ಅಮೀನಗಡ: ಸರ್ವಜನರಿಗೆ ಕಲ್ಯಾಣವಾಗಲಿ, ನಾಡಿನಲ್ಲಿ ಸಕಾಲಕ್ಕೆ ಮಳೆಯಾಗಲಿ ಎಂಬ ಉದ್ದೇಶವಿಟ್ಟುಕೊಂಡು ಐವತ್ತೈದು ವರ್ಷದ ವ್ಯಕ್ತಿ ಬೆಳಗಾವಿ ಜಿಲ್ಲೆಯಿಂದ ಆಂಧ್ರಪ್ರದೇಶದ ಸುಕ್ಷೇತ್ರ ಶ್ರೀಶೈಲಕ್ಕೆ ಸೈಕಲ್ ಯಾತ್ರೆ ಕೈಗೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿನ ನಾಗನೂರ ಗ್ರಾಮದ ಸದಾಶಿವಯ್ಯ ಬಸವಲಿಂಗಯ್ಯ ಹಿರೇಮಠ ಎಂಬುವರೇ 800 ಕಿ.ಮೀ ದೂರದ ಸೈಕಲ್ ಯಾತ್ರೆ ಕೈಗೊಂಡ ವ್ಯಕ್ತಿ. ಯುಗಾದಿ ಸಂದರ್ಭದಲ್ಲಿ ಸ್ವಗ್ರಾಮದಿಂದ ಶ್ರೀಶೈಲಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಾರೆ.
ಶ್ರಾವಣ ಮಾಸದಲ್ಲಿ ಮೂರು ವರ್ಷಗಳಿಂದ ಸೈಕಲ್ ತುಳಿಯುತ್ತಾ ಸುಕ್ಷೇತ್ರ ಶ್ರೀಶೈಲ ಮಲ್ಲಿಕಾರ್ಜುನನ ದರ್ಶನ ಮಾಡುತ್ತ ಬಂದಿದ್ದಾರೆ.
ಮಾರ್ಗ ಮಧ್ಯದಲ್ಲಿ ಭಕ್ತರು ಭಕ್ತಿ ಕಾಣಿಕೆ ನೀಡಿದರೆ ಸ್ವೀಕರಿಸುತ್ತೇನೆ. ಅದರಲ್ಲಿ ಪ್ರಸಾದ ಮಾಡಿಕೊಂಡು ಸರಳವಾಗಿ ಶ್ರೀಶೈಲ ಮುಟ್ಟಿ ಮರಳಿ ಊರು ತಲುಪುತ್ತೇನೆ. ಅ. 29ರಂದು ನಾಗನೂರ ಗ್ರಾಮವನ್ನು ಬಿಟ್ಟಿದ್ದೇನೆ. ಶ್ರೀಶೈಲಕ್ಕೆ ಇನ್ನೇನು ತಲುಪುತ್ತೇನೆ. ಸೈಕಲ್ ಯಾತ್ರೆ ಮಾಡಿದ್ದರಿಂದ ನನಗೆ ಒಳ್ಳೆಯದಾಗಿದೆ ಎಂದು ಸದಾಶಿವಯ್ಯ ಹೇಳುತ್ತಾರೆ.