ಬಿರು ಮಳೆಯ ಪರಿಣಾಮ ಮನೆ, ಕಚೇರಿಗಳ ಕಟ್ಟಡಗಳ ಒಳಗೆ ನೀರು ನುಗ್ಗಿತು. ಸಿಡಿಲ ಆರ್ಭಟಕ್ಕೆ ಜನ ಬೆಚ್ಚಿಬಿದ್ದರು. ನಗರದ ರಸ್ತೆ, ಚರಂಡಿಗಳು ತುಂಬಿ ಹರಿದವು. ವಾಂಬೆ ಕಾಲೊನಿ, ಹಳೆ ಬಾಗಲಕೋಟೆಯಲ್ಲಿ ತಗ್ಗು ಪ್ರದೇಶದ ಕೆಲವು ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ತೊಂದರೆಗೀಡಾದರು. ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು. ನವನಗರದ ಸಾಯಿ ಸೂಪರ್ ಮಾರ್ಕೆಟ್ ಬಳಿ ಗಾಳಿಯಿಂದ ವಿದ್ಯುತ್ ತಂತಿ ಮರಕ್ಕೆ ಸ್ಪರ್ಶಿಸಿ ಭಾರಿ ಶಬ್ದ ಹಾಗೂ ಬೆಂಕಿಯ ಕಿಡಿ ಉಂಟಾಗಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿತ್ತು.