ನುಗ್ಗದಂತೆ ತಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಮನವಿ ಸ್ವೀಕರಿಸಿದ ವಲಯ ಅರಣ್ಯ ಅಧಿಕಾರಿ ಜಿ.ಎಸ್.ರಜಪೂತ ಅವರು ಶೀಘ್ರ ಕ್ರಮಕೈಗೊಳ್ಳುವ ಭರವಸೆ ನೀಡಿದ್ದರು.
ರವಿ ಗಿರಿಜಾ, ಬಸು ವಾಲಿಕಾರ, ಮಹಮ್ಮದ ಹಳದೂರ, ಫಕೀರಪ್ಪ ಕಾಮರಡ್ಡಿ, ಅಶೋಕ ಮುತ್ತನ್ನವರ, ಬಸವರಾಜ ಕೋಟಿಕಲ್, ಬಾಲಪ್ಪ ಮುದಗಲ್ಲ, ಗುರುಬಸಯ್ಯ ಹಿರೇಮಠ, ಸಿದ್ದಪ್ಪ ನೆರಕಿ, ಮಾಯಪ್ಪ ವಾಲಿಕಾರ ಇದ್ದರು.